ಮೋದಿ ಮಾತಿಗೆ ಡ್ಯಾನ್ಸ್ ಮಾಡುವ ಬಸವರಾಜ ಬೊಮ್ಮಾಯಿಯವರನ್ನು ಸೋಲಿಸಿ: ಸಿದ್ದರಾಮಯ್ಯ
ಹಾವೇರಿ, ಮೇ 04: ಮೋದಿ ಎದುರಿಗೆ ಹೆದರಿ, ಬೆದರಿ ನಿಂತು ರಾಜ್ಯದ ಪರವಾಗಿ ಮಾತನಾಡದೆ 40% ಕಮಿಷನ್ ಎಣಿಸಿಕೊಂಡು ತಾಕತ್ತು, ದಮ್ಮು ಅಂತ ಡೈಲಾಗ್ ಹೊಡ್ಕೊಂಡು ಓಡಾಡುತ್ತಿದ್ದಾರೆ. ಮೋದಿ ಮಾತಿಗೆ ಡ್ಯಾನ್ಸ್ ಮಾಡುವ ಬಸವರಾಜ ಬೊಮ್ಮಾಯಿಯವರನ್ನು ಸೋಲಿಸಿ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕರೆ ನೀಡಿದರು.
ಹಾವೇರಿ ಲೋಕಸಭಾ ಕ್ಷೇತ್ರದ ಬಸವರಾಜ ಬೊಮ್ಮಾಯಿಯವರು ಮುಖ್ಯಮಂತ್ರಿ ಆಗಿದ್ದಾಗ ರಾಜ್ಯಕ್ಕೆ ಆಗಿರುವ ಅನ್ಯಾಯ ಸರಿ ಪಡಿಸಿ ಎಂದರೆ ಮೋದಿ ಹೇಳಿದಂತೆ ಡ್ಯಾನ್ಸ್ ಡ್ಯಾನ್ಸ್ ಮಾಡಿಕೊಂಡು ಕಾಲ ಕಳೆದರು ಎಂದು ವ್ಯಂಗ್ಯವಾಡಿದರು. ಇನ್ನೂ ರಾಜ್ಯಕ್ಜೆ, ಹಾವೇರಿ ಗದಗ ಜಿಲ್ಲೆಗೆ ಮುಖ್ಯಮಂತ್ರಿಯಾಗಿ ನಯಾಪೈಸೆ ಅನುಕೂಲ ಮಾಡದ ಬೊಮ್ಮಾಯಿ ಅವರನ್ನು ಸೋಲಿಸಿ ಮನೆಗೆ ಕಳುಹಿಸಿ ಎಂದು ಕರೆ ನೀಡಿದರು.

ಕುರುಬರು ಈ ಬಾರಿ ದಯಮಾಡಿ ಯಾಮಾರ ಬೇಡಿ. ಬಿಜೆಪಿಗೆ ಮತ ಹಾಕಿ ಮೋಸ ಹೋಗಬೇಡಿ. ಕರಿ ಕಂಬಳಿ ವೇಷದ ಮೋದಿಯವರದ್ದು ಡ್ರಾಮಾ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಕರೆ ನೀಡಿದರು. ರಾಜ್ಯದಲ್ಲಿ ಒಬ್ಬೇ ಒಬ್ಬ ಕುರುಬರಿಗೂ ಟಿಕೆಟ್ ನೀಡದ ನರೇಂದ್ರ ಮೋದಿ ಕರ್ನಾಟಕಕ್ಕೆ ಬಂದು ಕರಿ ಕಂಬಳಿ ವೇಷ ಹಾಕೊಂಡು ಡ್ರಾಮಾ ಮಾಡ್ತಾವ್ರೆ. ಕುರುಬರು ಈ ಬಾರಿ ದಯಮಾಡಿ ಯಾಮಾರ ಬೇಡಿ. ಬಿಜೆಪಿಗೆ ಮತ ಹಾಕಿ ಮೋಸ ಹೋಗಬೇಡಿ ಎಂದು ಕರೆ ನೀಡಿದರು.
ಕಾರ್ಮಿಕರು, ರೈತರು, ಮಹಿಳೆಯರು, ಶ್ರಮಿಕರು, ಹಿಂದುಳಿದವರು ಸೇರಿ ಎಲ್ಲ ವರ್ಗಗಳಿಗೆ ಆರ್ಥಿಕ ಶಕ್ತಿ ನೀಡುವುದು ಕಾಂಗ್ರೆಸ್ ಮಾತ್ರ. ಇತಿಹಾಸ ತೆಗೆದು ನೋಡಿ ಎಂದರು. ಈ ಬಾರಿ NDA ಅಧಿಕಾರಕ್ಕೆ ಬರುವುದಿಲ್ಲ ಎನ್ನುವುದು ಖಚಿತವಾಗಿ ಮೋದಿ ಹತಾಶರಾಗಿದ್ದಾರೆ. ಬಾಯಿಗೆ ಬಂದಂತೆ ಸುಳ್ಳುಗಳ ಸುರಿಮಳೆ ಸುರಿಸುತ್ತಿದ್ದಾರೆ. ನಾಚಿಕೆ ಇಲ್ಲದೆ ಸುಳ್ಳು ಹೇಳುತ್ತಿದ್ದಾರೆ.
ರಾಜ್ಯ ಆರ್ಥಿಕವಾಗಿ ದಿವಾಳಿಯಾಗಿದೆ. ಕಾಂಗ್ರೆಸ್ ಹಿಂದುಳಿದವರ ಮೀಸಲಾತಿ ಕಿತ್ತುಕೊಳ್ಳುತ್ತದೆ ಎನ್ನುವ ಸುಳ್ಳುಗಳನ್ನು ಸೃಷ್ಟಿಸಿ, ಸುಳ್ಳುಗಳಿಂದ ಹಿಂದುಳಿದವರನ್ನು ಬಕ್ರಾ ಮಾಡಬಹುದು ಎಂದುಕೊಂಡು ಓಡಾಡುತ್ತಿದ್ದಾರೆ.
ಮೋದಿಯವರೇ ಸಂವಿಧಾನ ಓದಿ, ನಿಮಗೆ ಓದಲು ಆಗದಿದ್ದರೆ ಯಾರಿಂದಲಾದರೂ ಓದಿಸಿ ತಿಳಿದುಕೊಳ್ಳಿ ಎಂದು ಸಲಹೆ ನೀಡಿದರು.
ಮಂಡಲ್ ವರದಿಯನ್ನು ವಿರೋಧಿಸಿ ರಥಯಾತ್ರೆ ನಡೆಸಿ ಅಮಾಯಕ ಹಿಂದುಳಿದ ಮಕ್ಕಳನ್ನು ಆತ್ಮಹತ್ಯೆಗೆ ಪ್ರಚೋದಿಸಿ ದೂಡಿದ್ದು ನಿಮ್ಮವರೇ ಅಲ್ಲವೇ ಮೋದಿ? ಮಗಿಳೆಯರಿಗೆ ಸ್ಥಳೀಯ ಸಂಸ್ಥೆಗಳಲ್ಲಿ ಮೀಸಲಾತಿ ಕೊಟ್ಟಾಗ ಇದನ್ನು ವಿರೋಧಿಸಿ ನ್ಯಾಯಾಲಯಕ್ಕೆ ಹೋಗಿದ್ದು ಬಿಜೆಪಿಯ ರಾಷ್ಟ್ರೀಯ ಉಪಾಧ್ಯಕ್ಷ ಮತ್ತು ರಾಜ್ಯಸಭಾ ಸದಸ್ಯ ರಾಮಾ ಜೋಯಿಸ್ ಅಲ್ಲವೇ ಮೋದಿಜಿ. ನಿಮಗೆ ತಿಳಿವಳಿಕೆ ಇಲ್ಲದಿದ್ದರೆ ಸ್ವಲ್ಪ ಓದಿ ತಿಳಿದುಕೊಳ್ಳಿ ಎಂದರು.
ಈ ಕಾರಣಕ್ಕೆ ಮಹಿಳೆಯರು, ಶ್ರಮಿಕರು, ದುಡಿಯುವ ವರ್ಗಗಳು, ಹಿಂದುಳಿದವರು, ದಲಿತರು ಒಂದೇ ಒಂದು ಮತವನ್ನೂ ಬಿಜೆಪಿಗೆ ಹಾಕಬಾರದು ಎಂದು ಕರೆ ನೀಡಿದರು. ಈ ಬೊಮ್ಮಾಯಿ ಕತೆ ಒಂದಾದರೆ ಆ ಮೋದಿ ಕತೆ ಇನ್ನೊಂದು. ಮೋದಿ ಮೋದಿ ಎಂದು ನಂಬಿದ್ದ ದೇಶದ ಯುವಕ ಯುವತಿಯರಿಗೆ ಮೂರು ನಾಮ ಬಳಿದು ಕೈಗೆ ಖಾಲಿ ಚೊಂಬು ನೀಡಿದ ಮೋದಿ ಮುಖ ನೋಡಿ ಮತ ಹಾಕಿದರೆ ಆ ಮತಕ್ಕೆ ಗೌರವ ಬರುತ್ತದೆಯೇ ಎಂದು ಪ್ರಶ್ನಿಸಿದರು.












Click it and Unblock the Notifications