ಕನಿಷ್ಠ 1ವಾರ, ಗರಿಷ್ಠ 15ದಿನ ಲಾಕ್ಡೌನ್ ಮುಂದುವರಿಕೆ? ಹಿಂದಿನಂತಲ್ಲಾ ಈ ಬಾರಿ!
ಹದಿನಾಲ್ಕು ದಿನಗಳ ಲಾಕ್ಡೌನ್ ಸೋಮವಾರ (ಮೇ 24) ಬೆಳಗ್ಗೆಗೆ ಮುಕ್ತಾಯಗೊಳ್ಳಲಿದೆ. ಇದಾದ ನಂತರ ಲಾಕ್ಡೌನ್ ಮುಂದುವರಿಯಲಿದೆಯೇ ಎನ್ನುವುದರ ಬಗ್ಗೆ ಮುಖ್ಯಮಂತ್ರಿಗಳು ಇನ್ನೂ ಅಧಿಕೃತವಾಗಿ ಏನನ್ನೂ ಹೇಳದೇ, ಮೇ 23ರಂದು ಪ್ರಕಟಿಸುವುದಾಗಿ ಹೇಳಿದ್ದಾರೆ.
ಸದ್ಯದ ಖಚಿತ ಮಾಹಿತಿಯ ಪ್ರಕಾರ, ಲಾಕ್ಡೌನ್ ಅನ್ನು ಕನಿಷ್ಠ ಒಂದು ವಾರ ಅಥವಾ ಗರಿಷ್ಠ ಹದಿನೈದು ದಿನ ಮುಂದುವರಿಸುವುದು ಪಕ್ಕಾ. ಅಧಿಕೃತ ಆದೇಶ ಮಾತ್ರ ಬಿಡುಗಡೆಯಾಗಬೇಕಿದೆ ಎಂದು ಹೇಳಲಾಗುತ್ತಿದೆ.
ಡಾ.ಅಶ್ವಥ್ ನಾರಾಯಣ Vs ಡಾ.ಸುಧಾಕರ್: ಮತ್ತದೇ ಸಮಸ್ಯೆ, ಬಿಜೆಪಿಯಲ್ಲೇ ಗೊಂದಲ
ಈಗಾಗಲೇ, ಗೃಹ ಮತ್ತು ಕಂದಾಯ ಸಚಿವರು ಮುಂದಿನ ಲಾಕ್ಡೌನ್ ಹೇಗಿರಲಿದೆ ಎನ್ನುವುದರ ಬಗ್ಗೆ ಸೂಕ್ಷ್ಮವಾಗಿ ಹೇಳಿದ್ದಾರೆ. ಹೆಚ್ಚಿನ ಸಚಿವರು/ಅಧಿಕಾರಿಗಳು ಮುಂದುವರಿಸುವುದೇ ಸೂಕ್ತ ಎನ್ನುವ ಸಲಹೆಯನ್ನು ಸಿಎಂಗೆ ನೀಡಿದ್ದಾರೆ.
ಇನ್ನು ಐಸಿಎಂಆರ್ ಮತ್ತು ವಿಪತ್ತು ನಿರ್ವಹಣಾ ಸಮಿತಿಯ ಅಧಿಕಾರಿಗಳು ಮುಂದಿನ ಹದಿನೈದು ದಿನ ಲಾಕ್ಡೌನ್ ಮಾಡುವುದೇ ಸೂಕ್ತ ಎನ್ನುವ ಪ್ರಸ್ತಾವನೆಯನ್ನು ಸಲ್ಲಿಸಿದ್ದಾರೆ. ಮೂಲಗಳ ಪ್ರಕಾರ, ಹಿಂದಿನಂತೆ ಲಾಕ್ಡೌನ್ ಮಾರ್ಗಸೂಚಿಗಳು ಇರುವುದಿಲ್ಲ ಎಂದು ಹೇಳಲಾಗುತ್ತಿದೆ.
ಕೋವಿಡ್ 19 ವಿರುದ್ಧ ಖೋಡೆಸ್ನಿಂದ ವೈರಾನಾರ್ಮ್ ಔಷಧಿ, ಏನು ವಿಶೇಷ?
ಗೃಹಸಚಿವ ಬಸವರಾಜ ಬೊಮ್ಮಾಯಿ ಮತ್ತು ಕಂದಾಯ ಸಚಿವ ಆರ್.ಅಶೋಕ್
ಗೃಹಸಚಿವ ಬಸವರಾಜ ಬೊಮ್ಮಾಯಿ ಮತ್ತು ಕಂದಾಯ ಸಚಿವ ಆರ್.ಅಶೋಕ್, "ಮುಂದಿನ ವಾರದಿಂದ ಲಾಕ್ಡೌನ್ ನಿಯಮ ಇನ್ನಷ್ಟು ಬಿಗಿಗೊಳ್ಳಲಿದೆ. ಸಾರ್ವಜನಿಕರು ಸಹಕರಿಸಬೇಕು, ಪ್ರಮುಖವಾಗಿ ಗ್ರಾಮೀಣ ಭಾಗದಲ್ಲಿ ಕೊರೊನಾ ವ್ಯಾಪಕವಾಗಿ ಹರಡುತ್ತಿದೆ"ಎನ್ನುವ ಹೇಳಿಕೆಯನ್ನು ನೀಡಿದ್ದಾರೆ.
ಬೆಂಗಳೂರು ಮಹಾನಗರಕ್ಕೆ ಪ್ರತ್ಯೇಕ ಮಾರ್ಗಸೂಚಿ ಸಾಧ್ಯತೆ
ರಾಜ್ಯದ ಆರ್ಥಿಕ ಸ್ಥಿತಿಯ ಬಗ್ಗೆಯೂ ಅಧಿಕಾರಿಗಳು ಕಳವಳ ವ್ಯಕ್ತ ಪಡಿಸಿರುವುದರಿಂದ ಮುಖ್ಯಮಂತ್ರಿಗಳು ಆ ನಿಟ್ಟಿನಲ್ಲೂ ಗಮನ ಹರಿಸಬೇಕಾಗಿದೆ. ಹಾಗಾಗಿ, ಬೆಂಗಳೂರಿಗೆ ಒಂದು ಮಾರ್ಗಸೂಚಿ ಮತ್ತು ಸೋಂಕು ಹೆಚ್ಚಿರುವ ಜಿಲ್ಲೆಗಳಿಗೆ ಪ್ರತ್ಯೇಕ ಮಾರ್ಗಸೂಚಿ ಹೊರಡಿಸುವ ಸಾಧ್ಯತೆಯಿದೆ ಎಂದು ಹೇಳಲಾಗುತ್ತಿದೆ.
ಆಕ್ಸಿಜನ್, ಬೆಡ್ ಇನ್ನಿತರ ಸಮಸ್ಯೆಗಳು ತಕ್ಕಮಟ್ಟಿಗೆ ಸರಿದಾರಿಗೆ ಬರುತ್ತಿರುವ ಹಿನ್ನಲೆ
ಬೆಂಗಳೂರಿನಲ್ಲಿ ಕೊರೊನಾ ತಕ್ಕಮಟ್ಟಿಗೆ ಕಂಟ್ರೋಲ್ ಬರುತ್ತಿರುವುದರಿಂದ ಮತ್ತು ಆಕ್ಸಿಜನ್, ಬೆಡ್ ಇನ್ನಿತರ ಸಮಸ್ಯೆಗಳು ತಕ್ಕಮಟ್ಟಿಗೆ ಸರಿದಾರಿಗೆ ಬರುತ್ತಿರುವ ಹಿನ್ನಲೆಯಲ್ಲಿ, ರಾಜಧಾನಿಯ ಮಾರ್ಗಸೂಚಿಯಲ್ಲಿ ಬದಲಾವಣೆಗಳನ್ನು ಮಾಡಿ ಆರ್ಥಿಕ ಚಟುವಟಿಕೆಗಳಿಗೆ ಇನ್ನೂ ಹೆಚ್ಚಿನ ಅವಕಾಶ ನೀಡುವ ಸಾಧ್ಯತೆಯಿದೆ ಎನ್ನುವ ಮಾತು ಕೇಳಿಬರುತ್ತಿದೆ. ಕೊರೊನಾ ಕಮ್ಮಿಯಿರುವ ಜಿಲ್ಲೆಗಳಲ್ಲೂ ಇದೇ ನಿಯಮವನ್ನು ಜಾರಿಗೆ ತರುವ ಸಾಧ್ಯತೆಯಿದೆ.
Recommended Video
ಕನಿಷ್ಠ 1ವಾರ, ಗರಿಷ್ಠ 15ದಿನ ಲಾಕ್ಡೌನ್ ಮುಂದುವರಿಕೆ: ಹಿಂದಿನಂತಲ್ಲಾ..
ಆದರೆ, ಕೊರೊನಾ ಹೆಚ್ಚಾಗುತ್ತಿರುವ ಮತ್ತು ಕೇಂದ್ರ ಸರಕಾರ ಘೋಷಿಸಿರುವ ರೆಡ್ ಅಲರ್ಟ್ ಜಿಲ್ಲೆಗಳಲ್ಲಿ ಕಠಿಣ ಮಾರ್ಗಸೂಚಿ ಹೊರಬೀಳುವ ಸಾಧ್ಯತೆಯಿದೆ. ಜೊತೆಗೆ, ಆಯಾಯ ಜಿಲ್ಲಾಧಿಕಾರಿಗಳಿಗೆ ಫುಲ್ ಪವರ್ ನೀಡುವ ಸಾಧ್ಯತೆಯಿಲ್ಲದಿಲ್ಲ. ಈಗಾಗಲೇ, ಕಠಿಣ ನಿಯಮ ಹಲವು ಜಿಲ್ಲೆಗಳಲ್ಲಿ ಜಾರಿಯಲ್ಲಿದೆ, ಅದು ಮುಂದುವರಿಯುವ ಸಾಧ್ಯತೆಯಿದೆ.