ಲೋಡ್ ಶೆಡ್ಡಿಂಗ್ ಜಾರಿ, ಕರ್ನಾಟಕಕ್ಕೆ ಕತ್ತಲ ಭಾಗ್ಯ!

ಕಳೆದ ವರ್ಷ ಸೆಪ್ಟೆಂಬರ್ ತಿಂಗಳಿನಲ್ಲಿಯೇ ಲೋಡ್ ಶೆಡ್ಡಿಂಗ್ ಜಾರಿಗೆ ಬಂದಿತ್ತು. ಸದ್ಯ ಡಿಸೆಂಬರ್ ಅಂತ್ಯದ ವೇಳಗೆ ಅನಧಿಕೃತ ಲೋಡ್ ಶೆಡ್ಡಿಂಗ್ ಆರಂಭವಾಗಿದೆ. ರಾಯಚೂರು ಶಾಖೋತ್ಪನ್ನ ವಿದ್ಯುತ್ ಕೇಂದ್ರ (ಆರ್ಟಿಪಿಎಸ್), ಉಡುಪಿ ಶಾಖೋತ್ಪನ್ನ ಕೇಂದ್ರ (ಯುಪಿಸಿಎಲ್)ಗಳಲ್ಲಿ ವಿದ್ಯುತ್ ಉತ್ಪಾದನೆ ಇಳಿಕೆ ಯಾಗಿದ್ದು, ರಾಜ್ಯದಲ್ಲಿ ವಿದ್ಯುತ್ ಕೊರತೆ ಎದುರಾಗಿದೆ.
ಡಿ.18ರಿಂದಲೇ ಬೆಂಗಳೂರು ಸೇರಿದಂತೆ ವಿವಿಧ ಜಿಲ್ಲೆಗಳಲ್ಲಿ ಅನಧಿಕೃತ ಲೋಡ್ ಶೆಡ್ಡಿಂಗ್ ಆರಂಭವಾಗಿದ್ದು, ಗ್ರಾಮೀಣ ಪ್ರದೇಶಗಳಲ್ಲಿ ಹಗಲು 4 ಮತ್ತು ರಾತ್ರಿ 2 ಗಂಟೆ ತ್ರೀಫೇಸ್ ವಿದ್ಯುತ್ ಒದಗಿಸುವ ಭರವಸೆ ಈಡೇರುವ ಲಕ್ಷಣಗಳು ಕಾಣುತ್ತಿಲ್ಲ. ರಾಜ್ಯದ ಜಲ ವಿದ್ಯುತ್ ಕೇಂದ್ರಗಳು ಹೆಚ್ಚು ಉತ್ಪಾದನೆ ಮಾಡುತ್ತಿರುವುದರಿಂದ ತೀವ್ರ ವಿದ್ಯುತ್ ಕೊರತೆ ಉಂಟಾಗಿಲ್ಲ. [ವಿದ್ಯುತ್ ದರ ಹೆಚ್ಚಳ ಮಾಡಿ : ಎಸ್ಕಾಂ ಮನವಿ]
ಸದ್ಯ ರಾಜ್ಯಕ್ಕೆ 7,500 ಮೆ.ಗಾ. ವ್ಯಾಟ್ ವಿದ್ಯುತ್ ಅಗತ್ಯವಿದೆ. ಆದರೆ, 4,300 ಮೆ.ವ್ಯಾ. ಮಾತ್ರ ಉತ್ಪಾದನೆಯಾಗುತ್ತಿದೆ. ರಾಯಚೂರು ಮತ್ತು ಉಡುಪಿ ಕೇಂದ್ರಗಳಲ್ಲಿ ಉತ್ಪಾದನೆ ಕುಸಿದಿದ್ದರಿಂದ ಒಟ್ಟು 1,198 ಮೆ.ವ್ಯಾ. ವಿದ್ಯುತ್ ಕೊರತೆ ಉಂಟಾಗಿದೆ. ಇದರ ಜೊತೆಗೆ ಪವನ ವಿದ್ಯುತ್ ಉತ್ಪಾದನೆ ಸಹ ಸಂಪೂರ್ಣ ಸ್ಥಗಿತಗೊಂಡಿದೆ. ಹೊರ ರಾಜ್ಯಗಳಿಂದ ವಿದ್ಯುತ್ ಖರೀದಿ ನಿಲ್ಲಿಸಲಾಗಿದೆ. ಆದ್ದರಿಂದ ಲೋಡ್ ಶೆಡ್ಡಿಂಗ್ ಜಾರಿಗೆ ಬಂದಿದೆ.
ಈ ಬಾರಿ ಉತ್ತಮ ಮಳೆ ಸುರಿದು ವಿದ್ಯುತ್ ಉತ್ಪಾದಿಸುವ ಎಲ್ಲಾ ಜಲಾಶಯಗಳು ಭರ್ತಿಯಾಗಿದ್ದವು. ಆದ್ದರಿಂದ ಜಲವಿದ್ಯುತ್ ಕೇಂದ್ರಗಳು ಹೆಚ್ಚಿನ ವಿದ್ಯುತ್ ಉತ್ಪಾದನೆ ಮಾಡುತ್ತಿವೆ. ಇಲ್ಲದಿದ್ದರೆ, ದಿನಕ್ಕೆ 6 ತಾಸು ಮಾತ್ರ ವಿದ್ಯುತ್ ಪೂರೈಸಲು ಶಕ್ತವಾಗುತ್ತಿತ್ತು ಎಂದು ಕೆಪಿಟಿಸಿಎಲ್ ಮೂಲಗಳು ತಿಳಿಸಿವೆ. ರಾಯಚೂರು, ಉಡುಪಿ ಕೇಂದ್ರಗಳಲ್ಲಿ ಹೆಚ್ಚಿನ ವಿದ್ಯುತ್ ಉತ್ಪಾದನೆ ಆಗುವ ತನಕ ಲೋಡ್ ಶೆಡ್ಡಿಂಗ್ ಮುಂದುವರೆಯಬಹುದು.
ಕೆಪಿಟಿಸಿಎಲ್ನ ಪ್ರಕಾರ ಪ್ರಮುಖ ನಗರಗಳಲ್ಲಿ ವಿದ್ಯುತ್ ಬೇಡಿಕೆ ಹೆಚ್ಚಾಗುವ ಸಂಜೆ ನಂತರದ ಅವಧಿಯಲ್ಲಿ 2 ತಾಸು, ಉಳಿದ ಕಡೆಗಳಲ್ಲಿ ಬೆಳಗ್ಗೆ, ಮಧ್ಯಾಹ್ನ, ರಾತ್ರಿ, ಮಧ್ಯರಾತ್ರಿ 2 ತಾಸು ಅನಧಿಕೃತ ಲೋಡ್ ಶೆಡ್ಡಿಂಗ್ ಜಾರಿಯಾಗಿದೆ. ಗ್ರಾಮಾಂತರ ಪ್ರದೇಶಗಳಿಗೆ 2 ತಾಸು ಮಾತ್ರ ವಿದ್ಯುತ್ ಪೂರೈಸಲಾಗುತ್ತಿದೆ.












Click it and Unblock the Notifications