ಕೊರೊನಾ: ರಾಜ್ಯದ ಮತ್ತೆ ಐದು ಜಿಲ್ಲೆಗಳು, ಸೇಫ್ ಝೋನ್ ನತ್ತ. ಸೂಪರ್!
ಕೊರೊನಾ ವೈರಸ್ ಹರಡುವುದನ್ನು ತಡೆಯಲು ಎರಡನೇ ಅವಧಿಯ ಲಾಕ್ ಡೌನ್ ಆರಂಭವಾಗಿದೆ. ಗ್ರೀನ್ ಝೋನ್ ನಲ್ಲಿರುವ ಜಿಲ್ಲೆಗಳಿಗೆ ಸ್ವಲ್ಪಮಟ್ಟಿನ ವಿನಾಯತಿ ಸಿಗಬಹುದು ಎನ್ನುವ ನಿರೀಕ್ಷೆ ಸುಳ್ಳಾಗಿದೆ.ಮೇ ಮೂರರವರೆಗೆ ಎರಡನೇ ಹಂತದ ಲಾಕ್ ಡೌನ್ ಮುಂದುವರಿಯಲಿದೆ. ಏಪ್ರಿಲ್ 20ರ ನಂತರ ಪರಿಸ್ಥಿತಿಯನ್ನು ಆಧರಿಸಿ, ಕೆಲವೊಂದು ಗ್ರೀನ್ ಅಥವಾ ಸೇಫ್ ಝೋನ್ ಜಿಲ್ಲೆಗಳಲ್ಲಿ ಲಾಕ್ ಡೌನ್ ಸ್ವಲ್ಪ ಮಟ್ಟಿಗೆ ಸಡಿಲಗೊಳ್ಳಬಹುದು.
Recommended Video
ಕೊರೊನಾ ವಿರುದ್ದ ಸದ್ಯ ಮೇಲುಗೈ ಸಾಧಿಸಿದ ಕಾರ್ಕಳ: ಶಾಸಕ ಸುನಿಲ್ ಕುಮಾರ್ ಸಂದರ್ಶನ
ಕೇಂದ್ರ ಸರಕಾರ ಬುಧವಾರ (ಏ 15) ಪ್ರಕಟಿಸಿರುವ ದೇಶದ ಹಾಟ್ ಸ್ಪಾಟ್ ಜಿಲ್ಲೆಗಳ ಪೈಕಿ, ರಾಜ್ಯದ ಎಂಟು ಜಿಲ್ಲೆಗಳಿವೆ. ಇದರಲ್ಲಿ ರಾಜಧಾನಿ ಬೆಂಗಳೂರು ಕೂಡಾ ಒಂದು. ನಗರದ 198 ವಾರ್ಡುಗಳ ಪೈಕಿ, 39 ವಾರ್ಡ್ ಗಳನ್ನು ಹಾಟ್ ಸ್ಪಾಟ್ ವಾರ್ಡ್ ಎಂದು ಗುರುತಿಸಲಾಗಿದೆ.
ರಾಜ್ಯದ ವಿವಿಧ ಹತ್ತು ಜಿಲ್ಲೆಗಳು ಸೇಫ್ ಝೋನ್ ಅಥವಾ ಗ್ರೀನ್ ಝೋನ್ ನಲ್ಲಿವೆ. ಈ ಜಿಲ್ಲೆಗಳಲ್ಲಿ , ಇದುವರೆಗೆ ಯಾವುದೇ ಕೊರೊನಾ ಸೋಂಕು ಪ್ರಕರಣ ದಾಖಲಾಗಲಿಲ್ಲ. ಇದರ ಜೊತೆಗೆ, ರೆಡ್ ಝೋನ್ ನಲ್ಲಿರುವ ಒಂದು ಮತ್ತು ಯೆಲ್ಲೋ ಅಥವಾ ಅಲರ್ಟ್ ಝೋನ್ ನಲ್ಲಿರುವ ನಾಲ್ಕು ಜಿಲ್ಲೆಗಳು, ಸದ್ಯದ ಪರಿಸ್ಥಿತಿಯ ಅನ್ವಯ, ಸೇಫ್ ಝೋನ್ ನತ್ತ ಸಾಗುತ್ತಿದೆ. ಆ ಐದು ಜಿಲ್ಲೆಗಳು ಇಂತಿವೆ:
ಉಡುಪಿ ಜಿಲ್ಲಾಡಳಿತಕ್ಕೆ ಕೇಂದ್ರದಿಂದ ಪ್ರಶಂಸೆ: ಡಿಸಿ ಜಗದೀಶ್
ಗದಗ ಜಿಲ್ಲೆ
ಕೊರೊನಾ, ಕರ್ನಾಟಕದಲ್ಲಿ ಇದುವರೆಗೆ ಬಲಿ ಪಡೆದುಕೊಂಡ ಹದಿಮೂರು ಜನರ ಪೈಕಿ, ಒಂದು ಸಾವು ಗದಗ ಜಿಲ್ಲೆಯಲ್ಲಿ. ಇದಾದ ನಂತರ, ಜಿಲ್ಲೆಯಲ್ಲಿ ಯಾವುದೇ ಹೊಸ ಸೋಂಕಿನ ಪ್ರಕರಣ ದಾಖಲಾಗದೇ ಇರುವುದು ಜಿಲ್ಲೆಯ ಜನತೆಯನ್ನು ನೆಮ್ಮದಿಯ ನಿಟ್ಟುಸಿರು ಬಿಡುವಂತೆ ಮಾಡಿದೆ.
ಉಡುಪಿ ಜಿಲ್ಲೆ
ಉಡುಪಿ ಜಿಲ್ಲೆಯಲ್ಲಿ ಮೂರು ಪಾಸಿಟೀವ್ ಪ್ರಕರಣಗಳು ದಾಖಲಾಗಿದ್ದವು. ಇದರಲ್ಲಿ ಇಬ್ಬರು ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆ ಹೊಂದಿದ್ದಾರೆ. ಇನ್ನೋರ್ವನನ್ನೂ ಸದ್ಯದಲ್ಲೇ ಬಿಡುಗಡೆಗೊಳಿಸಲಾಗುತ್ತಿದೆ. ಜಿಲ್ಲಾಡಳಿತದ ಕಟ್ಟುನಿಟ್ಟಿನ ಕ್ರಮದಿಂದಾಗಿ, ಯಾವುದೇ ಹೊಸ ಪ್ರಕರಣಗಳು ದಾಖಲಾಗಿಲ್ಲ.
ದಾವಣಗೆರೆ ಜಿಲ್ಲೆ
ಎರಡು ಪಾಸಿಟೀವ್ ಪ್ರಕರಣಗಳು ಜಿಲ್ಲೆಯಲ್ಲಿ ದಾಖಲಾದ ನಂತರ, ಎಲ್ಲೆಡೆ ಆತಂಕ ಮನೆಮಾಡಿತ್ತು. ಆದರೆ, ಇಬ್ಬರೂ ಗುಣಮುಖರಾಗಿದ್ದಾರೆ ಎಂದು ಜಿಲ್ಲಾಡಳಿತ ಪ್ರಕಟಿಸಿದ ನಂತರ, ಸದ್ಯ ಆತಂಕ ದೂರವಾಗಿದೆ. ಇದುವರೆಗೆ, ಜಿಲ್ಲೆಯಲ್ಲಿ ಯಾವುದೇ ಹೊಸ ಪ್ರಕರಣಗಳು ದಾಖಲಾಗಲಿಲ್ಲ.
ದಕ್ಷಿಣ ಕನ್ನಡ ಜಿಲ್ಲೆ
ಕೊರೊನಾ ವೈರಸ್ ಹಾವಳಿ ಶುರುವಾದ ಆರಂಭದಲ್ಲಿ, ಅತ್ಯಂತ ಆತಂಕಗೊಳ್ಳುವಂತಾಗಿದ್ದು ದಕ್ಷಿಣ ಕನ್ನಡ ಜಿಲ್ಲೆಯಲ್ಲಿನ ಪಾಸಿಟೀವ್ ಪ್ರಕರಣಗಳು. ಹನ್ನೆರಡು ಪಾಸಿಟೀವ್ ಪ್ರಕರಣಗಳು ಜಿಲ್ಲೆಯಲ್ಲಿ ದಾಖಲಾಗಿತ್ತು. ಇದರಲ್ಲಿ, ಈ ವರೆಗೆ ಒಂಬತ್ತು ಜನ ಗುಣಮುಖರಾಗಿದ್ದು, ಮೂವರು ಅದೇ ದಾರಿಯಲ್ಲಿದ್ದಾರೆ. ಜೊತೆಗೆ, ಸತತ ಹನ್ನೆರಡನೇ ದಿನ, ಯಾವುದೇ ಹೊಸ ಪ್ರಕರಣಗಳು ದಾಖಲಾಗಲಿಲ್ಲ.
ಚಿತ್ರದುರ್ಗ ಜಿಲ್ಲೆ
ಜಿಲ್ಲೆಯಲ್ಲಿ ಒಂದೇ ಒಂದು ಸೋಂಕು ಪ್ರಕರಣ ದಾಖಲಾಗಿತ್ತು. ಆ ವ್ಯಕ್ತಿಯ ವರದಿ ನೆಗೆಟೀವ್ ಬಂದಿರುವುದರಿಂದ, ಜಿಲ್ಲೆಯಲ್ಲಿ ಇದುವರೆಗೆ ಯಾವುದೇ ಸೋಂಕಿನ ಲಕ್ಷಣಗಳು ಕಾಣಿಸಿಕೊಂಡಿಲ್ಲ. ಸೇಫ್ ಝೋನಿಗೆ ಹೋಗುವುದರಿಂದ, ಏಪ್ರಿಲ್ ಇಪ್ಪತರ ನಂತರ, ಸ್ವಲ್ಪಮಟ್ಟಿನ ಲಾಕ್ ಡೌನ್ ರಿಲ್ಯಾಕ್ಸ್ ಆಗಬಹುದು ಎಂದು ಹೇಳಲಾಗುತ್ತಿದೆ.