ಬಾದಾಮಿಯಲ್ಲಿ ಯಾರಾದರೂ ಸ್ಪರ್ಧಿಸಲಿ, ನನಗೆ ಭಯವಿಲ್ಲ: ಸಿದ್ದರಾಮಯ್ಯ
Recommended Video
ಮೈಸೂರು, ಏಪ್ರಿಲ್ 23: ಚುನಾವಣೆಗಳು ಸಿದ್ಧಾಂತಗಳ ಮೇಲೆ ನಡೆಯುತ್ತವೆ. ವ್ಯಕ್ತಿಗಳ ನಡೆ ನಡೆಯುವುದಿಲ್ಲ. ಹೀಗಂಥ ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ. ಬಾದಾಮಿಯಲ್ಲಿ ಸಾಂಭಾವ್ಯ ಎದುರಾಳಿ ಬಗ್ಗೆ ಕೇಳಿದ ಪ್ರಶ್ನೆಗೆ ಅವರು ಇಂಥಹದ್ದೊಂದು ಉತ್ತರ ನೀಡಿದ್ದಾರೆ.
ಬಾದಾಮಿಯಲ್ಲಿ ಸಿದ್ದರಾಮಯ್ಯ ವಿರುದ್ಧ ಶ್ರೀರಾಮುಲು ಸ್ಪರ್ಧಿಸುವ ಬಗ್ಗೆ ಕೇಳಲಾದ ಪ್ರಶ್ನೆಗೆ ಉತ್ತರಿಸಿದ ಅವರು, "ಅವರು ಯಾರನ್ನಾದರೂ ನಿಲ್ಲಿಸಲಿ ನನಗೇನು ಭಯವಿಲ್ಲ," ಎಂದಿದ್ದಾರೆ.
ಬಾದಾಮಿಯಲ್ಲಿ ಸಿದ್ದರಾಮಯ್ಯ - ಶ್ರೀರಾಮುಲು ಮುಖಾಮುಖಿ
ಈಗಾಗಲೇ ಚಾಮುಂಡೇಶ್ವರಿಯಲ್ಲಿ ನಾಮಪತ್ರ ಸಲ್ಲಿಸಿರುವ ಮುಖ್ಯಮಂತ್ರಿಗಳು, ಸ್ಥಳೀಯ ನಾಯಕರ ಒತ್ತಾಸೆ ಮೇರೆಗೆ ತಾವು ಬಾದಾಮಿಯಲ್ಲಿ ಸ್ಪರ್ಧಿಸುತ್ತಿರುವುದಾಗಿ ಹೇಳಿದ್ದಾರೆ. ನನ್ನ ಸ್ಪರ್ಧೆಯಿಂದ ಬಾಗಲಕೋಟೆ ವಿಜಯಪುರ ಭಾಗದಲ್ಲಿ ಪಕ್ಷಕ್ಕೆ ಅನುಕೂಲವಾಗಲಿದೆ ಎಂಬ ಸ್ಥಳೀಯ ನಾಯಕರ ಲೆಕ್ಕಾಚಾರದ ಮೇಲೆ ಬಾದಾಮಿಯಲ್ಲಿ ಸ್ಪರ್ಧಿಸುತ್ತಿದ್ದೇನೆ ಎಂದು ಹೇಳಿದ್ದಾರೆ.
ನಾವು ಕೋಮು ಶಕ್ತಿಗಳ ವಿರುದ್ಧ ಹೋರಾಡುತ್ತಿದ್ದು, ಕೋಮು ಶಕ್ತಿಗಳನ್ನು ಸೋಲಿಸುವುದೇ ನಮ್ಮ ಗುರಿ ಎಂದು ಅವರು ಸ್ಪಷ್ಟಪಡಿಸಿದ್ದಾರೆ.
ಆರಂಭದಲ್ಲಿ ಬಾದಾಮಿ ಕ್ಷೇತ್ರದಲ್ಲಿ ಡಾ. ದೇವರಾಜ್ ಪಾಟೀಲ್ ಅವರಿಗೆ ಟಿಕೆಟ್ ನೀಡಲಾಗಿತ್ತು. ಆದರೆ ಭಾನುವಾರ ಬಿಡುಗಡೆಯಾದ ಕಾಂಗ್ರೆಸ್ ಎರಡನೇ ಪಟ್ಟಿಯಲ್ಲಿ ಸಿದ್ದರಾಮಯ್ಯನವರಿಗೆ ಬಾದಾಮಿ ಟಿಕೆಟ್ ನೀಡಲಾಗಿದ್ದು, ಅವರ ಮನೆಗೇ ಬಿ-ಫಾರ್ಮ್ ತಲುಪಿಸಲಾಗಿದೆ.
ಕಾಂಗ್ರೆಸ್ ಅಂತಿಮ ಪಟ್ಟಿ ಪ್ರಕಟ, ಬಾದಾಮಿಯಿಂದ ಸಿದ್ದರಾಮಯ್ಯ ಸ್ಪರ್ಧೆ
ಇನ್ನು ಸಿದ್ದರಾಮಯ್ಯ ವಿರುದ್ಧ ಸ್ಪರ್ಧಿಸಲು ಬಿಜೆಪಿ ಮುಖ್ಯಮಂತ್ರಿ ಅಭ್ಯರ್ಥಿ ಯಡಿಯೂರಪ್ಪ ಮತ್ತು ಸಂಸದ ಶ್ರೀರಾಮುಲು ಸಿದ್ಧವಾಗಿದ್ದಾರೆ. "ನಾನು ಬಾದಾಮಿಯಿಂದ ಸ್ಪರ್ಧಿಸಬೇಕೋ ಬೇಡವೋ ಎಂಬುದನ್ನು ನಮ್ಮ ರಾಷ್ಟ್ರೀಯ ಅಧ್ಯಕ್ಷರು ನಿರ್ಧರಿಸಲಿದ್ದಾರೆ. ಒಂದೊಮ್ಮೆ ನಾನು ಸ್ಪರ್ಧಿಸಬೇಕು ಎಂದು ಹೇಳಿದರೆ ನಾನು ಸ್ಪರ್ಧೆಗೆ ಸಿದ್ದವಾಗಿದ್ದೇನೆ. ಒಂದೊಮ್ಮೆ ಬೇರೆಯವರನ್ನು ಸ್ಪರ್ಧಿಸಲು ಕೇಳಿಕೊಂಡರೆ ಅವರು ಸ್ಪರ್ಧಿಸಲಿದ್ದಾರೆ," ಎಂಬುದಾಗಿ ಚಿಕ್ಕಮಗಳೂರಿನಲ್ಲಿ ಯಡಿಯೂರಪ್ಪ ಹೇಳಿದ್ದಾರೆ.
ಮುಂದುವರಿದು ಮಾತನಾಡಿದ ಅವರು ಬಾದಾಮಿಯಲ್ಲಿ ನಾವು ಉತ್ತಮ ಅಭ್ಯರ್ಥಿಯನ್ನು ಕಣಕ್ಕಿಳಿಸಲಿದ್ದೇವೆ ಮತ್ತು ಸಿದ್ದರಾಮಯ್ಯರನ್ನು ಸೋಲಿಸಲಿದ್ದೇವೆ ಎಂದು ಹೇಳಿದ್ದಾರೆ.