ಜೆಡಿಎಸ್ ನೀಡಿದ್ದ ಆಫರ್ ಬಹಿರಂಗ ಪಡಿಸಿದ ಡಿ ಕೆ ಶಿವಕುಮಾರ್
ಬೆಂಗಳೂರು, ಜುಲೈ 21: ರಾಜಕಾರಣದಲ್ಲಿ ಕೆಲವೊಂದು ವಿಚಾರಗಳನ್ನು ಮುಚ್ಚಿಡಲು ಸಾಧ್ಯವಿಲ್ಲ ಎಂದು ಹೇಳಿರುವ ಸಚಿವ ಡಿ ಕೆ ಶಿವಕುಮಾರ್, ನಮ್ಮ ಪಕ್ಷಕ್ಕೆ ಜೆಡಿಎಸ್ ನೀಡಿದ್ದ ಆಫರ್ ಬಗ್ಗೆ ಮಾತನಾಡಿದ್ದಾರೆ.
ಬಿಜೆಪಿ ಕೈಗೆ ಮತ್ತೆ ಅಧಿಕಾರ ಹೋಗಬಾರದು, ಮೈತ್ರಿ ಸರಕಾರ ಉಳಿಯಲು ಕಾಂಗ್ರೆಸ್ ನವರೇ ಸಿಎಂ ಆಗಲಿ ಎನ್ನುವ ಆಫರ್, ಆ ಪಕ್ಷದಿಂದ ಬಂದಿತ್ತು ಎಂದು ಡಿಕೆಶಿ ಹೇಳಿದ್ದಾರೆ.
ಕುಮಾರಸ್ವಾಮಿ ನಾಳೆ ವಿಶ್ವಾಸಮತ ಯಾಚನೆ ಮಾಡ್ತಾರೆ: ಡಿಕೆ ಶಿವಕುಮಾರ್
ಕಾಂಗ್ರೆಸ್ಸಿನಿಂದ ಇಂತವರೇ ಮುಖ್ಯಮಂತ್ರಿಯಾಗಬೇಕು ಎನ್ನುವ ಷರತ್ತನ್ನು ಜೆಡಿಎಸ್ ವಿಧಿಸಿರಲಿಲ್ಲ. ಈ ಬಗ್ಗೆ ನಾವು ಹೈಕಮಾಂಡಿಗೂ ತಿಳಿಸಿದ್ದೆವು ಎಂದು ಸಚಿವ ಡಿಕೆಶಿ ಹೇಳಿದ್ದಾರೆ.
ಸಿದ್ದರಾಮಯ್ಯ, ಡಾ. ಪರಮೇಶ್ವರ್ ಅಥವಾ ನಾನು, ಈ ಮೂವರಲ್ಲಿ ಯಾರು ಸಿಎಂ ಆದರೂ ನಮ್ಮ ತಕರಾರು ಇಲ್ಲ ಎಂದು ಜೆಡಿಎಸ್ ಪ್ರಮುಖರು ಹೇಳಿದ್ದರು ಎನ್ನುವ ಮಾತನ್ನು ಡಿಕೆಶಿ ಹೊರಗೆಡವಿದ್ದಾರೆ.
ಕಾಲಕಾಲಕ್ಕೆ ತಕ್ಕಂತೆ ಯಾವ ರೀತಿಯ ರಾಜಕೀಯ ಮಾಡಬೇಕು ಅದನ್ನು ಮಾಡಬೇಕಾಗುತ್ತದೆ, ನಾನು ಅದನ್ನೇ ಮಾಡುತಿದ್ದೇನೆ ಎಂದು ಹೇಳಿರುವ ಡಿಕೆಶಿ, ಸೋಮವಾರ (ಜುಲೈ 22) ಮುಖ್ಯಮಂತ್ರಿಗಳು ವಿಶ್ವಾಸಮತಯಾಚನೆ ಮಾಡಲಿದ್ದಾರೆಂದು ಡಿಕೆಶಿ ಸ್ಪಷ್ಟಪಡಿಸಿದ್ದಾರೆ.
ನಮ್ಮ ಶಾಸಕರು ನಮ್ಮ ಜೊತೆಗೆ ಬರಲಿದ್ದಾರೆಂದು ಹೇಳಿರುವ ಡಿಕೆಶಿ, ನಾವು ವಿಶ್ವಾಸಮತ ಗೆಲ್ಲಲಿದ್ದೇವೆ ಎನ್ನುವ ವಿಶ್ವಾಸವನ್ನು ವ್ಯಕ್ತ ಪಡಿಸಿದ್ದಾರೆ.