ಪರಿಷತ್ ಚುನಾವಣೆಗೆ 2ನೇ ಅಭ್ಯರ್ಥಿ ಕಣಕ್ಕಿಳಿಸಿದ ಬಿಜೆಪಿ
ಬೆಂಗಳೂರು, ಜೂನ್ 01 : ಅಚ್ಚರಿಯ ಬೆಳವಣಿಗೆಯೊಂದರಲ್ಲಿ ವಿಧಾನಪರಿಷತ್ ಚುನಾವಣೆಗೆ ಬಿಜೆಪಿ 2ನೇ ಅಭ್ಯರ್ಥಿಯನ್ನು ಕಣಕ್ಕಿಳಿಸಿದೆ. ಬಿಜೆಪಿ ಮತ್ತು ಜೆಡಿಎಸ್ ನಡುವಿನ ಹೊಂದಾಣಿಕೆ ರಾಜಕೀಯಕ್ಕೆ ಇದು ವೇದಿಕೆ ಸಿದ್ಧವಾಗಿದ್ದು, ಹೊಂದಾಣಿಕೆ ಸಾಧ್ಯವಾಗದಿದ್ದರೆ ಚುನಾವಣೆ ನಡೆಯುವುದು ಅನಿವಾರ್ಯವಾಗಲಿದೆ.
ವಿಧಾನಪರಿಷತ್ ಚುನಾವಣೆಗೆ ನಾಮಪತ್ರ ಸಲ್ಲಿಸಲು ಮೇ 31 ಕೊನೆಯ ದಿನವಾಗಿತ್ತು. ಬಿಜೆಪಿಯಿಂದ ವಿ.ಸೋಮಣ್ಣ, ಲೆಹರ್ ಸಿಂಗ್, ಜೆಡಿಎಸ್ನಿಂದ ಕೆ.ವಿ.ನಾರಾಯಣ ಸ್ವಾಮಿ, ಎಸ್.ಎಂ.ವೆಂಕಟಪತಿ ಅವರು ನಾಮಪತ್ರ ಸಲ್ಲಿಸಿದ್ದಾರೆ. ಬಿಜೆಪಿ ಜೊತೆ ಮೈತ್ರಿ ಮಾಡಿಕೊಂಡರೆ ಜೆಡಿಎಸ್ನ ಒಬ್ಬರು ಅಭ್ಯರ್ಥಿಗಳು ನಾಮಪತ್ರ ವಾಪಸ್ ಪಡೆಯಬೇಕು. [ಯಡಿಯೂರಪ್ಪ ಕರ್ನಾಟಕದ ಮುಂದಿನ ಸಿಎಂ: ವಿ ಸೋಮಣ್ಣ]

ಅಶೋಕ್, ಕುಮಾರಸ್ವಾಮಿ ಮಾತುಕತೆ : ವಿಧಾನಪರಿಷತ್ತಿನಲ್ಲಿ ಜೆಡಿಎಸ್ ಮತ್ತು ಬಿಜೆಪಿ ಹೊಂದಾಣಿ ಮಾಡಿಕೊಳ್ಳುವ ಕುರಿತು ಮೊದಲ ಸುತ್ತಿನ ಮಾತುಕತೆ ನಡೆದಿದೆ. ಬೆಂಗಳೂರಿನ ವಿಜಯನಗರದಲ್ಲಿನ ಖಾಸಗಿ ಹೋಟೆಲ್ನಲ್ಲಿ ಮಂಗಳವಾರ ರಾತ್ರಿ ಆರ್.ಅಶೋಕ್ ಮತ್ತು ಎಚ್.ಡಿ.ಕುಮಾರಸ್ವಾಮಿ ಅವರು ಸುಮಾರು 45 ನಿಮಿಷಗಳ ಕಾಲ ಈ ಬಗ್ಗೆ ಚರ್ಚೆ ನಡೆಸಿದ್ದಾರೆ. [ಪರಿಷತ್ ಚುನಾವಣೆ ವೇಳಾಪಟ್ಟಿ]
ಆರ್.ಅಶೋಕ್ ಅವರು ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಮತ್ತು ಇತರ ಪಕ್ಷದ ನಾಯಕರ ಜೊತೆ ಚರ್ಚೆ ನಡೆಸಿದ ಬಳಿಕ ಕುಮಾರಸ್ವಾಮಿ ಅವರರೊಂದಿಗೆ ಮತ್ತೊಮ್ಮೆ ಚರ್ಚೆ ನಡೆಸಿ, ಹೊಂದಾಣಿಕೆಯ ಕುರಿತು ಅಂತಿಮ ತೀರ್ಮಾನ ಕೈಗೊಳ್ಳಲಿದ್ದಾರೆ. [ಪರಿಷತ್ ಚುನಾವಣೆ ಕಣದಲ್ಲಿ ವಾಟಾಳ್ ನಾಗರಾಜ್]
ಮಾಧ್ಯಮಗಳ ಜೊತೆ ಮಾತನಾಡಿರುವ ಆರ್.ಅಶೋಕ್ ಅವರು, 'ಜೆಡಿಎಸ್ ನಾಯಕರು ಕೆಲವು ಪ್ರಸ್ತಾವನೆಗಳನ್ನು ಮುಂದಿಟ್ಟಿದ್ದಾರೆ. ವಿ.ಸೋಮಣ್ಣ ಅವರಿಗೆ 29 ಮತಗಳು ಬಿದ್ದ ಬಳಿಕ ಇನ್ನೂ 14-15 ಹೆಚ್ಚುವರಿ ಮತಗಳು ಉಳಿಯಲಿವೆ. ಜೆಡಿಎಸ್ಗೂ ಇದೇ ಸ್ಥಿತಿ ಇದೆ. ಈ ಕುರಿತು ಚರ್ಚೆಗಳು ನಡೆದಿವೆ' ಎಂದು ಹೇಳಿದ್ದಾರೆ.
ಎರಡು ದಿನದಲ್ಲಿ ಬಿಜೆಪಿ ಮತ್ತು ಜೆಡಿಎಸ್ ಹೊಂದಾಣಿಕೆ ಕುರಿತು ಸ್ಪಷ್ಟ ಚಿತ್ರಣ ಲಭ್ಯವಾಗುವ ಸಾಧ್ಯತೆ ಇದೆ. ನಂತರ ಯಾವ ಪಕ್ಷದ ಅಭ್ಯರ್ಥಿ ನಾಮಪತ್ರ ವಾಪಸ್ ಪಡೆಯುತ್ತಾರೆ ಎಂಬುದು ಖಚಿತವಾಗಲಿದೆ. ಜೂನ್ 10ರಂದು ವಿಧಾನಸಭೆಯಿಂದ ವಿಧಾನಪರಿಷತ್ ಸದಸ್ಯರ ಆಯ್ಕೆಗೆ ಚುನಾವಣೆ ನಡೆಯಲಿದೆ.












Click it and Unblock the Notifications