Sumalatha; ಮಂಡ್ಯ ಎಂಪಿ ಬಿಜೆಪಿ ಸೇರುವುದನ್ನು ತಡೆದ ಕಾನೂನು!
ಮಂಡ್ಯದ ಪಕ್ಷೇತರ ಸಂಸದೆ ಸುಮಲತಾ ಮಾರ್ಚ್ 10ರ ಶುಕ್ರವಾರ ಸುದ್ದಿಗೋಷ್ಠಿ ನಡೆಸಿದರು, ಬಿಜೆಪಿಗೆ ಬೆಂಬಲ ಘೋಷಣೆ ಮಾಡಿದರು. ಆದರೆ ಅವರು ಏಕೆ ಬಿಜೆಪಿ ಸೇರಿಲ್ಲ ಎಂಬ ಪ್ರಶ್ನೆಗೆ ಉತ್ತರ ಇಲ್ಲಿದೆ.
ಮಂಡ್ಯ, ಮಾರ್ಚ್ 10; ಶುಕ್ರವಾರ ಇಡೀ ರಾಜ್ಯದ ಗಮನ ಮಂಡ್ಯದ ಮೇಲಿತ್ತು. ಕರ್ನಾಟಕ ವಿಧಾನಸಭೆ ಚುನಾವಣೆಗೆ ಕೆಲವೇ ದಿನಗಳು ಇರುವಾಗಲೇ ಮಂಡ್ಯ ಜಿಲ್ಲಾ ರಾಜಕೀಯದಲ್ಲಿ ಒಂದಷ್ಟು ಬದಲಾವಣೆಗಳು ಆಗಿವೆ. ಮಂಡ್ಯ ಸಂಸದೆ ಸುಮಲತಾ ಮುಂದಿನ ನಡೆಯತ್ತ? ಎನ್ನುವ ಪ್ರಶ್ನೆಗೆ ಉತ್ತರ ಸಿಕ್ಕಿದೆ. ಅಭಿಷೇಕ್ ಅಂಬರೀಶ್ ರಾಜಕೀಯಕ್ಕೆ ಬರುತ್ತಾರೆ ಎಂಬ ಉಹಾಪೋಹಗಳಿಗೆ ಸಹ ತೆರೆ ಬಿದ್ದಿದೆ.
ಮಂಡ್ಯದ ನಿವಾಸದಲ್ಲಿ ಸಂಸದೆ ಸುಮಲತಾ ಶುಕ್ರವಾರ ಪತ್ರಿಕಾಗೋಷ್ಠಿ ನಡೆಸಿದರು. ಸಂಸದೆಯಾದ ಬಳಿಕ ಮಾಡಿದ ಕೆಲಸಗಳನ್ನು ವಿವರಿಸಿದರು, ಪ್ರಧಾನಿ ನರೇಂದ್ರ ಮೋದಿ ಹೊಗಳಿದರು, ಎಚ್. ಡಿ. ಕುಮಾರಸ್ವಾಮಿ ವಿರುದ್ಧ ವಾಗ್ದಾಳಿ ನಡೆಸಿದರು, ರಾಜಕೀಯ ಬಿಡುತ್ತೇನೆ ಸ್ವಾಭಿಮಾನ ಬಿಡಲ್ಲ ಎಂದು ಘೋಷಣೆ ಮಾಡಿದರು.

ಸುಮಲತಾ ಅಂಬರೀಶ್ ಕೇಂದ್ರ ಸರ್ಕಾರದ ಯೋಜನೆಗಳನ್ನು ಹೊಗಳಿದರು, ಪ್ರಧಾನಿ ನರೇಂದ್ರ ಮೋದಿ ನಾಯಕತ್ವದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು. ಬಳಿಕ ಕೇಂದ್ರ ಸರ್ಕಾರ, ಬಿಜೆಪಿಗೆ ನನ್ನ ಸಂಪೂರ್ಣ ಬೆಂಬಲ ಎಂದು ಘೋಷಣೆ ಮಾಡಿದರು. ಆದರೆ ಅವರು ಏಕೆ ಬಿಜೆಪಿ ಸೇರಲಿಲ್ಲ? ಎಂಬುದು ಎಲ್ಲರ ಪ್ರಶ್ನೆ.
2019ರ ಲೋಕಸಭಾ ಚುನಾವಣೆಯಲ್ಲಿ ಮಂಡ್ಯದಿಂದ ಪಕ್ಷೇತರ ಅಭ್ಯರ್ಥಿಯಾಗಿ ಸುಮಲತಾ ಕಣಕ್ಕಿಳಿದು ನಿಖಿಲ್ ಕುಮಾರಸ್ವಾಮಿ ವಿರುದ್ಧ ಗೆಲುವು ಸಾಧಿಸಿದ್ದರು. ಇಂದು ಚುನಾವಣಾ ಸಮಯವನ್ನೂ ನೆನಪಿಸಿಕೊಂಡ ಅವರು, ಇಡೀ ಸರ್ಕಾರ ಎದುರು ಹಾಕಿಕೊಂಡು ಗೆದ್ದಿದ್ದೇನೆ ಎಂದು ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರ್ಕಾರದ ಬಗ್ಗೆ ಮಾತನಾಡಿದರು. ಬಿಜೆಪಿಗೆ ಬೆಂಬಲ ಘೋಷಣೆ ಮಾಡಿರುವ ಸುಮಲತಾ ತಕ್ಷಣ ಪಕ್ಷ ಸೇರಿದರೆ ಸಂಸದ ಸ್ಥಾನದಿಂದ ಅನರ್ಹಗೊಳ್ಳುತ್ತಿದ್ದರು. ಕಾನೂನು ತೊಡಕುಗಳಿಗೆ ಸಿಲುಕಲು ಬಯಸದ ಅವರು ಪಕ್ಷಕ್ಕೆ ಬಾಹ್ಯ ಬೆಂಬಲ ನೀಡಿದ್ದಾರೆ.
"ಸದ್ಯಕ್ಕೆ ನಾನು ಬಿಜೆಪಿ ಸೇರ್ಪಡೆಯಾಗುವುದಿಲ್ಲ. ಬಿಜೆಪಿ ಸೇರ್ಪಡೆಗೆ ಕೆಲವು ತಾಂತ್ರಿಕ ತೊಂದರೆಗಳಿವೆ. ಮಂಡ್ಯ ಜಿಲ್ಲೆ ಅಭಿವೃದ್ಧಿ ಬಗ್ಗೆ ಮೋದಿ ಕಾಳಜಿ ಹೊಂದಿದ್ದಾರೆ. ಲೋಕಸಭೆ ಚುನಾವಣೆಯ ವೇಳೆ ಬಿಜೆಪಿ ಬಾಹ್ಯ ಬೆಂಬಲ ನೀಡಿತ್ತು. ನಾನು ರಾಜಕೀಯದಲ್ಲಿ ಇರುವ ತನಕ ಅಭಿಷೇಕ್ ರಾಜಕೀಯಕ್ಕೆ ಬರಲ್ಲ, ನಾನು ಕುಟುಂಬ ರಾಜಕೀಯ ಮಾಡಲ್ಲ, ಅಭಿಷೇಕ್ಗೆ ಎರಡು ಪಕ್ಷಗಳಿಂದ ಟಿಕೆಟ್ ಆಫರ್ ಬಂದಿದೆ, ಅದನ್ನು ವಿನಮ್ರತೆಯಿಂದ ತಿರಸ್ಕಾರ ಮಾಡಿದ್ದೇವೆ" ಎಂದು ಸುಮಲತಾ ಹೇಳಿದರು.
ಸಂವಿಧಾನದ 10ನೇ ಶೆಡ್ಯೂಲ್; ಭಾರತೀಯ ಸಂವಿಧಾನದ 10ನೇ ಷೆಡ್ಯೂಲ್ನಡಿ ಸ್ವತಂತ್ರವಾಗಿ ಚುನಾವಣೆಗೆ ನಿಂತು ಗೆದ್ದ ಅಭ್ಯರ್ಥಿ ರಾಜಕೀಯ ಪಕ್ಷ ಸೇರಲು ನಿಯಮವಿದೆ. ಪಕ್ಷೇತರ ಅಭ್ಯರ್ಥಿಯಾಗಿ ನಿಂತು ಆಯ್ಕೆಯಾದ 6 ತಿಂಗಳಿನಲ್ಲಿ ಪಕ್ಷ ಸೇರಬಹುದು. ಬಳಿಕ ಪಕ್ಷ ಸೇರಿದರೆ ಸಂಸದ/ ಶಾಸಕ ಸ್ಥಾನ ಕಳೆದುಕೊಳ್ಳುತ್ತಾರೆ, ಅವರನ್ನು ಅನರ್ಗಗೊಳಿಸಲು ಅವಕಾಶವಿದೆ. ರಾಜಕೀಯ ಪಕ್ಷ ಸೇರಬೇಕಿದ್ದರೆ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕು. ಒಂದು ವೇಳೆ ಈಗ ಸುಮಲತಾ ಬಿಜೆಪಿ ಸೇರಬೇಕು ಎಂದರೆ ಸಂಸದ ಸ್ಥಾನಕ್ಕೆ ರಾಜೀನಾಮೆ ನೀಡಬೇಕು, 2024ರಲ್ಲಿ ಲೋಕಸಭೆ ಚುನಾವಣೆ ಇರುವುದರಿಂದ ಈಗ ರಾಜೀನಾಮೆ ನೀಡಿದರೆ ಮಂಡ್ಯಕ್ಕೆ ಉಪ ಚುನಾವಣೆ ನಡೆಯಬೇಕಿದೆ.
10ನೇ ಶೆಡ್ಯೂಲ್ ಪ್ಯಾರಾ (3)ರ ಪ್ರಕಾರ ಲೋಕಸಭೆ/ ರಾಜ್ಯಸಭೆಗಳ ಪೈಕಿ ಒಂದು ಸದನಕ್ಕೆ ನಾಮನಿರ್ದೇಶಿತ ಅಥವಾ ಸ್ವತಂತ್ರ ಅಭ್ಯರ್ಥಿಯಾಗಿ ಆಯ್ಕೆಯಾಗಿದ್ದರೆ ಹೀಗೆ ಆಯ್ಕೆಯಾದ 6 ತಿಂಗಳ ನಂತರ ಯಾವುದಾದರೂ ರಾಜಕೀಯ ಪಕ್ಷಕ್ಕೆ ಸೇರ್ಪಡೆಗೊಂಡರೆ ಅವರು ಅನರ್ಹಗೊಳ್ಳುತ್ತಾರೆ. 2024ಕ್ಕೆ ಲೋಕಸಭೆ ಚುನಾವಣೆ ಇದೆ. ಇನ್ನೂ ಸುಮಾರು ಒಂದೂವರೆ ವರ್ಷ ಸುಮಲತಾ ಅವರ ಸಂಸದರ ಅವಧಿ ಇದೆ. ಈ ಹಿನ್ನಲೆಯಲ್ಲಿ ಅವರು ಕಾನೂನು ತಜ್ಞರ ಜೊತೆ ಚರ್ಚಿಸಿ ಬಿಜೆಪಿಗೆ ಬಾಹ್ಯ ಬೆಂಬಲ ಘೋಷಣೆ ಮಾಡಿದ್ದಾರೆ, ಪಕ್ಷ ಸೇರಿಲ್ಲ.











Click it and Unblock the Notifications