ಶಾಸಕ ನಾಗರಾಜ್ ವಿರುದ್ಧ ತನಿಖೆಗೆ ಕೋರ್ಟ್ ಆದೇಶ

ಸ್ಥಳೀಯ ಕಾಂಗ್ರೆಸ್ ಶಾಸಕ ಎಂಟಿಬಿ ನಾಗರಾಜ್ ನ್ಯಾಯಾಲಯದ ಆದೇಶವನ್ನು ಉಲ್ಲಂಘಿಸಿರುವುದು ಮೇಲ್ನೋಟಕ್ಕೆ ರುಜುವಾತಾಗಿದೆ. ಹಾಗಾಗಿ ಅವರ ವಿರುದ್ಧ ತನಿಖೆ ನಡೆಸಿ ಎಂದು ಜಸ್ಟೀಸ್ ಕೆಎಲ್ ಮಂಜುನಾಥ್ ಅವರಿದ್ದ ವಿಭಾಗೀಯ ನ್ಯಾಯಪೀಠ ಆದೇಶ ಹೊರಡಿಸಿದೆ. ಜತೆಗೆ ಇಂತಹುದೇ ಆರೋಪ ಹೊತ್ತ ಇನ್ನೂ 16 ಮಂದಿಯ ವಿರುದ್ಧವೂ ಕೋರ್ಟ್ ತನಿಖೆಗೆ ಆದೇಶಿಸಿದೆ.
ಶಾಸಕರ ಭೂಕಬಳಿಕೆ ಪಾರುಪತ್ಯ ಹೀಗಿದೆ: ಕೆಆರ್ ಪುರಂ ವ್ಯಾಪ್ತಿಯ ತುಬರನಹಳ್ಳಿಯಲ್ಲಿ ಆರತಿ ಮಲ್ಹೋತ್ರಾ ಎಂಬ 50 ವರ್ಷದ ಮಹಿಳೆಯೊಬ್ಬರು 5 ಎಕರೆ ಜಮೀನನ್ನು ಹೊಂದಿದ್ದರು. ಆದರೆ ಸದರಿ ಶಾಸಕ ಮಹಾಶಯ ಎಂಟಿಬಿ ನಾಗರಾಜ್, ಭೂಕಬಳಿಕೆಗೆ ಮುಂದಾಗಿ ಕಾನೂನುಬಾಹಿರವಾಗಿ ಆರತಿ ಮಲ್ಹೋತ್ರಾರ ಸ್ಥಿರಾಸ್ತಿಯನ್ನು ಕಿತ್ತುಕೊಂಡಿದ್ದಾರೆ.
ಆ ಜಾಗದಲ್ಲಿ 300 ಫ್ಲಾಟುಗಳ ಬೃಹತ್ ಅಪಾರ್ಟ್ ಮೆಂಟ್ ನಿರ್ಮಿಸುತ್ತಿದ್ದಾರೆ ಎಂಬುದು ಆರೋಪ. ಆದರೆ ಅಲ್ಲಿ ಯಾವುದೇ ಕಟ್ಟಡ ನಿರ್ಮಾಣ ಮಾಡುವಂತಿಲ್ಲ ಎಂದು ಕೋರ್ಟ್ ಆದೇಶ ಜಾರಿಗೊಳಿಸಿದ್ದರೂ ಎಂಎಲ್ಎ ನಾಗರಾಜ್ ಮತ್ತಿ ಇತರೆ ಬಿಲ್ಡರುಗಳು ಯಾವುದೇ ಎಗ್ಗು ಇಲ್ಲದೆ ಬೃಹತ್ ಕಟ್ಟಡದ ನಿರ್ಮಾಣದಲ್ಲಿ ತೊಡಗಿದ್ದರು.
ಆರತಿ ಮಲ್ಹೋತ್ರಾ ಅವರ ವಕೀಲ ಶಿವಣ್ಣರ ಪ್ರಕಾರ ತುಬರನಹಳ್ಳಿಯಲ್ಲಿ 5 ಎಕರೆ 14 ಗುಂಟೆ ಜಮೀನನ್ನು 1994ರಲ್ಲಿ ಆರತಿ ಅವರು ಎಸ್ ಡಿ ಮುತ್ತು ಎಂಬುವವರಿಂದ 94 ಲಕ್ಷ ರೂಪಾಯಿಗೆ ಖರೀದಿಸಿದ್ದರು. ಆದರೆ ಈ ಸ್ಥಳದಲ್ಲಿ ವಾಸವಿದ್ದ ಜನ ಮುತ್ತು ವಿರುದ್ಧ ಭೂ ನ್ಯಾಯಮಂಡಳಿಯಲ್ಲಿ ದೂರು ದಾಖಲಿಸಿದ್ದರು. ಪ್ರಕರಣ 2000ನೇ ಇಸ್ವಿಯಲ್ಲಿ ಇತ್ಯರ್ಥವಾಗಿತ್ತು.
ತದನಂತರ 1994ರ ಭೂ ಖರೀದಿ ಅಗ್ರಿಮೆಂಟ್ ಪ್ರಕಾರ ಜಮೀನನ್ನು ತಮಗೇ ನೀಡಬೇಕೆಂದು ಮುತ್ತುಗೆ ಆರತಿ ಒತ್ತಾಯಿಸಿದರು. ಆಗ ಎಂಟ್ರಿ ಕೊಟ್ಟ ಎಂಟಿಬಿ ನಾಗರಾಜ್, ಭೂಮಿಯನ್ನು ಆರತಿಗೆ ಮಾರಾಟ ಮಾಡದಂತೆ ಮುತ್ತು ಮೇಲೆ ಒತ್ತಡ ಹೇರಿದರು. ಮುಂದೆ ಎಂಟಿಬಿ ನಾಗರಾಜ್ ಸುಪ್ರೀಂಕೋರ್ಟಿನವರೆಗೂ ಹೋದರು.
ಆದರೆ ಅಲ್ಲಿಯೂ ಎಂಟಿಬಿ ನಾಗರಾಜ್ ಗೆ ಮುಖಭಂಗವಾಯಿತು. ಯಾವುದೇ ನಿರ್ಮಾಣ ಚಟುವಟಿಕೆ ಮಾಡದಂತೆಯೂ ಕೋರ್ಟ್ ನಿರ್ಬಂಧ ಹೇರಿತು. ಅದನ್ನು ಉಲ್ಲಂಘಿಸಿ, ಉದ್ದಟತನ ತೋರಿದ ಹಾಲಿ ಶಾಸಕ ಎಂಟಿಬಿ ನಾಗರಾಜ್ ವಿರುದ್ಧ ಹೈಕೋರ್ಟ್ ಮತ್ತೆ ಗಂಭಿರವಾಗಿದ್ದು, ತನಿಖೆಗೆ ಆದೇಶಿಸಿದೆ.












Click it and Unblock the Notifications