ಕುಂದಾಪುರದಲ್ಲಿ ಬ್ಲಾಕ್ಮೇಲ್ ಮಾಡುತ್ತಿದ್ದ ಯುವಕರ ಬಂಧನ
ಉಡುಪಿ, ಜ.29 : ಹಳೇ ದ್ವೇಷದ ಹಿನ್ನಲೆಯಲ್ಲಿ ಯುವಕನಿಗೆ ಬ್ಲಾಕ್ ಮೇಲ್ ಮಾಡುತ್ತಿದ್ದ ತಂಡದ ಇಬ್ಬರು ಆರೋಪಿಗಳನ್ನು ಕುಂದಾಪುರ ಪೊಲೀಸರು ಬಂಧಿಸಿದ್ದಾರೆ. ಬಂಧಿತ ಯುವಕರು 10 ಲಕ್ಷ ರೂಪಾಯಿಗಳನ್ನು ನೀಡುವಂತೆ ಯುವಕನಿಗೆ ಬೇಡಿಕೆ ಇಟ್ಟಿದ್ದರು.
ಬೈಂದೂರು ಸಮೀಪದ ಕಾಲ್ತೋಡಿನ ಯುವಕನಿಗೆ ಬ್ಲಾಕ್ ಮೇಲ್ ಮಾಡಿದ ಶಶಾಂಕ್ ನೇತೃತ್ವದ ತಂಡದ ಇಬ್ಬರನ್ನು ಪೊಲೀಸರು ಬಂಧಿಸಿದ್ದಾರೆ. ಬ್ಲಾಕ್ ಮೇಲ್ಗೆ ಒಳಗಾದ ಯುವಕ ಸಣ್ಣದೊಂದು ಗೇರು ಬೀಜದ ಕಾರ್ಖಾನೆ ನಡೆಸುತ್ತಿದ್ದ. ಈತನ ಜೊತೆ ಶಶಾಂಕ್ ಸಹ ಕೆಲಸ ಮಾಡುತ್ತಿದ್ದ.

ಶಶಾಂಕ್ ಮತ್ತು ಯುವಕನ ನಡುವೆ ಜಗಳ ನಡೆದು ಹೊಡೆದಾಟವಾಗಿತ್ತು. ಇದೇ ದ್ವೇಷದಿಂದ ಯುವಕನ ಬಳಿ ಹಣ ಕೀಳಲು ಶಶಾಂಕ್ ಸಂಚು ರೂಪಿಸಿದ್ದ. ಅದರಂತೆ ಬಸ್ರೂರಿನ ಯುವತಿಯೊಬ್ಬಳ ಪರಿಚಯ ಮಾಡಿಕೊಂಡ ಆತ ಆಕೆಯನ್ನು ಪುಸಲಾಯಿಸಿ ಯುವಕನಿಗೆ ಮಿಸ್ ಕಾಲ್ ಕೊಡಿಸಿದ್ದ.
ಬಸ್ರೂರಿನ ಯುವತಿ ಯುವಕನಿಗೆ ಸಂದೇಶಗಳನ್ನು ಕಳಿಸಿ ಆತನನ್ನು ಪರಿಚಯ ಮಾಡಿಕೊಳ್ಳಬೇಕು ಎಂದು ಹೇಳುತ್ತಾಳೆ. ಜ.21ರಂದು ಇಬ್ಬರು ಭೇಟಿಯಾಗಲು ಒಪ್ಪುತ್ತಾರೆ. ಯುವತಿ ಮಾತನ್ನು ನಂಬಿದ ಯುವಕ ಕುಂದಾಪುರದ ಬಿ.ಹೆಚ್. ರಸ್ತೆಯ ಹೇರಿಕೆರೆಗೆ ತೆರಳುತ್ತಾನೆ.
ಹೇರಿಕೆರೆಯಲ್ಲಿ ಶಶಾಂಕ್, ಗಿರೀಶ್, ರಮೇಶ್, ಸಂದೀಪ್ ಹಾಗೂ ಗುರುರಾಜ್ ಎಂಬವರು. ಯುವಕ ಮತ್ತು ಯುವತಿಯನ್ನು ಅಡ್ಡಗಟ್ಟುತ್ತಾರೆ. ಯುವತಿಯಿಂದ ಯುವಕನಿಗೆ ಬಲವಂತವಾಗಿ ಮುತ್ತು ಕೊಡಿಸಿ ಅದನ್ನು ವಿಡಿಯೋ ಮಾಡಿಕೊಳ್ಳುತ್ತಾರೆ.
10 ಲಕ್ಷ ಹಣ ನೀಡದಿದ್ದರೆ ಈ ವಿಡಿಯೋವನ್ನು ಸಾಮಾಜಿಕ ಜಾಲತಾಣಕ್ಕೆ ಅಪ್ಲೋಡ್ ಮಾಡುವುದಾಗಿ ಶಶಾಂಕ್ ಬೆದರಿಕೆ ಹಾಕುತ್ತಾನೆ. ಯುವಕ ಈ ಕುರಿತು ಕುಂದಾಪುರ ಪೊಲೀಸ್ ಠಾಣೆ ದೂರು ನೀಡುತ್ತಾನೆ. ಪ್ರಕರಣ ದಾಖಲಿಸಿಕೊಂಡ ಪೊಲೀಸರು ಇಬ್ಬರನ್ನು ಬಂಧಿಸಿದ್ದಾರೆ. ಉಳಿದ ಮೂವರು ಆರೋಪಿಗಳು ತಲೆಮರೆಸಿಕೊಂಡಿದ್ದು, ಅವರಿಗಾಗಿ ಹುಡುಕಾಟ ನಡೆಸಿದ್ದಾರೆ.












Click it and Unblock the Notifications