ರಾಜ್ಯದ ಎಲ್ಲ ಜಿಲ್ಲೆಗಳಲ್ಲೂ ಕುಮಾರಸ್ವಾಮಿ ಗ್ರಾಮ ವಾಸ್ತವ್ಯ
ಬೆಂಗಳೂರು, ಜೂನ್ 29: ರಾಜ್ಯದ ಎಲ್ಲ ಜಿಲ್ಲೆಗಳ ಗ್ರಾಮಗಳಲ್ಲೂ ಗ್ರಾಮ ವಾಸ್ತವ್ಯ ಮಾಡುವ ಬಗ್ಗೆ ಕುಮಾರಸ್ವಾಮಿ ಅವರು ನಿರ್ಧರಿಸಿದ್ದಾರೆ.
ಕುಮಾರಸ್ವಾಮಿ ಅವರು ಈವರೆಗೆ ಮೂರು ಗ್ರಾಮಗಳಲ್ಲಿ ಗ್ರಾಮ ವಾಸ್ತವ್ಯ ನಡೆಸಿದ್ದು, ಈ ಮೂರು ಉತ್ತರ ಕರ್ನಾಟಕದ ಜಿಲ್ಲೆಗಳಲ್ಲೇ ಮಾಡಿದ್ದಾರೆ.
ಕುಮಾರಸ್ವಾಮಿ ಗ್ರಾಮ ವಾಸ್ತವ್ಯಕ್ಕೆ ಉತ್ತಮ ಜನಸ್ಪಂದನೆ ವ್ಯಕ್ತವಾಗುತ್ತಿರುವ ಕಾರಣ, ಎಲ್ಲ ಜಿಲ್ಲೆಗಳ ಕನಿಷ್ಟ ಒಂದೊಂದು ಗ್ರಾಮದಲ್ಲಿ ಗ್ರಾಮ ವಾಸ್ತವ್ಯ ಮಾಡಲು ಸಿಎಂ ನಿರ್ಧರಿಸಿದ್ದಾರೆ.
ಕುಮಾರಸ್ವಾಮಿ ಅವರು ಮೊದಲಿಗೆ ಯಾದಗಿರಿ ಜಿಲ್ಲೆಯ ಚಂಡರಕಿ ಗ್ರಾಮದಲ್ಲಿ ವಾಸ್ತವ್ಯ ಮಾಡಿದರು, ಮಾರನೇಯ ದಿನವೇ ಕಲಬುರಗಿಯ ಹೆರೂರು ಗ್ರಾಮದಲ್ಲಿ ವಾಸ್ತವ್ಯ ಮಾಡಬೇಕಾಗಿತ್ತಾದರೂ ಮಳೆ ಬಂದ ಕಾರಣಕ್ಕೆ ಅದು ರದ್ದಾಯಿತು.

ರಾಯಚೂರಿನಲ್ಲಿ ಎರಡನೇ ವಾಸ್ತವ್ಯ
ಎರಡನೇ ಗ್ರಾಮ ವಾಸ್ತವ್ಯ ರಾಯಚೂರು ಜಿಲ್ಲೆಯ ಕರೆಗುಡ್ಡ ಗ್ರಾಮದಲ್ಲಿ ಮಾಡಿದರು. ಈ ಗ್ರಾಮ ವಾಸ್ತವ್ಯದ ಸಮಯ ಕೆಲವು ಗೊಂದಲಗಳಾದವು, ಕುಮಾರಸ್ವಾಮಿ ಅವರನ್ನು ಪ್ರತಿಭಟನಾಕಾರರು ತಡೆದು, ಸಿಎಂ ಅವರು ಪ್ರತಿಭಟನಾಕಾರರೊಂದಿಗೆ ವಾಗ್ವಾದ ನಡೆಸಿ ಸುದ್ದಿಗೆ ಆಹಾರವಾದರು.

ಮೂರನೇ ವಾಸ್ತವ್ಯ ಬೀದರ್ನಲ್ಲಿ ನಡೆದಿದೆ
ನಂತರ ಜೂನ್ 27 ರಂದು ಬೀದರ್ನ ಉಜಳಂಬ ಗ್ರಾಮದಲ್ಲಿ ಕುಮಾರಸ್ವಾಮಿ ಅವರು ಗ್ರಾಮ ವಾಸ್ತವ್ಯ ಮಾಡಿದರು. ಇಲ್ಲಿ ಬಹುತೇಕ ಶಾಂತಿಯುತವಾಗಿ, ನಿರೀಕ್ಷೆಯಂತೆ ವಾಸ್ತವ್ಯ ಕಾರ್ಯಕ್ರಮ ಮುಗಿಯಿತು.

ಗ್ರಾಮ ವಾಸ್ತವ್ಯ ಉತ್ತಮವಾಗಿ ನಡೆಯುತ್ತಿದೆ
ಕೆಲವು ಟೀಕೆಗಳನ್ನು ಹೊರತುಪಡಿಸಿದರೆ ಕುಮಾರಸ್ವಾಮಿ ಅವರ ಗ್ರಾಮ ವಾಸ್ತವ್ಯ ಯಶಸ್ವಿಯಾಗುತ್ತಿದೆ ಎಂಬುದು ಮೈತ್ರಿ ಮುಖಂಡರ ಮತ್ತು ಸರ್ಕಾರದ ಉನ್ನತ ಅಧಿಕಾರಿಗಳ ನಂಬಿಕೆ ಹಾಗಾಗಿ ಈ ಕಾರ್ಯಕ್ರಮವನ್ನು ಎಲ್ಲ ಜಿಲ್ಲೆಗಳಿಗೆ ವಿಸ್ತರಿಸುವ ಯೋಜನೆಯನ್ನು ಕುಮಾರಸ್ವಾಮಿ ಹಮ್ಮಿಕೊಂಡಿದ್ದಾರೆ.

ವಿಶೇಷ ಅಧಿಕಾರಿಯ ನೇಮಕ ಸಾಧ್ಯತೆ
ರಾಜ್ಯದ ಎಲ್ಲ ಜಿಲ್ಲೆಯ ಕನಿಷ್ಟ ಒಂದು ಗ್ರಾಮದಲ್ಲಿ ಒಂದು ದಿನದ ಗ್ರಾಮ ವಾಸ್ತವ್ಯ ಮಾಡಲು ಕುಮಾರಸ್ವಾಮಿ ನಿಶ್ಚಯಿಸಿದ್ದಾರೆ. ಸಿಎಂ ಅವರ ಗ್ರಾಮ ವಾಸ್ತವ್ಯದ ಉಸ್ತುವಾರಿಗೆಂದೇ ವಿಶೇಷ ಅಧಿಕಾರಿಯೊಬ್ಬರನ್ನು ನೇಮಿಸಿಕೊಳ್ಳಲಾಗುತ್ತದೆ ಎಂಬ ಸುದ್ದಿಯೂ ಇದೆ.












Click it and Unblock the Notifications