ಮುಖ್ಯಮಂತ್ರಿಯಿಂದ ಅಧಿಕಾರ ದುರುಪಯೋಗ, ಆಯೋಗಕ್ಕೆ ದೂರು: ಎಚ್ಡಿಕೆ
ಹುಬ್ಬಳ್ಳಿ, ಏಪ್ರಿಲ್ 07: ಸಿದ್ದರಾಮಯ್ಯ ಅವರು ತಮ್ಮ ಅಧಿಕಾರ ದುರ್ಬಳಕೆ ಮಾಡಿಕೊಂಡು ಚುನಾವಣೆ ಗೆಲ್ಲಲು ಹೊರಟಿದ್ದಾರೆ ಎಂದು ಜೆಡಿಎಸ್ ರಾಜ್ಯಾಧ್ಯಕ್ಷ ಕುಮಾರಸ್ವಾಮಿ ಆರೋಪಿಸಿದ್ದಾರೆ.
ಹುಬ್ಬಳ್ಳಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ರಾಜ್ಯ ಗುಪ್ತಚರ ಇಲಾಖೆಯನ್ನು ಬಳಸಿ ಚುನಾವಣಾ ಸಮೀಕ್ಷೆ ನಡೆಸಿ ವರದಿ ಪಡೆದಿರುವುದು ಸ್ಪಷ್ಟವಾಗಿ ಅಧಿಕಾರದ ದುರುಪಯೋಗ ಅಷ್ಟೆ ಅಲ್ಲದೆ ಚುನಾವಣಾ ನೀತಿ ಸಂಹಿತೆ ಉಲ್ಲಂಘನೆ ಎಂದು ಅವರು ಹೇಳಿದ್ದಾರೆ.
ಮುಖ್ಯಮಂತ್ರಿಗಳು ಯಾವ ಕ್ಷೇತ್ರದಿಂದ ಸ್ಪರ್ಧಿಸಬೇಕು ಎಂದು ಗುಪ್ತಚರ ಇಲಾಖೆ ಮಾಹಿತಿ ನೀಡಿದೆ ಎಂದರೆ ಇದು ಅಧಿಕಾರದ ದುರ್ಬಳಕೆಯ ಪರಾಕಾಷ್ಟೆ, ಸರ್ಕಾರಿ ಇಲಾಖೆ ಇರುವುದು ಜನಗಳ ಸೇವೆ ಮಾಡಲು ರಾಜಕಾರಣಿಗಳ ಸೇವೆ ಮಾಡಲು ಅಲ್ಲ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು.

ಜೆಡಿಎಸ್ನಿಂದ ಆಯೊಗಕ್ಕೆ ದೂರು
ಚುನಾವಣಾ ನೀತಿ ಸಂಹಿತೆ ಜಾರಿಯಾದ ನಂತರವೂ ಹೀಗೆ ಸಮೀಕ್ಷೆ ನಡೆಸಿ ವರದಿ ಪಡೆದಿರುವುದು ಸ್ಪಷ್ಟವಾಗಿ ಚುನಾವಣಾ ನೀತಿ ಸಂಹಿತೆಯ ಉಲ್ಲಂಘನೆ ಆಗಿದ್ದು, ಸಿದ್ದರಾಮಯ್ಯ ವಿರುದ್ಧ ಜೆಡಿಎಸ್ ಪಕ್ಷವು ಚುನಾವಣಾ ಆಯೋಗಕ್ಕೆ ದೂರು ನೀಡಲಿದೆ ಎಂದರು.

ಗುಪ್ತಚರ ಇಲಾಖೆ ಧೃಡಪಡಿಸಿಲ್ಲ
ಗುಪ್ತಚರ ಇಲಾಖೆಯು ಸಿದ್ದರಾಮಯ್ಯ ಅವರಿಗೆ ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಗೆಲುವು ಕಷ್ಟ ಎಂದು ಸಮೀಕ್ಷೆ ನಡೆಸಿ ವರದಿ ನೀಡಿರುವ ಪತ್ರವೊಂದು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ಆದರೆ ಇದನ್ನು ಗುಪ್ತಚರ ದಳ ದೃಢಪಡಿಸಿಲ್ಲ.

ಅವರಪ್ಪನ ಆಣೆ ಇಟ್ಟು ಗೆಲ್ಲಲಿ ನೋಡೋಣ
ಮುಂದುವರೆದು ಸಿದ್ದರಾಮಯ್ಯ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ ಕುಮಾರಸ್ವಾಮಿ ಅವರು ನಮ್ಮಪ್ಪನ ಆಣೆ ಇರಲಿ, ಸಿದ್ದರಾಮಯ್ಯನ ಅಪ್ಪನ ಆಣೆ ಅವರು ಈ ಬಾರಿ ಗೆಲ್ಲುತ್ತಾರಾ ಹೇಳಲಿ ಎಂದು ಸವಾಲು ಕುಮಾರಸ್ವಾಮಿ ಸವಾಲು ಹಾಕಿದರು.

ಹುಬ್ಬಳ್ಳಿ, ಬಾಗಲಕೋಟೆಯಲ್ಲಿ ವಿಕಾಸಪರ್ವ
ವಿಕಾಸಪರ್ವ ಯಾತ್ರೆ ಮಾಡುತ್ತಿರುವ ಕುಮಾರಸ್ವಾಮಿ ಅವರು ಇನ್ನು ಮೂರು ದಿನಗಳ ಕಾಲ ಉತ್ತರ ಕರ್ನಾಟಕ ಜಿಲ್ಲೆಗಳ ಯಾತ್ರೆ ಮಾಡಲಿದ್ದು, ಇಂದು ಹುಬ್ಬಳ್ಳಿ ಮತ್ತು ಬಾಗಲಕೋಟೆ ಜಿಲ್ಲೆಗಳಲ್ಲಿ ಸಮಾವೇಶ ಹಾಗೂ ರೋಡ್ ಶೋ ಮಾಡುತ್ತಿದ್ದಾರೆ.












Click it and Unblock the Notifications