ಸಿದ್ದು ಟ್ವೀಟ್ ಗುದ್ದಿಗೆ ತಣ್ಣಗಾದ ಕುಮಾರಸ್ವಾಮಿ ಮತ್ತು 'ಸಿಎಂ' ಚರ್ಚೆ
ಬೆಂಗಳೂರು, ಮೇ 16: 'ಮಲ್ಲಿಕಾರ್ಜುನ ಖರ್ಗೆ, ಸಿಎಂ ಹುದ್ದೆಗೆ ಅರ್ಹರು' ಎಂದು ಹೇಳಿಕೆ ನೀಡಿ ಸಿದ್ದರಾಮಯ್ಯ ಅವರಿಗೆ ಹಿನ್ನಡೆ ಉಂಟುಮಾಡುವ ನಿರೀಕ್ಷೆಯಲ್ಲಿದ್ದ ಕುಮಾರಸ್ವಾಮಿ ಅವರಿಗೆ ತಮ್ಮ ಹೇಳಿಕೆಯೇ ತಿರುಗುಬಾಣವಾದ ಪರಿಣಾಮ ಈಗ ತಣ್ಣಗಾಗಿ ಸ್ಪಷ್ಟೀಕರಣದ ಹಾದಿ ತುಳಿದಿದ್ದಾರೆ.
ಲೋಕಸಭಾ ಚುನಾವಣೆ 2019 | ವಿಶೇಷ ಪುಟ | ಗ್ಯಾಲರಿ
ಖರ್ಗೆ ಅವರನ್ನು ಮುಂದೆ ತಂದು ಸಿದ್ದರಾಮಯ್ಯ ಅವರ ಸಿಎಂ ಆಸೆಗೆ ತಣ್ಣೀರೆರಚುವ ಯೋಚನೆಯಲ್ಲಿದ್ದ ಕುಮಾರಸ್ವಾಮಿಗೆ, 'ರೇವಣ್ಣ ಅವರೂ ಸಹ ಸಿಎಂ ಸ್ಥಾನಕ್ಕೆ ಯೋಗ್ಯರು' ಎಂದು ಸಿದ್ದರಾಮಯ್ಯ ತಿರುಗು ಬಾಣ ಹೂಡುತ್ತಿದ್ದಂತೆ, ಕುಮಾರಸ್ವಾಮಿ ಅವರು ಈ 'ಸಿಎಂ ಕುರ್ಚಿ' ವಾಗ್ಯುದ್ಧದಿಂದ ಹಿಂದೆ ಸರಿದಂತೆ ಕಾಣುತ್ತಿದೆ.
'ಮಲ್ಲಿಕಾರ್ಜುನ ಖರ್ಗೆ ಅವರು ಸಿಎಂ ಸ್ಥಾನಕ್ಕೆ ಅರ್ಹರು' ಎಂದು ಹೇಳಿದ್ದ ತಮ್ಮ ಹೇಳಿಕೆ ಬಗ್ಗೆ ಇಂದು ಸ್ಪಷ್ಟೀಕರಣದ ಟ್ವೀಟ್ ಮಾಡಿರುವ ಕುಮಾರಸ್ವಾಮಿ, ನಾಡಿನ ಹಿರಿಯ ರಾಜಕಾರಣಿ ಹಾಗೂ ಮುತ್ಸದ್ದಿ ಮಲ್ಲಿಕಾರ್ಜುನ ಖರ್ಗೆ ಅವರು ಮುಖ್ಯಮಂತ್ರಿಯಾಗಬೇಕಿತ್ತು ಎಂಬ ನನ್ನ ಹೇಳಿಕೆ ಕರ್ನಾಟಕದ ಹಲವು ದಶಕಗಳ ರಾಜಕೀಯ ವಾಸ್ತವತೆಯನ್ನು ಆಧರಿಸಿದ ಮನದಾಳದ ಮಾತು. ಈ ಹೇಳಿಕೆಗೆ ರಾಜಕೀಯದ ಬಣ್ಣಕಟ್ಟಿ ಅಪಾರ್ಥ ಕಲ್ಪಿಸುವಂತೆ ವಿಶ್ಲೇಷಿಸುವುದು ಆರೋಗ್ಯಕರವಲ್ಲ ಎಂದಿದ್ದಾರೆ.
|
'ರಾಜಕೀಯ ಲಾಭ ಪಡೆವ ಉದ್ದೇಶವಿಲ್ಲ'
'ಈ ಹೇಳಿಕೆಯ ಮೂಲಕ ರಾಜಕೀಯ ಲಾಭ ಪಡೆಯುವ ಕೀಳು ಅಭಿರುಚಿ ನನ್ನದಲ್ಲ. ಖರ್ಗೆಯವರದು ಪಕ್ಷ , ಜಾತಿ ಎಲ್ಲವನ್ನೂ ಮೀರಿದ ಮಹೋನ್ನತ ವ್ಯಕ್ತಿತ್ವ ಎನ್ನುವುದನ್ನು ನಾವು ಮರೆಯಬಾರದು' ಎಂದು ಕುಮಾರಸ್ವಾಮಿ ಸ್ಪಷ್ಟಪಡಿಸಿದ್ದಾರೆ.
|
'ರೇವಣ್ಣ ಸಹ ಸಿಎಂ ಸ್ಥಾನಕ್ಕೆ ಅರ್ಹರು'
ಖರ್ಗೆ ಅವರು ಸಿಎಂ ಸ್ಥಾನಕ್ಕೆ ಯೋಗ್ಯರು ಎಂದಿದ್ದ ಕುಮಾರಸ್ವಾಮಿ ಅವರಿಗೆ ಟ್ವೀಟ್ ಮೂಲಕ ಪ್ರತಿಕ್ರಿಯಿಸಿದ್ದ ಸಿದ್ದರಾಮಯ್ಯ, ಕಾಂಗ್ರೆಸ್-ಜೆಡಿಎಸ್ನಲ್ಲಿ ಸಿಎಂ ಸ್ಥಾನಕ್ಕೆ ಯೋಗ್ಯರು ಹಲವರಿದ್ದಾರೆ, ಅದರಲ್ಲಿ ಎಚ್.ಡಿ.ರೇವಣ್ಣ ಸಹ ಒಬ್ಬರು ಎಂದು ಕುಮಾರಸ್ವಾಮಿ ಅವರಿಗೆ ಟಾಂಗ್ ನೀಡಿದ್ದರು. ಸಿಎಂ ಸ್ಥಾನಕ್ಕೆ ಕುಮಾರಸ್ವಾಮಿ ಅವರಿಗೆ ರೇವಣ್ಣ ಅವರನ್ನು ಪ್ರತಿಸ್ಪರ್ಧಿಯನ್ನಾಗಿ ಸಿದ್ದರಾಮಯ್ಯ ಮಾಡಿಬಿಟ್ಟಿದ್ದರು.

ಕುಮಾರಸ್ವಾಮಿಗೆ ಪ್ರತಿತಂತ್ರ ಹೂಡಿದ್ದ ಸಿದ್ದರಾಮಯ್ಯ
ಸಿದ್ದರಾಮಯ್ಯ ಅವರು ಕುಮಾರಸ್ವಾಮಿ ಅವರ ಸಿಎಂ ಸ್ಥಾನಕ್ಕೆ ರೇವಣ್ಣ ಸಹ ಅರ್ಹರು ಎನ್ನುವ ಮೂಲಕ ಕುಮಾರಸ್ವಾಮಿ ಹೂಡಿದ್ದ ತಂತ್ರವನ್ನೇ ಅವರಿಗೇ ವಾಪಸ್ ಹೂಡುವ ಮೂಲಕ ಕುಮಾರಸ್ವಾಮಿ ಅವರನ್ನು ತಬ್ಬಿಬ್ಬು ಗೊಳಿಸಿದ್ದರು, ಹಾಗಾಗಿ ಈ ವಿವಾದವನ್ನು ತಣ್ಣಗಾಗಿಸುವ ನಿಟ್ಟಿನಿಂದ ಕುಮಾರಸ್ವಾಮಿ ಅವರು ಟ್ವೀಟ್ ಮೂಲಕ ಸ್ಪಷ್ಟೀಕರಣ ನೀಡಿದ್ದಾರೆ ಎಂದು ವಿಶ್ಲೇಷಿಸಲಾಗುತ್ತಿದೆ.

ಎಚ್ಡಿಕೆ ಹೇಳಿಕೆಗೆ ಖರ್ಗೆ ಪ್ರತಿಕ್ರಿಯೆ
ಕುಮಾರಸ್ವಾಮಿ ಹೇಳಿಕೆಗೆ ಪ್ರತಿಕ್ರಿಯಿಸಿದ್ದ ಖರ್ಗೆ ಅವರು, ಪದೇ, ಪದೇ ದಲಿತ ಸಿಎಂ ಎಂದು ಕರೆದು ಅವಮಾನ ಮಾಡಬೇಡಿ, ಜಾತಿಯ ಕಾರಣಕ್ಕೆ ಸಿಗುವ ಕುರ್ಚಿ ಬೇಕಿಲ್ಲ ಎಂಬರ್ಥದಲ್ಲಿ ಪ್ರತಿಹೇಳಿಕೆ ನೀಡಿದ್ದರು. ಸಿದ್ದರಾಮಯ್ಯ ಅವರ ಹೇಳಿಕೆಯನ್ನು ಅನುಮೋದಿಸಿದ್ದ ಡಿಸಿಎಂ ಪರಮೇಶ್ವರ್ ಅವರು, ಸಿದ್ದರಾಮಯ್ಯ ಹೇಳಿದ್ದರಲ್ಲಿ ತಪ್ಪೇನೂ ಇಲ್ಲ, ರೇವಣ್ಣ ಅವರೂ ಸಹ ಸಿಎಂ ಸ್ಥಾನಕ್ಕೆ ಯೋಗ್ಯರು ಎಂದಿದ್ದರು.












Click it and Unblock the Notifications