ದೀಪಾವಳಿ; ಕೆಎಸ್ಆರ್ಟಿಸಿಯಿಂದ 1000 ಹೆಚ್ಚುವರಿ ಬಸ್
ಬೆಂಗಳೂರು, ಅಕ್ಟೋಬರ್ 29; ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ ದೀಪಾವಳಿ ಹಬ್ಬದ ಪ್ರಯುಕ್ತ 1000 ಹೆಚ್ಚುವರಿ ವಿಶೇಷ ಬಸ್ಗಳ ವ್ಯವಸ್ಥೆ ಮಾಡಿದೆ. ಪ್ರಯಾಣಿಕರು ಇದರ ಸದುಪಯೋಗ ಪಡೆಯಬೇಕು ಎಂದು ಕರೆ ನೀಡಲಾಗಿದೆ.
ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ ಬೆಂಗಳೂರಿನ ಕೇಂದ್ರ ಕಚೇರಿ ಈ ಕುರಿತು ಪ್ರಕಟಣೆ ಹೊರಡಿಸಿದೆ. ಹೆಚ್ಚುವರಿ ವಿಶೇಷ ಬಸ್ಗಳು ಬೆಂಗಳೂರಿನಿಂದ 29/10/2021ರಿಂದ 7/11/2021ರ ತನಕ ಸಂಚಾರ ನಡೆಸಲಿವೆ.
ದೀಪಾವಳಿ ಹಬ್ಬದ ಪ್ರಯುಕ್ತ ಸಾರ್ವಜನಿಕರ ಅನುಕೂಲಕ್ಕಾಗಿ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮವು ಬೆಂಗಳೂರಿನಿಂದ ರಾಜ್ಯದ ವಿವಿಧ ಸ್ಥಳಗಳಿಗೆ ಬಸ್ ಓಡಿಸಲಿದೆ.

ಧರ್ಮಸ್ಥಳ, ಕುಕ್ಕೆ ಸುಬ್ರಮಣ್ಯ, ಶಿವಮೊಗ್ಗ, ಹಾಸನ, ಮಂಗಳೂರು, ಕುಂದಾಪುರ, ಶೃಂಗೇರಿ, ಹೊರನಾಡು, ಮೈಸೂರು, ಮಡಿಕೇರಿ, ದಾವಣಗೆರೆ, ಹುಬ್ಬಳ್ಳಿ, ಧಾರವಾಡ, ಬೆಳಗಾವಿ, ವಿಜಯಪುರಕ್ಕೆ ಬಸ್ಗಳು ಸಂಚಾರ ನೆಡೆಸಲಿವೆ.
ಗೋಕರ್ಣ, ಶಿರಸಿ, ಕಾರವಾರ, ರಾಯಚೂರು, ಕಲಬುರಗಿ, ಬಳ್ಳಾರಿ, ಕೊಪ್ಪಳ, ಯಾದಗಿರಿ, ಬೀದರ್ ಮುಂತಾದ ಸ್ಥಳಗಳಿಗೆ ಸಹ ಬೆಂಗಳೂರಿನಿಂದ ಹೆಚ್ಚುವರಿ ವಿಶೇಷ ಬಸ್ಗಳು ಓಡಲಿವೆ.
ಬೇರೆ ರಾಜ್ಯಕ್ಕೆ ಬಸ್; ಬೆಂಗಳೂರು ನಗರದಿಂದ ಹೆಚ್ಚುವರಿ ವಿಶೇಷ ಬಸ್ಗಳು ತಿರುಪತಿ, ವಿಜಯವಾಡ, ಹೈದರಾಬಾದ್, ತಿರುವನಂತಪುರಂ, ಕೊಟ್ಟಾಯಂ, ಚೆನ್ನೈ, ಕೊಯಮತ್ತೂರು, ಪೂನಾ, ಪಣಜಿ ಮುಂತಾದ ಸ್ಥಳಗಳಿಗೆ ಸಂಚಾರ ನಡೆಸಲಿವೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.
ಹೆಚ್ಚುವರಿ ವಿಶೇಷ ಬಸ್ಗಳಲ್ಲಿ ಸಂಚಾರ ನಡೆಸಲು ಯಾವುದೇ ಹೆಚ್ಚುವರಿ ದರಗಳನ್ನು ಪಾವತಿ ಮಾಡಬೇಕಿಲ್ಲ. ಜನರು ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ ವೆಬ್ಸೈಟ್ ಮತ್ತು ಅಂತರರಾಜ್ಯದಲ್ಲಿರುವ ಗಣಕೀಕೃತ ಬುಕ್ಕಿಂಗ್ ಕೌಂಟರ್ಗಳ ಮೂಲಕ ಈ ಬಸ್ಗಳಲ್ಲಿ ಸಂಚಾರ ನಡೆಸಲು ಮುಂಗಡ ಟಿಕೆಟ್ಗಳನ್ನು ಬುಕ್ ಮಾಡಬಹುದಾಗಿದೆ.
ದೀಪಾವಳಿ ಹಬ್ಬದ ಸಂದರ್ಭದಲ್ಲಿ ಪ್ರಯಾಣ ಮಾಡುವ ಜನರು ಈ ಹೆಚ್ಚುವರಿ ವಿಶೇಷ ಬಸ್ಗಳ ಸದುಪಯೋಗಪಡಿಸಿಕೊಳ್ಳಬೇಕು ಎಂದು ಮನವಿ ಮಾಡಲಾಗಿದೆ.
ವೇಗದೂತ ಬಸ್ ಸೇವೆ; ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ ಬೆಂಗಳೂರಿನ ಕೇಂದ್ರ ವಿಭಾಗ ಬೆಂಗಳೂರು-ಬಲಿಜಖಂಡ್ರಿಗ ಮಾರ್ಗದಲ್ಲಿ ವೇಗದೂತ ಬಸ್ಗಳ ಸಂಚಾರವನ್ನು ನಡೆಸಲಿದೆ.
ಬೆಂಗಳೂರು (ಜಂಬೂಸವಾರಿ ದಿಣ್ಣೆ)-ಬಲಿಜಖಂಡ್ರಿಗ ವಯಾ ಚಿತ್ತೂರು ಮಾರ್ಗದಲ್ಲಿ ವೇಗದೂತ ಬಸ್ ಸಂಚಾರ ನಡೆಸಲಿದೆ. ಜಂಬೂಸವಾರಿ ದಿಣ್ಣೆಯಿಂದ ಹೊರಡುವ ಬಸ್ ಪುಟ್ಟೇನಹಳ್ಳಿ, ಜಯನಗರ 4ನೇ ಬ್ಲಾಕ್, ಸೌತ್ಎಂಡ್ ವೃತ್ತ, ಮಿನರ್ವ ಸರ್ಕಲ್, ಟೌನ್ಹಾಲ್, ಮೈಸೂರು ಬ್ಯಾಂಕ್, ಕೆಂಪೇಗೌಡ ಬಸ್ ನಿಲ್ದಾಣದ ಮಾರ್ಗವಾಗಿ ಸಂಚಾರ ನಡೆಸಲಿದೆ.
ಬಲಿಜಖಂಡ್ರಿಗದಿಂದ ಜಂಬಸವಾರಿ ದಿಣ್ಣೆಗೆ ವೇಗದೂತ ಬಸ್ಗಳು 29/10/2021ರಿಂದ ಸಂಚಾರ ನಡೆಸಲಿವೆ ಎಂದು ಪ್ರಕಟಣೆ ಹೇಳಿದೆ. ಬಸ್ಗಳ ವೇಳಾಪಟ್ಟಿ, ದರ ಹೀಗಿದೆ.
ಬೆಂಗಳೂರು-ಬಲಿಜಖಂಡ್ರಿಗ ಬಸ್ ಬೆಂಗಳೂರಿನಿಂದ 5.30ಕ್ಕೆ ಹೊರಡಲಿದ್ದು, 11.30ಕ್ಕೆ ಬಲಿಜಖಂಡ್ರಿಗ ತಲುಪಲಿದೆ. ಬಲಿಜಖಂಡ್ರಿಗ-ಬೆಂಗಳೂರು ಬಸ್ ಬಲಿಗಖಂಡ್ರಿಗದಿಂದ 12.15ಕ್ಕೆ ಹೊರಡಲಿದ್ದು, 18.05ಕ್ಕೆ ಬೆಂಗಳೂರು ತಲುಪಲಿದೆ.
ಪುನೀತ್ ನಿಧನಕ್ಕೆ ಸಂತಾಪ; ರಾಷ್ಟ್ರಪ್ರಶಸ್ತಿ ಪುರಸ್ಕೃತ ನಟ, ವರನಟ ಡಾ. ರಾಜ್ಕುಮಾರ್ ಪುತ್ರ ಪುನೀತ್ ರಾಜ್ಕುಮಾರ್ ಅಕಾಲಿಕ ನಿಧನ ಹೊಂದಿರುವುದು ಅತೀವ ಆಘಾತವನ್ನುಂಟು ಮಾಡಿದೆ. ಯುವಜನತೆಯ ಕಣ್ಮಣಿ, ಯೂಥ್ ಐಕಾನ್ ಆಗಿದ್ದ ಪುನೀತ್ ನಿಧನ ಹೊಂದಿರುವುದು ಕಲಾರಂಗಕ್ಕೆ ಬಹಳ ದೊಡ್ಡ ನಷ್ಟ, ವಿಧಿಯ ಕ್ರೂರ ಆಟ ಎಂದು ಕೆಎಸ್ಆರ್ಟಿಸಿ ವ್ಯವಸ್ಥಾಪಕ ನಿರ್ದೇಶಕ ಶಿವಯೋಗಿ ಸಿ. ಕಳಸದ ಸಂತಾಪ ಸೂಚಿಸಿದ್ದಾರೆ.
ಅವರ ಉತ್ಸಾಹ, ಪ್ರತಿಭೆ, ಅವರ ಅನೇಕ ಅತ್ಯುತ್ತಮ ಚಲನಚಿತ್ರಗಳನ್ನು, ಕನ್ನಡದ ಸಾಂಸ್ಕೃತಿಕ ರಾಯಭಾರಿಯಂತೆ ನಾಡಿನ ಸಮಸ್ತ ಜನತೆಯ ಮನೆ, ಮನ ತಲುಪಿದ್ದ ಅವರ ವ್ಯಕ್ತಿತ್ವವನ್ನು ಮರೆಯುವುದು ಸಾಧ್ಯವೇ ಇಲ್ಲ. ಅವರ ಆತ್ಮಕ್ಕೆ ಸದ್ಗತಿಯನ್ನು ಪ್ರಾರ್ಥಿಸುತ್ತೇನೆ. ಅವರ ಕುಟುಂಬದವರಿಗೆ ದುಃಖ ಸಹಿಸುವ ಶಕ್ತಿಯನ್ನು ದೇವರು ನೀಡಲಿ ಎಂದು ಕೋರುತ್ತೇನೆ ಎಂದು ಹೇಳಿದ್ದಾರೆ.












Click it and Unblock the Notifications