ಅನ್ಲಾಕ್; ಬಸ್ ಸಂಚಾರ ಆರಂಭವಾದರೂ ಪ್ರಯಾಣಿಕರಿಲ್ಲ!
ಬೆಂಗಳೂರು, ಜೂನ್ 23; ಸರ್ಕಾರ ಅನ್ಲಾಕ್ ಘೋಷಣೆ ಮಾಡಿದ ಬಳಿಕ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ ಬಸ್ಗಳ ಸಂಚಾರವನ್ನು ಆರಂಭಿಸಿದೆ. ಆದರೆ ಎರಡೂ ದಿನವೂ ಪ್ರಯಾಣಿಕರ ಕೊರತೆ ಕಾಡಿದೆ.
ಸದಾ ಜನರಿಂದ ತುಂಬಿರುತ್ತಿದ್ದ ಬೆಂಗಳೂರಿನ ಮೆಜೆಸ್ಟಿಕ್ ಮತ್ತು ಸ್ಯಾಟ್ಲೈನ್ ನಿಲ್ದಾಣದಲ್ಲಿ ಚಾಲಕರು, ನಿರ್ವಾಹಕರು ಪ್ರಯಾಣಿಕರಿಗಾಗಿ ಕಾದು ಕುಳಿತಿದ್ದರು. ಪೀಕ್ ಅವರ್ನಲ್ಲಿ ಸ್ವಲ್ಪ ಜನದಟ್ಟಣೆ ಬಿಟ್ಟರೆ ಉಳಿದರೆ ನಿಲ್ದಾಣ ಖಾಲಿಯಾಗಿತ್ತು.
ಮೈಸೂರು ಮತ್ತು ದಕ್ಷಿಣ ಕನ್ನಡ ಜಿಲ್ಲೆ ಹೊರತುಪಡಿಸಿ ಉಳಿದ ಜಿಲ್ಲೆಗಳಿಗೆ ಸಾಮಾನ್ಯ ಬಸ್ಗಳ ಸಂಚಾರ ಆರಂಭವಾಗಿದೆ. ಮಂಗಳವಾರದಿಂದ ಅಂತರ ರಾಜ್ಯ ಬಸ್ಗಳ ಸಂಚಾರವನ್ನು ಸಹ ಆರಂಭಿಸಲಾಗಿದೆ. ಆದರೆ ಪ್ರಯಾಣಿಕರ ಕೊರತೆ ಕಂಡುಬರುತ್ತಿದೆ.

ಎಷ್ಟು ಬಸ್ಗಳ ಸಂಚಾರ; ಮೊದಲ ದಿನವಾದ ಸೋಮವಾರ 1,810 ಬಸ್ಗಳನ್ನು ಓಡಿಸಲಾಗಿದೆ. 1.10 ಲಕ್ಷ ಪ್ರಯಾಣಿಕರು ಸಂಚಾರ ನಡೆಸಿದ್ದಾರೆ. ಮಂಗಳವಾರ 1,700 ಬಸ್ಗಳು ಸಂಚಾರ ನಡೆಸಿವೆ.
ಸೋಮವಾರದಿಂದ ಅನ್ಲಾಕ್ ಜಾರಿಗೆ ಬಂದಿದೆ. ಶೇ 50ರಷ್ಟು ಜನರು ಮಾತ್ರ ಪ್ರಯಾಣಿಸಬೇಕು, ವಿವಿಧ ಜಿಲ್ಲೆಗಳಲ್ಲಿ ಅನ್ಲಾಕ್ ಬಗ್ಗೆ ಇರುವ ಗೊಂದಲದ ಕಾರಣ ಜನರು ಸಂಚಾರ ನಡೆಸಲು ಹಿಂದೇಟು ಹಾಕುತ್ತಿದ್ದಾರೆ ಎಂಬ ಮಾತುಗಳು ಕೇಳಿಬರುತ್ತಿವೆ.
ತೆಲಂಗಾಣಕ್ಕೆ ಬಸ್ ಇಲ್ಲ; ಕೆಎಸ್ಆರ್ಟಿಸಿ ಬೆಂಗಳೂರು ನಗರದಿಂದ ಮಂಗಳವಾರದಿಂದ ಆಂಧ್ರ ಪ್ರದೇಶ ಮತ್ತು ತೆಲಂಗಾಣಕ್ಕೆ ಬಸ್ ಸಂಚಾರ ಆರಂಭಿಸುವುದಾಗಿ ಘೋಷಣೆ ಮಾಡಿತ್ತು. ಆದರೆ ತೆಲಂಗಾಣಕ್ಕೆ ಪ್ರಯಾಣಿಕರು ಇಲ್ಲದ ಕಾರಣ ಬಸ್ ಓಡಲಿಲ್ಲ. ಆಂಧ್ರ ಪ್ರದೇಶಕ್ಕೆ 63 ಬಸ್ಗಳು ಓಡಿವೆ.
ರಾಜ್ಯದಲ್ಲಿ ಅನ್ಲಾಕ್ ಘೋಷಣೆ ಮಾಡಿದರೂ ಸಮಾರಂಭಗಳನ್ನು ನಡೆಸಲು ಅನುಮತಿ ನೀಡಿಲ್ಲ, ದೇವಾಲಯಗಳನ್ನು ತೆರೆದಿಲ್ಲ. ಮಳೆಗಾಲವಾದ ಕಾರಣ ಜನರು ಸಂಚಾರ ನಡೆಸಲು ಹಿಂದೇಟು ಹಾಕುತ್ತಿರಬಹುದು ಎಂದು ಅಧಿಕಾರಿಗಳು ಹೇಳಿದರು.
ಸರ್ಕಾರ ಜುಲೈ 5ರ ಬಳಿಕ ಎಲ್ಲಾ ಜಿಲ್ಲೆಗಳಿಗೂ ಬಸ್ ಸಂಚಾರಕ್ಕೆ ಅವಕಾಶ ನೀಡಬಹುದು. ಲಾಕ್ಡೌನ್ ನಿಯಮಗಳಲ್ಲಿ ಇನ್ನಷ್ಟು ವಿನಾಯಿತಿಯನ್ನು ನೀಡಬಹುದು. ಐಷಾರಾಮಿ ಬಸ್ಗಳ ಸಂಚಾರಕ್ಕೂ ಅವಕಾಶ ನೀಡುವ ನಿರೀಕ್ಷೆ ಇದೆ.
ಸರ್ಕಾರಿ ಬಸ್ಗಳ ಸಂಚಾರ ಆರಂಭವಾದರೂ ಖಾಸಗಿ ಬಸ್ಗಳು ಇನ್ನೂ ರಸ್ತೆಗೆ ಇಳಿದಿಲ್ಲ. ಮಲೆನಾಡು ಭಾಗದಲ್ಲಿ ಖಾಸಗಿ ಬಸ್ಗಳ ಪಾರುಪತ್ಯವೇ ಹೆಚ್ಚು. ಆದರೆ ಅಲ್ಲಿಯೂ ಸಹ ಬಸ್ಗಳನ್ನು ಓಡಿಸಲು ಮಾಲೀಕರು ಮುಂದಾಗುತ್ತಿಲ್ಲ.
ಕೋವಿಡ್ 2ನೇ ಅಲೆ ಹರಡದಂತೆ ತಡೆಲು ಒಂದೂವರೆ ತಿಂಗಳು ಲಾಕ್ಡೌನ್ ಘೋಷಣೆ ಮಾಡಲಾಗಿತ್ತು. ಈಗ ಅನ್ಲಾಕ್ ಪ್ರಕ್ರಿಯೆ ಆರಂಭವಾಗಿದ್ದು, ಜನಜೀವನ ಸಹಜ ಸ್ಥಿತಿಗೆ ಮರಳಲು ಇನ್ನೂ ಕೆಲವು ದಿನ ಬೇಕಾಗಬಹುದು.












Click it and Unblock the Notifications