KSRTC: ಕೆಎಸ್ಆರ್ಟಿಸಿ ಆರೋಗ್ಯ ಯೋಜನೆ, ನೌಕರರಿಗೆ ಪ್ರಯೋಜನಗಳು
ಬೆಂಗಳೂರು, ಜನವರಿ 15: ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ (ಕೆಎಸ್ಆರ್ಟಿಸಿ) ನೌಕರರು ಮತ್ತು ಸಿಬ್ಬಂದಿಗೆ ನಗದು ರಹಿತ ಆರೋಗ್ಯ ಯೋಜನೆಯನ್ನು ಕರ್ನಾಟಕ ಸರ್ಕಾರ ಆರಂಭಿಸಿದೆ. 'ಕೆ.ಎಸ್.ಆರ್.ಟಿ.ಸಿ ಆರೋಗ್ಯ ಯೋಜನೆ'ಯನ್ನು ಈಗಾಗಲೇ ಲೋಕಾರ್ಪಣೆ ಮಾಡಲಾಗಿದೆ. ಜನವರಿ 1, 2025ರಿಂದಲೇ ಈ ಯೋಜನೆಗಾಗಿ ನೌಕರರು/ ಅಧಿಕಾರಿಗಳು ಎಷ್ಟು ವಂತಿಗೆ ಪಾವತಿಸಬೇಕು? ಎಂದು ಮಾಹಿತಿ ನೀಡಲಾಗಿದೆ.
ಈ ಯೋಜನೆಯ ನೆರವು ಪಡೆಯಲು ಅಧಿಕಾರಿ/ ನೌಕರರು ಕೆ.ಎಸ್.ಆರ್.ಟಿ.ಸಿ ಆರೋಗ್ಯ ಕಾರ್ಡ್ ಅನ್ನು ಪಡೆದುಕೊಳ್ಳಬೇಕು. ಅಧಿಕಾರಿಗಳು ಮತ್ತು ನೌಕರರು ಈಗಾಗಲೇ ನೀಡಿರುವ, ಸಾರಿಗೆ ಮಿತ್ರದಲ್ಲಿ ನಮೂದಿಸಿರುವ ನಮೂನೆ 1 ಎ ಮತ್ತು 1ಬಿ ನಲ್ಲಿ ದೃಢೀಕರಿಸಿ ನೀಡಿರುವ ಮಾಹಿತಿಯ ಮೇರೆಗೆ KSRTC Arogya ಹೆಲ್ತ್ ಕಾರ್ಡ್ ಅನ್ನು ನಿಗಮದಿಂದ ನೀಡಲಾಗುತ್ತದೆ.

ಚಿಕಿತ್ಸೆ ಸಂದರ್ಭಗಳಲ್ಲಿ ಆರೋಗ್ಯ ಕಾರ್ಡ್ ಅನ್ನು ಹಾಜರುಪಡಿಸಿ ಅಥವಾ ಭವಿಷ್ಯ ನಿಧಿ ಸಂಖ್ಯೆ ನೀಡಿ HRMS ದತ್ತಾಂಶದಲ್ಲಿನ ಮಾಹಿತಿ ದೃಢೀಕರಣದ ಮೇರೆಗೆ ಚಿಕಿತ್ಸೆಯನ್ನು ಪಡೆಯಲು ಅವಕಾಶವಿರುತ್ತದೆ. ಆರೋಗ್ಯ ಕಾರ್ಡ್ ಕಳೆದು ಹೋದ ಪಕ್ಷದಲ್ಲಿ ಪೊಲೀಸ್ ಪ್ರಕರಣ ದಾಖಲಿಸಿದ ಸ್ವೀಕೃತಿಯೊಂದಿಗೆ 150 ರೂ. ಗಳ ಶುಲ್ಕವನ್ನು ವಿಭಾಗ/ ಕಛೇರಿಯಲ್ಲಿ ಪಾವತಿಸಿ ಕಾರ್ಡ್ ಅನ್ನು ಪಡೆಯಬಹುದಾಗಿದೆ.
ಅಧಿಕಾರಿ/ ನೌಕರರು ಸಂಸ್ಥೆಯ ಸೇವೆಯಿಂದ ನಿವೃತ್ತಿ/ ಸ್ವಯಂ ನಿವೃತಿ/ ವಜಾ/ ಅಂತರ ನಿಗಮ ವರ್ಗಾವಣೆ ಹೊಂದಿದ ಪ್ರಕರಣಗಳಲ್ಲಿ ಕರ್ತವ್ಯದಿಂದ ಬಿಡುಗಡೆಗೊಂಡ ತಕ್ಷಣದಿಂದಲೇ ಆರೋಗ್ಯ ಕಾರ್ಡ್ ಅನ್ನು ನೌಕರರಿಂದ ವಾಪಸ್ ಪಡೆಯುವುದು ಹಾಗೂ HRMS ತಂತ್ರಂಶದಲ್ಲಿರುವ ಮಾಹಿತಿಯನ್ನು ತೆಗೆದುಹಾಕುವುದು.
ವಾರ್ಷಿಕ ವೈದ್ಯಕೀಯ ತಪಾಸಣೆ: ನಿಗಮದ ನೌಕರರ ಆರೋಗ್ಯದ ಹಿತದೃಷ್ಟಿಯಿಂದ 40 ವರ್ಷ ಮೇಲ್ಪಟ್ಟ ಅಧಿಕಾರಿಗಳು ಮತ್ತು ನೌಕರರಿಗೆ ಶ್ರೀ ಜಯದೇವ ಹೃದ್ರೋಗ ಮತ್ತು ಸಂಶೋಧನಾ ಸಂಸ್ಥೆ ಅವರ ಸಹಯೋಗದಲ್ಲಿ 10 ಹೃದಯ ಸಂಬಂಧಿ ವೈದ್ಯಕೀಯ ತಪಾಸಣೆಗಳನ್ನು ಮಾಡುವ ಯೋಜನೆಯು 2023 ರಿಂದ 2028ರ ಅವಧಿಗೆ ಜಾರಿಯಲ್ಲಿದ್ದು, ತತ್ಸಂಬಂಧ ಪ್ರತಿ ನೌಕರರನ ಪರವಾಗಿ 1200 ರೂ. ಗಳನ್ನು ನಿಗಮದಿಂದ ಪಾವತಿಸಲಾಗುತ್ತಿದೆ.
@ KSRTC: ಕೆಎಸ್ಆರ್ಟಿಸಿ ಆರೋಗ್ಯ ಯೋಜನೆ: ಒಳ, ಹೊರ ರೋಗಿ ಚಿಕಿತ್ಸೆ ವಿವರಗಳು ಮುಂದುವರೆದು ಅಧಿಕಾರಿಗಳು/ ನೌಕರರು ಮತ್ತು ಅವರ ಅವಲಂಬಿತ ಕುಟುಂಬದ ಸದಸ್ಯರಿಗೆ ರಿಯಾಯಿತಿ ದರದಲ್ಲಿ ಸಾಮಾನ್ಯ ವಾರ್ಷಿಕ ವೈದ್ಯಕೀಯ ತಪಾಸಣೆಗಳನ್ನು ಮಾಡುವಂತೆ ಮಾನ್ಯತಾ ಪಟ್ಟಿಯಲ್ಲಿರುವ ಆಸ್ಪತ್ರೆಗಳಿಗೆ ತಿಳಿಸಲಾಗಿದೆ. ಸಂಬಂಧಿತ ನೌಕರರು ಸ್ವತಃ ಭರಿಸಿ ವಾರ್ಷಿಕ ಆರೋಗ್ಯ ತಪಾಸಣೆಗೆ ಒಳಗಾಗಬಹುದಾಗಿರುತ್ತದೆ. ಈ ವೆಚ್ಚವು ಮರುಪಾವತಿಯ ವ್ಯಾಪ್ತಿಗೆ ಒಳಪಡುವುದಿಲ್ಲ.
ದಂಡ/ ಶಿಸ್ತು ಕ್ರಮ: ಉದ್ದೇಶಿತ ಯೋಜನೆಯು ನೌಕರರ ಕಲ್ಯಾಣ ಯೋಜನೆಯಾಗಿದ್ದು, ಸುಳ್ಳು/ ತಪ್ಪು ಮಾಹಿತಿ ನೀಡಿದಲ್ಲಿ, ಈ ಯೋಜನೆಯನ್ನು ಯಾವುದೇ ರೀತಿಯಲ್ಲಿಯೂ ದುರ್ಬಳಕೆ ಮಾಡಿಕೊಂಡಿರುವುದು ಕಂಡುಬಂದಲ್ಲಿ, ಅವರು ಪಡೆದಿರುವ ಚಿಕಿತ್ಸಾ ವೆಚ್ಚದ ಮೂರು ಪಟ್ಟು ಮೊತ್ತವನ್ನು ದಂಡವಾಗಿ ಕಡಿತಗೊಳಿಸಲಾಗುವುದು ಹಾಗೂ ಸಂಸ್ಥೆಯ ಸೇವಾ ನಿಯಮಗಳನ್ವಯ ಶಿಸ್ತು ಕ್ರಮ ಜರುಗಿಸಲಾಗುತ್ತದೆ.
ಯೋಜನೆಯ ಕಾರ್ಯ ನಿರ್ವಹಣೆ ಜಾರಿಗಾಗಿ ಪ್ರತ್ಯೇಕ ಕೆ.ಎಸ್.ಆರ್.ಟಿ.ಸಿ ಆರೋಗ್ಯ ನ್ಯಾಸ ಮಂಡಳಿಯನ್ನು ರಚಿಸಲಾಗಿದೆ. ಅಲ್ಲದೇ, Health Benefit Administration (TPA) ಏಜೆನ್ಸಿಯ ಸಹಯೋಗದಲ್ಲಿ ಜಾರಿಗೊಳಿಸಲಾಗುತ್ತಿದೆ. ಈ ಯೋಜನೆಯ ನಿರ್ವಹಣೆಯು ಬಹುತೇಕ ತಂತ್ರಜ್ಞಾನ (Online) ಆಧಾರಿತವಾಗಿರುತ್ತದೆ.
ಅಧಿಕಾರಿಗಳು/ ನೌಕರರು ಹಾಗೂ ಅವರ ಅವಲಂಬಿತ ಕುಟುಂಬದ ಸದಸ್ಯರು ಮಾನ್ಯತೆ ಪಡೆದ ಆಸ್ಪತ್ರೆಯಲ್ಲಿ ಸಂಸ್ಥೆಯಿಂದ ನೀಡಿರುವ ಆರೋಗ್ಯ ಕಾರ್ಡ್ ಅನ್ನು ಹಾಜರುಪಡಿಸಿ ಅಥವಾ ಭವಿಷ್ಯ ನಿಧಿ ಸಂಖ್ಯೆಯ ಆಧಾರದ ಮೇಲೆ HRMS ನಲ್ಲಿನ ಮಾಹಿತಿ ಮೇರೆಗೆ ಆಸ್ಪತ್ರೆಯಲ್ಲಿ ಒಳರೋಗಿ/ ಹೊರರೋಗಿಯಾಗಿ ಚಿಕಿತ್ಸೆಯನ್ನು ಪಡೆಯಬಹುದಾಗಿದೆ. ಯಾವುದೇ ಮಾಹಿತಿ/ ಕುಂದು ಕೊರತೆ/ ಸಲಹೆಗಳಿಗಾಗಿ ಸಲಹಾ ಕೇಂದ್ರ/ ಸಹಾಯವಾಣಿಗೆ ಸಂಪರ್ಕಿಸುವುದು.
ಒಳರೋಗಿಯಾಗಿ ದಾಖಲಾಗುವ ಪ್ರಕರಣಗಳಲ್ಲಿ ಅರ್ಹ ಚಿಕಿತ್ಸಾ ವೆಚ್ಚವನ್ನು ಅಂದರೆ ಉಪಭೋಗ್ಯ (Consumables/ Non-Medical expenses) ವೆಚ್ಚವನ್ನು ನೌಕರನು ಭರಿಸುವುದು. ಉಳಿದ ಎಲ್ಲಾ ಚಿಕಿತ್ಸಾ ವೆಚ್ಚವು ನಗದು ರಹಿತಾ ವ್ಯಾಪ್ತಿಗೆ ಬರುತ್ತದೆ. ನೌಕರರು ಸ್ವ ಇಚ್ಚೆಯಿಂದ ನಿಗದಿತ ಸೆಮಿ ಪ್ರೈವೇಟ್ ವಾರ್ಡ್ಗಿಂತ ಮೇಲಿನ ವಾರ್ಡ್ ಸೌಲಭ್ಯವನ್ನು ಪಡೆದುಕೊಂಡಲ್ಲಿ ವ್ಯತ್ಯಾಸದ ಮೊತ್ತವನ್ನು ಬಿಡುಗಡೆಯ ಸಂದರ್ಭದಲ್ಲಿ ಆಸ್ಪತ್ರೆಗೆ ಸ್ವತಃ ಪಾವತಿಸಬೇಕಿರುತ್ತದೆ.
ವಿಭಾಗ ಮಟ್ಟದ ಎಲ್ಲಾ ಅಧಿಕಾರಿಗಳು ತಮ್ಮ ವಿಭಾಗ ವ್ಯಾಪ್ತಿಯಲ್ಲಿ ಒಡಂಬಡಿಕೆ ಮಾಡಿಕೊಂಡಿರುವ ಆಸ್ಪತ್ರೆಗಳಿಗೆ ಕಾಲಕಾಲಕ್ಕೆ ಅವಶ್ಯಕತೆಗನುಗುಣವಾಗಿ ಭೇಟಿ ನೀಡಿ, ಯೋಜನೆಯ ಪರಿಣಾಮಕಾರಿ ಅನುಷ್ಠಾನ ಕುರಿತಂತೆ ಗಮನ ಹರಿಸುವುದು.
ಈ ಯೋಜನೆಯಡಿ ನೌಕರರ ಹಾಗೂ ಮಾನ್ಯತಾ ಪಟ್ಟಿಯಲ್ಲಿರುವ ಆಸ್ಪತ್ರೆಗಳ ಕುಂದುಕೊರತೆಗಳಿಗೆ ಮತ್ತು ತತ್ಕ್ಷಣದ ಪರಿಹಾರಗಳಿಗಾಗಿ ಸಹಾಯವಾಣಿ/ ಸಲಹಾ ಕೇಂದ್ರದ ದೂರವಾಣಿಗೆ ಸಂಪರ್ಕಿಸುವುದು ಹಾಗೂ ಮಾರ್ಗದರ್ಶನ ಸಲಹೆಗಾಗಿ ಆಯಾ ವಿಭಾಗದ ಕಾರ್ಮಿಕ ಮತ್ತು ಕಲ್ಯಾಣಾಧಿಕಾರಿಗಳನ್ನು ಸಂಪರ್ಕಿಸುವುದು.
ಸಹಾಯವಾಣಿ ಸಂಖ್ಯೆ 7760990130, 7760999167, ಅಧಿಕೃತ ಜಾಲತಾಣ www.ksrtcarogya.in ಗೆ ಭೇಟಿ ನೀಡಿ ಮಾಹಿತಿಯನ್ನು ಪಡೆಯಬಹುದಾಗಿದೆ.












Click it and Unblock the Notifications