ಶುಕ್ರವಾರವೂ ಓಡಾಡೊಲ್ಲ ಬಿಎಂಟಿಸಿ, ಕೆಎಸ್ಆರ್ಟಿಸಿ: ಕರ್ತವ್ಯಕ್ಕೆ ಮರಳಲು ಸಚಿವರ ಮನವಿ
ಬೆಂಗಳೂರು, ಡಿಸೆಂಬರ್ 10: ವಿವಿಧ ಬೇಡಿಕೆಗಳನ್ನು ಈಡೇರಿಕೆಗೆ ಆಗ್ರಹಿಸಿ ಸಾರಿಗೆ ಇಲಾಖೆ ನೌಕರರು ನಡೆಸುತ್ತಿರುವ ಪ್ರತಿಭಟನೆ ಶುಕ್ರವಾರವೂ ಮುಂದುವರಿಯಲಿದೆ. ಗುರುವಾರ ನಡೆಸಿದ ಸಾರಿಗೆ ಇಲಾಖೆಯ ನೌಕರರ ಪ್ರತಿಭಟನೆಗಳು ಪರಿಣಾಮಕಾರಿ ಎನಿಸದ ಕಾರಣ ಮತ್ತೊಂದು ದಿನಕ್ಕೆ ಪ್ರತಿಭಟನೆಯನ್ನು ಮುಂದುವರಿಸಲು ನಿರ್ಧರಿಸಲಾಗಿದೆ. ಹೀಗಾಗಿ ಶುಕ್ರವಾರ ಕೂಡ ನಾಲ್ಕೂ ನಿಗಮಗಳ ಬಸ್ಗಳು ರಸ್ತೆಗೆ ಇಳಿಯುವುದಿಲ್ಲ.
ದುಡಿಯುವ ಜನರನ್ನು ಸರ್ಕಾರ ಅವಮಾನಿಸುತ್ತಿದೆ. ಚಾಲಕರು ಮತ್ತು ನಿರ್ವಾಹಕರು ಶ್ರಮಜೀವಿಗಳು. ಸಾರಿಗೆ ನೌಕರರನ್ನು ವಶಕ್ಕೆ ಪಡೆಯುವ ಮೂಲಕ ಅವರನ್ನು ಸರ್ಕಾರ ಅವಮಾನಿಸಿದೆ ಎಂದು ರೈತ ಮುಖಂಡ ಕೋಡಿಹಳ್ಳಿ ಚಂದ್ರಶೇಖರ್ ಹೇಳಿದ್ದಾರೆ.
ಕೋವಿಡ್ ಸಮಯದಲ್ಲಿ ಮುಷ್ಕರ ನಡೆಸದಂತೆ ಸಾರಿಗೆ ಸಚಿವ ಲಕ್ಷ್ಮಣ ಸವದಿ ನೌಕರರಿಗೆ ಮನವಿ ಮಾಡಿದ್ದಾರೆ. 'ಬಿಎಂಟಿಸಿ ಸೇರಿದಂತೆ ನಾಲ್ಕು ನಿಗಮಗಳ ಅಧಿಕಾರಿಗಳ ಜೊತೆಯೂ ಮಾತಾಡಿದ್ದೇವೆ. ಕೋವಿಡ್ ಸಂದರ್ಭದಲ್ಲಿ ಮುಷ್ಕರ ಬೇಡ, ಜನರಿಗೆ ಯಾವುದೇ ತೊಂದರೆ ಆಗಬಾರದು ನಾಲ್ಕು ನಿಗಮಗಳ ನೌಕರರಿಗೂ ಮನವಿ ಮಾಡಿದ್ದೇವೆ' ಎಂದು ಅವರು ತಿಳಿಸಿದ್ದಾರೆ.

'ನಿಮ್ಮ ಬೇಡಿಕೆ ಬಗ್ಗೆ ಸರ್ಕಾರ ಚರ್ಚೆ ಮಾಡುತ್ತದೆ. ಧರಣಿ ನಡೆಸಿದರೂ ಜನರಿಗೆ ಸಾರಿಗೆ ಸಮಸ್ಯೆ ಆಗದಂತೆ ನೋಡಿಕೊಂಡಿದ್ದೇವೆ. ಧರಣಿ ವಾಪಸ್ ಪಡೆದು ಕೆಲಸಕ್ಕೆ ಹಾಜರಾಗಿ' ಎಂದು ಸವದಿ ಮನವಿ ಮಾಡಿದ್ದಾರೆ.
ಸಾರಿಗೆ ನೌಕರರನ್ನು ಸರ್ಕಾರಿ ನೌಕರರು ಎಂದು ಪರಿಗಣಿಸಬೇಕು. ಸಾರಿಗೆ ನೌಕರರನ್ನು ಕೊರೋನಾ ವಾರಿಯರ್ಸ್ ಎಂದು ಗುರುತಿಸಬೇಕು. ನೌಕರರು ಕೊರೊನಾದಿಂದ ಮೃತಪಟ್ಟರೆ 30 ಲಕ್ಷ ಪರಿಹಾರ ನೀಡುವುದಾಗಿ ಸಾರಿಗೆ ಸಚಿವರು ಹೇಳಿದ್ದರು, ಆ ಆದೇಶವನ್ನು ಅಧಿಕೃತವಾಗಿ ಜಾರಿಗೆ ತರಬೇಕು. ಸಾಕಷ್ಟು ನೌಕರರಿಗೆ ಡ್ಯೂಟಿ ಸಿಗುತ್ತಿಲ್ಲ, ಡ್ಯೂಟಿ ಸಿಗದೆ ಇದ್ದರೂ ಹಾಜರಾತಿ ನೀಡಬೇಕು ಎಂಬ ಬೇಡಿಕೆಗಳನ್ನು ಕೆಎಸ್ಆರ್ಟಿಸಿ ಮತ್ತು ಬಿಎಂಟಿಸಿ ನೌಕರರು ಇರಿಸಿದ್ದಾರೆ.












Click it and Unblock the Notifications