ನಕಲಿ ಅರ್ಜಿದಾರರಿಗೆ ಕಠಿಣ ಶಿಕ್ಷೆ ಕಾದಿದೆ; ಈಶ್ವರಪ್ಪ ಎಚ್ಚರಿಕೆ
ಬೆಳಗಾವಿ, ಆಗಸ್ಟ್ 11: ರಾಜ್ಯದಲ್ಲಿ ಅತಿವೃಷ್ಟಿ ಸಂದರ್ಭ ನಕಲಿ ದಾಖಲೆಗಳನ್ನು ಸೃಷ್ಟಿಸಿ ಅರ್ಜಿ ಸಲ್ಲಿಸಿದವರಿಗೆ ಕಠಿಣ ಶಿಕ್ಷೆ ಕಾದಿದೆ ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಕೆ.ಎಸ್. ಈಶ್ವರಪ್ಪ ಎಚ್ಚರಿಕೆ ನೀಡಿದ್ದಾರೆ.
ರಾಜ್ಯದಲ್ಲಿ ಭಾರೀ ಮಳೆಯಿಂದಾಗಿ ಹಲವು ಕಡೆಗಳಲ್ಲಿ ಪ್ರವಾಹ ಪರಿಸ್ಥಿತಿ ಏರ್ಪಟ್ಟಿತ್ತು. ಇದರಿಂದ ಹಲವರು ಮನೆಗಳನ್ನು ಕಳೆದುಕೊಂಡರು. ಆದರೆ ಇಂಥ ಸಮಯದಲ್ಲಿ ಕೆಲವರು ನಕಲಿ ದಾಖಲೆ ಸೃಷ್ಟಿಸಿ ಪರಿಹಾರ ಪಡೆದುಕೊಳ್ಳಲು ಮುಂದಾಗಿದ್ದಾರೆ ಎಂದು ತಿಳಿಸಿದರು.
ಬುಧವಾರ ಬೆಳಿಗ್ಗೆ ಬೆಳಗಾವಿಯ ಚಿಕ್ಕೋಡಿ ಭಾಗದ ಗ್ರಾಮ ಪಂಚಾಯತ್ಗಳ ಅಧ್ಯಕ್ಷರು ಮತ್ತು ಗ್ರಾಮ ಪಂಚಾಯತ್ಗಳ ಅಭಿವೃದ್ಧಿ ಸಭೆ ಉದ್ಘಾಟನೆ ಸಂದರ್ಭ ನಕಲಿ ದಾಖಲೆ ಸೃಷ್ಟಿ ಕುರಿತು ಮಾತನಾಡಿದರು.

"ಅತಿವೃಷ್ಟಿಯಲ್ಲಿ ಮನೆ ಕಳೆದುಕೊಂಡವರಿಗೆ ರಾಜ್ಯ ಸರ್ಕಾರ ನೆರವು ನೀಡಲು ಮುಂದಾಯಿತು. ಆದರೆ
ಕೆಲವರು ಗ್ರಾಮೀಣ ಪ್ರದೇಶಗಳಲ್ಲಿ, ಬೀಳದೇ ಇರುವ ಮನೆಗಳನ್ನು ತಾವೇ ಖುದ್ದಾಗಿ ಜೆಸಿಬಿ ಯಂತ್ರಗಳ ಮುಖಾಂತರ ಕೆಡಿವಿದರು. ಇದನ್ನು ದೇವರು ಮೆಚ್ಚುತ್ತಾನಾ?" ಎಂದು ಪ್ರಶ್ನಿಸಿದರು.
"ಈ ಕೆಲಸ ಕಾನೂನು ಬಾಹಿರ. ನಕಲಿ ದಾಖಲೆಗಳನ್ನು ಸೃಷ್ಟಿಸಿ ರಾಜ್ಯ ಸರ್ಕಾರದಿಂದ ಪರಿಹಾರ ಪಡೆಯಲು ಮುಂದಾದರೆ ಅವರನ್ನು ಬಂಧಿಸಲಾಗುತ್ತದೆ. ಯಾರು ಕಡುಬಡವರಿರುತ್ತಾರೋ, ಯಾರು ಮಳೆಯಿಂದಾಗಿ ಮನೆ ಕಳೆದುಕೊಂಡಿರುತ್ತಾರೋ ಅವರಿಗೆ ಸರ್ಕಾರ ಪ್ರಾಮಾಣಿಕವಾಗಿ ಮನೆ ಕಟ್ಟಿಸಿಕೊಟ್ಟೇ ಕೊಡುತ್ತದೆ. ಅದರಲ್ಲಿ ಅನುಮಾನ ಬೇಡವೇ ಬೇಡ" ಎಂದು ಭರವಸೆ ನೀಡಿದರು.
"ಮೋಸ ಮಾಡಿ ಜೀವನ ಮಾಡುವ ಅಗತ್ಯವಿಲ್ಲ. ರೈತ ಮೋಸಗಾರನಲ್ಲ. ಯಾರ ಮಾತನ್ನೂ ಕೇಳಿ ಈ ರೀತಿ ಮಾಡಬೇಡಿ. ಈ ವಿಷಯ ನನ್ನ ಗಮನಕ್ಕೆ ಬಂದಿದೆ. ಕೆಲವರು ನಕಲಿ ದಾಖಲೆ ಸೃಷ್ಟಿಸಿ ಸರ್ಕಾರದ ಪರಿಹಾರಕ್ಕೆ ಅರ್ಜಿ ಹಾಕುತ್ತಿರುವುದು ನಮಗೆ ತಿಳಿದುಬಂದಿದೆ. ಹಾಗಾಗಿ ಪ್ರಸ್ತಾಪ ಮಾಡುತ್ತಿದ್ದೇನೆ" ಎಂದು ಹೇಳಿದರು.
ಈ ಸಂದರ್ಭದಲ್ಲಿ ಸಚಿವೆ ಶಶಿಕಲಾ ಜೊಲ್ಲೆ, ಮಹಾಂತೇಶ್ ಕವಟಗಿಮಠ ಮತ್ತು ಶಾಸಕರಾದ ಗಣೇಶ್ ಹುಕ್ಕೇರಿ, ಸಂಜಯ ಪಾಟೀಲ್, ಇಲಾಖೆಯ ಪ್ರಧಾನ ಕಾರ್ಯದರ್ಶಿ ಉಮಾಮಹದೇವನ್ ಮತ್ತು ಜಿಲ್ಲಾ ಪಂಚಾಯಿತಿ ಸಿಇಒ, ಹಿರಿಯ ಅಧಿಕಾರಿಗಳು ಇದ್ದರು.
ಮಹಾನಗರ ಪಾಲಿಕೆ ಚುನಾವಣೆ ಕುರಿತು ಆಕ್ರೋಶ: ರಾಜ್ಯ ಚುನಾವಣಾ ಆಯೋಗ ಬೆಳಗಾವಿ, ಹುಬ್ಬಳ್ಳಿ-ಧಾರವಾಡ, ಕಲಬುರಗಿ ಮಹಾನಗರ ಪಾಲಿಕೆಗಳಿಗೆ ಚುನಾವಣೆ ಘೋಷಣೆ ಮಾಡಿದೆ. 3/9/2021ರಂದು ಚುನಾವಣೆ ನಡೆಸುವುದಾಗಿ ಘೋಷಣೆ ಮಾಡಿದ್ದು, ಇದಕ್ಕೆ ಈಶ್ವರಪ್ಪ ವಿರೋಧ ವ್ಯಕ್ತಪಡಿಸಿದ್ದಾರೆ.
ಬುಧವಾರ ಬೆಳಗಾವಿಯಲ್ಲಿ ಮಾತನಾಡಿದ ಸಚಿವ ಕೆ. ಎಸ್. ಈಶ್ವರಪ್ಪ, "ಚುನಾವಣೆ ಘೋಷಣೆ ಏಕೆ ಘೋಷಣೆ ಮಾಡಿದರೋ ನನಗಂತೂ ಆಶ್ಚರ್ಯವಾಗಿದೆ" ಎಂದರು.
"ಇವತ್ತು ಕೋರ್ಟ್ ನಿಮ್ಮ ಅಭಿಪ್ರಾಯ ತಿಳಿಸಿ ಎಂದು ಸರ್ಕಾರಕ್ಕೆ ಕೇಳಿದ್ದಾರೆ, ಚುನಾವಣಾ ಆಯೋಗಕ್ಕೂ ಕೇಳಿದ್ದಾರೆ. ನಾವು ಇವತ್ತು ವರದಿ ಕೊಡ್ತಿದ್ದೇವೆ ಅಷ್ಟರಲ್ಲೇ ಚುನಾವಣೆ ಘೋಷಣೆ ಮಾಡಿದರೆ ನಾನೇನು ಹೇಳಲಿ?. ಚುನಾವಣಾ ಆಯೋಗ ತಗೆದುಕೊಳ್ಳುವ ತೀರ್ಮಾನದ ಬಗ್ಗೆ ನನಗೆ ಸಮಾಧಾನ ಇಲ್ಲ" ಎಂದರು.
"ನಾನು ಟೀಕೆ ಮಾಡಲು ಹೋಗುತ್ತಿಲ್ಲ. ಬೆಳಗಾವಿ, ಕಲಬುರಗಿ ಮಹಾರಾಷ್ಟ್ರ ಗಡಿ ಪ್ರದೇಶವಾಗಿದೆ. ಕೋವಿಡ್ ಮೂರನೇ ಅಲೆ ಬಗ್ಗೆ ಹುಷಾರಾಗಿರಿ ಅಂತಾ ಪ್ರಧಾನಿ ಹೇಳುತ್ತಿದ್ದಾರೆ. ಕೋರ್ಟ್ಗಳು ಸಹ ಹೇಳುತ್ತಿವೆ. ಚುನಾವಣಾ ಆಯೋಗ ಚುನಾವಣೆ ಘೋಷಣೆ ಮಾಡಿದರೆ ನಾವು ಯಾರನ್ನು ಕೇಳೋಣ?" ಎಂದು ಈಶ್ವರಪ್ಪ ಪ್ರಶ್ನಿಸಿದರು.












Click it and Unblock the Notifications