ಪರಿಷತ್ ಚುನಾವಣೆ : ಈಶ್ವರಪ್ಪ, ಯಡಿಯೂರಪ್ಪ ನಡುವೆ ಅಸಮಾಧಾನ?
ಬೆಂಗಳೂರು, ಮೇ 29 : ವಿಧಾನಪರಿಷತ್ ಚುನಾವಣೆ ವಿಚಾರದಲ್ಲಿ ಯಡಿಯೂರಪ್ಪ, ಕೆ.ಎಸ್.ಈಶ್ವರಪ್ಪ ನಡುವೆ ಅಸಮಾಧಾನ ಭುಗಿಲೆದ್ದಿದೆ?. ಜೂನ್ 11ರಂದು ವಿಧಾನಪರಿಷತ್ ಚುನಾವಣೆ ದಿನಾಂಕ ನಿಗದಿಯಾಗಿದೆ.
ವಿಧಾನಸಭೆಯಿಂದ ವಿಧಾನಪರಿಷತ್ತಿಗೆ 11 ಸದಸ್ಯರನ್ನು ಆಯ್ಕೆ ಮಾಡಲು ಚುನಾವಣೆ ದಿನಾಂಕ ನಿಗದಿಯಾಗಿದೆ. ಅಭ್ಯರ್ಥಿಗಳ ಆಯ್ಕೆ ವಿಚಾರದಲ್ಲಿ ಯಡಿಯೂರಪ್ಪ ಮತ್ತು ಈಶ್ವರಪ್ಪ ನಡುವೆ ಭಿನ್ನಾಭಿಪ್ರಾಯ ಉಂಟಾಗಿದೆ.
ವಿಧಾನಪರಿಷತ್ತಿನ 11 ಸ್ಥಾನಗಳ ಚುನಾವಣೆ ದಿನಾಂಕ ಘೋಷಣೆ
ಜೂನ್ 17ರಂದು ಎಂ.ಬಿ.ಭಾನುಪ್ರಕಾಶ್ ಸೇರಿದಂತೆ 11 ಜನರ ಪರಿಷತ್ ಸದಸ್ಯತ್ವದ ಅವಧಿ ಪೂರ್ಣಗೊಳ್ಳಲಿದೆ. ಭಾನುಪ್ರಕಾಶ್ ಶಿವಮೊಗ್ಗದವರಾಗಿದ್ದು, ಕೆ.ಎಸ್.ಈಶ್ವರಪ್ಪ ಅವರ ಆಪ್ತರು. ಈ ಬಾರಿ ಭಾನುಪ್ರಕಾಶ್ ಅವರನ್ನು ಮರು ಆಯ್ಕೆ ಮಾಡುವುದು ಬೇಡ ಎಂದು ಯಡಿಯೂರಪ್ಪ ತೀರ್ಮಾನಿಸಿದ್ದಾರೆ.
ಬಿ.ಎಸ್.ಯಡಿಯೂರಪ್ಪ ಭಾನು ಪ್ರಕಾಶ್ ಅವರ ಬದಲು ಬೆಂಗಳೂರು ನಗರ ಘಟಕದ ಅಧ್ಯಕ್ಷ ಸುಬ್ಬನರಸಿಂಹ ಅವರನ್ನು ಪರಿಷತ್ತಿಗೆ ಆಯ್ಕೆ ಮಾಡಲು ತೀರ್ಮಾನಿಸಿದ್ದಾರೆ. ಆದ್ದರಿಂದ, ಈಶ್ವರಪ್ಪ ಅವರು ಅಸಮಾಧಾನಗೊಂಡಿದ್ದಾರೆ.
ಯಡಿಯೂರಪ್ಪ ವಿರುದ್ಧ ಅಸಮಾಧಾನಗೊಂಡಿರುವ ಕೆ.ಎಸ್.ಈಶ್ವರಪ್ಪ ಬೆಂಗಳೂರಿನಲ್ಲಿ ನಡೆಯುತ್ತಿರುವ ಕೋರ್ ಕಮಿಟಿ ಸಭೆಗೂ ಗೈರು ಹಾಜರಾಗಿದ್ದಾರೆ. ಪರಿಷತ್ ಚುನಾವಣೆ ಬಗ್ಗೆ ಚರ್ಚೆ ನಡೆಸಲು ಕೋರ್ ಕಮಿಟಿ ಸಭೆ ನಡೆಯುತ್ತಿದೆ.