KRS Dam: ಬೆಂಗಳೂರು, ಮೈಸೂರು, ಮಂಡ್ಯ ಜಿಲ್ಲೆಗಳ ಜೀವನಾಡಿ ಕೆಆರ್ಎಸ್ನಲ್ಲಿ 100 ಅಡಿಗಿಂತ ಕೆಳಕ್ಕೆ ಕುಸಿದ ನೀರಿನ ಮಟ್ಟ
KRS Dam: ಬೆಂಗಳೂರು, ಮೈಸೂರು ಮತ್ತು ಮಂಡ್ಯ ಜಿಲ್ಲೆಗಳ ಜೀವನಾಡಿಯಾಗಿರುವ ಕೃಷ್ಣರಾಜ ಸಾಗರ (ಕೆಆರ್ಎಸ್) ಜಲಾಶಯದ ನೀರಿನ ಮಟ್ಟವು ಭಾರಿ ಪ್ರಮಾಣದಲ್ಲಿ ಕುಸಿತವಾಗಿದೆ. ಪ್ರಸ್ತುತ ನೀರಿನ ಮಟ್ಟವು ಇಂದು (ಏಪ್ರಿಲ್ 20) 100 ಅಡಿಗಿಂತ ಕೆಳಕ್ಕೆ ತಲುಪಿದೆ. ಒಳಹರಿವು ಕಡಿಮೆಯಿದ್ದು, ಹೊರಹರಿವಿನ ಪ್ರಮಾಣ ಹೆಚ್ಚಾಗಿದೆ. ಇದರಿಂದ ಈ ಭಾಗಗಳ ರೈತರು, ಜನರು ಆತಂಕದಲ್ಲಿದ್ದಾರೆ.
ಜಲಾಶಯದ ಗರಿಷ್ಠ ಮಟ್ಟ 124.80 ಅಡಿಗಳಾಗಿದ್ದು, ಪ್ರಸ್ತುತ ಇಂದು (ಏಪ್ರಿಲ್ 20) ನೀರಿನ ಮಟ್ಟ 99.98 ಅಡಿ ಇದೆ. ಒಳಹರಿವಿನ ಪ್ರಮಾಣ 71 ಕ್ಯೂಸೆಕ್ ಇದ್ದರೆ, ಹೊರಹರಿವು 4,300 ಕ್ಯೂಸೆಕ್ಗೂ ಅಧಿಕವಾಗಿದ್ದು, ಇದು ರೈತರಲ್ಲಿ ಆತಂಕ ಮೂಡಿಸಿದೆ.

ಜಲಾಶಯದ ನೀರಿನ ಮಟ್ಟ
* ಗರಿಷ್ಠ ಮಟ್ಟ - 124.80 ಅಡಿ
* ಪ್ರಸ್ತುತ ನೀರಿನ ಮಟ್ಟ - 99.98 ಅಡಿ
* ಒಳಹರಿವು - 71 ಕ್ಯೂಸೆಕ್
* ಹೊರಹರಿವು - 4,398 ಕ್ಯೂಸೆಕ್
ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣ ತಾಲ್ಲೂಕಿನ ಕೃಷ್ಣರಾಜ ಸಾಗರ ಜಲಾಶಯದ ನೀರಿನ ಮಟ್ಟವು ಪ್ರಸಕ್ತ ಬೇಸಿಗೆಯ ಬಿಸಿಲಿನ ತಾಪಕ್ಕೆ ಕುಸಿಯುತ್ತಿದ್ದು, ಇದೀಗ 100 ಅಡಿಗಿಂತ ಕೆಳಕ್ಕೆ (99.98 ಅಡಿ) ತಲುಪಿದೆ. ಈ ಹಿನ್ನೆಲೆಯಲ್ಲಿ ನೀರಾವರಿ ಇಲಾಖೆಯ ಅಧಿಕಾರಿಗಳು ಕಾವೇರಿ ಅಚ್ಚುಕಟ್ಟು ಪ್ರದೇಶದ ರೈತರಿಗೆ ಮುನ್ನೆಚ್ಚರಿಕೆ ಕ್ರಮಗಳನ್ನು ನೀಡಿದ್ದಾರೆ.
ರೈತರಿಗೆ ಮುನ್ನೆಚ್ಚರಿಕೆ ಕ್ರಮಗಳು
ಜಲಾಶಯಕ್ಕೆ ಬರುತ್ತಿರುವ ನೀರಿನ ಪ್ರಮಾಣ ಅತ್ಯಲ್ಪವಾಗಿದ್ದು, ಹೊರಹರಿವು 4,300 ಕ್ಯೂಸೆಕ್ಗೂ ಅಧಿಕವಾಗಿದೆ. ಇದರಿಂದ ನೀರಿನ ಮಟ್ಟ ವೇಗವಾಗಿ ಕುಸಿಯುತ್ತಿದೆ. ಈ ಹಿನ್ನೆಲೆ ರೈತರು ಹೆಚ್ಚು ನೀರು ಬೇಕಾಗುವ ಬೇಸಿಗೆ ಬೆಳೆಗಳನ್ನು (ಉದಾಹರಣೆಗೆ ಭತ್ತ, ಕಬ್ಬು) ಬೆಳೆಯದಂತೆ ಅಧಿಕಾರಿಗಳು ಸೂಚಿಸಿದ್ದಾರೆ. ಉಳಿದಂತೆ ಬೇರೆ ಬೆಳೆಗಳಿಗೆ ಮಾತ್ರ ನೀರನ್ನು ಮಿತವಾಗಿ ಬಳಸುವಂತೆ ಮನವಿ ಮಾಡಿದ್ದಾರೆ.
ಕುಡಿಯುವ ನೀರಿಗೆ ಆದ್ಯತೆ
ಬೆಂಗಳೂರು, ಮೈಸೂರು, ಮಂಡ್ಯ ಮತ್ತು ರಾಮನಗರ ನಗರಗಳಿಗೆ ಕುಡಿಯುವ ನೀರು ಪೂರೈಸಲು ಪ್ರಸ್ತುತ ಲಭ್ಯವಿರುವ ನೀರನ್ನು ಕಾಯ್ದಿರಿಸುವುದು ಸರ್ಕಾರದ ಆದ್ಯತೆಯಾಗಿದೆ. ಜೂನ್ ತಿಂಗಳವರೆಗೆ ಅಂದರೆ ಮುಂಗಾರು ಆರಂಭವಾಗುವವರೆಗೆ ಕುಡಿಯುವ ನೀರಿಗೆ ಯಾವುದೇ ತೀವ್ರ ತೊಂದರೆಯಾಗದಂತೆ ವೈಜ್ಞಾನಿಕವಾಗಿ ನೀರು ನಿರ್ವಹಣೆ ಮಾಡಲಾಗುತ್ತಿದೆ ಎಂದು ತಿಳಿಸಿದ್ದಾರೆ.
ತೀವ್ರ ಬಿಸಿಲಿನ ಕಾರಣದಿಂದ ಜಲಾಶಯದ ನೀರಿನ ಮಟ್ಟ ಕುಸಿಯಲು ಪ್ರಮುಖ ಕಾರಣವಾಗಿದೆ. ಜೂನ್ ತಿಂಗಳಲ್ಲಿ ಮುಂಗಾರು ಮಳೆ ವಿಳಂಬವಾದರೆ ಕುಡಿಯುವ ನೀರಿನ ಸಮಸ್ಯೆ ತಲೆದೂರಬಹುದು. ಆದ್ದರಿಂದ ಸಾರ್ವಜನಿಕರು ಮತ್ತು ರೈತರು ನೀರನ್ನು ಮಿತವಾಗಿ ಬಳಸುವಂತೆ ಕಾವೇರಿ ನೀರಾವರಿ ನಿಗಮದ ಅಧಿಕಾರಿಗಳು ಮನವಿ ಮಾಡಿದ್ದಾರೆ ಎಂದು ತಿಳಿದುಬಂದಿದೆ.
ರಾಜ್ಯದಲ್ಲಿ ಇದೀಗ ಸದ್ಯ ಬಿಸಿಲಿನ ಪ್ರಮಾಣ ದಿನದಿಂದ ದಿನಕ್ಕೆ ದಾಖಲೆ ಮಟ್ಟದಲ್ಲಿ ಹೆಚ್ಚಾಗುತ್ತಲಿದೆ. ಪರಿಣಾಮ ಈಗಾಗಲೇ ಹಲವು ಭಾಗಗಳಲ್ಲಿ ಕೆರೆ, ಕಟ್ಟೆಗಳು ಸೇರಿದಂತೆ ಹಲವು ನೀರಿನ ಮೂಲಗಳು ಖಾಲಿಯಾಗಿದೆ. ಅದರಲ್ಲೂ ಪ್ರಮುಖ ಜಲಾಶಯಗಳ ನೀರಿನ ಮಟ್ಟ ಕೂಡ ಬಿಸಿಲಿನ ಶಾಖಕ್ಕೆ ಕುಸಿಯುತ್ತಲಿದೆ. ಹಾಗೆಯೇ ಕೃಷ್ಣರಾಜ ಸಾಗರ ಜಲಾಶಯದ ನೀರಿನ ಮಟ್ಟ ಕುಸಿತವಾಗುತ್ತಲಿದ್ದು, ಇದರಿಂದ ಬೆಂಗಳೂರು, ಮಂಡ್ಯ, ಮೈಸೂರು ಜಿಲ್ಲೆಗಳ ಜನರು ಆತಂಕ್ಕೆ ಒಳಗಾಗಿದ್ದಾರೆ. ಈಗಲೇ ಹೀಗೆ ಆದರೆ, ಮುಂದಿನ ದಿನಗಳಲ್ಲಿ ಏನು ಕಾದಿದೆಯೋ ಎನ್ನುವ ಆತಂಕದಲ್ಲಿದ್ದಾರೆ. ಕಳೆದ ಒಂದು ವರ್ಷದ ಹಿಂದೆಯೂ ಸಹ ಬೇಸಿಗೆಯಲ್ಲಿ ಜಲಾಶಾಯದ ನೀರಿನ ಮಟ್ಟ ಕುಸಿತವಾಗಿದ್ದು, ಆ ವೇಳೆ ಅವಶೇಷಗಳು ಕಾಣಿಸತೊಡಗಿದ್ದವು. ಈ ಬಾರಿ ಈ ಪರಿಸ್ಥಿತಿ ಬಾರದಿರಲಿ ಎಂದು ರೈತರು ಹಾಗೂ ಜನರು ದೇವರಲ್ಲಿ ಬೇಡಿಕೊಳ್ಳುತ್ತಿದ್ದಾರೆ.












Click it and Unblock the Notifications