KRS Dam: ಕೆಆರ್ಎಸ್ ಜಲಾಶಯಕ್ಕೆ ಭರ್ಜರಿ ನೀರು, ಡ್ಯಾಂ ವೀಕ್ಷಿಸಿ ಡಿಸಿಎಂ ಡಿ.ಕೆ. ಶಿವಕುಮಾರ್ ಹೇಳಿದ್ದೇನು?
ಮಳೆ.. ಮಳೆ.. ಕರ್ನಾಟಕ ರಾಜ್ಯದಲ್ಲಿ ಮಳೆ ಅಬ್ಬರ ಬಲು ಜೋರಾಗಿದ್ದು, ಕಳೆದ ಕೆಲ ವಾರಗಳಿಂದ ಸತತವಾಗಿ ಮಳೆ ಅಬ್ಬರಿಸುತ್ತಿದೆ. ಹೀಗಾಗಿ ಕರ್ನಾಟಕ ರಾಜ್ಯದಲ್ಲಿ ಬಹುತೇಕ ಎಲ್ಲಾ ಜಲಾಶಯಗಳು ತುಂಬಿ ಹೋಗಿದ್ದು, ಅದರಲ್ಲೂ ದಕ್ಷಿಣ ಕರ್ನಾಟಕದ ಬಹುಮುಖ್ಯ ಜಲಾಶಯ ಕೆಆರ್ಎಸ್ ಡ್ಯಾಂ ಕೂಡ ತುಂಬಿ ತುಳುಕುತ್ತಿದೆ. ಈ ಪರಿಸ್ಥಿತಿಯಲ್ಲೇ, ಡಿಸಿಎಂ ಡಿ.ಕೆ. ಶಿವಕುಮಾರ್ ಅವರು ಕೆಆರ್ಎಸ್ ಡ್ಯಾಂಗೆ ಭೇಟಿ ನೀಡಿ ಹೇಳಿದ್ದೇನು? ಕೆಆರ್ಎಸ್ ಜಲಾಶಯದಲ್ಲಿ ಈಗ ಎಷ್ಟಿದೆ ನೀರಿನ ಪ್ರಮಾಣ? ಬನ್ನಿ ಪೂರ್ತಿ ಮಾಹಿತಿ ತಿಳಿಯೋಣ.
ವಿಶ್ವವಿಖ್ಯಾತ ಕೃಷ್ಣರಾಜ ಸಾಗರದ ಬೃಂದಾವನಕ್ಕೆ ಹೊಸ ರೂಪ ನೀಡಲು, ನೀರಾವರಿ ಇಲಾಖೆ ಕೆಲಸ ಮಾಡ್ತಿದೆ. ಸಂಪುಟ ಸಭೆ ಒಪ್ಪಿಗೆ ನಂತರ ಖಾಸಗಿ ಸಹಭಾಗಿತ್ವದಲ್ಲಿ ಕಾವೇರಿ ಬೃಂದಾವನ ಅಮ್ಯೂಸ್ಮೆಂಟ್ ಪಾರ್ಕ್ ನಿರ್ಮಾಣಕ್ಕೆ ಮುಂದಾಗ್ತೀವಿ ಅಂತಾ ಜಲಸಂಪನ್ಮೂಲ ಸಚಿವರೂ ಆಗಿರುವ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಮಾಹಿತಿ ನೀಡಿದರು. ಕೆಆರ್ಎಸ್ ಡ್ಯಾಂ ತುಂಬಿ ತುಳುಕುತ್ತಿರುವ ಬೆನ್ನಲ್ಲೇ ಡಿಸಿಎಂ ಡಿ.ಕೆ. ಶಿವಕುಮಾರ್ ಅವರು ವಿಶೇಷವಾಗಿ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಹಾಗಾದರೆ, ಇದೀಗ ಕೆಆರ್ಎಸ್ ಡ್ಯಾಂನಲ್ಲಿ ಎಷ್ಟಿದೆ ನೀರಿನ ಪ್ರಮಾಣ? ಮುಂದೆ ಓದಿ.

ಕೆಆರ್ಎಸ್ ಜಲಾಶಯಕ್ಕೆ ಜೀವಕಳೆ!
ರೈತರ ಜೀವನಾಡಿ ಕೆಆರ್ಎಸ್ ಜಲಾಶಯ ವೀಕ್ಷಿಸಿ ಅಧಿಕಾರಿಗಳ ಜೊತೆಗೆ ಸಭೆಯನ್ನೂ ನಡೆಸಿದ ನಂತರ ಡಿಸಿಎಂ ಡಿ.ಕೆ. ಶಿವಕುಮಾರ್ ಮಾತನಾಡಿದರು. ಕಾವೇರಿ ನಮ್ಮ 'ಬ್ರಾಂಡ್ ನೇಮ್' ಆಗಿದೆ. ಹೀಗಾಗಿ ಅದನ್ನು ಉಳಿಸಿಕೊಂಡು ಅಮ್ಯೂಸ್ಮೆಂಟ್ ಪಾರ್ಕ್ ನಿರ್ಮಾಣಕ್ಕೆ ಆದ್ಯತೆ ನೀಡುತ್ತೇವೆ. ಹಾಗೇ ಸುಮಾರು 10 ಸಾವಿರ ಪ್ರವಾಸಿಗರಿಗೆ ಅಗತ್ಯ ಇರುವ ಮನರಂಜನೆ ಹಾಗೂ ವಸತಿ & ಪಾರ್ಕಿಂಗ್ ಸೌಲಭ್ಯ ಕಲ್ಪಿಸಿ, ಪ್ರತ್ಯಕ್ಷ ಹಾಗೂ ಪರೋಕ್ಷವಾಗಿ ಸುಮಾರು 8 ರಿಂದ 10 ಸಾವಿರ ಮಂದಿಗೆ ಉದ್ಯೋಗ ಕಲ್ಪಿಸುವ ಗುರಿ ಹೊಂದಿದ್ದೇವೆ ಎಂದು ಮಾಹಿತಿ ನೀಡಿದರು. ಈ ಸಮಯದಲ್ಲಿ ಕೆಆರ್ಎಸ್ ಡ್ಯಾಂನಲ್ಲಿ ಎಷ್ಟಿದೆ ನೀರು?
ಕೆಆರ್ಎಸ್ ಡ್ಯಾಂನಲ್ಲಿ ಭರ್ಜರಿ ನೀರು!
ಮಂಡ್ಯ ಜಿಲ್ಲೆಯ ಕೆಆರ್ಎಸ್ ಡ್ಯಾಂನಲ್ಲಿ ಇದೀಗ 123.20 ಅಡಿ ನೀರು ಸಂಗ್ರಹವಾಗಿದ್ದು, ಗರಿಷ್ಠ 124.80 ಅಡಿ ನೀರು ಸಂಗ್ರಹ ಮಾಡಬಹುದಾಗಿದೆ. ಆದರೆ ಕೆಆರ್ಎಸ್ ಜಲಾಶಯಕ್ಕೆ ಇದೀಗ ಭಾರಿ ಪ್ರಮಾಣದಲ್ಲಿ ನೀರು ಹರಿದು ಬರುತ್ತಿದ್ದು, ಸುಮಾರು 60,016 ಕ್ಯೂಸೆಕ್ ನೀರು ಒಳಗೆ ನುಗ್ಗುತ್ತಿದೆ. ಹೀಗಾಗಿ ಅಣೆಕಟ್ಟೆಯ ಸುರಕ್ಷತೆ ದೃಷ್ಟಿಯಿಂದ 52,020 ಕ್ಯೂಸೆಕ್ ನೀರನ್ನು ಕಾವೇರಿ ನದಿ ಮೂಲಕ ಜಲಾಶಯದಿಂದ ಹೊರಗೆ ಹರಿ ಬಿಡಲಾಗುತ್ತಿದೆ.












Click it and Unblock the Notifications