ಬತ್ತಿದ ಕೃಷ್ಣೆ, ಜಮಖಂಡಿಯಲ್ಲಿ ಹನಿ ನೀರಿಗೂ ತತ್ವಾರ!
ಜಮಖಂಡಿ, ಏಪ್ರಿಲ್ 4 : ಇಲ್ಲಿರುವ ಚಿತ್ರಗಳತ್ತ ಒಂದು ಬಾರಿ ಕಣ್ಣಾಡಿಸಿ, ಬಾಗಲಕೋಟೆ ಜಿಲ್ಲೆಯಲ್ಲಿ ಯಾವ ಪರಿ ನೀರಿಗೆ ಹಾಹಾಕಾರವೆದ್ದಿದೆ ಎಂಬುದು ಅರಿವಿಗೆ ಬರುತ್ತದೆ. ಒಂದು ನೀರಿನ ಟ್ಯಾಂಕರ್ ಬಂದರೆ ಸಾಕು ನೀರಿನ ಕ್ಯಾನ್ ಹಿಡಿದುಕೊಂಡು ಯುದ್ಧಕ್ಕೆ ಸಜ್ಜಾಗ ಸೈನಿಕರಂತೆ ನಿವಾಸಿಗಳು ಹೊರಡುತ್ತಾರೆ.
ಬಾಗಲಕೋಟೆ ಮಾತ್ರವಲ್ಲ ಇಡೀ ಉತ್ತರ ಕರ್ನಾಟಕದಾದ್ಯಂತ ಇಂಥದೇ ದೃಶ್ಯವನ್ನು ಕಾಣಬಹುದು. ದೊಡ್ಡ ಕ್ಯಾನು, ಡ್ರಮ್ಮು, ಬಿಂದಿಗೆ ಹಿಡಿದುಕೊಂಡು ನೀರಿಗೆ ಪರದಾಡುವಂಥ ಚಿತ್ರಗಳೇ ಕಾಣಿಸುತ್ತವೆ. ಊರು ಅತ್ಲಾಗಿರಲಿ, ನದಿ ತೀರದ ರೈತರು ಸಹ ಹನಿ ನೀರಿಗೆ ಹೋರಾಟ ಮಾಡುವಂಥ ಪರಿಸ್ಥಿತಿ ನಿರ್ಮಾಣವಾಗಿದೆ.[ಉತ್ತರ ಕರ್ನಾಟಕ ಭಾಗಕ್ಕೆ ಮಹಾರಾಷ್ಟ್ರದಿಂದ 4 ಟಿಎಂಸಿ ನೀರು]
ಜಿಲ್ಲೆಯ ಜೀವನಾಡಿಯಾದ ಕೃಷ್ಣಾ ಒಡಲು ಬತ್ತಿಹೋಗಿದೆ. ಆಲಮಟ್ಟಿ ಜಲಾಶಯ ಖಾಲಿ ಹೊಡೆಯುತ್ತಿದೆ. ಆಲಮಟ್ಟಿ ಜಲಾಶಯದಿಂದ ಬೇಸಿಗೆಯಲ್ಲಿ ನೀರು ಖಾಲಿಯಾಗಬಾರದೆಂದು ರೈತರು ಜಲಾಶಯದ ಹಿನ್ನೀರಿನಲ್ಲಿ ಮುಳಗಡೆಯಾಗಲು ಸಾವಿರಾರು ಎಕರೆ ಪ್ರದೇಶ ಭೂಮಿಯನ್ನು ನೀಡಿದ್ದರೂ ನೀರಿಗಾಗಿ ಪರದಾಡುವುದು ಮಾತ್ರ ತಪ್ಪಿಲ್ಲ. ಜನರನ್ನು ಯಲಗೂರು ಹಣಮಪ್ಪನೇ ಕಾಪಾಡಬೇಕು.
ಹಿಪ್ಪರಗಿ ಜಲಾಶಯದಿಂದ ಆಲಮಟ್ಟಿವರೆಗೆ 123 ಕಿಮೀ ವ್ಯಾಪ್ತಿ ನದಿ ಹೊಂದಿದ್ದರೂ ಗಲಗಲಿ ಬ್ಯಾರೇಜ್ ವರೆಗೆ ಆಲಮಟ್ಟಿ ನೀರು ಸರಿ ಪ್ರಮಾಣದಲ್ಲಿ ಸಿಗುತ್ತದೆ. ಆದರೆ ಚಿಕ್ಕಪಡಸಲಗಿ ಬ್ಯಾರೆಜ್ನಿಂದ ಹಿಪ್ಪರಗಿ ಜಲಾಶಯವರೆಗೆ ಸುಮಾರು 40 ಕಿಮೀ ನದಿ ಸಂಪೂರ್ಣ ಬತ್ತಿ ಈ ಭಾಗದ ಲಕ್ಷಾಂತರ ಎಕರೆ ಪ್ರದೇಶದಲ್ಲಿನ ನೂರಾರು ಕೋಟಿ ಮೌಲ್ಯದ ವಾಣಿಜ್ಯ ಬೆಳೆ, ನಿತ್ಯ ಲಕ್ಷಾಂತರ ಲಿಟರ್ ಹಾಲು ಉತ್ಪಾದಿಸುವ ಹೈನೋದ್ಯಮದ ಮೇಲೆ ಭಾರಿ ಪೆಟ್ಟು ಬಿದ್ದಿದೆ.[ಕರ್ನಾಟಕದಲ್ಲಿ ಭೀಕರ ಬರಗಾಲ, ಹೇಳುವವರಿಲ್ಲ ಕೇಳುವವರಿಲ್ಲ]
ರೈತರ ಬ್ಯಾರೇಜ್ ಖಾಲಿ : ದೇಶದಲ್ಲೇ ಪ್ರಥಮ ಬಾರಿಗೆ ರೈತರಿಂದ ನಿರ್ಮಾಣವಾದ ಚಿಕ್ಕಪಡಸಲಗಿ ಬ್ಯಾರೇಜ್ 70 ಸಾವಿರ ಎಕರೆ ನೀರಾವರಿ ಪ್ರದೇಶ ಹೊಂದಿದ್ದರಿಂದ, ಕಳೆದ ವರ್ಷ ರೈತರು ವಂತಿಗೆ ಸಂಗ್ರಹಿಸಿ ಬ್ಯಾರೇಜನ್ನು ಎತ್ತರಿಸಿ, ಆಲಮಟ್ಟಿ ಜಲಾಶಯದ ಹಿನ್ನಿರನ್ನು ತುಂಬುವ ಯೋಜನೆ ಮೂಲಕ ಕಳೆದ ಬೇಸಿಗೆಯಲ್ಲಿ ಪರಿಹಾರ ಕಂಡುಕೊಂಡಿದ್ದರು.[ಜಲಾಶಯಗಳ ನೀರು ಕುಡಿಯುವ ನೀರಿಗಾಗಿ ಮಾತ್ರ]
ನದಿ ಒಡಲಲ್ಲಿ ಬಾವಿಗಳು: ನದಿಯ ಒಡಲಿನಲ್ಲಿ ಜೆಸಿಬಿ, ಹಿಟಾಚಿಗಳ ಸಹಾಯದಿಂದ ರೈತರು 30ರಿಂದ 50 ಅಡಿ ಆಳ ಬಾವಿಗಳನ್ನು ತೋಡುತಿದ್ದಾರೆ, ಸಾವಿರಾರೂ ರೂ. ಖರ್ಚು ಮಾಡಿ ಬಾವಿ ತೆಗೆದರೂ ಕುಡಿಯುವುದಕ್ಕೆ ಯೋಗ್ಯವಲ್ಲದ ನೀರು ಸಿಗುತ್ತಿದೆ. ಎಷ್ಟೆಲ್ಲ ರೊಕ್ಕ ಸುರಿದರೂ ಹೊಳೆಯಲ್ಲಿ ಹುಣಸೆಹಣ್ಣು ತೊಳೆದಂತಾಗುತ್ತಿದೆ.
ಬತ್ತಿದ ಕೃಷ್ಣೆ, ಜಮಖಂಡಿಯಲ್ಲಿ ಹನಿ ನೀರಿಗೂ ತತ್ವಾರ!