ಬೆಳೆಹಾನಿ ಪರಿಹಾರ ಬಿಡುಗಡೆ: ಯಾವ ಜಮೀನಿಗೆ ಎಷ್ಟು? ಮಾಹಿತಿ ಇಲ್ಲಿದೆ.
ಬೆಂಗಳೂರು, ಅಕ್ಟೋಬರ್ 08: 2025 ರ ನೈಋತ್ಯ ಮುಂಗಾರು ಅವಧಿಯಲ್ಲಿ ಸೆಪ್ಟೆಂಬರ್ ಮೊದಲ ವಾರದವರೆಗೆ ಸುರಿದ ಭಾರೀ ಮಳೆಯಿಂದಾಗಿ ಕೃಷಿ ಮತ್ತು ತೋಟಗಾರಿಕೆ ಬೆಳೆ ಪ್ರದೇಶಗಳು ಜಲಾವೃತಗೊಂಡು ಸುಮಾರು 5.29 ಲಕ್ಷ ಹೆಕ್ಟೇರ್ ಕೃಷಿ ಮತ್ತು ತೋಟಗಾರಿಕಾ ಬೆಳೆ ನಷ್ಟವಾಯಿತು ಎಂದು ಕಂದಾಯ ಸಚಿವ ಕೃಷ್ಣ ಬೈರೇಗೌಡ ಅವರು ಹೇಳಿದರು.
ಬೆಳೆಹಾನಿ ಜಂಟಿ ಸಮೀಕ್ಷೆ ಹಾಗೂ ಪರಿಹಾರ ವಿವರಗಳ ಕುರಿತ ಪತ್ರಿಕಾ ಪ್ರಕಟಣೆ ಬಿಡುಗಡೆ ಮಾಡಿರುವ ಅವರು, ಬೆಳೆ ಹಾನಿಗೊಂಡ ಜಿಲ್ಲೆಗಳು ಜಂಟಿ ಸಮೀಕ್ಷೆಯು ಪೂರ್ಣಗೊಳಿಸಿ ಬೆಳೆ ಹಾನಿ ಪರಿಹಾರ ಪಾವತಿಗೆ ಸಿದ್ಧವಾಗಿದ್ದವು. ತದನಂತರ ಸೆಪ್ಟೆಂಬರ್ ಮಾಹೆಯ ಅಂತ್ಯದಲ್ಲಿ ಸುರಿದ ಭಾರಿ ಮಳೆ ಹಾಗೂ ಮಹಾರಾಷ್ಟ್ರ ಭಾಗದ ಜಲಾಶಯಗಳಿಂದ ಹೊರ ಹರಿಸಲಾದ ನೀರಿನಿಂದಾಗಿ ಉತ್ತರ ಒಳನಾಡಿನ ಭೀಮಾ ಜಲಾನಯನ ಪ್ರದೇಶ ವ್ಯಾಪ್ತಿಯಲ್ಲಿನ ಪ್ರದೇಶಗಳಲ್ಲಿ ನದಿ ಪ್ರವಾಹ ಉಂಟಾಗಿ ಈ ಭಾಗದ ಜಿಲ್ಲೆಗಳಾದ ಕಲಬುರಗಿ, ಯಾದಗಿರಿ, ಬೀದರ್ ಮತ್ತು ವಿಜಯಪುರ 4 ಜಿಲ್ಲೆಗಳಲ್ಲಿ ಸುಮಾರು 7.24 ಲಕ್ಷ ಹೆಕ್ಟೇರ್ ಬೆಳೆ ನಷ್ಟಕ್ಕೆ ಕಾರಣವಾಯಿತು.

ಕಲಬುರಗಿ, ಯಾದಗಿರಿ, ಬೀದರ್ ಮತ್ತು ವಿಜಯಪುರ ಜಿಲ್ಲೆಗಳು ಬೆಳೆ ಹಾನಿ ಜಂಟಿ ಸಮೀಕ್ಷೆಯನ್ನು ಪುನಃ ಮಾಡ ಬೇಕಾದ ಅಗತ್ಯವಿದ್ದು, ಬೆಳೆ ಹಾನಿ ಪ್ರದೇಶವು ಪರಿಷ್ಕರಣೆಗೊಳ್ಳಲಿದ್ದು, ಜಂಟಿ ಸಮೀಕ್ಷೆಯು ಸುಮಾರು 10 ದಿನಗಳಲ್ಲಿ ಪೂರ್ಣಗೊಳ್ಳಲಿದೆ. ಒಟ್ಟಾರೆಯಾಗಿ, 2025 ನೈಋತ್ಯ ಮುಂಗಾರಿನಲ್ಲಿ ಸುಮಾರು 12.54 ಲಕ್ಷ ಹೆಕ್ಟೇರ್ ಬೆಳೆ ಹಾನಿಯಾಗಿರುವುದು ಕಂಡು ಬಂದಿದೆ.
ಈಗಾಗಲೇ ಬೆಳೆ ಹಾನಿ ಜಂಟಿ ಸಮೀಕ್ಷೆ ಪೂರ್ಣಗೊಳಿಸಲಾದ 9 ಜಿಲ್ಲೆಗಳಲ್ಲಿನ ಸುಮಾರು 5.29 ಲಕ್ಷ ಹೆಕ್ಟೇರ್ ಬೆಳೆಹಾನಿಗೆ ಮೊದಲ ಸುತ್ತಿನ ಬೆಳೆ ಹಾನಿ ಪರಿಹಾರ ಪಾವತಿ ಪ್ರಕ್ರಿಯೆಯನ್ನು ಪ್ರಾರಂಭಿಸಲಾಗಿದೆ. ರಾಜ್ಯ ಸರ್ಕಾರವು ಪ್ರತಿ ಹೆಕ್ಟೇರ್ಗೆ ರೂ.8500/- ಹೆಚ್ಚುವರಿ ಪಾವತಿಯೊಂದಿಗೆ ಮಳೆಯಾಶ್ರಿತ ಬೆಳೆ ಹಾನಿಗೆ ರೂ.17000/-, ನೀರಾವರಿ ಬೆಳೆ ಹಾನಿಗೆ ರೂ.25500/- ಮತ್ತು ದೀರ್ಘಕಾಲಿಕ ಬೆಳೆ ಹಾನಿಗೆ ರೂ.31000/- ಬೆಳೆ ಹಾನಿ ಪರಿಹಾರ ಪಾವತಿಯನ್ನು ಕೆಲವೇ ದಿನಗಳಲ್ಲಿ ರೈತರ ಬ್ಯಾಂಕ್ ಖಾತೆಗಳಿಗೆ ನೇರವಾಗಿ ಜಮಾ ಮಾಡಲಾಗುವುದು ಎಂದು ಕಂದಾಯ ಸಚಿವ ಕೃಷ್ಣಬೈರೇಗೌಡ ಅವರು ಹೇಳಿದ್ದಾರೆ.
ಇತ್ತೀಚೆಗೆ ಹಾನಿಗೊಳಗಾದ ಸುಮಾರು 7.24 ಲಕ್ಷ ಹೆಕ್ಟೇರ್ ಬೆಳೆ ಹಾನಿ ಜಂಟಿ ಸಮೀಕ್ಷೆಯು ಪ್ರಗತಿಯಲ್ಲಿದ್ದು, ಸುಮಾರು 10 ದಿನಗಳಲ್ಲಿ ಬೆಳೆ ಹಾನಿ ಪರಿಹಾರ ಪಾವತಿ ಮಾಡಲಾಗುವುದು. ದೇಶದಲ್ಲೇ, ರಾಜ್ಯ ಸರ್ಕಾರವು ಸಂಪೂರ್ಣ ಪಾರದರ್ಶಕತೆಯೊಂದಿಗೆ ಆಧಾರ್ ಜೋಡಣೆ ಹೊಂದಿದ ರೈತರ ಬ್ಯಾಂಕ್ ಖಾತೆಗಳಿಗೆ ನೇರವಾಗಿ ಅತ್ಯಂತ ತ್ವರಿತ ಪಾವತಿ ವ್ಯವಸ್ಥೆಯೊಂದಿಗೆ ಬೆಳೆ ಹಾನಿ ಪರಿಹಾರ ಪಾವತಿ ಮಾಡಲಾಗುತ್ತಿದೆ. ರಾಜ್ಯದಲ್ಲಿ ಅತಿವೃಷ್ಠಿ ಮತ್ತು ಪ್ರವಾಹ ಪೀಡಿತ ಪ್ರದೇಶದ ರೈತರ ಬೆಳೆ ಹಾನಿ ಪರಿಹಾರ ಪಾವತಿಗಾಗಿ ಸುಮಾರು ರೂ.2000/-ಕೋಟಿ ಪಾವತಿ ಪ್ರಕ್ರಿಯೆಯು ಪ್ರಾರಂಭಿಸಲಾಗಿದ್ದು, ಇನ್ನು 30 ದಿನಗಳಲ್ಲಿ ಪೂರ್ಣಗೊಳ್ಳಲಿದೆ.












Click it and Unblock the Notifications