VIDEO: ಸಿಎಂ ಯಡಿಯೂರಪ್ಪ ನಿವಾಸದಲ್ಲಿ ಸ್ವಾಮೀಜಿಗಳಿಗೆ ಕೊಟ್ಟ ಕವರ್ನಲ್ಲಿ ಏನಿತ್ತು?
ಬೆಂಗಳೂರು, ಜು. 21: ಯಡಿಯೂರಪ್ಪ ಬದಲಾವಣೆ ವಿಚಾರಕ್ಕೆ ಸಂಬಂಧಿಸಿದಂತೆ ಮಠಾಧೀಶರ ಒತ್ತಡ ಹೆಚ್ಚಾಗುತ್ತಿದೆ. ಸಿಎಂ ಅಧಿಕೃತ ನಿವಾಸ ಕಾವೇರಿಯಲ್ಲಿ ಮುಖ್ಯಮಂತ್ರಿಗಳನ್ನು ಭೇಟಿ ಮಾಡಿದ್ದ ಸ್ವಾಮೀಜಿಗಳು, ಯಾವುದೇ ಕಾರಣಕ್ಕೂ ಯಡಿಯೂರಪ್ಪ ಅವರನ್ನು ಬದಲಾವಣೆ ಮಾಡಬಾರದು ಎಂದು ಬಿಜೆಪಿ ಹೈಕಮಾಂಡ್ ಮೇಲೆ ಒತ್ತಡ ಹಾಕಿದ್ದಾರೆ. ಅದೇ ವೇಳೆ ನಡೆದಿರುವ ಅಚ್ಚರಿಯ ಪ್ರಸಂಗವೊಂದು ಇದೀಗ ದೊಡ್ಡ ಮಟ್ಟದ ಚರ್ಚೆಗೂ ಕಾರಣವಾಗಿದೆ.
ನಿನ್ನೆಯಂತೆ ಇವತ್ತೂ ಕೂಡ ಹಲವು ಮಠಾಧೀಶರು ಸಿಎಂ ಯಡಿಯೂರಪ್ಪ ಅವರನ್ನು ಭೇಟಿ ಮಾಡಿ ಬೆಂಬಲ ವ್ಯಕ್ತಪಡಿಸಿದರು. ಮುಖ್ಯಮಂತ್ರಿಗಳ ಅಧಿಕೃತ ನಿವಾಸ ಕಾವೇರಿಯಲ್ಲಿ ಯಡಿಯೂರಪ್ಪ ಅವರನ್ನು ಭೇಟಿ ಮಾಡಿ ಹಲವು ಮಠಾಧೀಶರು ಅಭಯಹಸ್ತ ನೀಡಿದ್ದರು. ಅದೇ ವೇಳೆಯಲ್ಲಿ ಸಿಎಂ ಪುತ್ರ ಬಿ.ವೈ. ವಿಜಯೇಂದ್ರ ಆಪ್ತ ಹಾಗೂ ಕೆಆರ್ಡಿಸಿಎಲ್ ಅಧ್ಯಕ್ಷ ರುದ್ರೇಶ್ ಅವರು ಎಲ್ಲ ಸ್ವಾಮೀಜಿಗಳಿಗೆ ಕವರ್ ಹಂಚಿಕೆ ಮಾಡಿರುವುದು ಕುತೂಹಲಕ್ಕೆ ಕಾರಣವಾಗಿದೆ. ಆ ಕವರ್ನಲ್ಲಿ ಏನಿತ್ತು ಎಂಬ ಚರ್ಚೆ ಆರಂಭವಾಗಿದೆ. ಬಿಜೆಪಿ ಮುಖಂಡ ರುದ್ರೇಶ್ ಅವರು ಸ್ವಾಮೀಜಿಗಳಿಗೆ ಕವರ್ ಹಂಚಿಕೆ ಮಾಡುತ್ತಿರುವ ವಿಡಿಯೋ 'ಒನ್ಇಂಡಿಯಾ ಕನ್ನಡ'ಕ್ಕೆ ಲಭ್ಯವಾಗಿದೆ.

ಸಿಎಂ ಯಡಿಯೂರಪ್ಪ ಅವರು ಸ್ವಾಮೀಜಿಗಳೊಂದಿಗೆ ಮಾತನಾಡುತ್ತಿರುವ ವೇಳೆಯಲ್ಲಿಯೇ ರುದ್ರೇಶ್ ಅವರು ಪ್ರತಿಯೊಬ್ಬ ಸ್ವಾಮೀಜಿಗೂ ಕವರ್ ಹಂಚಿಕೆ ಮಾಡಿದ್ದಾರೆ. ಈ ಪ್ರಸಂಗ ಯಡಿಯೂರಪ್ಪ ಅವರ ಎದುರೇ ನಡೆಯಿತು. ಈ ಬಗ್ಗೆ ಪ್ರತಿಕ್ರಿಯೆ ಪಡೆಯಲು ರುದ್ರೇಶ್ ಅವರನ್ನು ಸಂಪರ್ಕಿಸಲು ಪ್ರಯತ್ನಿಸಲಾಯ್ತು, ಆದರೆ ಅವರು ಸಂಪರ್ಕಕ್ಕೆ ಸಿಗಲಿಲ್ಲ. ತಮ್ಮ ಮನೆಗೆ ಆಗಮಿಸುವ ಸ್ವಾಮೀಜಿಗಳು, ಮಠಾಧೀಶರು ಅಥವಾ ಜಂಗಮರಿಗೆ ದಕ್ಷಿಣೆ ಕೊಡುವ ಸಂಪ್ರದಾಯ ಲಿಂಗಾಯತ ಸಮುದಾಯದಲ್ಲಿದೆ.
ಕಳೆದ ಎರಡು ದಿನಗಳಿಂದ ಯಡಿಯೂರಪ್ಪ ಬದಲಾವಣೆ ಕುರಿತು ಬಹಳಷ್ಟು ಚರ್ಚೆ ನಡೆಯುತ್ತಿದೆ. ಇದೇ ಜುಲೈ 26ಕ್ಕೆ ರಾಜ್ಯ ಬಿಜೆಪಿ ಸರ್ಕಾರ ಎರಡು ವರ್ಷ ಪೂರೈಸಲಿದೆ. ಆದರೆ ಅದೇ ಸಂದರ್ಭದಲ್ಲಿ ಸಿಎಂ ಸ್ಥಾನದಿಂದ ಯಡಿಯೂರಪ್ಪ ಬದಲಾವಣೆ ಮಾಡಲಾಗುತ್ತಿದೆ ಎಂಬ ವಿಚಾರ ಬಿಜೆಪಿಯಲ್ಲಿ ಸಂಚಲನ ಮೂಡಿಸಿದೆ. ಯಡಿಯೂರಪ್ಪ ಅವರ ಬದಲಾವಣೆ ಕುರಿತು ಬಿಜೆಪಿಯಲ್ಲಿಯೇ ಪರ-ವಿರೋಧದ ಚರ್ಚೆಗಳು ನಡೆಯುತ್ತಿವೆ. ಈ ಮಧ್ಯೆ ಇದೇ ವಿಚಾರದಲ್ಲಿ ಚರ್ಚೆಯಲ್ಲಿ ವಿವಿಧ ಮಠಾಧೀಶರು ಎಂಟ್ರಿ ಕೊಟ್ಟಿದ್ದಾರೆ. ಅಷ್ಟೇ ಅಲ್ಲ ಸಿಎಂ ಯಡಿಯೂರಪ್ಪ ಅವರನ್ನು ಭೇಟಿ ಮಾಡಿ ಬೆಂಬಲ ಸೂಚಿಸುತ್ತಿದ್ದಾರೆ. ಬಿಜೆಪಿ ಹೈಕಮಾಂಡ್ ಮೇಲೆ ಒತ್ತಡ ಹಾಕುತ್ತಿದ್ದಾರೆ.












Click it and Unblock the Notifications