IAS transfer; KPSC ಕಾರ್ಯದರ್ಶಿ ಲತಾ ಕುಮಾರಿ ವರ್ಗಾವಣೆ
ಬೆಂಗಳೂರು, ಮಾರ್ಚ್ 05: ಮಹತ್ವದ ಬೆಳವಣಿಗೆಯೊಂದರಲ್ಲಿ ಕರ್ನಾಟಕ ಸರ್ಕಾರ ಕೆಪಿಎಸ್ಸಿ ಕಾರ್ಯದರ್ಶಿ, ಐಎಎಸ್ ಅಧಿಕಾರಿ ಕೆ. ಎಸ್. ಲತಾ ಕುಮಾರಿ ವರ್ಗಾವಣೆ ಮಾಡಿದೆ. ಈ ಹಿಂದೆ ಅವರಿಗೆ 10 ದಿನಗಳ ಗಳಿಕೆ ರಜೆಯನ್ನು ಮಂಜೂರು ಮಾಡಿ ಸರ್ಕಾರ ಆದೇಶ ಹೊರಡಿಸಿತ್ತು.
ಮಂಗಳವಾರ ಕರ್ನಾಟಕ ಸರ್ಕಾರ ಕರ್ನಾಟಕ ಲೋಕಸೇವಾ ಆಯೋಗ (ಕೆಪಿಎಸ್ಸಿ)ಯ ಕಾರ್ಯದರ್ಶಿ, ಕೆ. ಎಸ್. ಲತಾ ಕುಮಾರಿ ಅವರನ್ನು ತಕ್ಷಣದಿಂದ ಮತ್ತು ಮುಂದಿನ ಆದೇಶದ ತನಕ ವರ್ಗಾವಣೆಗೊಳಿಸಿ ಆದೇಶಿಸಿದೆ.

ಡಾ. ರಾಕೇಶ್ ಕುಮಾರ್ ಕೆ. (ಕೆಎನ್; 2012) ಆಯುಕ್ತರು ಸಮಾಜ ಕಲ್ಯಾಣ ಇಲಾಖೆ, ಬೆಂಗಳೂರು ಇವರನ್ನು ಕಾರ್ಯದರ್ಶಿ, ಕರ್ನಾಟಕ ಲೋಕಸೇವಾ ಆಯೋಗ, ಬೆಂಗಳೂರು ಹುದ್ದೆಯ ಹೆಚ್ಚುವರಿ ಹೊಣೆ ನೀಡಲಾಗಿದೆ.
ಕೆ. ಎಸ್. ಲತಾ ಕುಮಾರಿ ಅವರನ್ನು ಕಾರ್ಯಕಾರಿ ನಿರ್ದೇಶಕರು, ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆಗಳ ಸಂಘ, ಬೆಂಗಳೂರು ಹುದ್ದೆಗೆ ವರ್ಗಾವಣೆ ಮಾಡಲಾಗಿದೆ.
10 ದಿನಗಳ ಕಾಲ ಕೆ. ಎಸ್. ಲತಾ ಕುಮಾರಿ ಅವರಿಗೆ ಗಳಿಕೆ ರಜೆ ನೀಡಿದ್ದಾಗಲೇ ಭಾರೀ ವಿರೋಧ ವ್ಯಕ್ತವಾಗಿತ್ತು. ಕೆಪಿಎಸ್ಸಿಯಲ್ಲಿ ಎಲ್ಲವೂ ಸರಿ ಇಲ್ಲವೇ? ಎಂಬ ಪ್ರಶ್ನೆ ಮೂಡಿತ್ತು. ಅಧ್ಯಕ್ಷರು ಸದಸ್ಯರ ಜಟಾಪಟಿ ಕಾರಣಕ್ಕೆ ಕಾರ್ಯದರ್ಶಿಗೆ ರಜೆ ನೀಡಲಾಗಿದೆ ಎಂಬ ಮಾತು ಕೇಳಿ ಬಂದಿತ್ತು.
ಫೆಬ್ರವರಿ 8ರಂದು ಕೆ. ಎಸ್. ಲತಾ ಕುಮಾರಿ ಅವರಿಗೆ ರಜೆ ನೀಡಿದ್ದ ಸರ್ಕಾರ ಕೆಪಿಎಸ್ಸಿ ಕಾರ್ಯದರ್ಶಿಯಾಗಿ ಸಮಾಜ ಕಲ್ಯಾಣ ಇಲಾಖೆ ಆಯುಕ್ತರಾದ ಡಾ. ರಾಕೇಶ್ ಕುಮಾರ್ ಕೆ. ಪ್ರಭಾರಿಯಾಗಿ ಇರಲಿದ್ದಾರೆ ಎಂದು ಆದೇಶದಲ್ಲಿ ತಿಳಿಸಿತ್ತು. ಈಗ ರಾಕೇಶ್ ಕುಮಾರ್ ಕೆ. ಅವರಿಗೆ ಕೆಪಿಎಸ್ಸಿ ಕಾರ್ಯದರ್ಶಿಯ ಹೆಚ್ಚುವರಿ ಹೊಣೆ ನೀಡಲಾಗಿದೆ.
ಕರ್ನಾಟಕ ಸರ್ಕಾರ 2023ರ ಸೆಪ್ಟೆಂಬರ್ನಲ್ಲಿ ಕೆಪಿಎಸ್ಸಿ ಕಾರ್ಯದರ್ಶಿ ಹುದ್ದೆಯಲ್ಲಿದ್ದ ಸುರಳ್ಕರ್ ವಿಕಾಸ್ ಕಿಶೋರ್ ಅವರನ್ನು ಬಿಬಿಎಂಪಿ ರಾಜರಾಜೇಶ್ವರಿನಗರ ವಲಯ ಆಯುಕ್ತರ ಹುದ್ದೆಗೆ ವರ್ಗಾವಣೆ ಮಾಡಿತ್ತು. ಬಳಿಕ ಕೆಪಿಎಸ್ಸಿ ಕಾರ್ಯದರ್ಶಿಯಾಗಿ ಕೆ. ಎಸ್. ಲತಾ ಕುಮಾರಿ ನೇಮಕ ಮಾಡಿತ್ತು. ಕೆಪಿಎಸ್ಸಿ ಅಭ್ಯರ್ಥಿಗಳ ಪರವಾಗಿ ಹಲವಾರು ನಿರ್ಧಾರಗಳನ್ನು ಕೈಗೊಂಡಿದ್ದ ಲತಾ ಕುಮಾರಿ ಅಧ್ಯಕ್ಷರ ಜೊತೆ ವಿವಿಧ ವಿಚಾರಕ್ಕೆ ಜಟಾಪಟಿ ನಡೆಸಿದ್ದರು.
ಜಟಾಪಟಿ ಜೋರಾದ ಬಳಿಕ ಕಾನೂನು ನಿಯಮಗಳಡಿ ಕೆಪಿಎಸ್ಸಿ ಮತ್ತು ಕಾರ್ಯದರ್ಶಿಗೆ ಇರುವ ಅಧಿಕಾರಗಳ ಬಗ್ಗೆ ಕಾನೂನು ಸಲಹೆ ನೀಡುವಂತೆ ಕೆಪಿಎಸ್ಸಿ ಅಧ್ಯಕ್ಷ ಶಿವಶಂಕರಪ್ಪ ಎಸ್. ಸಾಹುಕಾರ್ ಕಾನೂನು ಆಯೋಗಕ್ಕೆ ಪತ್ರವನ್ನು ಸಹ ಬರೆದಿದ್ದರು. ಈ ಪತ್ರ ಬಹಿರಂಗಗೊಂಡ ಕೆಲವು ದಿನಗಳ ಬಳಿಕ ಲತಾ ಕುಮಾರಿ ಅವರನ್ನು ರಜೆಯ ಮೇಲೆ ಕಳಿಸಲಾಗಿತ್ತು.
ಕೆಪಿಎಸ್ಸಿ ಅಭ್ಯರ್ಥಿಗಳು ಲತಾ ಕುಮಾರಿ ಅವರನ್ನು ರಜೆಯ ಮೇಲೆ ಕಳಿಸಿದ್ದನ್ನು ವಿರೋಧಿಸಿ ಬೆಂಗಳೂರಿನಲ್ಲಿ ಪ್ರತಿಭಟನೆ ನಡೆಸಿದ್ದರು. ಆದರೆ ಈಗ ಅವರನ್ನು ಸರ್ಕಾರ ವರ್ಗಾವಣೆ ಮಾಡುವ ಮೂಲಕ ಕೆಪಿಎಸ್ಸಿಯ ಜಟಾಪಟಿಯನ್ನು ಬಯಲು ಮಾಡಿದೆ.
ಕೆಪಿಎಸ್ಸಿ ಅಧ್ಯಕ್ಷ ಶಿವಶಂಕರಪ್ಪ ಎಸ್. ಸಾಹುಕಾರ್ ಮತ್ತು ಲತಾ ಕುಮಾರಿ ನಡುವೆ ಕೆಪಿಎಸ್ಸಿಯ ಕಾನೂನು ಕೋಶದ ಮುಖ್ಯಸ್ಥರ ಹುದ್ದೆಯ ನೇಮಕಾತಿ ಪ್ರಕ್ರಿಯೆ ವಿಚಾರದಲ್ಲಿ ಜಟಾಪಟಿ ಆರಂಭವಾಗಿತ್ತು. ನೇಮಕಾತಿ ಪ್ರಕ್ರಿಯೆ ಪೂರ್ಣಗೊಂಡಿದ್ದರೂ ಸಹ ಹೊಸ ಅಧಿಸೂಚನೆಯನ್ನು ಅನುಮತಿ ಇಲ್ಲದೇ ಆಯೋಗದ ಹೆಸರಿನಲ್ಲಿ ಜಾರಿಗೊಳಿಸಲಾಗಿದೆ ಎಂಬುದು ಆರೋಪಿಸಲಾಗಿತ್ತು.












Click it and Unblock the Notifications