ಕೆಪಿಎಸ್ಸಿ ಹಗರಣ : ಎಲ್ಲಾ ಸದಸ್ಯರ ವಿರುದ್ಧ ತನಿಖೆ
ಬೆಂಗಳೂರು, ಆ.12 : ಕೆಪಿಎಸ್ಸಿ ನೇಮಕಾತಿ ರದ್ದುಗೊಳಿಸಿರುವುದು ಸರ್ಕಾರ ತೆಗೆದುಕೊಂಡ ದ್ವೇಷದ ನಿರ್ಧಾರವಲ್ಲ ಎಂದು ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಟಿ.ಬಿ.ಜಯಚಂದ್ರ ಸ್ಟಷ್ಟಪಡಿಸಿದ್ದಾರೆ. 2011ರ ನೇಮಕಾತಿ ಸಂದರ್ಭದಲ್ಲಿ ಕೆಪಿಎಸ್ಸಿ ಸದಸ್ಯರಾಗಿದ್ದ ಎಲ್ಲರ ವಿರುದ್ಧವೂ ತನಿಖೆ ನಡೆಸಲು ಚಿಂತನೆ ನಡೆಸಲಾಗುತ್ತಿದೆ ಎಂದು ಅವರು ಹೇಳಿದ್ದಾರೆ.
ಮಂಗಳವಾರ ವಿಧಾನಸೌಧದಲ್ಲಿ ಪತ್ರಿಕಾಗೋಷ್ಠಿ ನಡೆಸಿದ ಟಿ.ಬಿ.ಜಯಚಂದ್ರ ಅವರು, ಸಿಐಡಿ ವರದಿ ಆಧರಿಸಿ 2011ರ 362 ಅಭ್ಯರ್ಥಿಗಳ ನೇಮಕಾತಿಯನ್ನು ರದ್ದುಪಡಿಸಲಾಗಿದೆ. ಯಾವುದೇ ಅಭ್ಯರ್ಥಿಗಳಿಗೆ ಅನ್ಯಾಯ ಮಾಡುವ ದ್ವೇಷದ ನಿರ್ಧಾರ ಇದಾಗಿರಲಿಲ್ಲ ಎಂದು ತಿಳಿಸಿದರು.
ಕೆಪಿಎಸ್ಸಿ ಅಕ್ರಮದ ಬಗ್ಗೆ ಮಾತನಾಡಿದ ಅವರು, 2011ರಲ್ಲಿ ಕೆಪಿಎಸ್ಸಿ ಸದಸ್ಯರಾಗಿದ್ದ ಮಂಗಳಾ ಶ್ರೀಧರ್ ಅವರನ್ನು ಅಕ್ರಮದ ಕುರಿತು ವಿಚಾರಣೆ ನಡೆಸಲಾಗಿದೆ ಮತ್ತು ಅಮಾನತು ಮಾಡಲಾಗಿದೆ. ಈ ಅವಧಿಯಲ್ಲಿ ಸಮಿತಿಯ ಸದಸ್ಯರಾಗಿದ್ದ ಉಳಿದವರ ವಿರುದ್ಧವೂ ತನಿಖೆ ನಡೆಸಲು ಸರ್ಕಾರ ಚಿಂತನೆ ನಡೆಸುತ್ತಿದೆ ಎಂದು ಹೇಳಿದರು. [ಕೆಪಿಎಸ್ಸಿ ನೇಮಕಾತಿ ರದ್ದು, ಸಿಡಿದೆದ್ದ ಅಭ್ಯರ್ಥಿಗಳು]
ಹಣ, ಜಾತಿ ಮುಂತಾದವುಗಳಿಂದಾಗಿ 2011ರ ಕೆಪಿಎಸ್ಸಿ ನೇಮಕಾತಿಯಲ್ಲಿ ಅಕ್ರಮ ನಡೆದಿದೆ. ಈ ಬಗ್ಗೆ ಸಿಐಡಿ ತನಿಖೆ ನಡೆಸಿದಾಗ ಅಕ್ರಮ ನಡೆದಿರುವುದು ನಿಜ ಎಂದು ವರದಿ ನೀಡಿತ್ತು. ಇದರ ಅನ್ವಯ ಸರ್ಕಾರ ನೇಮಕಾತಿ ರದ್ದುಗೊಳಿಸುವ ಕ್ರಮಕೈಗೊಂಡಿತು ಎಂದು ಸರ್ಕಾರದ ನಿರ್ಧಾರವನ್ನು ಸಚಿವರು ಸಮರ್ಥಿಸಿಕೊಂಡರು.
ಯಾರು ಸದಸ್ಯರಾಗಿದ್ದರು : ರಾಜ್ಯದಲ್ಲಿ ಭಾರೀ ವಿವಾದ ಹುಟ್ಟುಹಾಕಿರುವ 2011ನೇ ಸಾಲಿನ 362 ಗೆಜೆಟೆಡ್ ಪ್ರೊಬೆಷನರಿ ಹುದ್ದೆಗಳ ನೇಮಕಾತಿ ಸಂದರ್ಭದಲ್ಲಿ ಎನ್.ರಾಮಕೃಷ್ಣ, ಬಿ.ಎಸ್.ಕೃಷ್ಣ ಪ್ರಸಾದ್, ಎಂ.ಮಹದೇವ್, ಎಚ್.ಡಿ.ಪಾಟೀಲ್, ಎಸ್.ಆರ್. ರಂಗಮೂರ್ತಿ, ಎಸ್.ದಯಾಶಂಕರ್, ಡಿ.ಪಿ.ಕನ್ನೀರಾಮ್, ಎಚ್.ವಿ.ಪಾರ್ಶ್ವನಾಥ್ ಹಾಗೂ ಮಂಗಳಾ ಶ್ರೀಧರ್ ಅವರು ಆಯೋಗದ ಸದಸ್ಯರಾಗಿದ್ದರು.
ಕೆಪಿಎಸ್ಸಿ ನೇಮಕಾತಿ ಅಕ್ರಮ ಬೆಳಕಿಗೆ ಬಂದ ನಂತರ ಮಂಗಳಾ ಶ್ರೀಧರ್ ಅವರ ವಿರುದ್ಧ ಮಾತ್ರ ತನಿಖೆ ನಡೆಸಲಾಗಿದೆ. ಆದರೆ, ಇನ್ನುಳಿದ ಸದಸ್ಯರ ಬಗ್ಗೆ ಯಾವುದೇ ತನಿಖೆ ನಡೆಸಿಲ್ಲ. [ಕೆಪಿಎಸ್ಸಿ ನೇಮಕಾತಿ : ಸರ್ಕಾರಕ್ಕೆ ಎಚ್ಡಿಕೆ 12 ಪ್ರಶ್ನೆಗಳು]
ಕೆಪಿಎಸ್ಸಿ ನೇಮಕಾತಿ ರದ್ದುಪಡಿಸಿರುವ ಸರ್ಕಾರದ ಕ್ರಮವನ್ನು ವಿರೋಧಿಸಿ ಪ್ರತಿಭಟನೆ ಮಾಡುತ್ತಿರುವ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ, ಉಳಿದ ಸದಸ್ಯರ ವಿರುದ್ಧ ಏಕೆ ತನಿಖೆ ನಡೆಸಿಲ್ಲ? ಎಂದು ಸರ್ಕಾರವನ್ನು ಪ್ರಶ್ನಿಸಿದ್ದರು.