KPSC: ಆ. 27ರಂದು ಕೆಎಎಸ್ ಪೂರ್ವಭಾವಿ ಪರೀಕ್ಷೆ, ಬಸ್ ಮತ್ತು ರೈಲಿಗಾಗಿ ಬೇಡಿಕೆ
ಬೆಂಗಳೂರು, ಆಗಸ್ಟ್ 21: ಕರ್ನಾಟಕ ಲೋಕಸೇವಾ ಆಯೋಗ (ಕೆಪಿಎಸ್ಸಿ) ಕೆಎಎಸ್ ನೇಮಕಾತಿ ಪೂರ್ವಭಾವಿ ಪರೀಕ್ಷೆಯನ್ನು ಆಗಸ್ಟ್ 27ರ ಮಂಗಳವಾರ ನಡೆಸಲಿದೆ. 384 ಗೆಜೆಟೆಡ್ ಪ್ರೊಬೇಷನರ್ಸ್ ಹುದ್ದೆಗಳ ಪೂರ್ವಭಾವಿ ಪರೀಕ್ಷೆಯನ್ನು ಸುಮಾರು 2,10,910 ಅಭ್ಯರ್ಥಿಗಳು ಬರೆಯಲಿದ್ದಾರೆ. ಆದ್ದರಿಂದ ಅಂದು ಹೆಚ್ಚುವರಿ ಬಸ್, ವಿಶೇಷ ರೈಲುಗಳ ವ್ಯವಸ್ಥೆ ಮಾಡಬೇಕು ಎಂದು ಸಾಮಾಜಿಕ ಜಾಲತಾಣದಲ್ಲಿ ಬೇಡಿಕೆ ಇಡಲಾಗುತ್ತಿದೆ.
384 ಗೆಜೆಟೆಡ್ ಪ್ರೊಬೇಷನರ್ಸ್ ಹುದ್ದೆ ನೇಮಕಾತಿ ಪೂರ್ವಭಾವಿ ಪರೀಕ್ಷೆ ವೇಳಾಪಟ್ಟಿ ಈಗಾಗಲೇ ಪ್ರಕಟವಾಗಿದೆ. ಆಗಸ್ಟ್ 27ರಂದು ಪರೀಕ್ಷೆ ನಡೆಸಲು ಎಲ್ಲಾ ತಯಾರಿ ಪೂರ್ಣಗೊಂಡಿದೆ. ಈಗಾಗಲೇ ಅಭ್ಯರ್ಥಿಗಳು ಕೆಪಿಎಸ್ಸಿ ವೆಬ್ಸೈಟ್ ಮೂಲಕ ಹಾಲ್ ಟಿಕೆಟ್ ಡೌನ್ಲೋಡ್ ಮಾಡಿಕೊಳ್ಳುತ್ತಿದ್ದಾರೆ. ಅಭ್ಯರ್ಥಿಗಳು ವಿವಿಧ ಜಿಲ್ಲೆಗಳಿಗೆ ತೆರಳಿ ಪರೀಕ್ಷೆ ಬರೆಯಬೇಕಿದೆ.

ಬೆಂಗಳೂರು ನಗರದ ಚಂದ್ರಾ ಲೇಔಟ್, ವಿಜಯನಗರ ಸುತ್ತಮುತ್ತಲಿನ ಅಭ್ಯರ್ಥಿಗಳಿಗೆ ಚಿಕ್ಕಬಳ್ಳಾಪುರದ ಪರೀಕ್ಷಾ ಕೇಂದ್ರ ನಿಗದಿಯಾಗಿದೆ. ಆದ್ದರಿಂದ ಅಭ್ಯರ್ಥಿಗಳು ಬೇರೆ ಜಿಲ್ಲೆಗೆ ಸಂಚಾರ ನಡೆಸುವುದು ಅನಿವಾರ್ಯ, ಆಗಸ್ಟ್ 27ರ ಬೆಳಗ್ಗೆ 10 ಗಂಟೆಗೆ ಪರೀಕ್ಷೆ ಆರಂಭವಾಗಲಿದ್ದು, ವಿಶೇಷ ಬಸ್ ಸೌಲಭ್ಯವನ್ನು ಮಾಡಬೇಕು ಎಂದು ಬೇಡಿಕೆ ಇಡಲಾಗಿದೆ.
ಉತ್ತರ ಕರ್ನಾಟಕ ಭಾಗದ ಅನೇಕ ಅಭ್ಯರ್ಥಿಗಳು ಸಹ ಪರೀಕ್ಷೆ ಬರೆಯಲು ಅನುಕೂಲವಾಗುವಂತೆ ವಿಶೇಷ ರೈಲು ಓಡಿಸಬೇಕು ಎಂದು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಹಾಕುತ್ತಿದ್ದಾರೆ. ಅಲ್ಲದೇ ಈ ಕುರಿತು ಗಮನ ಹರಿಸಬೇಕು ಎಂದು ತುಮಕೂರು ಸಂಸದ, ರೈಲ್ವೆ ಖಾತೆ ರಾಜ್ಯ ಸಚಿವ ವಿ. ಸೋಮಣ್ಣರನ್ನು ಟ್ಯಾಗ್ ಮಾಡಿ ಒತ್ತಾಯಿಸುತ್ತಿದ್ದಾರೆ.
ವಿಜಯಪುರ ನಗರ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಸಹ ಈ ವಿಚಾರದ ಕುರಿತು ಟ್ವೀಟ್ ಮಾಡಿದ್ದು, 'ಪರೀಕ್ಷಾ ಕೇಂದ್ರಗಳನ್ನು ಪರೀಕ್ಷಾರ್ಥಿಗಳು ಇರುವ ಜಿಲ್ಲೆಯಿಂದ ಬೇರೆ ಜಿಲ್ಲೆಗೆ ಹಾಕಿದ್ದಾರೆ. ಮೈಸೂರಿನಲ್ಲಿರುವವರಿಗೆ - ಶಿವಮೊಗ್ಗ, ಚಿತ್ರದುರ್ಗದಲ್ಲಿರುವವರಿಗೆ ಮಂಗಳೂರು ಹೀಗೆ ಅವೈಜ್ಞಾನಿಕವಾಗಿ ಸ್ಥಳ ನಿಗದಿ ಮಾಡಿದ್ದಾರೆ. ಪರೀಕ್ಷಾರ್ಥಿಗಳು ಕೇಂದ್ರಕ್ಕೆ ತೆರಳಲು ರಾತ್ರಿ ಪ್ರಯಾಣ ಮಾಡಬೇಕು ಹಾಗೂ ದೂರದೂರುಗಳಿಗೆ ಹೋಗಲು ಅನವಶ್ಯಕ ಖರ್ಚು ವೆಚ್ಚ ಮಾಡಿಕೊಳ್ಳಬೇಕು' ಎಂದು ಗಮನ ಸೆಳೆದಿದ್ದಾರೆ.
ಪರೀಕ್ಷೆ ದಿನಾಂಕ ಬದಲಾಯಿಸಿ: ಮತ್ತೊಂದು ಕಡೆ ಆಗಸ್ಟ್ 27ರ ಮಂಗಳವಾರ ಪರೀಕ್ಷೆ ನಡೆಸುವ ಕುರಿತು ಮಂಡ್ಯ ಸಂಸದ, ಕೇಂದ್ರ ಸಚಿವ ಎಚ್. ಡಿ. ಕುಮಾರಸ್ವಾಮಿ ಪ್ರಶ್ನೆ ಎತ್ತಿದ್ದಾರೆ. ಹಲವು ಅಭ್ಯರ್ಥಿಗಳಿಗೆ ಪರೀಕ್ಷೆ ಬರೆಯಲು ಸಾಧ್ಯವಾಗದೇ ಕಣ್ಣೀರು ಹಾಕುತ್ತಿದ್ದಾರೆ. ಪರೀಕ್ಷೆ ದಿನಾಂಕವನ್ನು ಮುಂದೂಡಿ ಎಂದು ಮನವಿ ಮಾಡುತ್ತಿದ್ದಾರೆ. ತರಾತುರಿಯಲ್ಲಿ ಪರೀಕ್ಷೆ ನಡೆಸುತ್ತಿರುವುದು ಏಕೆ? ಎಂದು ಅವರು ಸರ್ಕಾರವನ್ನು ಪ್ರಶ್ನಿಸಿದ್ದಾರೆ.
ಸದ್ಯದ ಮಾಹಿತಿಯಂತೆ ಕೆಪಿಎಸ್ಸಿ ಆಗಸ್ಟ್ 27ರ ಮಂಗಳವಾರ ಎರಡು ಪತ್ರಿಕೆಗಳ ಪರೀಕ್ಷೆಗಳನ್ನು ಒಂದೇ ದಿನ ನಡೆಸಲಿದೆ. ಈಗಾಗಲೇ ಪರೀಕ್ಷೆಗಳಿಗೆ ತಯಾರಿ ನಡೆದಿದೆ. ಪರೀಕ್ಷೆ ಬರೆಯುವ ಸರ್ಕಾರಿ ನೌಕರರಿಗೆ ಅನುಕೂಲವಾಗುವಂತೆ ವಿಶೇಷ ಸಾಂದರ್ಭಿಕ ರಜೆ ನೀಡಲಾಗಿದೆ. ಅಂದು ಬೆಳಗ್ಗೆ 10 ರಿಂದ 12 ಗಂಟೆಯ ತನಕ ಪತ್ರಿಕೆ-1, ಮಧ್ಯಾಹ್ನ 2 ರಿಂದ 4 ಗಂಟೆಯ ತನಕ ಪತ್ರಿಕೆ-2ರ ಪರೀಕ್ಷೆಗಳು ನಿಗದಿಯಾಗಿದೆ.
ಗೆಜೆಟೆಡ್ ಪ್ರೊಬೇಷನರಿ ಹುದ್ದೆಗಳ ಪೂರ್ವಭಾವಿ ಪರೀಕ್ಷೆ ಆಗಸ್ಟ್ 25ರ ಭಾನುವಾರ ನಿಗದಿಯಾಗಿತ್ತು. ಆದರೆ ಅಂದು ಐಪಿಬಿಎಸ್ ಪರೀಕ್ಷೆಗಳು ಇರುವ ಕಾರಣ ಪರೀಕ್ಷಾ ದಿನಾಂಕವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಸೂಚನೆಯಂತೆ ಆಗಸ್ಟ್ 27ಕ್ಕೆ ಬದಲಾವಣೆ ಮಾಡಲಾಗಿತ್ತು. ಈಗ ಮತ್ತೆ ಪರೀಕ್ಷೆ ದಿನಾಂಕ ಬದಲಾವಣೆ ಕುರಿತು ಕೆಪಿಎಸ್ಸಿ ಯಾವುದೇ ತೀರ್ಮಾನ ಕೈಗೊಂಡಿಲ್ಲ.












Click it and Unblock the Notifications