ಕೇಂದ್ರದಿಂದ 'ಕೆಪಿಸಿಎಲ್'ಗೆ ಹರಿದು ಬರಲಿದೆ 39,000 ಕೋಟಿ
ಕರ್ನಾಟಕ ವಿದ್ಯುತ್ ಶಕ್ತಿ ನಿಗಮ ಮತ್ತು ಬೆಸ್ಕಾಂಗೆ ಮುಂದಿನ 5 ವರ್ಷಗಳಲ್ಲಿ 39,121 ಕೋಟಿ ರೂಪಾಯಿ ಹರಿದು ಬರಲಿದೆ. ಕೇಂದ್ರ ಸರಕಾರದ ಗ್ರಾಮೀಣ ವಿದ್ಯುದ್ಧೀಕರಣ ನಿಗಮ ರಾಜ್ಯದ ಸಂಸ್ಥೆಗಳ ಜತೆ ಈ ಕುರಿತು ಒಪ್ಪಂದ ಮಾಡಿಕೊಂಡಿದೆ.
ಬೆಂಗಳೂರು, ಫೆಬ್ರವರಿ 6: ಕರ್ನಾಟಕ ವಿದ್ಯುತ್ ಶಕ್ತಿ ನಿಗಮ (ಕೆಪಿಸಿಎಲ್) ಮತ್ತು ಬೆಸ್ಕಾಂಗೆ (ಬೆಂಗಳೂರು ವಿದ್ಯುತ್ ಸರಬರಾಜು ಕಂಪೆನಿ ನಿ.) ಮುಂದಿನ 5 ವರ್ಷಗಳಲ್ಲಿ 39,121 ಕೋಟಿ ರೂಪಾಯಿ ಹರಿದು ಬರಲಿದೆ. ಕೇಂದ್ರ ಸರಕಾರದ ಗ್ರಾಮೀಣ ವಿದ್ಯುದ್ಧೀಕರಣ ನಿಗಮ (ಆರ್.ಇ.ಸಿ) ರಾಜ್ಯದ ಸಂಸ್ಥೆಗಳ ಜತೆ ಈ ಕುರಿತು ಒಪ್ಪಂದ ಮಾಡಿಕೊಂಡಿದ್ದು ದೊಡ್ಡ ಮೊತ್ತದ ಹಣದ ನೆರವು ನೀಡಲಿದೆ.
ಫೆಬ್ರವರಿ 3ರಂದು ಕೆಪಿಸಿಎಲ್ ಮತ್ತು ಬೆಸ್ಕಾಂ ಜತೆ ಮುಖ್ಯಮಂತ್ರಿ ಸಿದ್ಧರಾಮಯ್ಯ ಮತ್ತು ಇಂಧನ ಮಂತ್ರಿ ಡಿ.ಕೆ ಶಿವಕುಮಾರ್ ಉಪಸ್ಥಿತಿಯಲ್ಲಿ ಆರ್.ಇ.ಸಿ ಒಪ್ಪಂದ ಮಾಡಿಕೊಂಡಿದೆ.[ಮಂಗಳೂರಿನ ಕಚ್ಚಾ ತೈಲ ಸಂಗ್ರಹಾಗಾರಕ್ಕೆ ಯುಎಇ ಇಂಧನ]
ಕೆಪಿಸಿಎಲ್ ಒಟ್ಟು 27,121 ಕೋಟಿ ರೂಪಾಯಿ ನೆರವು ಪಡೆದುಕೊಳ್ಳಲಿದ್ದು ನಿಗಮದ ಸಾಲ ಸಂದಾಯ, ಭವಿಷ್ಯದ ಯೋಜನೆಗಳಿಗೆ ಬಳಸಿಕೊಳ್ಳಬಹುದಾಗಿದೆ. ಇದೇ ರೀತಿ ಬೆಸ್ಕಾಂ 12,000 ಕೋಟಿ ರೂಪಾಯಿ ಪಡೆದುಕೊಳ್ಳಲಿದೆ. ಈ ಹಣವನ್ನು ಹೊಸ ವಿದ್ಯುತ್ ಉತ್ಪಾದನೆ ಯೋಜನೆಗಳು, ಸರಬರಾಜು ವ್ಯವಸ್ಥೆಯ ವಿಸ್ತರಣೆ ಮತ್ತು ನವೀಕರಣ, ವಿದ್ಯುತ್ ವರ್ಗಾವಣೆ ವ್ಯವಸ್ಥೆಗಳ ಸುಧಾರಣೆ, ವಿದ್ಯುತ್ ಮೇಲಿನ ಸಂಶೋಧನೆ ಮತ್ತು ಅಭಿವೃದ್ದಿಗೆ ಬಳಸಿಕೊಳ್ಳಬಹುದಾಗಿದೆ.[ತಮಿಳುನಾಡು ಅಣು ಸ್ಥಾವರರಿಂದ ಕರ್ನಾಟಕಕ್ಕೆ 221 ಮೆ. ವ್ಯಾ ವಿದ್ಯುತ್!]
ಧನ ಸಹಾಯವೂ ಅಲ್ಲದೇ ಆರ್.ಇ.ಸಿ ರಾಜ್ಯ ಸಂಸ್ಥೆಗಳ ಯೋಜನೆಗಳಿಗೆ ಸಲಹೆ ಸೂಚನೆಗಳನ್ನೂ ನೀಡಲಿದೆ. ಈ ದೊಡ್ಡ ಮೊತ್ತದ ಸಹಾಯ ಕರ್ನಾಟಕ ಇಂಧನ ಕೊರತೆ ನೀಗಿಸುವಲ್ಲಿ ಮಹತ್ವದ ಪಾತ್ರ ವಹಿಸುವ ಸಾಧ್ಯತೆ ಇದೆ.