ಸಿಎಂ ಕೂರಲು, ಏಳಲು ಸಹ ದೆಹಲಿಗೆ ಹೋಗಿ ಪರ್ಮಿಶನ್ ಪಡೆದು ಬರಬೇಕು!
ಬೆಂಗಳೂರು, ಜೂನ್ 24; ಕರ್ನಾಟಕದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನವದೆಹಲಿ ಪ್ರವಾಸದಲ್ಲಿದ್ದಾರೆ. 2021ರ ಜುಲೈ 28ರಂದು ಮುಖ್ಯಮಂತ್ರಿಯಾಗಿ ಅಧಿಕಾರವಹಿಸಿಕೊಂಡ ಬಳಿಕ 11ನೇ ಬಾರಿ ಅವರು ದೆಹಲಿಗೆ ತೆರಳಿದ್ದಾರೆ.
ಪ್ರತಿಪಕ್ಷ ಕಾಂಗ್ರೆಸ್ ಬಸವರಾಜ ಬೊಮ್ಮಾಯಿ ನವದೆಹಲಿ ಭೇಟಿ ಬಗ್ಗೆ ಟ್ವೀಟ್ ಮಾಡಿದೆ. "ಸಿಎಂ ಕೂರಲು, ಏಳಲು, ಮಲಗಲೂ ಸಹ ದೆಹಲಿಗೆ ಹೋಗಿ ಪರ್ಮಿಶನ್ ಪಡೆದು ಬರಬೇಕು ಎನಿಸುತ್ತದೆ!" ಎಂದು ಟೀಕಿಸಿದೆ.
ಗುರುವಾರ ಬಸವರಾಜ ಬೊಮ್ಮಾಯಿ ದೆಹಲಿಗೆ ಭೇಟಿ ನೀಡಿದ್ದಾರೆ. ಕೇಂದ್ರ ಸಚಿವ, ಧಾರವಾಡ ಸಂಸದ ಪ್ರಹ್ಲಾದ್ ಜೋಶಿಯನ್ನು ಅವರು ಭೇಟಿಯಾಗಿದ್ದರು. ಶುಕ್ರವಾರ ಸಂಜೆ ಮುಖ್ಯಮಂತ್ರಿಗಳು ಬೆಂಗಳೂರಿಗೆ ವಾಪಸ್ ಆಗಲಿದ್ದಾರೆ.
ರಾಷ್ಟ್ರಪತಿ ಚುನಾವಣೆ ಹಿನ್ನಲೆಯಲ್ಲಿ ಬಸವರಾಜ ಬೊಮ್ಮಾಯಿ ಮಾತ್ರವಲ್ಲ ಬಿಜೆಪಿ ಆಡಳಿತ ಇರುವ ಎಲ್ಲಾ ರಾಜ್ಯಗಳ ಮುಖ್ಯಮಂತ್ರಿಗಳು ದೆಹಲಿಗೆ ತೆರಳಿದ್ದಾರೆ. ಎನ್ಡಿಎ ಅಭ್ಯರ್ಥಿ ದ್ರೌಪದಿ ಮುರ್ಮ ಅವರ ನಾಮಪತ್ರಕ್ಕೆ ಸೂಚಕರಾಗಿ ಸಹಿ ಹಾಕಲು ಮುಖ್ಯಮಂತ್ರಿಗಳು ದೆಹಲಿಯಲ್ಲಿದ್ದಾರೆ.
|
ದೆಹಲಿಯಲ್ಲಿಯೇ ಒಂದು ಮನೆ ಮಾಡಿ
ಕೆಪಿಸಿಸಿ ಬಸವರಾಜ ಬೊಮ್ಮಾಯಿ ದೆಹಲಿ ಭೇಟಿ ಬಗ್ಗೆ ಟ್ವೀಟ್ ಮಾಡಿದ್ದು, ಬೊಮ್ಮಾಯಿಯವರು ಮುಖ್ಯಮಂತ್ರಿಯಾದ ನಂತರ 11ನೇ ಬಾರಿ ದೆಹಲಿಗೆ ಹೋಗುತ್ತಿದ್ದಾರೆ, ಬಿಜೆಪಿಯ ಹೈಕಮಾಂಡ್ ಕಮಾಂಡಿಂಗ್ ಈ ಪರಿ ಇದೆಯೇ!. ಸಿಎಂ ದೆಹಲಿ ಪ್ರವಾಸದಿಂದ ರಾಜ್ಯಕ್ಕೆ ನಯಾಪೈಸೆ ಲಾಭವಿಲ್ಲ, ಬಸವರಾಜ ಬೊಮ್ಮಾಯಿ ಅವರೇ ದೆಹಲಿಯಲ್ಲೇ ಒಂದು ಮನೆ ಮಾಡಿಬಿಡಿ!" ಎಂದು ಟ್ವೀಟ್ನಲ್ಲಿ ಸಲಹೆ ನೀಡಲಾಗಿದೆ.

ಮುಖ್ಯಮಂತ್ರಿಗಳ ದೆಹಲಿ ಭೇಟಿ
ಜೂನ್ 17ರಂದು ಬಸವರಾಜ ಬೊಮ್ಮಾಯಿ ಒಂದು ದಿನ ದೆಹಲಿ ಭೇಟಿ ಕೈಗೊಂಡಿದ್ದರು. ಜೂನ್ 18ರಂದು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ. ಪಿ. ನಡ್ಡಾ ಕರ್ನಾಟಕಕ್ಕೆ ಆಗಮಿಸಿದ್ದರು. ಬಳಿಕ ಜೂನ್ 20, 21ರಂದು ಪ್ರಧಾನಿ ನರೇಂದ್ರ ಮೋದಿ ಎರಡು ದಿನಗಳ ಕರ್ನಾಟಕ ಪ್ರವಾಸದಲ್ಲಿದ್ದರು. ಈಗ ಮತ್ತೆ ಬಸವರಾಜ ಬೊಮ್ಮಾಯಿ ದೆಹಲಿಗೆ ಭೇಟಿ ನೀಡಿದ್ದು, ಕಾಂಗ್ರೆಸ್ ಟೀಕೆಗೆ ಕಾರಣವಾಗಿದೆ.

ರಾಷ್ಟ್ರಪತಿ ಚುನಾವಣೆಗೆ ನಾಮಪತ್ರ
ಜುಲೈ 18ರಂದು ರಾಷ್ಟಪತಿ ಚುನಾವಣೆ ನಡೆಯಲಿದೆ. ಎನ್ಡಿಎ ಅಭ್ಯರ್ಥಿಯಾದ ದ್ರೌಪದಿ ಮುರ್ಮ ಅವರ ನಾಮಪತ್ರಕ್ಕೆ ಸೂಚಕರಾಗಿ ಸಹಿ ಹಾಕಲು ಕರ್ನಾಟಕ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಸಚಿವ ಶ್ರೀರಾಮುಲ ಸೇರಿದಂತೆ ಇತರ ನಾಯಕರು ದೆಹಲಿಯಲ್ಲಿದ್ದಾರೆ. ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ನಿವಾಸದಲ್ಲಿ ಬಸವರಾಜ ಬೊಮ್ಮಾಯಿ ನಾಮಪತ್ರಕ್ಕೆ ಸೂಚಕರಾಗಿ ಸಹಿ ಹಾಕಿದರು.

ವಿವಿಧ ರಾಜ್ಯದ ಮುಖ್ಯಮಂತ್ರಿಗಳು
ಬಿಜೆಪಿ ಹೈಕಮಾಂಡ್ ಸೂಚನೆಯಂತೆ ವಿವಿಧ ರಾಜ್ಯಗಳ ಮುಖ್ಯಮಂತ್ರಿಗಳು ದೆಹಲಿಯಲ್ಲಿದ್ದಾರೆ. ರಾಷ್ಟ್ರಪತಿ ಚುನಾವಣೆಗೆ ಎನ್ಡಿಎ ಅಭ್ಯರ್ಥಿಯಾದ ದ್ರೌಪದಿ ಮುರ್ಮ ಅವರ ನಾಮಪತ್ರಕ್ಕೆ ಸೂಚಕರಾಗಿ ಉತ್ತರ ಪ್ರದೇಶ, ಮೇಘಾಲಯ, ಉತ್ತರಾಖಂಡ್, ಕರ್ನಾಟಕ, ಮಧ್ಯ ಪ್ರದೇಶ, ಗುಜರಾತ್ ಮತ್ತು ಅಸ್ಸಾಂನ ಮುಖ್ಯಮಂತ್ರಿಗಳು ಸಹಿ ಹಾಕಿದರು. ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಈ ಕುರಿತು ಫೇಸ್ಬುಕ್ನಲ್ಲಿ ಮಾಹಿತಿ ನೀಡಿದ್ದಾರೆ.
ರಾಷ್ಟ್ರಪತಿ ಚುನಾವಣೆಗೆ ದ್ರೌಪದಿ ಮುರ್ಮ ಜೂನ್ 25ರಂದು ನಾಪತ್ರ ಸಲ್ಲಿಕೆ ಮಾಡಲಿದ್ದಾರೆ. ನಾಮಪತ್ರಗಳನ್ನು ಸಲ್ಲಿಕೆ ಮಾಡಲು ಜೂನ್ 29 ಕೊನೆಯ ದಿನವಾಗಿದೆ.
ದ್ರೌಪದಿ ಮುರ್ಮು ಗುರುವಾರ ದೆಹಲಿಗೆ ಆಗಮಿಸಿದ್ದು, ಪ್ರಧಾನಿ ನರೇಂದ್ರ ಮೋದಿ ಭೇಟಿ ಮಾಡಿದರು.
|
ಬಿಜೆಪಿಗೆ ಕೆಪಿಸಿಸಿಯ ಪ್ರಶ್ನೆ
ರಾಷ್ಟ್ರಪತಿ ಚುನಾವಣಗೆ ಎನ್ಡಿಎ ಅಭ್ಯರ್ಥಿಯಾದ ದ್ರೌಪದಿ ಮುರ್ಮ ಬಗ್ಗೆಯೂ ಕಾಂಗ್ರೆಸ್ ಬಿಜೆಪಿ ನಾಯಕರಿಗೆ ಪ್ರಶ್ನೆ ಎಸೆದಿದೆ. 'ಮೊದಲ ಮಹಿಳಾ ರಾಷ್ಟ್ರಪತಿ, ಮಹಿಳಾ ಪ್ರಧಾನಿ, ಮಹಿಳಾ ಲೋಕಸಭೆ ಸ್ಪೀಕರ್ ಎಲ್ಲರೂ ಕೂಡ ಕಾಂಗ್ರೆಸ್ನವರೇ ಎಂಬುದು ಬಿಜೆಪಿಗೆ ನೆನಪಿರಲಿ' ಎಂದು ಹೇಳಿದೆ.
'ಅದೆಲ್ಲಾ ಸರಿ ಆದಿವಾಸಿ ನಾಯಕಿಯಾದ ಮುರ್ಮು ಅವರನ್ನು ವನವಾಸಿ ನಾಯಕಿ ಎಂದು ಕರೆಯುವುದೇಕೆ? ಆದಿವಾಸಿ ಜನಾಂಗದ ಮೂಲ ಪರಂಪರೆ ಅಳಿಸಿ ಹಾಕುವ ಹುನ್ನಾರವೇ? ಆದಿವಾಸಿಗಳೆಂದು ಕರೆಯಲು ಏನು ಸಮಸ್ಯೆ ಬಿಜೆಪಿಗರೇ?' ಎಂದು ಕಾಂಗ್ರೆಸ್ ಪ್ರಶ್ನಿಸಿದೆ.












Click it and Unblock the Notifications