9 ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರನ್ನು ಬದಲಾಯಿಸಲಿದೆ ಕೆಪಿಸಿಸಿ
ಬೆಂಗಳೂರು, ಆಗಸ್ಟ್ 22 : ಕರ್ನಾಟಕ ಕಾಂಗ್ರೆಸ್ 9 ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರನ್ನು ಬದಲಾವಣೆ ಮಾಡಲು ಮುಂದಾಗಿದೆ. ಸೆಪ್ಟೆಂಬರ್ ಅಂತ್ಯದೊಳಗೆ ಈ ಬದಲಾವಣೆ ನಡೆಯಲಿದ್ದು, ಹೊಸ ಅಧ್ಯಕ್ಷರ ಆಯ್ಕೆಗೆ ಸಮಿತಿ ರಚನೆ ಮಾಡಿದೆ.
9 ಜಿಲ್ಲೆಗಳ ಅಧ್ಯಕ್ಷರನ್ನು ಬದಲಾವಣೆ ಮಾಡಲು ಎಐಸಿಸಿ ಸೂಚನೆ ನೀಡಿದೆ. ಸೆಪ್ಟೆಂಬರ್ 10ರೊಳಗೆ ಹೊಸ ಅಧ್ಯಕ್ಷರ ನೇಮಕಕ್ಕೆ ಪ್ರಸ್ತಾವನೆ ಸಲ್ಲಿಸುವಂತೆ ಕೆಪಿಸಿಸಿ ವೀಕ್ಷಕರಿಗೆ ಸೂಚನೆ ಕೊಟ್ಟಿದೆ.

ಕೆಪಿಸಿಸಿ 9 ಜಿಲ್ಲೆಗಳಿಗೂ ವೀಕ್ಷಕರನ್ನು ನೇಮಿಸಿ ಆದೇಶ ಹೊರಡಿಸಿದೆ. ಇವರು ಸ್ಥಳೀಯ ನಾಯಕರ ಜೊತೆ ಮಾತುಕತೆ ನಡೆಸಿ, ಯಾರು ಅಧ್ಯಕ್ಷರಾಗಬೇಕು ಎಂದು ಚರ್ಚಿಸಿ, ಕೆಪಿಸಿಸಿಗೆ ವರದಿಯನ್ನು ನೀಡಲಿದ್ದಾರೆ.
ಲೋಕಸಭಾ ಚುನಾವಣೆ ಫಲಿತಾಂಶದ ಬಳಿಕ ಎಐಸಿಸಿ ಪಕ್ಷ ಸಂಘಟನೆ ವಿಚಾರವನ್ನು ಗಂಭೀರವಾಗಿ ಪರಿಗಣಿಸಿದೆ. ಕೆಪಿಸಿಸಿಯಲ್ಲಿ ಅಧ್ಯಕ್ಷ ಮತ್ತು ಕಾರ್ಯಾಧ್ಯಕ್ಷ ಹೊರತುಪಡಿಸಿ ಉಳಿದ ಎಲ್ಲಾ ಹುದ್ದೆಗಳನ್ನು ವಿಸರ್ಜನೆ ಮಾಡಿದೆ.
ಕೆಪಿಸಿಸಿಗೆ ನೂತನ ಪದಾಧಿಕಾರಿಗಳನ್ನು ನೇಮಕ ಮಾಡುವಾಗ ಸಕ್ರಿಯವಾಗಿರುವ ನಾಯಕರಿಗೆ ಆದ್ಯತೆ ನೀಡಬೇಕು ಎಂದು ಕಟ್ಟುನಿಟ್ಟಿನ ಸೂಚನೆ ನೀಡಲಾಗಿದೆ. ಅಲ್ಲದೇ ಪದಾಧಿಕಾರಿಗಳ ಸಂಖ್ಯೆ 75 ಮೀರಬಾರದು ಎಂದು ನಿರ್ದೇಶನ ಕೊಡಲಾಗಿದೆ.
9 ಜಿಲ್ಲೆಗಳು, ವೀಕ್ಷಕರು
* ಎಂ. ಸಿ. ವೇಣುಗೋಪಾಲ್ (ಎಂಎಲ್ಸಿ) - ಚಿತ್ರದುರ್ಗ
* ಪಿ. ಎಂ. ಅಶೋಕ (ಮಾಜಿ ಶಾಸಕ) - ದಾವಣಗೆರೆ
* ಅಬ್ದುಲ್ ಜಬ್ಬಾರ್ (ಎಂಎಲ್ಸಿ) - ಬಾಗಲಕೋಟೆ
* ಆರ್. ಬಿ. ತಿಮ್ಮಾಪುರ (ಎಂಎಲ್ಸಿ, ಮಾಜಿ ಸಚಿವ) - ರಾಯಚೂರು
* ತನ್ವೀರ್ ಸೇಠ್ (ಶಾಸಕ, ಮಾಜಿ ಸಚಿವ) - ದಕ್ಷಿಣ ಕನ್ನಡ
* ಡಿ. ಆರ್. ಪಾಟೀಲ್ (ಮಾಜಿ ಶಾಸಕ) - ವಿಜಯಪುರ
* ಎಂ. ನಾರಾಯಣಸ್ವಾಮಿ (ಎಂಎಲ್ಸಿ) - ಕೋಲಾರ
* ಎಂ. ಎ. ಗೋಪಾಲಸ್ವಾಮಿ (ಎಂಎಲ್ಸಿ) - ಚಿಕ್ಕಮಗಳೂರು
* ಡಾ. ಶರಣ ಪ್ರಕಾಶ್ ಪಾಟೀಲ್ (ಮಾಜಿ ಸಚಿವ) - ಬೆಳಗಾವಿ ಗ್ರಾಮಾಂತರ, ನಗರ












Click it and Unblock the Notifications