ನಿಮ್ಮ ಪಕ್ಷದಲ್ಲೇ ಇರುವ ಹಿತಶತ್ರುಗಳು ಯಾರು ಪರಮೇಶ್ವರ್ ಅವರೇ?
ಮೂರು ಕ್ಷೇತ್ರದ ಉಪಚುನಾವಣೆಯನ್ನು ಪ್ರತಿಷ್ಠೆಯಾಗಿ ತೆಗೆದುಕೊಂಡಿರುವ ಕಾಂಗ್ರೆಸ್, ಪ್ರಮುಖವಾಗಿ ಹೆಬ್ಬಾಳ ಕ್ಷೇತ್ರವನ್ನು ಗೆಲ್ಲಲೇ ಬೇಕು ಎನ್ನುವ ಶಪಥವನ್ನು ಮಾಡಿದೆ.
ಪಕ್ಷದ ಕಚೇರಿಯಲ್ಲಿ ಶುಕ್ರವಾರ (ಜ 29) ನಡೆದ ಸಭೆಯಲ್ಲಿ ಮಾತನಾಡುತ್ತಿದ್ದ ಕೆಪಿಸಿಸಿ ಅಧ್ಯಕ್ಷ ಮತ್ತು ರಾಜ್ಯ ಗೃಹ ಸಚಿವ ಡಾ. ಪರಮೇಶ್ವರ್, ನಾವು ಜೊತೆಯಾಗಿ ಚುನಾವಣೆಯನ್ನು ಎದುರಿಸಬೇಕಾಗಿದೆ, ಇದು ಪಕ್ಷದ ಒಗ್ಗಟ್ಟಿನ ಪ್ರಶ್ನೆ ಎಂದಿದ್ದಾರೆ. (ಜಾಫರ್ ಷರೀಫ್, ಗೌಡ್ರ ಮಾತಿನ ಚಕಮಕಿ)
ನಮ್ಮ ಪಕ್ಷದಲ್ಲೇ ಕೆಲವು ಹಿತಶತ್ರುಗಳಿದ್ದಾರೆ, ಪ್ರಮುಖವಾಗಿ ಹೆಬ್ಬಾಳ ಚುನಾವಣೆಯಲ್ಲಿ ಪಕ್ಷಕ್ಕೆ ಹಿನ್ನಡೆಯಾಗಬೇಕು ಎಂದು ಬಯಸುವವರಿದ್ದಾರೆ ಎನ್ನುವ ಗಂಭೀರ ಹೇಳಿಕೆ ನೀಡಿ, ವಲಸೆ ಕಾಂಗ್ರೆಸ್ಸಿಗರಿಗೆ ಪರಮೇಶ್ವರ್ ಖಡಕ್ ಸಂದೇಶ ರವಾನಿಸಿದ್ದಾರೆ.
ಪಕ್ಷ ವಿರೋಧ ಚಟುವಟಿಕೆಯನ್ನು ನಾವು ಸಹಿಸುವುದಿಲ್ಲ, ಉಪಚುನಾವಣೆಯಲ್ಲಿ ಗೆದ್ದು ನಾವು ಒಗ್ಗಟ್ಟನ್ನು ಪ್ರದರ್ಶಿಸಬೇಕಾಗಿದೆ, ಚುನಾವಣೆಯ ವೇಳೆ ಅಶಿಸ್ತು ಕಂಡು ಬಂದರೆ, ಶಿಸ್ತು ಕ್ರಮ ಕೈಗೊಳ್ಳಬೇಕಾಗುತ್ತದೆ ಎಂದು ಪರಮೇಶ್ವರ್ ಸಭೆಯಲ್ಲಿ ಎಚ್ಚರಿಕೆ ನೀಡಿದ್ದಾರೆ. (ಖರ್ಗೆ ಸೇಡಿನಾಟದಲ್ಲಿ ಸಿದ್ದುಗೆ ಮುಖಭಂಗ)
ಪಕ್ಷದಲ್ಲಿರುವ ಹಿತಶತ್ರುಗಳು ಎನ್ನುವ ಪರಮೇಶ್ವರ್ ಪದಪ್ರಯೋಗ ಈಗ ಚರ್ಚೆಯ ವಿಷಯವಾಗಿದೆ, ಗೃಹ ಸಚಿವರು ಪರೋಕ್ಷವಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯನವರನ್ನು ಟಾರ್ಗೆಟ್ ಮಾಡಿ ಹೇಳಿಕೆ ನೀಡಿದ್ದಾರಾ ಎನ್ನುವುದು ಇಲ್ಲಿ ಸುದ್ದಿ. ಮುಂದೆ ಓದಿ..

ಮೂರು ಕ್ಷೇತ್ರಗಳ ಚುನಾವಣೆ
ದೇವದುರ್ಗ, ಹೆಬ್ಬಾಳ ಮತ್ತು ಬೀದರ್ ವಿಧಾನಸಭಾ ಕ್ಷೇತ್ರದ ಶಾಸಕರ ನಿಧನದಿಂದ ತೆರವಾದ ಸ್ಥಾನಕ್ಕೆ ಫೆಬ್ರವರಿ 13ರಂದು ಚುನಾವಣೆ ನಡೆಯಲಿದೆ. ಫೆ 16ಕ್ಕೆ ಮತಎಣಿಕೆ ಪ್ರಕ್ರಿಯೆ ನಡೆಯಲಿದೆ. ರಾಜ್ಯದ ಮೂರು ಪ್ರಮುಖ ಪಕ್ಷಗಳು ತಮ್ಮ ಅಭ್ಯರ್ಥಿಗಳನ್ನು ಕಣಕ್ಕಿಳಿಸಿವೆ. (ಚಿತ್ರದಲ್ಲಿ: ರಾಜ್ಯ ಮುಖ್ಯಚುನಾವಣಾಧಿಕಾರಿ ಅನಿಲ್ ಕುಮಾರ್ ಝಾ)

ಹೆಬ್ಬಾಳ ಕ್ಷೇತ್ರ
ಹೆಬ್ಬಾಳ ಕ್ಷೇತ್ರದ ಅಭ್ಯರ್ಥಿ ಆಯ್ಕೆಯ ವಿಚಾರದಲ್ಲಿ ನಡೆದದ್ದು ಮೂಲ ಕಾಂಗ್ರೆಸ್ಸಿಗರ ಮೇಲುಗೈ. ಅಧಿಕಾರಕ್ಕೆ ಬಂದ ನಂತರ ಇದೇ ಮೊದಲ ಬಾರಿಗೆ ಎನ್ನುವಂತೆ, ಸಿದ್ದರಾಮಯ್ಯನವರ ರೆಕಮಂಡೇಶನ್ ಇಲ್ಲಿ ವರ್ಕೌಟ್ ಆಗಿರಲಿಲ್ಲ.

ಮಲ್ಲಿಕಾರ್ಜುನ ಖರ್ಗೆ
ವಿಧಾನಪರಿಷತ್ ಚುನಾವಣೆಯಲ್ಲಿ ಪಕ್ಷದ ಆದೇಶವನ್ನು ಧಿಕ್ಕರಿಸಿ ಪಕ್ಷೇತರ ಅಭ್ಯರ್ಥಿಯಾಗಿ ಗೆದ್ದು ತೋರಿಸಿದ್ದ ಭಾರೀ ಕುಳ ಬೈರತಿ ಸುರೇಶ್ ಅವರಿಗೇ ಟಿಕೆಟ್ ನೀಡಬೇಕು ಎನ್ನುವುದು ಸಿದ್ದು ಹಠವನ್ನು ಹಿರಿಯ ಕಾಂಗ್ರೆಸ್ಸಿಗ ಮಲ್ಲಿಕಾರ್ಜುನ ಖರ್ಗೆ ಸವಾಲಾಗಿ ಸ್ವೀಕರಿಸಿ ಗೆದ್ದಿದ್ದರು. ಜಾಫರ್ ಷರೀಫ್ ಅವರ ಮೊಮ್ಮಗ ರೆಹಮಾನ್ ಷರೀಫ್ ಅವರಿಗೆ ಟಿಕೆಟ್ ಕೊಡಿಸುವಲ್ಲಿ ಖರ್ಗೆ ಯಶಸ್ವಿಯಾಗಿದ್ದರು.

ಕೆಪಿಸಿಸಿ ಕಚೇರಿಯಲ್ಲಿ ಸಭೆ
ಶುಕ್ರವಾರ ಕೆಪಿಸಿಸಿ ಕಚೇರಿಯಲ್ಲಿ ಮುಖ್ಯಮಂತ್ರಿಗಳ ಅನುಪಸ್ಥಿಯಲ್ಲಿ ನಡೆದ ಸಭೆಯಲ್ಲಿ, ಪರಮೇಶ್ವರ್, ಡಿ ಕೆ ಶಿವಕುಮಾರ್, ಜಾಫರ್ ಷರೀಫ್, ರಿಜ್ವಾನ್ ಅರ್ಷದ್, ರಾಮಲಿಂಗ ರೆಡ್ಡಿ, ರೋಷನ್ ಬೇಗ್ ಸೇರಿದಂತೆ ಪ್ರಮುಖ ಮುಖಂಡರು ಭಾಗವಹಿಸಿದ್ದರು. ಆದರೆ ಸಿದ್ದರಾಮಯ್ಯ ಆಪ್ತವಲಯದಲ್ಲಿ ಕಾಣಿಸಿಕೊಳ್ಳುವ ಸಚಿವರು/ಶಾಸಕರು ಗೈರಾಗಿದ್ದರು.

ಪರಮೇಶ್ವರ್ ಹೇಳಿದ್ದು
ಜೆಡಿಎಸ್ ಮತ್ತು ಬಿಜೆಪಿ ಮಾತ್ರ ನಮ್ಮ ಎದುರಾಳಿಗಳಲ್ಲ, ನಮ್ಮ ಪಕ್ಷದಲ್ಲೇ ಕೆಲವು ಎದುರಾಳಿಗಳಿದ್ದಾರೆ. ಅವರನ್ನು ನಾವು ಎದುರಿಸಬೇಕಾಗಿದೆ. ಪಕ್ಷದ ವಿರುದ್ದ, ಅಭ್ಯರ್ಥಿಗಳ ವಿರುದ್ದ ಮಾತನಾಡುವವರ ವಿರುದ್ದ ಮುಲಾಜಿಲ್ಲದೇ ಶಿಸ್ತುಕ್ರಮ ತೆಗೆದುಕೊಳ್ಳಲಾಗುವುದು ಎಂದು ಪರಮೇಶ್ವರ್ ಎಚ್ಚರಿಕೆ ನೀಡಿದ್ದಾರೆ.












Click it and Unblock the Notifications