ಮುಖ್ಯಮಂತ್ರಿಗಳೇ ಎಷ್ಟು ದುಡ್ಡು ಬೇಕು ಕೇಳಿ: ಕೆಂಪೇಗೌಡ ಬಸ್ ನಿಲ್ದಾಣದಲ್ಲಿ ಬಿಎಸ್ವೈ ವಿರುದ್ದ ಘರ್ಜಿಸಿದ ಡಿಕೆಶಿ
ಬೆಂಗಳೂರು, ಮೇ 2: ತಮ್ಮತಮ್ಮ ಊರಿಗೆ ಹೋಗಲು ನಗರದ ಕೇಂದ್ರ ಬಸ್ ನಿಲ್ದಾಣದಲ್ಲಿ ಕಾಯುತ್ತಿದ್ದ ಪ್ರಯಾಣಿಕರಿಗೆ ಬಸ್ ವ್ಯವಸ್ಥೆ ಕಲ್ಪಿಸುವ ವಿಚಾರದಲ್ಲಾದ ಗೊಂದಲಕ್ಕೆ ಕೆಪಿಸಿಸಿ ನಿಯೋಜಿತ ಅಧ್ಯಕ್ಷ ಡಿ.ಕೆ.ಶಿವಕುಮಾರ್, ಸರಕಾರದ ಕೆಂಡಾಮಂಡಲವಾಗಿದ್ದಾರೆ.
ಕೆಪಿಸಿಸಿ ಕಾರ್ಯಾಧ್ಯಕ್ಷ ಸಲೀಂ ಅಹಮದ್ ಜೊತೆ ಕೆಂಪೇಗೌಡ ಬಸ್ ನಿಲ್ದಾಣಕ್ಕೆ ಆಗಮಿಸಿದ ಡಿಕೆಶಿ, "ಇಂತಹ ಸಣ್ಣ ಸಮಸ್ಯೆಯನ್ನು ಬಗೆಹರಿಸಲು ಒದ್ದಾಡುತ್ತಿರುವ ಇದೂ ಒಂದು ಸರಕಾರನಾ. ಮೂವತ್ತು ಸಚಿವರು ಇದ್ದು ಏನು ಪ್ರಯೋಜನವಾಯಿತು" ಎಂದು ಅಕ್ಷರಸಃ ಬಿಎಸ್ವೈ ಸರಕಾರದ ವಿರುದ್ದ ವಾಗ್ದಾಳಿ ನಡೆಸಿದರು.
"ಬಸ್ ವ್ಯವಸ್ಥೆ ಇರದೇ ಇಲ್ಲೇ ಇರುವ ಪ್ರಯಾಣಿಕರಿಗೆ ಮೊದಲು ಹೋಟೆಲ್ ವ್ಯವಸ್ಥೆ ಕಲ್ಪಿಸಿ. ಎಷ್ಟೋ ಕಿಲೋಮೀಟರ್ ದೂರದಿಂದ ಇಲ್ಲಿಗೆ ಬಂದಿದ್ದಾರೆ. ಈಗ ಬಸ್ ವ್ಯವಸ್ಥೆ ಇಲ್ಲಾಂದರೆ ಎಲ್ಲಿಗೆ ಹೋಗುತ್ತಾರೆ ಇವರೆಲ್ಲಾ" ಎಂದು ಡಿಕೆಶಿ ಪ್ರಶ್ನಿಸಿದರು.

"ಕೇರಳ, ರಾಜಸ್ಥಾನದಲ್ಲಿ ವಲಸೆ ಕಾರ್ಮಿಕರಿಗಾಗಿ ರೈಲು ವ್ಯವಸ್ಥೆಯನ್ನು ಮಾಡಲಾಗಿದೆ. ನಮ್ಮ ಸರಕಾರಕ್ಕೆ ಏನಾಗಿದೆ. ಇನ್ನೂರು ಬಸ್ ವ್ಯವಸ್ಥೆ ಕಲ್ಪಿಸಲು ಸಾಧ್ಯವಿಲ್ಲವೇ. ಯಾಕೆ ಬೇಕು ನಿಮಗೆ ಈ ಅಧಿಕಾರ" ಎಂದು ಡಿಕೆಶಿ ವಾಗ್ದಾಳಿ ನಡೆಸಿದರು.
"ಸನ್ಮಾನ್ಯ ಮುಖ್ಯಮಂತ್ರಿಗಳೇ, ಈ ಬಡವರಿಗಾಗಿ ನಾನು ದುಡ್ಡು ಕಟ್ಟಲು ಸಿದ್ದನಿದ್ದೇನೆ, ಎಷ್ಟು ಕಟ್ಟಬೇಕು ಹೇಳಿ. ಭಿಕ್ಷೆ ಎತ್ತಿ ದುಡ್ಡು ಕಟ್ಟಲು ಸಿದ್ದನಿದ್ದೇನೆ. ಎಷ್ಟೋ ಜನ ಈಗಾಗಲೇ ದೇಣಿಗೆ ಕೊಟ್ಟಿದ್ದಾರೆ. ನಾನು ಇವರ ಪರವಾಗಿ ದುಡ್ಡು ಕಟ್ಟಲು ಸಿದ್ದನಿದ್ದೇನೆ" ಎಂದು ಡಿ.ಕೆ.ಶಿವಕುಮಾರ್ ಹೇಳಿದರು.
"ಪಕ್ಕದ ಸಣ್ಣ ರಾಜ್ಯಗಳಲ್ಲಿ ಕಾರ್ಮಿಕರಿಗೆ ಅವರ ಊರಿಗೆ ಹೋಗಲು ಒನ್ ಟೈಮ್ ಪಾಸ್ ಕೊಟ್ಟಿದ್ದಾರೆ. ಪೊಲೀಸರು ಇವರಿಗೆಲ್ಲಾ ರಕ್ಷಣೆ ನೀಡಬೇಕು" ಎಂದು ಡಿಕೆಶಿ, ಸಿಎಂ ಯಡಿಯೂರಪ್ಪನವರಲ್ಲಿ ಆಗ್ರಹಿಸಿದ್ದಾರೆ.
ಕೊನೇ ಮಾತು: ಸಾರ್ವಜನಿಕ ಸ್ಥಳದಲ್ಲಾಗಲಿ, ಎಲ್ಲೇ ಆಗಲಿ, ಮೊದಲು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದನ್ನು ಕಲಿಯುವುದು ಇನ್ಯಾವಾಗ?












Click it and Unblock the Notifications