ಗಡಿ ವಿವಾದ; ಚುನಾವಣೆ ಸಮಯದಲ್ಲಿ ರಾಜ್ಯದ ಶಾಂತಿ ಕದಡುವ ಪ್ರಯತ್ನ: ಡಿ.ಕೆ. ಶಿವಕುಮಾರ್
ಬೆಂಗಳೂರು,ಡಿಸೆಂಬರ್ 1: ಚುನಾವಣೆ ಸಮಯದಲ್ಲಿ ಗಡಿ ವಿವಾದದ ಹೆಸರಿನಲ್ಲಿ ರಾಜ್ಯದ ಶಾಂತಿ ಕದಡುವ ಪ್ರಯತ್ನ ನಡೆಯುತ್ತಿದೆ. ಇದು ಸರಿಯಲ್ಲ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಹೇಳಿದರು.
ಈ ಕುರಿತು ನಗರದಲ್ಲಿ ಗುರುವಾರ ಮಾಧ್ಯಮಗಳ ಜೊತೆಗೆ ಮಾತನಾಡಿದ ಅವರು, ಮಹಾರಾಷ್ಟ್ರದ ಯಾವುದೇ ಪಕ್ಷದವರಾಗಿರಲಿ ಗಡಿ ವಿವಾದದ ಹೆಸರಲ್ಲಿ ಶಾಂತಿ ಕದಡುವುದು, ಇದರಲ್ಲಿ ಭಾಗಿಯಾಗುವುದು ಸರಿಯಲ್ಲ. ನಮ್ಮ ಮುಖ್ಯಮಂತ್ರಿಗಳು ತಮ್ಮ ಸರ್ಕಾರದ ಮೇಲಿರುವ ಕಳಂಕ ಮರೆಮಾಚಿಕೊಳ್ಳಲು ಇದನ್ನು ದೊಡ್ಡದಾಗಿ ಮಾಡುತ್ತಿದ್ದಾರೆ. ಇದರ ಹಿಂದೆ ಸಂಚು ಇದೆ ಎಂದು ಆರೋಪಿಸಿದರು.
ಕರ್ನಾಟಕ ಹಾಗೂ ಮಹಾರಾಷ್ಟ್ರ ಗಡಿ ವಿವಾದ ಈಗಾಗಲೇ ಇತ್ಯರ್ಥ ಆಗಿರುವ ವಿಚಾರ. ನಮ್ಮ ಗಡಿಯೊಳಗಿನ ಪ್ರದೇಶ ನಮ್ಮದು, ಅವರ ಗಡಿಯೊಳಗಿನ ಪ್ರದೇಶ ಅವರದ್ದು. ಇಲ್ಲಿರುವವರೆಲ್ಲ ನಮ್ಮವರೇ. ಬೆಳಗಾವಿಯಲ್ಲಿ ನಾವು ಸುವರ್ಣಸೌಧ ಕಟ್ಟಿದ್ದು, ಯಾರೂ ಶಾಂತಿ ಭಂಗ ಕೆಲಸ ಮಾಡಬಾರದು ಎಂದರು.

ಬಿಜೆಪಿಗೆ ಸಾಲು, ಸಾಲು ರೌಡಿ ಶೀಟರ್ ಗಳ ಸೇರ್ಪಡೆ ವಿಚಾರವಾಗಿ ಮಾತನಾಡಿ, ಬಿಜೆಪಿ ಅವರಿಗೆ ಕುಸ್ತಿ ಮಾಡಲು ಜನ ಬೇಕಾಗಿದೆ. ಹೀಗಾಗಿ ಸೇರಿಸಿಕೊಳ್ಳುತ್ತಿದ್ದಾರೆ, ಸೇರಿಸಿಕೊಳ್ಳಲಿ ಬಿಡಿ ಎಂದು ಛೇಡಿಸಿದರು.
ಚುನಾವಣೆಗಾಗಿ ಬಿಜೆಪಿ ಸಿದ್ಧಾಂತ ಮರೆಯುತ್ತಿದೆಯೇ ಎಂಬ ವಿಚಾರವಾಗಿ ಮಾತನಾಡಿ, ಬಿಜೆಪಿಗೆ ಯಾವಾಗ ಯಾವ ಸಿದ್ಧಾಂತ ಇತ್ತು? ಅವರು ಸಿದ್ಧಾಂತದ ಬಗ್ಗೆ ಮಾತನಾಡಿಲ್ಲ, ಮಾತನಾಡುವುದೂ ಇಲ್ಲ. ಅವರು ಭಾವನೆ ಮೇಲೆ ರಾಜಕಾರಣ ಮಾಡುತ್ತಾರೆ. ಭಾವನೆಗೂ, ಬದುಕಿಗೂ ವ್ಯತ್ಯಾಸವಿದೆ. ಬದುಕಿನ ಮೇಲೆ ರಾಜಕಾರಣ ಮಾಡಿಲ್ಲ. ಜನರ ಹೊಟ್ಟೆ ತುಂಬಿಸಿ, ಅವರಿಗೆ ಉದ್ಯೋಗ ಕೊಟ್ಟು, ಬದುಕು ಕಟ್ಟಿಕೊಳ್ಳುವ ಅವಕಾಶ ನೀಡಬೇಕು ಎಂಬುದು ಅವರಲ್ಲಿ ಇಲ್ಲ. ಅವರಿಗೇನಿದ್ದರೂ ಭಾವನೆಗಳ ವಿಚಾರದ ಮೇಲಷ್ಟೇ ಆಸಕ್ತಿ ಎಂದರು.
ಕಾಂಗ್ರೆಸ್ ಪಕ್ಷ ಅಂದ್ರೆ ಗೂಂಡಾಗಳ,ರೌಡಿ ಪಕ್ಷ, ಡಿ.ಕೆ. ಶಿವಕುಮಾರ್ ಗೆ ತಿರುಗೇಟು ಕೊಟ್ಟ ಅಶ್ವತ್ಥ ನಾರಾಯಣ

ಕಾಂಗ್ರೆಸ್ ಪಕ್ಷ ಅಂದ್ರೆ ಗೂಂಡಾಗಳ,ರೌಡಿ ಪಕ್ಷ ಅನ್ನೋದು ಎಲ್ಲರಿಗೂ ಗೊತ್ತಿರುವ ವಿಷಯ ಕಾಂಗ್ರೆಸ್ ಪಕ್ಷದ ಅಧ್ಯಕ್ಷರ ಹಿನ್ನೆಲೆ ನೋಡಿದ್ರೆ ಗೊತ್ತಾಗುತ್ತೆ ಎಂದು ಸಚಿವ ಅಶ್ವತ್ಥ ನಾರಾಯಣ ಡಿ.ಕೆ. ಶಿವಕುಮಾರ್ ಗೆ ತಿರುಗೇಟು ನೀಡಿದ್ದಾರೆ.
ಬಿಜೆಪಿಗೆ ಕುಸ್ತಿ ಆಡಲು ರೌಡಿಗಳು ಬೇಕಾಗಿದ್ದಾರೆ ಎಂಬ ಡಿಕೆ ಶಿವಕುಮಾರ್ ಹೇಳಿಕೆ ವಿಚಾರವಾಗಿ ಮಾತನಾಡಿ, ಬಿಜೆಪಿ ಅಂದ್ರೆ ಜನಪರ ಪಕ್ಷ. ನಾವು ಇದ್ಯಾವುದಕ್ಕೂ ಆದ್ಯತೆ,ಮಾನ್ಯತೆ ಕೊಡಲ್ಲ
ಕಾಂಗ್ರೆಸ್ ಪಕ್ಷ ಅದರ ಅವಲೋಕನ ಮಾಡಿಕೊಳ್ಳಬೇಕಿದೆ. ವಿಚಾರದ ಕೊರತೆಯಿಂದ ಕಾಂಗ್ರೆಸ್ ಹೀಗೆ ಮಾಡ್ತಿದೆ, ಇದಕ್ಕೆ ಜನರು ಯಾವುದೇ ಮಾನ್ಯತೆ ಕೊಡಲ್ಲ ಎಂದು ಕಿಡಿಕಾರಿದರು.
ರೌಡಿಶೀಟರ್ ವಿಲ್ಸನ್ ಗಾರ್ಡನ್ ನಾಗ, ಸಚಿವ ಸೋಮಣ್ಣ ಭೇಟಿ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು, ಸಾರ್ವಜನಿಕರಿಗೆ ಜನಪ್ರತಿನಿಧಿಗಳನ್ನ ಭೇಟಿ ಮಾಡುವ ಹಕ್ಕಿದೆ. ಅದಕ್ಕೆ ಬೇರೆ ಮಹತ್ವ ಕೊಡುವ ಅವಶ್ಯಕತೆ ಇಲ್ಲ. ಶಾಸಕರನ್ನ ಭೇಟಿ ಮಾಡೋಕೆ ಬಂದಾಗ,ಮಾತನಾಡಿಸಿದಾಗ ಮಾತನಾಡಿಸದೆ ಇರೋಕೆ ಆಗುತ್ತಾ.? ಇದ್ಯಾವುದಕ್ಕೂ ಮಾನ್ಯತೆ ಕೊಡಬೇಕಿಲ್ಲ.ನಮ್ಮ ಪಕ್ಷ ಜನಪರವಾಗಿದೆ, ಜನರ ಆಶೀರ್ವಾದ ನಮ್ಮ ಪಕ್ಷಕ್ಕಿದೆ ಎಂದರು.












Click it and Unblock the Notifications