ರಾಜ್ಯದಲ್ಲಿ ಆಪರೇಷನ್ ಹಸ್ತಕ್ಕೆ ಡಿ.ಕೆ. ಶಿವಕುಮಾರ್ ಅಸ್ತು ಹೇಳ್ತಾರಾ?

ಬೆಂಗಳೂರು, ಫೆಬ್ರವರಿ 11: ಕರ್ನಾಟಕದಲ್ಲಿ ರಾಜಕೀಯ ಚದುರಂಗದಾಟ ಶುರುವಾಗಿದೆ. ಏನಾದರೂ ಮಾಡಿ ಮುಂದಿನ 2023ರ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷವನ್ನು ಗೆಲ್ಲಿಸಿ ಆಡಳಿತದ ಚುಕ್ಕಾಣಿ ಹಿಡಿಯಲೇಬೇಕೆಂಬ ಶಪಥ ಮಾಡಿರುವ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಈಗಿನಿಂದಲೇ ತಂತ್ರ ಆರಂಭಿಸಿದ್ದು, ಆಪರೇಷನ್ ಹಸ್ತಕ್ಕೆ ಮುಂದಾಗುವ ಲಕ್ಷಣಗಳು ಗೋಚರಿಸುತ್ತಿದೆ.

ಮುಂದಿನ ಚುನಾವಣೆಯಲ್ಲಿ ಕಾಂಗ್ರೆಸ್ ಗೆಲ್ಲಬೇಕಾದರೆ ಏನು ಮಾಡಬೇಕು? ಏನು ಮಾಡಿದರೆ ಗೆಲುವು ಸಾಧಿಸಬಹುದು? ಯಾರಿಗೆ ಟಿಕೆಟ್ ನೀಡಬೇಕು? ಜೆಡಿಎಸ್ ಮತ್ತು ಬಿಜೆಪಿಯಲ್ಲಿರುವ ಶಾಸಕರ ಪೈಕಿ ಯಾರನ್ನು ಸೆಳೆದರೆ ಅನುಕೂಲವಾಗಬಹುದು? ಹೀಗೆ ಹತ್ತಾರು ಲೆಕ್ಕಾಚಾರಗಳನ್ನು ಅವರು ಈಗಿನಿಂದಲೇ ಹಾಕುತ್ತಿದ್ದಾರೆ. ಈ ಹಿಂದೆ ಸಿದ್ದರಾಮಯ್ಯ ಅವರ ನೇತೃತ್ವದಲ್ಲಿ ಚುನಾವಣೆಗೆ ಹೋಗಿ ಯಾವುದೇ ರೀತಿಯಲ್ಲಿ ಪಕ್ಷಕ್ಕೆ ಅನುಕೂಲವಾಗಿಲ್ಲ ಎಂಬುದು ಎಲ್ಲರಿಗೂ ಗೊತ್ತಿರುವ ವಿಚಾರವೇ. ಹೀಗಾಗಿಯೇ ಅವರು ಕಾಂಗ್ರೆಸ್ ಪಕ್ಷದ ಸಾಮೂಹಿಕ ನಾಯಕತ್ವದ ತತ್ವವನ್ನು ಬದಿಗೆ ಸರಿಸಿ ತಾವೇ ಮುಂದೆ ನಿಂತು ಪಕ್ಷದ ಸಂಘಟನೆಯಿಂದ ಶುರುವಾಗಿ ಟಿಕೆಟ್ ಹಂಚಿಕೆ ಎಲ್ಲದರತ್ತ ದೃಷ್ಟಿ ನೆಟ್ಟಿದ್ದಾರೆ.

 ಕೈ ಮುಖಂಡರಿಗೆ ಖಡಕ್ ವಾರ್ನಿಂಗ್

ಕೈ ಮುಖಂಡರಿಗೆ ಖಡಕ್ ವಾರ್ನಿಂಗ್

ಈಗಾಗಲೇ ಪಕ್ಷದ ಮುಖಂಡರಿಗೆ ಖಡಕ್ ಎಚ್ಚರಿಕೆ ನೀಡಿರುವ ಡಿಕೆಶಿ, ಯಾರು ಕೂಡ ವಿಧಾನಸಭೆ ಮತ್ತು ಲೋಕಸಭೆ ಚುನಾವಣೆಗೆ ಸಂಬಂಧಿಸಿದಂತೆ ಟಿಕೆಟ್ ಕೇಳಿಕೊಂಡು ಬರಬೇಡಿ. ಬದಲಿಗೆ ನಿಮ್ಮ ಕ್ಷೇತ್ರದಲ್ಲಿ ಪಕ್ಷದ ಸಂಘಟನೆ ಮಾಡಿ ಆ ಮೂಲಕ ನಿಮ್ಮ ವರ್ಚಸ್ಸು ತೋರಿಸಿ, ನಿಮ್ಮ ಕೆಲಸ ಕಾರ್ಯಗಳನ್ನು ಗಮನಿಸಿ ನಿಮ್ಮ ಕ್ಷೇತ್ರದಿಂದ ಟಿಕೆಟ್ ನೀಡುತ್ತೇವೆ. ನೀವು ಕ್ಷೇತ್ರದಲ್ಲಿ ಪಕ್ಷದ ಸಂಘಟನೆ ಮಾಡದಿದ್ದರೆ ಟಿಕೆಟ್ ನೀಡಲ್ಲ ಎಂಬುದನ್ನು ಬಹಿರಂಗವಾಗಿಯೇ ಹೇಳುವ ಮೂಲಕ ಪಕ್ಷದೊಳಗಿನ ಟಿಕೆಟ್ ಆಕಾಂಕ್ಷಿಗಳಿಗೊಂದು ಎಚ್ಚರಿಕೆಯ ಸಂದೇಶ ರವಾನಿಸಿದ್ದಾರೆ.

ಹಾಗೆ ನೋಡಿದರೆ ಕಾಂಗ್ರೆಸ್ ಪಕ್ಷ ಸ್ವಾತಂತ್ರ್ಯ ಪೂರ್ವದ ಪಕ್ಷ, ಸ್ವಾತಂತ್ರ್ಯಕ್ಕಾಗಿ ಹೋರಾಡಿದ ಐತಿಹಾಸಿಕ ಪಕ್ಷ. ಇದಿಷ್ಟನ್ನೇ ಹೇಳಿಕೊಂಡು ಚುನಾವಣೆಗೆ ತೆರಳಿದ ಪಕ್ಷವೂ ಹೌದು. ಕಾಂಗ್ರೆಸ್ ಯಾವತ್ತೂ ತಳಮಟ್ಟದಿಂದ ಸಂಘಟನೆ ಮಾಡಲೇ ಇಲ್ಲ. ಬಡವರು, ಹಿಂದುಳಿದ ವರ್ಗ, ಅಲ್ಪಸಂಖ್ಯಾತರು ಆರಂಭದಿಂದಲೂ ಪಕ್ಷದೊಂದಿಗೆ ನಿಂತಿದ್ದರಿಂದ ತಳಮಟ್ಟದಿಂದ ಸಂಘಟನೆ ಮಾಡಬೇಕಾದ ಅನಿವಾರ್ಯತೆ ಪಕ್ಷದ ಹಿರಿಯ ಮುಖಂಡರಿಗೆ ಬರಲೇ ಇಲ್ಲ.

 ತಳಮಟ್ಟದಿಂದ ಸಂಘಟನೆ ಮಾಡಲೇ ಇಲ್ಲ

ತಳಮಟ್ಟದಿಂದ ಸಂಘಟನೆ ಮಾಡಲೇ ಇಲ್ಲ

ಎಲ್ಲವೂ ಹೀಗೆಯೇ ಇರುತ್ತದೆ ಮತ್ತು ಕೆಲವೊಂದು ವರ್ಗಗಳು ನಮ್ಮನ್ನು ಕೈಬಿಡುವುದಿಲ್ಲ ಎಂಬ ನಂಬಿಕೆಗಳು ಇವತ್ತು ಕಾಂಗ್ರೆಸ್‌ಗೆ ಕೈಕೊಟ್ಟಿದೆ. ಕಾಂಗ್ರೆಸ್ಸೇತರ ಪಕ್ಷಗಳು ನಿಧಾನವಾಗಿ ತಳಮಟ್ಟದಿಂದ ಸಂಘಟನೆಯಾಗಲು ಆರಂಭಿಸಿದವು. ಕೇಂದ್ರದಲ್ಲಿ ಭಾರತೀಯ ಜನತಾ ಪಾರ್ಟಿ ಹಿಂದುತ್ವದ ನೆಲೆಯಲ್ಲಿ ಪಕ್ಷವನ್ನು ಸಂಘಟಿಸಲು ಆರಂಭಿಸಿತು. ಅದೊಂದೇ ಪಕ್ಷವಲ್ಲ ಪ್ರತಿ ರಾಜ್ಯಗಳಲ್ಲೂ ಕಾಂಗ್ರೆಸ್‌ಗೆ ವಿರುದ್ಧವಾಗಿ ಪ್ರಾದೇಶಿಕ ಪಕ್ಷಗಳು ಹುಟ್ಟಿಕೊಳ್ಳಲಾರಂಭಿಸಿದವು. ಕ್ರಮೇಣ ಅವು ತಮ್ಮ ರಾಜ್ಯಗಳಲ್ಲಿ ಪ್ರಬಲ ಪ್ರಾದೇಶಿಕ ಪಕ್ಷವಾಗಿ ಕಾಂಗ್ರೆಸ್‌ಗೆ ಸೆಡ್ಡು ಹೊಡೆದವು. ಆದರೂ ಕಾಂಗ್ರೆಸ್ ತಳಮಟ್ಟದಿಂದ ಪಕ್ಷವನ್ನು ಗಟ್ಟಿ ಮಾಡುವ ಪ್ರಯತ್ನ ಮಾಡಲೇ ಇಲ್ಲ.

ರಾಷ್ಟ್ರೀಯ ಪಕ್ಷವಾಗಿದ್ದ ಕಾಂಗ್ರೆಸ್‌ಗೆ ರಾಷ್ಟ್ರಮಟ್ಟದಲ್ಲಿ ಬಿಜೆಪಿ, ಜನತಾದಳ, ಕಮ್ಯೂನಿಷ್ಟ್ ಸೇರಿದಂತೆ ಒಂದಷ್ಟು ವಿರೋಧ ಪಕ್ಷಗಳು ಹುಟ್ಟಿಕೊಂಡಿದ್ದರೆ, ಇತ್ತ ಪ್ರತಿ ರಾಜ್ಯದಲ್ಲಿ ಪ್ರಾದೇಶಿಕ ಪಕ್ಷಗಳು ಕಾಂಗ್ರೆಸ್ ವಿರುದ್ಧ ಸೆಟೆದು ನಿಂತು ಪ್ರಾಬಲ್ಯ ಸಾಧಿಸಲಾರಂಭಿಸಿದವು. ಅದರ ಪರಿಣಾಮ ಅಂದು ದೇಶವನ್ನಾಳಿದ ರಾಷ್ಟ್ರೀಯ ಪಕ್ಷ ಕಾಂಗ್ರೆಸ್ ಇಂದು ಕೆಲವೇ ಕೆಲವು ರಾಜ್ಯಗಳಿಗೆ ಸೀಮಿತವಾಗಿ ಆಡಳಿತ ನಡೆಸುವಂತಾಗಿದೆ.

 ಅಧಿಕಾರಕ್ಕೆ ಬರಲು ಕರ್ನಾಟಕದಲ್ಲಷ್ಟೆ ಸಾಧ್ಯ

ಅಧಿಕಾರಕ್ಕೆ ಬರಲು ಕರ್ನಾಟಕದಲ್ಲಷ್ಟೆ ಸಾಧ್ಯ

ದಕ್ಷಿಣ ಭಾರತದಲ್ಲಿ ಕರ್ನಾಟಕ ಹೊರತುಪಡಿಸಿ ಉಳಿದ ರಾಜ್ಯಗಳಲ್ಲಿ ಕಾಂಗ್ರೆಸ್ ಪ್ರಾದೇಶಿಕ ಪಕ್ಷಗಳಿಗೆ ಪೈಪೋಟಿ ನೀಡಲಾರದ ಪರಿಸ್ಥಿತಿಗೆ ಬಂದು ನಿಂತಿದೆ. ಹೀಗಾಗಿ ಕರ್ನಾಟಕದಲ್ಲಿ ಕಷ್ಟಪಟ್ಟರೆ ಕಾಂಗ್ರೆಸ್ ಅಧಿಕಾರ ಹಿಡಿಯಬಹುದು. ಹಾಗಾಗಿ ಕರ್ನಾಟಕದತ್ತ ಕಾಂಗ್ರೆಸ್ ಹೈಕಮಾಂಡ್ ಹೆಚ್ಚಿನ ನಿರೀಕ್ಷೆಯನ್ನಿಟ್ಟುಕೊಂಡಿದೆ. ಕಳೆದ ವಿಧಾನಸಭೆ ಮತ್ತು ಲೋಕಸಭೆ ಎರಡು ಚುನಾವಣೆಗಳಲ್ಲಿ ಸಿದ್ದರಾಮಯ್ಯ ಅವರ ನೇತೃತ್ವದಲ್ಲಿಯೇ ಕಾಂಗ್ರೆಸ್ ಮತದಾರರ ಬಳಿಗೆ ತೆರಳಿತ್ತು. ಆದರೆ ಅದರಿಂದ ಪಕ್ಷಕ್ಕೆ ಲಾಭವಾಗಲಿಲ್ಲ. ಹೀಗಾಗಿ ಈ ಬಾರಿ ಚುನಾವಣೆಗೆ ವರ್ಷವಿರುವಾಗಲೇ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅಖಾಡಕ್ಕೆ ಇಳಿದಿದ್ದಾರೆ.

ಮುಂದಿನ ಚುನಾವಣೆ ವೇಳೆಗೆ ಬಿಜೆಪಿ ಮತ್ತು ದಳದಲ್ಲಿರುವ ಕೆಲವು ಗೆಲ್ಲುವ ಶಾಸಕರನ್ನು ಪಕ್ಷಕ್ಕೆ ಎಳೆದುಕೊಳ್ಳುವ ಆಟ ಶುರು ಮಾಡಿದ್ದಾರೆ. ಅದರ ಮೊದಲ ಪ್ರಯೋಗವನ್ನು ನಂಜನಗೂಡು ಬಿಜೆಪಿ ಶಾಸಕ ಸಂಸದ ಶ್ರೀನಿವಾಸ ಪ್ರಸಾದ್ ಅವರ ಅಳಿಯ ಹರ್ಷವರ್ಧನ್ ಮೇಲೆ ಮಾಡಿದ್ದಾರೆ ಎನ್ನಲಾಗಿದೆ. ಹರ್ಷವರ್ಧನ್ ಈಗಾಗಲೇ ಸಚಿವ ಸ್ಥಾನದ ಆಕಾಂಕ್ಷಿಯಾಗಿದ್ದು, ತನಗೆ ಸಚಿವ ಸ್ಥಾನ ಸಿಗದ ಬಗ್ಗೆ ಮುನಿಸು ಮಾಡಿಕೊಂಡವರು. ಇದನ್ನೇ ಮುಂದಿಟ್ಟುಕೊಂಡು ಮುಂದಿನ ಚುನಾವಣೆ ವೇಳೆಗೆ ಪಕ್ಷಕ್ಕೆ ಎಳೆದುಕೊಂಡರೆ ಲಾಭವಾಗಬಹುದು ಎಂಬ ಲೆಕ್ಕಾಚಾರ ಡಿಕೆಶಿಯವರದ್ದಾಗಿರಬಹುದೇ? ಎಂಬ ಪ್ರಶ್ನೆಗಳು ಎದ್ದಿವೆ.

 ಬಿಜೆಪಿ ಶಾಸಕನಿಗೆ ಗಾಳ ಹಾಕಿದ್ದಾರಾ?

ಬಿಜೆಪಿ ಶಾಸಕನಿಗೆ ಗಾಳ ಹಾಕಿದ್ದಾರಾ?

ಈ ಸಂಬಂಧ ಈಗಾಗಲೇ ಒಂದಷ್ಟು ಮಾತುಕತೆಗಳು ನಡೆದಿವೆ ಎನ್ನಲಾಗಿದೆ. ಇನ್ನು ಮಾವ ಶ್ರೀನಿವಾಸ ಪ್ರಸಾದ್ ಅವರು ಬಿಜೆಪಿಯಿಂದ ಸ್ಪರ್ಧಿಸಿ ಸಂಸದರಾಗಿದ್ದು, ಮುಂದಿನ ದಿನಗಳಲ್ಲಿ ರಾಜಕೀಯದಿಂದ ದೂರ ಉಳಿಯಲಿದ್ದಾರೆ. ಹೀಗಾಗಿ ಅವರು ಅಳಿಯ ಕಾಂಗ್ರೆಸ್ ಸೇರುವುದಕ್ಕೆ ತಕರಾರು ಮಾಡಲಾರರು. ಸದ್ಯ ಡಿಕೆಶಿ ಮತ್ತು ಶಾಸಕ ಹರ್ಷವರ್ಧನ್ ಮಾತುಕತೆ ಕೇವಲ ವದಂತಿಯಾ? ಎಂಬುದು ಮುಂದಿನ ದಿನಗಳಲ್ಲಿ ಗೊತ್ತಾಗಲಿದೆ. ಆದರೆ ಬೆಂಕಿಯಿಲ್ಲದೆ ಹೊಗೆಯಾಡದು ಎಂಬುದಂತು ಸತ್ಯ. ಚುನಾವಣೆಗೆ ದಿನಗಳು ಹತ್ತಿರವಾಗುತ್ತಿದ್ದಂತೆಯೇ ಡಿಕೆಶಿ ಇನ್ನೇನೆಲ್ಲ ತಂತ್ರಗಳನ್ನು ಮಾಡಬಹುದು ಎನ್ನುವುದಂತು ಕುತೂಹಲಕಾರಿಯಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+