ರಾಜ್ಯಸಭಾ ಚುನಾವಣೆ : ಕ್ರಾಸ್ ವೋಟಿಂಗ್ ಭೀತಿ: ಪಕ್ಷದ ಅಧಿಕೃತ ಏಜೆಂಟ್ ಆಗಿ ಖುದ್ದು ಡಿಕೆಶಿ
ಬೆಂಗಳೂರು, ಜೂನ್ 10: ರಾಜ್ಯದ ನಾಲ್ಕು ರಾಜ್ಯಸಭಾ ಸ್ಥಾನಗಳಿಗೆ ಚುನಾವಣೆ ಆರಂಭವಾಗಿದೆ. ಸಂಜೆ ನಾಲ್ಕು ಗಂಟೆಯವರೆಗೆ ಮತ ಚಲಾಯಿಸಲು ಅವಕಾಶವಿದ್ದು, ಐದು ಗಂಟೆಯಿಂದ ಮತಎಣಿಕೆ ನಡೆಯಲಿದೆ.
ಪ್ರಮುಖವಾಗಿ ಜೆಡಿಎಸ್ ಮತ್ತು ಕಾಂಗ್ರೆಸ್ ಪಕ್ಷಕ್ಕೆ ಕ್ರಾಸ್ ವೋಟಿಂಗ್ ಭೀತಿ ಕಾಡುತ್ತಿದ್ದರಿಂದ, ರೆಸಾರ್ಟ್/ಹೊಟೇಲ್ ನಲ್ಲಿ ಶಾಸಕರಿಗೆ ವಾಸ್ತವ್ಯದ ವ್ಯವಸ್ಥೆಯನ್ನು ಮಾಡಲಾಗಿತ್ತು. ಇದರ ಮಧ್ಯೆ, ಕಾಂಗ್ರೆಸ್ ಪಕ್ಷದ ಶಾಸಕಾಂಗ ಸಭೆ ನಡೆದಿದ್ದು, ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರು ಖುದ್ದು ಪಕ್ಷದ ಅಧಿಕೃತ ಏಜೆಂಟ್ ಆಗಿ ಕಾರ್ಯನಿರ್ವಹಿಸಲು ನಿರ್ಧರಿಸಿದ್ದಾರೆ. ಇದಕ್ಕೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಕೂಡಾ ಸಹಮತ ವ್ಯಕ್ತ ಪಡಿಸಿದ್ದಾರೆ.
ಈ ಸಂದರ್ಭದಲ್ಲಿ ಅಡ್ಡ ಮತದಾನದ ಬಗ್ಗೆ ಕಾಂಗ್ರೆಸ್ ಶಾಸಕರಿಗೆ, ಡಿಕೆಶಿ ಖಡಕ್ ವಾರ್ನಿಂಗ್ ಕೊಟ್ಟಿದ್ದಾರೆ ಎಂದು ಹೇಳಲಾಗುತ್ತಿದೆ. ಒಂದು ವೇಳೆ ಕ್ರಾಸ್ ವೋಟಿಂಗ್ ಆಗಿದ್ದೇ ಆದಲ್ಲಿ, ನಾನು ಬದುಕಿರುವವರೆಗೂ ಬಿ ಫಾರಂ ಸಿಗದಂತೆ ಮಾಡುತ್ತೇನೆ. ಎಲ್ಲರ ಮೇಲೂ ನಂಬಿಕೆ ಇದೆ, ಆದರೆ ಪಕ್ಷವಾಗಿ ಸೂಚನೆ ನೀಡುವುದು ನಮ್ಮ ಕರ್ತವ್ಯ ಎಂದು ಎಚ್ಚರಿಸಿದ್ದಾರೆ.

'ಅಡ್ಡ ಮತದಾನ ಆಗುವುದಿಲ್ಲ ಎಂಬ ನಂಬಿಕೆ ಇದೆ, ಯಾರಾದರೂ ಒಂದೇ ಒಂದು ಮತ ಅಡ್ಡಮತದಾನ ಮಾಡಿದರೆ ಹುಷಾರ್, ನಾನು ಬದುಕಿರುವವರೆಗೂ ಬಿ ಫಾರಂ ಸಿಗದಂತೆ ಮಾಡುತ್ತೇನೆ. ನಾನಿರುವವರೆಗೂ ಪಕ್ಷದಲ್ಲಿ ಇರಲೂ ಸಾಧ್ಯವಿಲ್ಲ, ಯಾರು ಸಹ ಕ್ರಾಸ್ ವೋಟ್ ಮಾಡಬಾರದು' ಎನ್ನುವ ಎಚ್ಚರಿಕೆ ಡಿಕೆಶಿ ಕಡೆಯಿಂದ ಕಾಂಗ್ರೆಸ್ ಶಾಸಕರಿಗೆ ಬಂದಿದೆ.
ಇದು ಎಐಸಿಸಿ ಆದೇಶ, ಪಕ್ಷದ ಘನತೆಯ ವಿಚಾರ, ಯಾರು ಅಡ್ಡ ಮತದಾನ ಮಾಡುತ್ತೀರೋ, ಅವರ ರಾಜಕೀಯ ಭವಿಷ್ಯ ಸಂಕಷ್ಟದಲ್ಲಿರಲಿದೆ. ಇದು ನಮ್ಮ ಪಕ್ಷದಿಂದ ನೀಡಲಾಗುತ್ತಿರುವ ನೇರ ಎಚ್ಚರಿಕೆ.
ನಾಳೆ ಆಥರೈಸ್ಡ್ ಏಜೆಂಟ್ ಆಗಿ ಖುದ್ದು ನಾನೇ ಇರುತ್ತೇನೆ ಎಂದು ಡಿ.ಕೆ.ಶಿವಕುಮಾರ್ ಈ ಸಂದರ್ಭದಲ್ಲಿ ಹೇಳಿದ್ದಾರೆ.

Recommended Video
ಹೀಗಾಗಿ, ಮತದಾನ ಮಾಡುವ ಕಾಂಗ್ರೆಸ್ಸಿನ ಪ್ರತೀ ಶಾಸಕರು ಡಿ.ಕೆ.ಶಿವಕುಮಾರ್ ಅವರಿಗೆ ಮತ ಪತ್ರ ತೋರಿಸಿಯೇ ಮತದಾನ ಮಾಡಬೇಕು. ಕಾಂಗ್ರೆಸ್ ಮತಗಳು ಚದುರದಂತೆ ನೋಡಿಕೊಳ್ಳಲು ಡಿ.ಕೆ.ಶಿವಕುಮಾರ್ ಖುದ್ದಾಗಿ ಕಣಕ್ಕೆ ಇಳಿದಿದ್ದಾರೆ. ಆ ಮೂಲಕ ಕಾಂಗ್ರೆಸ್ ಶಾಸಕರಿಗೆ ಡಿಕೆಶಿ ಸಂದೇಶವನ್ನು ಕಳುಹಿಸಿದ್ದಾರೆ. ಡಿಕೆಶಿ ನಿರ್ಧಾರಕ್ಕೆ ಸಿದ್ದರಾಮಯ್ಯ ಬೆಂಬಲ ಸೂಚಿಸಿದ್ದಾರೆ.












Click it and Unblock the Notifications