ಕಾಂಗ್ರೆಸ್ ವಾಟ್ಸಾಪ್ ಗ್ರೂಪ್ ನಿಂದ ದಿನೇಶ್ ಗುಂಡೂರಾವ್ ಔಟ್?
Recommended Video
ಬೆಂಗಳೂರು, ಜೂನ್ 15: ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಹೀನಾಯವಾಗಿ ಸೋಲು ಅನುಭವಿಸಿದ ನಂತರ, ಹಿರಿಯರು ಮತ್ತು ಕಿರಿಯರು ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ವಿರುದ್ದ ಅಸಮಾಧಾನ ಹೊರಹಾಕುತ್ತಿದ್ದಾರೆಯೇ?
ಹಿರಿಯ ಕಾಂಗ್ರೆಸ್ ಮುಖಂಡ ಮತ್ತು ಶಿವಾಜಿನಗರ ಶಾಸಕ ರೋಷನ್ ಬೇಗ್ ಬಹಿರಂಗವಾಗಿಯೇ ದಿನೇಶ್ ಗುಂಡೂರಾವ್ ವಿರುದ್ದ ಆಕ್ರೋಶ ವ್ಯಕ್ತಪಡಿಸಿದ್ದರು. ಶುಕ್ರವಾರ (ಜೂ 14) ಸಚಿವ ಸಂಪುಟ ವಿಸ್ತರಣೆಯ ಕಾರ್ಯಕ್ರಮದಲ್ಲೂ ದಿನೇಶ್ ಗೈರಾಗಿದ್ದರು.
ಕೆಲವೊಂದು ಮೂಲಗಳ ಪ್ರಕಾರ, ಕೆಪಿಸಿಸಿ ಅಧ್ಯಕ್ಷರೇ ಕರ್ನಾಟಕ ಕಾಂಗ್ರೆಸ್ಸಿನ ವಿವಿಧ ವಾಟ್ಸಾಪ್ ಗ್ರೂಪ್ ನಿಂದ ಹೊರ ಹೋಗಿದ್ದಾರೆ. ಲೋಕಸಭಾ ಚುನಾವಣೆಯ ಫಲಿತಾಂಶ ಹೊರಬಿದ್ದ ನಂತರ, ದಕ್ಷಿಣಕನ್ನಡ, ಬಳ್ಳಾರಿ, ಧಾರವಾಡದ ನಗರಪಾಲಿಕೆ ಚುನಾವಣೆಯ ಸಂಬಂಧ ಮುಖಂಡರ ಜೊತೆ ದಿನೇಶ್ ಮಾತುಕತೆ ನಡೆಸಿದ್ದರು.

ಇದಾದ ನಂತರ, ತಾನು ಪ್ರತಿನಿಧಿಸುವ ಗಾಂಧಿನಗರ ಅಸೆಂಬ್ಲಿ ಕ್ಷೇತ್ರದ ವಿವಿಧ ಕಾಮಗಾರಿಗಳನ್ನು ಮೇಯರ್ ಜೊತೆ ದಿನೇಶ್ ಗುಂಡೂರಾವ್ (ಶನಿವಾರ) ವೀಕ್ಷಿಸಿದ್ದಾರೆ.
ಎಐಸಿಸಿ ಮೀಡಿಯಾ, ಎಐಸಿಸಿ ವಕ್ತಾರರು, ಕೆಪಿಸಿಸಿ ಮಾಧ್ಯಮ ವಿಭಾಗ ಮತ್ತು ಕೆಪಿಸಿಸಿ ಪದಾಧಿಕಾರಿಗಳ ವಾಟ್ಸಾಪ್ ಗ್ರೂಪ್ ನಿಂದಲೂ ದಿನೇಶ್ ಗುಂಡೂರಾವ್ ಹೊರಹೋಗಿದ್ದಾರೆ ಎನ್ನುವ ಮಾಹಿತಿಯಿದೆ.
ಇವೆಲ್ಲದರ ನಡುವೆ, ಕೆಪಿಸಿಸಿ ಅಧ್ಯಕ್ಷ ಸ್ಥಾನಕ್ಕೆ ದಿನೇಶ್ ಗುಂಡೂರಾವ್ ಸದ್ಯದಲ್ಲೇ ರಾಜೀನಾಮೆ ನೀಡಲಿದ್ದಾರೆ ಎನ್ನುವ ದಟ್ಟ ವದಂತಿ ಕ್ವೀನ್ಸ್ ರೋಡ್ ಸುತ್ತ ಹರಿದಾಡುತ್ತಿದೆ. ಲೋಕಸಭೆ ಚುನಾವಣೆಯಲ್ಲಿ ರಾಜ್ಯ ಕಾಂಗ್ರೆಸ್ ಕಳಪೆ ಪ್ರದರ್ಶನಕ್ಕೆ ಕೆಪಿಸಿಸಿ ಅಧ್ಯಕ್ಷನಾಗಿ ನೈತಿಕ ಜವಾಬ್ದಾರಿಯನ್ನು ಹೊರುತ್ತೇನೆ ಎಂದಿದ್ದ ದಿನೇಶ್, ರಾಜೀನಾಮೆ ನೀಡುವ ವಿಷಯವನ್ನು ತಳ್ಳಿ ಹಾಕಿದ್ದರು.
ಸಂಪುಟ ವಿಸ್ತರಣೆ ಬಳಿಕ ಸಮನ್ವಯ ಸಮಿತಿ ಅಧ್ಯಕ್ಷ ಸ್ಥಾನವನ್ನು ಸಿದ್ದರಾಮಯ್ಯ ಅವರಿಂದ ಮಲ್ಲಿಕಾರ್ಜುನ ಖರ್ಗೆ ಅವರಿಗೆ ವರ್ಗಾಯಿಸಲಾಗುತ್ತದೆ. ಕಾಂಗ್ರೆಸ್ ಶಾಸಕಾಂಗಕ್ಕೆ ಡಿ.ಕೆ.ಶಿವಕುಮಾರ್ ಅವರನ್ನು ಅಧ್ಯಕ್ಷರನ್ನಾಗಿಸುವ ಸಾಧ್ಯತೆ ಇದೆ. ಕೆಪಿಸಿಸಿ ಅಧ್ಯಕ್ಷರಾಗಿರುವ ದಿನೇಶ್ ಗುಂಡೂರಾವ್ ಅವರೂ ಸಹ ತಮ್ಮ ಸ್ಥಾನವನ್ನು ಕಳೆದುಕೊಳ್ಳುವ ಸಾಧ್ಯತೆ ಇದೆ ಎನ್ನಲಾಗಿದೆ.












Click it and Unblock the Notifications