ತಡರಾತ್ರಿವರೆಗೂ ನಡೆದ ಒಕ್ಕಲಿಗ ನಾಯಕರ ಸಭೆಯಲ್ಲಿ ಕಣ್ಣೀರಿಟ್ಟ ಡಿಕೆಶಿ?
ಚುನಾವಣಾ ಹೊಸ್ತಿಲಲ್ಲಿ ಕರ್ನಾಟಕ ಕಾಂಗ್ರೆಸ್ಸಿನಲ್ಲಿ ಇದೆ ಎನ್ನಲಾಗುತ್ತಿರುವ ಬಣ ರಾಜಕೀಯ ಹೈಕಮಾಂಡಿಗೆ ತಲೆನೋವಾಗಿ ಪರಿಣಮಿಸುತ್ತಿದೆ. ಇತ್ತೀಚೆಗೆ, ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ.ಸಿ.ವೇಣುಗೋಪಾಲ್ ಅವರು ಡಿ.ಕೆ.ಶಿವಕುಮಾರ್ ಮತ್ತು ಸಿದ್ದರಾಮಯ್ಯನವರನ್ನು ಕರೆಸಿ ಮಾತನಾಡಿದ್ದರು.
ಇದರಿಂದಾಗಿ, ಬೇರೆಬೇರೆಯಾಗಿ ಸಾಗಬೇಕಿದ್ದ ಇಬ್ಬರ ಯಾತ್ರೆಗಳಿಗೆ ಬ್ರೇಕ್ ಹಾಕಿರುವ ಹೈಕಮಾಂಡ್ ಜೊತೆಯಾಗಿ ರಾಜ್ಯ ಪ್ರವಾಸ ಮಾಡಿ ಎಂದು ಫರ್ಮಾನು ಹೊರಡಿಸಿದ್ದು ಗೊತ್ತೇ ಇದೆ. ಆದರೂ, ಇಬ್ಬರೂ ತಮ್ಮ ಸಮುದಾಯದ ನಾಯಕರ ಪ್ರತ್ಯೇಕ ಸಭೆ ನಡೆಯುವುದು ಮಾತ್ರ ನಿಂತಿಲ್ಲ.
ಹಿರಿಯೂರಿನಲ್ಲಿ ನಂಜಾವಧೂತ ಶ್ರೀಗಳ ಜೊತೆ ಸಮುದಾಯದ ಮುಖಂಡನ ವಾಗ್ವಾದ
ಎರಡು ದಿನಗಳ ಕೆಳಗೆ ಅಂದರೆ ಗುರುವಾರ (ಡಿ 15) ಬೆಂಗಳೂರಿನ ಖಾಸಗಿ ಹೋಟೆಲ್ ಒಂದರಲ್ಲಿ ಕೆಪಿಸಿಸಿ ಅಧ್ಯಕ್ಷರು ತಮ್ಮ ಸಮುದಾಯದ ಪ್ರಮುಖ ನಾಯಕರ ಜೊತೆಗೆ ತಡರಾತ್ರಿ ಸಭೆ ನಡೆಸಿದ್ದರು ಎನ್ನುವುದು ಗೌಪ್ಯವಾಗಿ ಏನೂ ಉಳಿದಿಲ್ಲ.
ಈ ವೇಳೆ, ಡಿಕೆಶಿ ಭಾವೋದ್ವೇಗಕ್ಕೆ ಒಳಗಾಗಿ ಕಣ್ಣೀರಿಟ್ಟರು ಎಂದು ಕೆಲವೊಂದು ಮಾಧ್ಯಮಗಳಲ್ಲಿ ವರದಿಯಾಗಿದೆ. ಜೊತೆಗೆ, ತಮ್ಮ ಸಂಪೂರ್ಣ ಸಹಕಾರದ ಭರವಸೆಯನ್ನು ನಾಯಕರು ಈ ವೇಳೆ ಡಿಕೆಶಿಗೆ ನೀಡಿದರು ಎಂದು ವರದಿಯಾಗಿದೆ.
ದೇವೇಗೌಡ್ರನ್ನು ಎಂದಿನಂತೆ ಆತ್ಮೀಯತೆಯಿಂದ ಮಾತನಾಡಿಸಿದ ಮೋದಿ
ಎಚ್.ಡಿ.ಕುಮಾರಸ್ವಾಮಿಯವರ ಪಂಚರತ್ನ ಯಾತ್ರೆಗೆ ಸಿಗುತ್ತಿರುವ ಜನಬೆಂಬಲ, ಇತ್ತೀಚೆಗೆ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ್ರು, ದೆಹಲಿಯಲ್ಲಿ ಪ್ರಧಾನಿ ಮೋದಿಯವರನ್ನು ಭೇಟಿಯಾಗಿದ್ದು, ನಂತರ, ಪ್ರಧಾನಿ ಬಳಿ ಕುಂಚಟಿಗ ಒಕ್ಕಲಿಗ ಸಮುದಾಯಕ್ಕೆ ಒಬಿಸಿ ಮೀಸಲಾತಿ ವಿಚಾರದಲ್ಲಿ ಮನವಿ ಸಲ್ಲಿಸಿದ್ದು ಕಾಂಗ್ರೆಸ್ ನಾಯಕರ ನಿದ್ದೆಗೆಡಿಸಿದೆ ಎಂದು ಹೇಳಲಾಗುತ್ತಿದೆ. ದೇವೇಗೌಡ್ರನ್ನು ಎಂದಿನಂತೆ ಆತ್ಮೀಯತೆಯಿಂದ ಮೋದಿ ಮಾತನಾಡಿಸಿದ ಹಿಂದೆ ಏನಾದರೂ ರಾಜಕೀಯ ಅಡಗಿದೆಯೇ ಎನ್ನುವುದೂ ಕಾಂಗ್ರೆಸ್ ನಾಯಕರ ಗೊಂದಲಕ್ಕೆ ಕಾರಣವಾಗಿದೆ.
ಒಕ್ಕಲಿಗ ಸಮುದಾಯದ ಮತ ಕೈತಪ್ಪದಂತೆ ನೋಡಿಕೊಳ್ಳಬೇಕು
ಹಳೇ ಮೈಸೂರು ಭಾಗದಲ್ಲಿ ಜೆಡಿಎಸ್ ಪ್ರಭಾವ ಹೆಚ್ಚಾಗುತ್ತಿರುವ ಹಿನ್ನಲೆಯಲ್ಲಿ ಒಕ್ಕಲಿಗ ಸಮುದಾಯದ ಮತ ಕೈತಪ್ಪದಂತೆ ನೋಡಿಕೊಳ್ಳಲು ಡಿ.ಕೆ.ಶಿವಕುಮಾರ್ ಸಭೆ ಕರೆದಿದ್ದರು ಎಂದು ಹೇಳಲಾಗುತ್ತಿದೆ. ಆ ವೇಳೆ, ಸದ್ಯದಲ್ಲೇ ಎರಡು ತಂಡವಾಗಿ ಪ್ರವಾಸಕ್ಕೆ ಹೋಗಲು ಸಮುದಾಯದ ನಾಯಕರಿಗೆ ಡಿಕೆಶಿ ಫರ್ಮಾನು ಹೊರಡಿಸಿದ್ದಾರೆ. ಜೊತೆಗೆ, ತನಗಾಗುತ್ತಿರುವ ಕಿರುಕುಳದ ಬಗ್ಗೆ ಡಿಕೆಶಿ ಸಭೆಯಲ್ಲಿ ನೋವು ತೋಡಿಕೊಂಡರು ಎನ್ನುವ ಸುದ್ದಿ ಹರಿದಾಡುತ್ತಿದೆ.
ಕೇಂದ್ರೀಯ ತನಿಖಾ ಸಂಸ್ಥೆಗಳಾದ ಸಿಬಿಐ, ಇಡಿ, ಐಟಿ ಇಲಾಖೆ
ಕೇಂದ್ರೀಯ ತನಿಖಾ ಸಂಸ್ಥೆಗಳಾದ ಸಿಬಿಐ, ಇಡಿ, ಐಟಿ ಇಲಾಖೆಯಿಂದ ಆಗುತ್ತಿರುವ ವಿಚಾರಣೆಯ ಬಗ್ಗೆ ಡಿ.ಕೆ.ಶಿವಕುಮಾರ್ ಮಾತನಾಡುತ್ತಾ ಕಣ್ಣೀರಿಟ್ಟರು ಎಂದು ಹೇಳಲಾಗುತ್ತಿದೆ. ನಾನಾಗಿರುವುದರಿಂದ ಇದನ್ನೆಲ್ಲಾ ಸಹಿಸಿಕೊಂಡು ಪಕ್ಷ ಸಂಘಟನೆಯಲ್ಲಿ ತೊಡಗಿಸಿಕೊಂಡಿದ್ದೇನೆ. ಬೇರೆ ಯಾರಿಗಾದರೂ ಈ ಕಿರುಕುಳವನ್ನು ತಡೆದುಕೊಳ್ಳಲು ಸಾಧ್ಯವಾಗುತ್ತಿರಲಿಲ್ಲ ಎಂದು ಡಿಕೆಶಿಯವರು, ಸಮುದಾಯದ ನಾಯಕರ ಜೊತೆ ನೋವನ್ನು ತೋಡಿಕೊಂಡಿದ್ದಾರೆ.
ಚುನಾವಣಾ ವರ್ಷವಾಗಿರುವುದರಿಂದ ಮಾನಸಿಕವಾಗಿ ಸಧೃಡರಾಗಿರಬೇಕು
ಧೈರ್ಯವಾಗಿ ಎಲ್ಲವನ್ನೂ ಎದುರಿಸಿದ್ದೀರಿ, ಈಗ ಚುನಾವಣಾ ವರ್ಷವಾಗಿರುವುದರಿಂದ ನೀವು ಇನ್ನಷ್ಟು ಮಾನಸಿಕವಾಗಿ ಸಧೃಡರಾಗಿರಬೇಕು. ನಿಮಗೆ ನಮ್ಮೆಲ್ಲರ ಬೆಂಬಲವಿದೆ, ನಿಮ್ಮ ಹಿಂದೆ ನಾವಿರುತ್ತೇವೆ ಎನ್ನುವ ಮಾತನ್ನು ಒಕ್ಕಲಿಗ ಸಮುದಾಯದ ನಾಯಕರು ಆಡಿದರು. ಜೊತೆಗೆ, ದೇವೇಗೌಡ್ರ ಕುಟುಂಬದ ಜೊತೆಗೆ ಹಿಂದೆ ಯಾವರೀತಿ ಆಕ್ರಮಣಕಾರಿಯಾಗಿ ಇದ್ದೀರೋ, ಅದೇ ರೀತಿ ಇರಿ ಎನ್ನುವ ಸಲಹೆಯೂ ಸಭೆಯಲ್ಲಿ ಒಕ್ಕಲಿಗ ಸಮುದಾಯದ ನಾಯಕರು ನೀಡಿದರು ಎಂದು ವರದಿಯಾಗಿದೆ.