ಪರಮೇಶ್ವರ ವಿರುದ್ಧ ಹೇಳಿಕೆ ನೀಡಿದ್ದ ಸಿ.ಎಂ.ಲಿಂಗಪ್ಪಗೆ ನೋಟಿಸ್!
Recommended Video

ಬೆಂಗಳೂರು, ಜೂನ್ 06 : ಕೆಪಿಸಿಸಿ ಅಧ್ಯಕ್ಷ ಡಾ.ಜಿ.ಪರಮೇಶ್ವರ ವಿರುದ್ಧ ಹೇಳಿಕೆ ನೀಡಿದ್ದ ವಿಧಾನಪರಿಷತ್ ಸದಸ್ಯ ಸಿ.ಎಂ.ಲಿಂಗಪ್ಪ ಅವರಿಗೆ ನೋಟಿಸ್ ಜಾರಿಗೊಳಿಸಲಾಗಿದೆ.
ಬುಧವಾರ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ವಿ.ವೈ.ಘೋರ್ಪಡೆ ನೋಟಿಸ್ ಜಾರಿಗೊಳಿಸಿದ್ದಾರೆ. 7 ದಿನದಲ್ಲಿ ಉತ್ತರ ನೀಡಬೇಕು. ಇಲ್ಲವಾದಲ್ಲಿ ಶಿಸ್ತು ಕ್ರಮವನ್ನು ಕೈಗೊಳ್ಳಲಾಗುತ್ತದೆ ಎಂದು ಎಚ್ಚರಿಕೆ ನೀಡಲಾಗಿದೆ.
ವಿಧಾನಪರಿಷತ್ ಸದಸ್ಯ ಸಿ.ಎಂ.ಲಿಂಗಪ್ಪ ಅವರು ಕೆಪಿಸಿಸಿ ಅಧ್ಯಕ್ಷ ಜಿ.ಪರಮೇಶ್ವರ ವಿರುದ್ಧ ಹೇಳಿಕೆ ನೀಡಿ ಪಕ್ಷದ ಶಿಸ್ತು ಉಲ್ಲಂಘನೆ ಮಾಡಿದ್ದಾರೆ. ಪಕ್ಷಕ್ಕೆ, ಪಕ್ಷದ ನಾಯಕರಿಗೆ ಮುಜುಗರ ಉಂಟು ಮಾಡಿದ್ದಾರೆ ಎಂದು ನೋಟಿಸ್ನಲ್ಲಿ ತಿಳಿಸಲಾಗಿದೆ.

ಜೂನ್ 5ರಂದು ಪತ್ರಿಕಾಗೋಷ್ಠಿ ನಡೆಸಿದ್ದ ಸಿ.ಎಂ.ಲಿಂಗಪ್ಪ, 'ರಾಮನಗರ ಸೇರಿದಂತೆ ಹಲವು ಕ್ಷೇತ್ರಗಳನ್ನು ಮಾರಲು ಹೊರಟಿರುವ ಜಿ.ಪರಮೇಶ್ವರ ಕಾಂಗ್ರೆಸ್ ಪಕ್ಷವನ್ನು ಅಧೋಗತಿಗೆ ತರುತ್ತಿದ್ದಾರೆ' ಎಂದು ಆರೋಪಿಸಿದ್ದರು.
'ಪರಮೇಶ್ವರ ಅವರಿಗೆ ಉಪ ಮುಖ್ಯಮಂತ್ರಿ ಆಗಿದ್ದೆ ಹೆಚ್ಚು ಎಂಬಂತೆ ಆಗಿದೆ. ಮುಂದೆ ಕಾಂಗ್ರೆಸ್ ಅಧಿಕಾರಕ್ಕೆ ಬರಬೇಕು. ಮುಖ್ಯಮಂತ್ರಿಯಾಗಬೇಕು ಎಂಬ ಗುರಿ ಇಲ್ಲ. ರಾಮನಗರದ ಜೊತೆಗೆ ನಮ್ಮ ಹೆಂಡಂತಿ ಮಕ್ಕಳನ್ನು ಮಾರಲು ಹೊರಟಿದ್ದಾರೆ' ಎಂದು ವ್ಯಂಗ್ಯವಾಡಿದ್ದರು.
'ಡಿ.ಕೆ.ಶಿವಕುಮಾರ್ ಅವರಿಗೆ ಸಚಿವ ಸ್ಥಾನ ಕೊಡಬೇಡಿ ಎಂದು ಹೇಳುವಷ್ಟು ಧೈರ್ಯ ಯಾವ ರಾಜಕಾರಣಿಗೂ ಇಲ್ಲ. ಆದರೆ, ಕೆಪಿಸಿಸಿ ಅಧ್ಯಕ್ಷ ಸ್ಥಾನ ತಪ್ಪಿಸಲು ಪಕ್ಷದೊಳಗೇ ಸಂಚು ನಡೆದಿರುವುದು ನಿಜ' ಎಂದು ಹೇಳಿದ್ದರು.
ಪರಮೇಶ್ವರ ಅವರ ವಿರುದ್ಧ ಮಾತನಾಡಿದ ಪಕ್ಷದ ಶಿಸ್ತು ಉಲ್ಲಂಘಟನೆ ಮಾಡಿದ ಕಾರಣಕ್ಕಾಗಿ ಇಂದು ನೋಟಿಸ್ ನೀಡಲಾಗಿದ್ದು, 7 ದಿನದಲ್ಲಿ ಉತ್ತರ ನೀಡುವಂತೆ ಸೂಚನೆ ನೀಡಲಾಗಿದೆ.












Click it and Unblock the Notifications