ಕೊಪ್ಪಳ: ಅಲ್ಪ ನೀರಾವರಿ ಬೆಳೆ ಬೆಳೆಯಲು ರೈತರಿಗೆ ಮನವಿ
ಕೊಪ್ಪಳ, ಆಗಸ್ಟ್ 23 : ಕೊಪ್ಪಳ ಜಿಲ್ಲೆಯಲ್ಲಿ ಬರುವ ತುಂಗಭದ್ರಾ ಅಚ್ಚುಕಟ್ಟು ಪ್ರದೇಶದಲ್ಲಿ ಭತ್ತ ಬೆಳೆ ಬೆಳೆಯುವ ಬದಲು ಪರ್ಯಾಯವಾಗಿ ಅಲ್ಪ ನೀರಾವರಿ ಬೆಳೆಗಳನ್ನು ಬೆಳೆಯಬೇಕು ಎಂದು ಕೊಪ್ಪಳ ಜಂಟಿ ಕೃಷಿ ನಿರ್ದೇಶಕರು ರೈತರಲ್ಲಿ ಮನವಿ ಮಾಡಿದ್ದಾರೆ.
ಕೊಡಗಿನಲ್ಲೇ ಕೈ ಕೊಟ್ಟ ಮಳೆ, ಕೃಷಿಯ ಖುಷಿ ಕಾಣದ ರೈತರು
ಮಳೆ ಕೊರತೆಯಿಂದ ಈ ಬಾರಿ ತುಂಗಭದ್ರಾ ಜಲಾಶಯದಲ್ಲಿ ನೀರಿನ ಪ್ರಮಾಣ ಕಡಿಮೆ ಇದ್ದು, ಭತ್ತದ ಬೆಳೆಯನ್ನು ಬೆಳೆಯುವ ಬದಲಿಗೆ, ಅಲ್ಪ ನೀರಾವರಿ ಬೆಳೆಗಳನ್ನು ಬೆಳೆಯುವಂತೆ ಹೇಳಿದ್ದಾರೆ.
ಜಿಲ್ಲೆಯ ಕೊಪ್ಪಳ ಹಾಗೂ ಗಂಗಾವತಿ ತಾಲೂಕಿನ ವ್ಯಾಪ್ತಿಯಲ್ಲಿ ಬರುವ ತುಂಗಭದ್ರಾ ಅಚ್ಚುಕಟ್ಟು ಪ್ರದೇಶದಲ್ಲಿ 37800 ಹೆಕ್ಟೇರ್ ಭತ್ತ ಬೆಳೆ ಬೆಳೆಯಲಾಗುತ್ತಿತ್ತು. ಆದರೆ, ತುಂಗಭದ್ರಾ ಜಲಾಶಯದಲ್ಲಿ ಈ ಬಾರಿ ನೀರಿನ ಸಂಗ್ರಹಣೆ ಪ್ರಮಾಣ ಕಡಿಮೆ ಇದೆ.
ಜಿಲ್ಲೆಯಲ್ಲಿ ಇದುವರೆಗೂ ಭತ್ತ ಬೆಳೆ ನಾಟಿಯಾಗದೇ, ಸಸಿ ಮಡಿಗಳಲ್ಲಿ ಇದ್ದು, ಭತ್ತ ನಾಟಿ ಮಾಡಲು 25 ರಿಂದ 40 ದಿವಸಗಳ ಸಸಿ ಸೂಕ್ತ. ಆದ್ದರಿಂದ ಈಗಿನ ಸಸಿ ಮಡಿಗಳು 45 ರಿಂದ 50 ದಿವಸಗಳದ್ದಾಗಿದ್ದು ನಾಟಿ ಮಾಡಲು ಯೋಗ್ಯವಿರುವುದಿಲ್ಲ.
ನಾಲೆಗಳಿಗೆ ನೀರು, ಮಂಡ್ಯದಲ್ಲಿ ಚುರುಕುಗೊಂಡ ಕೃಷಿ ಚಟುವಟಿಕೆ
ಆದ್ದರಿಂದ ರೈತರು ಭತ್ತದ ಬೆಳೆಯನ್ನು ಬೆಳೆಯುವ ಬದಲಿಗೆ, ಅಲ್ಪ ನೀರಾವರಿ ಬೆಳೆಗಳಾದ ಮೆಕ್ಕೆಜೋಳ, ನವಣೆ, ಸೂರ್ಯಕಾಂತಿ, ಜೋಳ ಹಾಗೂ ಕಡಲೆ ಬೆಳೆಗಳನ್ನು ಬೆಳೆದು ಆರ್ಥಿಕ ನಷ್ಟದಿಂದ ಪಾರಾಗುವುದು ಹಾಗೂ ಮಣ್ಣಿನ ಫಲವತ್ತತೆ ಹೆಚ್ಚಿಸುವುದು ಸೂಕ್ತ.
ರೈತರು ಇವೆಲ್ಲ ಅಂಶಗಳನ್ನು ಗಮನದಲ್ಲಿಟ್ಟುಕೊಂಡು ಭತ್ತ ಬೆಳೆ ಬದಲು ಪರ್ಯಾಯ ಅಲ್ಪ ನೀರಾವರಿ ಬೆಳೆಗಳನ್ನು ಬೆಳೆಯುವಂತೆ ಕೊಪ್ಪಳ ಜಂಟಿ ಕೃಷಿ ನಿರ್ದೇಶಕರು ಪ್ರಕಟಣೆಯಲ್ಲಿ ಮನವಿ ಮಾಡಿಕೊಂಡಿದ್ದಾರೆ.