ಕುಮಾರಸ್ವಾಮಿ ಸಿಡಿಸಿದ ಆಡಿಯೋ ಬಾಂಬ್ನಲ್ಲೇನಿದೆ?
ಬೆಂಗಳೂರು, ಮಾ. 22 : ದಕ್ಷ ಐಎಎಸ್ ಅಧಿಕಾರಿ ಡಿಕೆ ರವಿ ಅವರ ಸಾವಿನ ಪ್ರಕರಣಕ್ಕೆ ಸಂಬಂಧಪಟ್ಟಂತೆ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಆಡಿಯೋ ಬಾಂಬ್ ಸಿಡಿಸಿದ್ದಾರೆ. ರಾಜ್ಯ ಸರ್ಕಾರದ ಮೇಲೆ ಶಾಸಕರೊಬ್ಬರು ಒತ್ತಡ ಹೇರಿ ರವಿ ಅವರನ್ನು ಕೋಲಾರದಿಂದ ವರ್ಗಾವಣೆ ಮಾಡಿಸಿದ್ದಾರೆ ಎಂದು ಕುಮಾರಸ್ವಾಮಿ ದೂರಿದ್ದಾರೆ.
ಶನಿವಾರ ಬೆಂಗಳೂರಿನಲ್ಲಿ ಪತ್ರಿಕಾಗೋಷ್ಠಿ ನಡೆಸಿದ ಎಚ್.ಡಿ.ಕುಮಾರಸ್ವಾಮಿ ಅವರು, ಡಿಕೆ ರವಿ ಅವರನ್ನು ವರ್ಗಾವಣೆ ಮಾಡುವಂತೆ ಅವರ ಮಾವ ಮನವಿ ಮಾಡಿದ್ದಕ್ಕೆ ಸರ್ಕಾರ ವರ್ಗಾವಣೆ ಮಾಡಿಲ್ಲ, ಶಾಸಕರ ಒತ್ತಡಕ್ಕೆ ಮಣಿದು ವರ್ಗಾವಣೆ ಮಾಡಿದೆ ಎಂದು ಆರೋಪಿಸಿದರು. [ಯಾರನ್ನೂ ರಕ್ಷಿಸುವುದಿಲ್ಲ : ಕಡೆಗೂ ಬಾಯಿಬಿಟ್ಟ ಸಿದ್ದು]
ಕೋಲಾರದ ಶಾಸಕ ವರ್ತೂರ್ ಪ್ರಕಾಶ್ ಡಿಕೆ ರವಿ ಅವರನ್ನು ವರ್ಗಾವಣೆ ಮಾಡಿಸಿದ್ದಾರೆ. ರವಿ ಅವರು ವರ್ಗಾವಣೆಯಾಗುವ ವಿಚಾರ ಅವರಿಗೆ ಮೊದಲೇ ತಿಳಿದಿತ್ತು ಎಂದು ಕುಮಾರಸ್ವಾಮಿ ಹೇಳಿದ್ದಾರೆ. ಇದಕ್ಕೆ ಸಂಬಂಧಪಟ್ಟ ಆಡಿಯೋವನ್ನು ಅವರು ಬಿಡುಗಡೆ ಮಾಡಿದ್ದಾರೆ. [ಮೃತ ಡಿಕೆ ರವಿಯ ಖಾಸಗಿ ವಿಷಯಗಳು ಬಹಿರಂಗ]

ಮರಳು ಮಾಫಿಯಾಗೆ ಸಂಬಂಧಿಸಿದಂತೆ ಸರ್ಕಾರಿ ಅಧಿಕಾರಿಯೊಬ್ಬರಿಗೆ ಕೋಲಾರದ ಶಾಸಕ ವರ್ತೂರ್ ಪ್ರಕಾಶ್ ಧಮ್ಕಿ ಹಾಕುವ ಧ್ವನಿ ಆಡಿಯೋ ಕ್ಲಿಪ್ಪಿಂಗ್ನಲ್ಲಿದೆ. ಈ ಆಡಿಯೋದಲ್ಲಿಯೇ ಎರಡು ದಿನದಲ್ಲಿ ಇಲ್ಲಿ ಹೊಸ ಡಿಸಿ ಇರ್ತಾನೆ ಎಂದು ಶಾಸಕರು ಹೇಳಿದ್ದಾರೆ. ಆಡಿಯೋ ಕ್ಲಿಪ್ಪಿಂಗ್ ಪೂರ್ಣ ಮಾಹಿತಿ ಇಲ್ಲಿದೆ ನೋಡಿ.
ಅಧಿಕಾರಿ : ನಮಸ್ತೆ ಸಾರ್
ಶಾಸಕ ವರ್ತೂರು ಪ್ರಕಾಶ್ : ಎಲ್ಲಿದ್ದೀಯಪ್ಪ..?
ಅಧಿಕಾರಿ : ಮನೆಯಲ್ಲಿದ್ದೀನಿ ಸಾರ್
ವರ್ತೂರು ಪ್ರಕಾಶ್ : ಎರಡು ನಿಮಿಷ ಕೇಳಿಸ್ಕೊಳ್ತೀಯಾ. ನಾನ್ ಹೇಳೋದು.
ಅಧಿಕಾರಿ : ಹೇಳಿ ಸರ್
ವರ್ತೂರು ಪ್ರಕಾಶ್ : ನಾಳೆ ಅಲ್ಲ, ನಾಡಿದ್ದು ಕ್ಯಾಬಿನೆಟ್ ಮೀಟಿಂಗ್ ಇದೆ. 12ರಂದು
ಅಧಿಕಾರಿ : ಯೆಸ್. ಸರ್
ವರ್ತೂರು ಪ್ರಕಾಶ್ : 12ರಂದು ಕ್ಯಾಬಿನೆಟ್. 13ರಂದು ಹೊಸ ಡಿಸಿ ಇರ್ತಾನೆ ಇಲ್ಲಿ.
ಅಧಿಕಾರಿ : ಸರಿ ಸರ್
ವರ್ತೂರು ಪ್ರಕಾಶ್ : ನೀನು ಹಲ್ಕಾ ಕೆಲಸ ಮಾಡಿಕೊಂಡ್ರೆ, ಸಸ್ಪೆಂಡ್ ಆಗೋದ್ರ ಜೊತೆ, ನಿನ್ನ ಜೀವನ ಪೂರ್ತಿ ಅನ್ನ ಇಲ್ಲದಂತೆ ಮಾಡ್ತೀನಿ. 'ಗಾಂಚಾಲಿ ಜಾಸ್ತಿ ಆಗೋಯ್ತು ನಿಂದು. ಪೊಲೀಸ್ ಸ್ಟೇಷನ್ಗೆ ಫೋನ್ ಮಾಡಿ 4 ಲಾರಿ ಬಿಡಿಸಬೇಕು. ಕಂಪ್ಲೆಂಟ್ ಕೊಟ್ಟಿದ್ದೀಯಂತೆ ನೀನು. ಅವ್ರೇನು ಕೊಲೆ ಮಾಡಿಲ್ಲ. ರೌಡಿಗಳಲ್ಲ. ಇನ್ನೇನ್ ಮಾಡಿಲ್ಲ. ಸಬ್ ಇನ್ಸ್ಪೆಕ್ಟರ್ ನಾಗರಾಜ್ಗೆ ಕಂಪ್ಲೆಂಟ್ ಕೊಟ್ಟಿದ್ದೀಯ ಅಂತ ಅವನು ಹೇಳ್ದ.
ಅಧಿಕಾರಿ : ಸರ್
ವರ್ತೂರು ಪ್ರಕಾಶ್ : ನೀನೇ ಹೋಗಿ, ಲಾರಿ ಗಳನ್ನ ಬಿಡಿಸಿ ನನಗೆ ಫೋನ್ ಮಾಡಿದ್ರೆ ಸರಿ, ಇಲ್ಲ, ನಿನ್ನ ಕೆಲಸಕ್ಕೆ ಗ್ರಾಹಚಾರ ಬಿಡಿಸಾಕ್ತೀನಿ. ಈವಾಗ್ಲೇ ಹೇಳ್ತೀದ್ದೀನಿ.
ಅಧಿಕಾರಿ : ಸರ್, ನಮಗೆ ಡಿಸಿ ಅವರದ್ದು ಜಾಸ್ತಿ ಪ್ರಷರ್ ಇದೆ ಸರ್
ವರ್ತೂರು ಪ್ರಕಾಶ್ : ನಿನ್ನನ್ನ ಏನು ಸಸ್ಪೆಂಡ್ ಮಾಡೋಕೆ ಆಗಲ್ಲ ಡಿಸಿ. ನಾನು ನಿನ್ನ ಒಳ್ಳೇದಕ್ಕೆ ಹೇಳ್ತಿದ್ದೀನಿ. ಮುಂದಿನ ಪ್ರಮೋಷನ್ ಲಿಸ್ಟ್ ನಲ್ಲಿದ್ದೀಯಾ, ನೋಡು ಒಳ್ಳೇದಾಗುತ್ತೆ. ಡಿಸಿ ಮಾತು ಕೇಳಬೇಡ. ಎರಡು ರಾತ್ರಿ, ಎರಡು ಹಗಲು. ಅರ್ಥ ಆಯ್ತಾ
ಅಧಿಕಾರಿ : ಸರಿ ಸರ್
ವರ್ತೂರು ಪ್ರಕಾಶ್ : ಹೋಗಿ, ಇಮ್ಮಿಡಿಯಟ್ ಹೋಗಿ ಲಾರಿಗಳನ್ನ ಬಿಡಿಸು
ಅಧಿಕಾರಿ : ಸರಿ ಸರ್












Click it and Unblock the Notifications