ಡಿಸಿ ವರ್ಗಾವಣೆ, ಇಂದು ಕೋಲಾರ ಬಂದ್
ಕೋಲಾರ, ಅ.30 : ಕೋಲಾರ ಜಿಲ್ಲೆಯ ಖಡಕ್ ಜಿಲ್ಲಾಧಿಕಾರಿ ಡಿ.ಕೆ.ರವಿ ಅವರನ್ನು ವರ್ಗಾವಣೆಗೊಳಿಸಿ ಸರ್ಕಾರ ಬುಧವಾರ ಆದೇಶ ಹೊರಡಿಸಿದೆ. ಡಿಸಿ ವರ್ಗಾವಣೆ ಖಂಡಿಸಿ ಜಿಲ್ಲೆಯಲ್ಲಿ ಪ್ರತಿಭಟನೆ ನಡೆಯುತ್ತಿದ್ದು, ಇಂದು ಕೋಲಾರ ಬಂದ್ಗೆ ಕರೆ ನೀಡಲಾಗಿದೆ. ಖಾಸಗಿ ಶಾಲಾ ಕಾಲೇಜುಗಳ ಸಂಘ ಬಂದ್ಗೆ ಬೆಂಬಲ ನೀಡಿದೆ.
ಡಿ.ಕೆ.ರವಿ ಅವರನ್ನು ವರ್ಗಾವಣೆ ಮಾಡುವ ಪ್ರಸ್ತಾವವಿಲ್ಲ ಎಂದು ಕೋಲಾರ ಜಿಲ್ಲಾ ಉಸ್ತುವಾರಿ ಸಚಿವ ಯು.ಟಿ.ಖಾದರ್ ಕೆಲವು ದಿನಗಳ ಹಿಂದೆ ಹೇಳಿದ್ದರು. ಆದರೆ, ಬುಧವಾರ ರವಿ ಅವರನ್ನು ವರ್ಗಾವಣೆ ಮಾಡಲಾಗಿದ್ದು, ವಾಣಿಜ್ಯ ತೆರಿಗೆ ಇಲಾಖೆಯ ಹೆಚ್ಚುವರಿ ಆಯುಕ್ತ (ಜಾರಿ) ಹುದ್ದೆಗೆ ನಿಯೋಜಿಸಲಾಗಿದೆ. ಕೋಲಾರ ಜಿಲ್ಲಾಧಿಕಾರಿ ಸ್ಥಾನಕ್ಕೆ ಡಾ.ವಿ.ತ್ರಿಲೋಕ್ ಚಂದ್ರ ಅವರನ್ನು ನಿಯೋಜನೆ ಮಾಡಲಾಗಿದೆ. [ರವಿ ಸಾವಿಗೆ ಕಾರಣವೇನು? ಓಟ್ ಹಾಕಿ]

ಭೂ ಕಬಳಿಕೆದಾರರಿಗೆ ಸಿಂಹಸ್ವಪ್ನವಾಗಿದ್ದ ಡಿ.ಕೆ.ರವಿ ಅವರನ್ನು ವರ್ಗಾವಣೆಗೆ ಪ್ರಯತ್ನ ನಡೆದಿದೆ ಎಂಬ ಆರೋಪ ಕೆಲವು ದಿನಗಳ ಹಿಂದೆ ಕೇಳಿಬಂದಿತ್ತು. ಆಗ ಹೋರಾಟ ಮಾಡಿದ್ದ ಸಾರ್ವಜನಿಕರು ವರ್ಗಾವಣೆ ಮಾಡಬಾರದು ಎಂದು ಆಗ್ರಹಿಸಿದ್ದರು. ಇದಕ್ಕೆ ಮಣಿದಿದ್ದ ಸರ್ಕಾರ ವರ್ಗಾವಣೆ ಮಾಡುವುದಿಲ್ಲ ಎಂಬ ಭರವಸೆ ನೀಡಿತ್ತು.
ವರ್ಗಾವಣೆ ಬಯಸಿದ್ದರು : ಡಿ.ಕೆ. ರವಿ ಅವರು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಖುದ್ದಾಗಿ ಭೇಟಿ ಮಾಡಿ ತಮಗೆ ಭೂ ಮಾಫಿಯಾದಿಂದ ಪ್ರಾಣ ಬೆದರಿಕೆ ಇರುವುದರಿಂದ ವರ್ಗಾವಣೆ ಮಾಡುವಂತೆ ಮನವಿ ಸಲ್ಲಿಸಿದ್ದರು ಎಂದು ತಿಳಿದುಬಂದಿದೆ. ಆದ್ದರಿಂದ ಅವರನ್ನು ವರ್ಗಾವಣೆ ಮಾಡಿ ಆದೇಶ ಹೊರಡಿಸಲಾಗಿದೆ.
ಬಸ್ ಸಂಚಾರ ಸ್ಥಗಿತ : ಜಿಲ್ಲಾಧಿಕಾರಿ ಡಿ.ಕೆ.ರವಿ ಅವರ ವರ್ಗಾವಣೆ ಆದೇಶ ಖಂಡಿಸಿ ಪ್ರಗತಿಪರ ಸಂಘಟನೆಗಳು ಗುರುವಾರ ಕೋಲಾರ ಜಿಲ್ಲಾ ಬಂದ್ಗೆ ಕರೆ ಕೊಟ್ಟಿವೆ. ವ್ಯಾಪಾರಿಗಳು ಅಂಗಡಿ ಮುಂಗಟ್ಟುಗಳನ್ನು ಮುಚ್ಚಿ, ಪ್ರತಿಭಟನೆಗೆ ಬೆಂಬಲ ನೀಡಿದ್ದಾರೆ.
ಇಂದು ಬೆಳಗ್ಗೆಯಿಂದಲೇ ಕೋಲಾರದಲ್ಲಿ ಬಸ್ ಸಂಚಾರ ಸ್ಥಗಿತಗೊಂಡಿದ್ದು, ಖಾಸಗಿ ಶಾಲಾ ಕಾಲೇಜುಗಳ ಸಂಘ ಬಂದ್ಗೆ ಬೆಂಬಲ ನೀಡಿದ್ದು, ಶಾಲಾ ಕಾಲೇಜುಗಳಿಗೆ ರಜೆ ಘೋಷಿಸಲಾಗಿದೆ.
ಐಎಎಸ್ ಅಧಿಕಾರಿಗಳ ವರ್ಗಾವಣೆ
* ಕೋಲಾರ ಜಿ.ಪಂ. ಸಿಇಒ ಆರ್.ವಿನೋದ್ ಪ್ರಿಯಾ ಅವರನ್ನು ಸಕಾಲ ಯೋಜನೆಯ ಹೆಚ್ಚುವರಿ ಮಿಷನ್ ನಿರ್ದೇಶಕಿ ಸ್ಥಾನಕ್ಕೆ ವರ್ಗಾವಣೆ
* ಬಿಬಿಎಂಪಿ ಹೆಚ್ಚುವರಿ ಆಯುಕ್ತ ಕೆ.ಎಸ್.ಮಂಜುನಾಥ್ರನ್ನು ಕೋಲಾರ ಜಿ.ಪಂ.ಸಿಇಒ ಆಗಿ ನೇಮಕ ಮಾಡಲಾಗಿದೆ.
* ಕೋಲಾರ ಡಿಸಿ ಡಿ.ಕೆ.ರವಿ ವಾಣಿಜ್ಯ ತೆರಿಗೆ ಇಲಾಖೆಯ ಹೆಚ್ಚುವರಿ ಆಯುಕ್ತ (ಜಾರಿ) ಹುದ್ದೆಗೆ
* ವಾಣಿಜ್ಯ ತೆರಿಗೆ ಇಲಾಖೆಯ ಹೆಚ್ಚುವರಿ ಆಯುಕ್ತ (ಜಾರಿ) ಹುದ್ದೆಯಲ್ಲಿದ್ದ ಡಾ.ವಿ.ತ್ರಿಲೋಕ್ ಚಂದ್ರ ಅವರನ್ನು ಕೋಲಾರ ಜಿಲ್ಲಾಧಿಕಾರಿಯಾಗಿ ನಿಯೋಜಿಸಲಾಗಿದೆ.












Click it and Unblock the Notifications