ರಾಜ್ಯ ರಾಜಕೀಯದಲ್ಲಿ ಕ್ಷಿಪ್ರ ಬದಲಾವಣೆ: ಕೋಡಿಶ್ರೀ ಭವಿಷ್ಯ
ಬಾಳೆಹೊನ್ನೂರು, ಅ 27: ರಾಜಕೀಯ, ನೈಸರ್ಗಿಕ ಸಮತೋಲನದ ಬಗ್ಗೆ ಭವಿಷ್ಯ ನುಡಿಯುವ ಸ್ವಾಮೀಜಿ ಎಂದೇ ಪ್ರಸಿದ್ಧಿ ಪಡೆದಿರುವ ಕೋಡಿಮಠದ ಶ್ರೀ ಶಿವಾನಂದ ಶಿವಯೋಗಿ ರಾಜೇಂದ್ರ ಮಹಾಸ್ವಾಮಿಗಳು ಮತ್ತೊಂದು ಭವಿಷ್ಯ ನುಡಿದಿದ್ದಾರೆ.
ಬಾಳೆಹೊನ್ನೂರಿನಲ್ಲಿ ಸೋಮವಾರ (ಅ 26) ಮಾತನಾಡುತ್ತಿದ್ದ ಕೋಡಿಮಠದ ಶ್ರೀಗಳು, ರಾಜ್ಯ ರಾಜಕಾರಣದಲ್ಲಿ ಕೆಲವೊಂದು ಕ್ಷಿಪ್ರ ಬದಲಾವಣೆಯಾಗಲಿದೆ ಎಂದು ಭವಿಷ್ಯ ನುಡಿದಿದ್ದಾರೆ.
ಕಳೆದ ಬಿಬಿಎಂಪಿ ಚುನಾವಣೆಗೆ ಎರಡು ದಿನ ಮುನ್ನ ಭವಿಷ್ಯ ನುಡಿದಿದ್ದ ಶ್ರೀಗಳು, ಮೂರು ಪಕ್ಷಗಳಿಗೂ ಚುನಾವಣೆ ಪ್ರತಿಷ್ಠೆಯ ವಿಷಯವಾಗಿದ್ದರೂ, ಯಾವ ಪಕ್ಷಕ್ಕೂ ಬಹುಮತ ಸಿಗುವ ಸಾಧ್ಯತೆಯಿಲ್ಲ. ಯಾವುದೇ ಪಕ್ಷ ಏಕಾಂಗಿಯಾಗಿ ಅಧಿಕಾರಕ್ಕೆ ಬರಲು ಸಾಧ್ಯವಿಲ್ಲ ಎಂದಿದ್ದರು. (ಕೋಡಿಶ್ರೀಗಳ ಬಿಬಿಎಂಪಿ ಭವಿಷ್ಯ : ಅರ್ಧ ನಿಜ, ಅರ್ಧ ಸುಳ್ಳು)
ಅದರಂತೇ, ಬಿಜೆಪಿ ಬರೋಬ್ಬರಿ ನೂರು ಸ್ಥಾನದಲ್ಲಿ ಗೆದ್ದರೂ, ಅಧಿಕಾರದ ರುಚಿ ಅನುಭವಿಸಲು ಸಾಧ್ಯವಾಗಿರಲಿಲ್ಲ. ಈಗ ಸಂಪುಟ ವಿಸ್ತರಣೆ, ಮೂಲ ಕಾಂಗ್ರೆಸ್ಸಿಗರು, ವಲಸೆ ಕಾಂಗ್ರೆಸ್ಸಿಗರು ಎನ್ನುವ ವಿಷಯ ಚಾಲ್ತಿಯಲ್ಲಿರುವಾಗ ಶ್ರೀಗಳ ಭವಿಷ್ಯ ಮಹತ್ವ ಪಡೆದಿದೆ.
ಬಾಳೆಹೊನ್ನೂರಿನ ರಂಭಾಪುರಿ ಮಠಕ್ಕೆ ಭೇಟಿ ನೀಡಿ ಕೋಡಿಮಠದ ಶ್ರೀಗಳು ರಾಜ್ಯದಲ್ಲಿ ಮುಂದಿನ ದಿನಗಳಲ್ಲಿ ಉತ್ತಮ ಮಳೆ-ಬೆಳೆಯಾಗಲಿದೆ ಎಂದು ಕಾರ್ಣಿಕ ನುಡಿದು, ಭವಿಷ್ಯ ನಂಬುವ ರೈತರ ಮೊಗದಲ್ಲಿ ನಗುವನ್ನು ತಂದಿದ್ದಾರೆ. ಮುಂದೆ ಓದಿ..

ಎಂದಿನ ಶೈಲಿಯಲ್ಲಿ ಕೋಡಿಶ್ರೀಗಳು ಹೇಳಿದ್ದು ಹೀಗೆ..
'ಧರೆಯಿಂದ ಹಸಿರು ಪಚ್ಚೆಯನ್ನುಟ್ಟು ನಲಿದಾಳು. ಅರಸೊತ್ತಿಗೆ ಸಿರಿವಂತರ ಮನೆಗಳಿಗೆ ಬರಸಿಡಿಲು ಬಡಿದೀತು' ಎಂದು ಒಗಟಿನ ರೂಪದಲ್ಲಿ ಕೋಡಿಮಠದ ಶ್ರೀಗಳು ಬಾಳೆಹೊನ್ನೂರಿನಲ್ಲಿ ಕಾರ್ಣಿಕ ನುಡಿದಿದ್ದಾರೆ.

ಅದರ ವ್ಯಾಖ್ಯಾನ
ಮುಂದಿನ ದಿನಗಳಲ್ಲಿ ಮಳೆಬೆಳೆಯಿಂದ ರಾಜ್ಯ ಸುಭಿಕ್ಷವಾಗಲಿದೆ, ರೈತನಿಗೆ ಸಂತಸದಾಯಕವಾಗಲಿದೆ ಎಂದು ಶ್ರೀಗಳು ಹೇಳಿದ್ದಾರೆ. ಇದೇ ವರ್ಷದ ಜೂನ್ ತಿಂಗಳಲ್ಲಿ ಉತ್ತಮ ಮಳೆಯಾಗಲಿದೆ ಎಂದು ಶ್ರೀಗಳು ಹೇಳಿದ್ದರು. ಆದರೆ ರಾಜ್ಯದ ಬಹುತೇಕ ಪ್ರದೇಶಗಳು ಬರಗಾಲ ಪೀಡಿತವಾಗಿದೆ. ರೈತನು ಆತ್ಮಹತ್ಯೆಗೆ ಶರಣಾಗುತ್ತಿದ್ದಾನೆ.

ರಾಜ್ಯ ರಾಜಕೀಯ
ರಾಜ್ಯ ರಾಜಕೀಯದಲ್ಲಿ ಬದಲಾವಣೆಯಾಗುತ್ತದೆ ಎಂದು ಸ್ಥಾನಪಲ್ಲಟವಾಗುವ ಸೂಚನೆಯನ್ನು ಶ್ರೀಗಳು ಭವಿಷ್ಯರೂಪದಲ್ಲಿ ಇದೇ ಸಂದರ್ಭದಲ್ಲಿ ಹೇಳಿದ್ದಾರೆ. ನಾಲ್ಕೈದು ತಿಂಗಳ ಕೆಳಗೆ ಕಾಂಗ್ರೆಸ್ ನೇತೃತ್ವದ ಸಿದ್ದರಾಮಯ್ಯ ಸರ್ಕಾರಕ್ಕೆ ಸದ್ಯಕ್ಕೆ ಯಾವುದೇ ತೊಂದರೆಯಿಲ್ಲ. ಸಿಎಂ ಸಿದ್ದರಾಮಯ್ಯ ಸದ್ಯದ ಮಟ್ಟಿಗೆ ನಿರಾಂತಕವಾಗಿ ಆಡಳಿತ ನಡೆಸಬಹುದು ಎಂದು ಶ್ರೀಗಳು ಭವಿಷ್ಯ ನುಡಿದಿದ್ದನ್ನು ಇಲ್ಲಿ ಸ್ಮರಿಸಿಕೊಳ್ಳಬಹುದಾಗಿದೆ.

ಬಿಬಿಎಂಪಿ ಭವಿಷ್ಯ
ಬಿಬಿಎಂಪಿ ಚುನಾವಣೆಯ ಸಂದರ್ಭದಲ್ಲಿ ರಾಜ್ಯದ ವಿವಿಧ ಮಾಧ್ಯಮಗಳು ನಡೆಸಿದ ಸಮೀಕ್ಷೆಯ ಫಲಿತಾಂಶದಂತೇ, ಕೋಡಿಮಠದ ಶ್ರೀಗಳು ಭವಿಷ್ಯ ನುಡಿದಿದ್ದರು. ಯಾವುದೇ ಪಕ್ಷ ಏಕಾಂಗಿಯಾಗಿ ಅಧಿಕಾರಕ್ಕೆ ಬರಲು ಸಾಧ್ಯವಿಲ್ಲ. ಆದರೆ ಎಲ್ಲಾ ಲೆಕ್ಕಾಚಾರ ಉಲ್ಟಾ ಹೊಡೆದು ಬಿಜೆಪಿ ನೂರು ಸ್ಥಾನ ಗೆದ್ದು, ಮೇಯರ್ ಸ್ಥಾನಗಿಟ್ಟಿಸಲು ಮೂರು ಸ್ಥಾನದ ಕೊರತೆ ಎದುರಿಸಿತ್ತು. ಬಿಜೆಪಿ ಇನ್ನೇನು ಗದ್ದುಗೇರಿತು ಅನ್ನುವಷ್ಟರಲ್ಲಿ ಕಾಂಗ್ರೆಸ್ - ಜೆಡಿಎಸ್ ಮೈತ್ರಿಮಾಡಿಕೊಂಡು ಮೇಯರ್, ಉಪಮೇಯರ್ ಸ್ಥಾನ ಗಿಟ್ಟಿಸಿತ್ತು.

ಮೋದಿ ಬಗ್ಗೆ ಹೇಳಿದ್ದು
ಐಪಿಎಲ್ ಮಾಜಿ ಬಾಸ್ ಲಲಿತ್ ಮೋದಿ - ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಹಗರಣ ಮುಂದಿನ ದಿನಗಳಲ್ಲಿ ಮೋದಿ ಸರಕಾರಕ್ಕೆ ಕಂಟಕವಾಗಿ ಪರಿಣಮಿಸಲಿದೆ. ಈ ವಿದ್ಯಮಾನದಿಂದ 'ನಡೆಯುವ ಹಾದಿ ಮೂರು ಭಾಗವಾದೀತು' ಎಂದು ಕೋಡಿ ಮಠದ ಶ್ರೀಗಳು ಎಚ್ಚರಿಕೆ ನೀಡಿದ್ದರು. ಸದ್ಯದ ಮಟ್ಟಿಗೆ ಮೋದಿ ಸರಕಾರ ನಿರಾಂತಕವಾಗಿ ಸಾಗುತ್ತಿದೆ.












Click it and Unblock the Notifications