ಕೊಡಗಿನಲ್ಲಿ ಭುಗಿಲೆದ್ದ ಆಕ್ರೋಶ : ಬಂದ್ ಸಂಪೂರ್ಣ ಯಶಸ್ವಿ
ಮಡಿಕೇರಿ, ಜುಲೈ 14 : ಡಿವೈಎಸ್ಪಿ ಎಂ.ಕೆ.ಗಣಪತಿ ಅವರ ಆತ್ಮಹತ್ಯೆ ಪ್ರಕರಣವನ್ನು ಸಿಬಿಐ ತನಿಖೆಗೆ ಒಪ್ಪಿಸಬೇಕು ಮತ್ತು ಈ ಮೃತ ಗಣಪತಿ ಅವರ ಪತ್ನಿಗೆ ನ್ಯಾಯ ದೊರಕಿಸಬೇಕೆಂದು ಆಗ್ರಹಿಸಿ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿ ಕೊಡಗಿನಲ್ಲಿ ಕರೆ ನೀಡಿರುವ ಬಂದ್ಗೆ ವ್ಯಾಪಕ ಬೆಂಬಲ ವ್ಯಕ್ತವಾಗಿದೆ.
ಮೃತ ಎಂ.ಕೆ.ಗಣಪತಿ ಅವರ ಹುಟ್ಟೂರಾದ ರಂಗಸಮುದ್ರದಲ್ಲಿ ಬಂದ್ ನಡೆಸಲಾಗಿದ್ದು, ಪ್ರತಿಭಟನಾಕಾರರು ಜಾರ್ಜ್ ಪ್ರತಿಕೃತಿ ದಹಿಸಿ ಆಕ್ರೋಶ ವ್ಯಕ್ತಪಡಿಸಿದ್ದಲ್ಲದೆ, ಬೈಕ್ ರ್ಯಾಲಿ ನಡೆಸಿದ್ದಾರೆ. ಈ ಪ್ರತಿಭಟನೆಗೆ ಸಂಸದ ಪ್ರತಾಪ್ ಸಿಂಹ ಸೇರಿದಂತೆ ಹಲವು ಮುಖಂಡರು ಸಾಥ್ ನೀಡಿದ್ದಾರೆ. [Live : 'ಜಾರ್ಜ್ ರಾಜೀನಾಮೆ ಪಡೆದು, ಉತ್ತರ ಕೊಡಿ']
ಇಡೀ ಕೊಡಗಿನಲ್ಲಿ ಅಂಗಡಿ ಮುಂಗಟ್ಟುಗಳನ್ನು ವರ್ತಕರು ಸ್ವಯಂ ಪ್ರೇರಿತರಾಗಿ ಬಂದ್ ನೀಡುವ ಮೂಲಕ ಬೆಂಬಲ ನೀಡಿದ್ದರೆ, ಅಲ್ಲಲ್ಲಿ ವಿವಿಧ ಸಂಘಟನೆಗಳು ಟಯರ್ಗೆ ಬೆಂಕಿ ಹಚ್ಚಿ, ರಸ್ತೆ ತಡೆ ನಡೆಸಿ ಬೀದಿಗಿಳಿದು ಆಕ್ರೋಶ ವ್ಯಕ್ತಪಡಿಸಿದರು. [ಕೊಡಗು ಬಂದ್ ಚಿತ್ರಗಳು]
ಹಿಂದೂ ಜಾಗರಣಾ ವೇದಿಕೆ ಸೇರಿದಂತೆ ಹಿಂದೂಪರ ಸಂಘಟನೆಗಳು ಹಾಗೂ ಬಿಜೆಪಿ ಕಾರ್ಯಕರ್ತರು, ನಾಗರಿಕರು ಮಡಿಕೇರಿಯ ಜನರಲ್ ತಿಮ್ಮಯ್ಯ ಸರ್ಕಲ್ನಲ್ಲಿ ಸಮಾವೇಶಗೊಂಡು ಸರ್ಕಾರದ ಧೋರಣೆಯನ್ನು ಖಂಡಿಸಿದರಲ್ಲದೆ, ಸಿದ್ದರಾಮಯ್ಯ ನೇತೃತ್ವದ ಸರ್ಕಾರದ ವಿರುದ್ಧ ಧಿಕ್ಕಾರ ಕೂಗಿದರು.[ಕೆಜೆ ಜಾರ್ಜ್ ರಾಜೀನಾಮೆಗೆ ಆಗ್ರಹಿಸಿ ಕೊಡಗು ಬಂದ್]
ಇನ್ನು ಕೊಡಗಿನ ಹೆಬ್ಬಾಗಿಲು ಕುಶಾಲನಗರದಲ್ಲಿ ಬಂದ್ಗೆ ವ್ಯಾಪಕ ಬೆಂಬಲ ದೊರೆತಿದೆ. ಇಲ್ಲಿನ ಕೊಪ್ಪ ಗೇಟ್ನಲ್ಲಿ ಪ್ರತಿಭಟನಾಕಾರರು ರಸ್ತೆ ತಡೆ ನಡೆಸಿ ಯಾವುದೇ ವಾಹನಗಳ ಪ್ರವೇಶಕ್ಕೆ ಅವಕಾಶ ನೀಡುತ್ತಿಲ್ಲ. ಅಲ್ಲಿದೆ ಅಲ್ಲಿನ ಫೀಲ್ಡ್ ಮಾರ್ಷಲ್ ಕಾರ್ಯಪ್ಪ ಸರ್ಕಲ್ನಲ್ಲಿ ಟಯರ್ಗೆ ಬೆಂಕಿ ಹಚ್ಚಿ ಕೋಪತಾಪ ಹೊರಹಾಕಿದರು.
ಬೆಳಿಗ್ಗೆ 6 ಗಂಟೆಯಿಂದಲೇ ಬಂದ್ಗೆ ಭಾರೀ ಬೆಂಬಲ ದೊರೆತಿದ್ದು, ಖಾಸಗಿ ಬಸ್ ಮಾಲಿಕರ, ಚಾಲಕರ ಸಂಘ, ಆಟೋ ಚಾಲಕರ, ಮಾಲೀಕರ ಸಂಘ ಬಂದ್ಗೆ ಬೆಂಬಲ ನೀಡಿದ್ದರಿಂದ ಸಂಚಾರ ವ್ಯವಸ್ಥೆ ಅಸ್ತವ್ಯಸ್ಥಗೊಂಡಿದೆ. [ಸಿಐಡಿ ಮತ್ತು ನ್ಯಾಯಾಂಗ ತನಿಖೆಯ ನಡುವಿನ ವ್ಯತ್ಯಾಸವೇನು?]
ಮಕ್ಕಳು ಬಾರದ ಕಾರಣ ಶಾಲೆಗಳು ಬಂದ್ ಆಗಿವೆ. ವೀರಾಜಪೇಟೆಯ ಗಡಿಯಾರ ಕಂಬದ ಬಳಿ ಕೊಡವ ಸಮಾಜ, ಮಾಜಿ ಸೈನಿಕರ ಸಂಘ ಸೇರಿದಂತೆ ಸಂಘಟನೆಗಳು ಪ್ರತಿಭಟನೆ ನಡೆಸುತ್ತಿವೆ. ಇವತ್ತು ದ್ವಿತೀಯ ಪಿಯು ಪೂರಕ ಪರೀಕ್ಷೆ ನಡೆಯುತ್ತಿರುವ ಕಾರಣ ಆದಷ್ಟು ಮಟ್ಟಿಗೆ ವಿದ್ಯಾರ್ಥಿಗಳಿಗೆ ಪರೀಕ್ಷೆಗೆ ತೆರಳಲು ಅವಕಾಶ ಮಾಡಿಕೊಡಲಾಗುತ್ತಿದೆ. [ಗಣಪತಿ ಕುಟುಂಬಕ್ಕೆ ನ್ಯಾಯ ಸಿಗುವುದು ಅನುಮಾನ : ಪ್ರತಾಪ್]
ಈಗಾಗಲೇ ಬಂದ್ಗೆ ಕೊಡವ ಸಮಾಜ, ಗೌಡ ಸಮಾಜ, ವಾಹನ ಚಾಲಕರ ಸಂಘ, ಚೇಂಬರ್ ಆಫ್ ಕಾಮರ್ಸ್, ಭಾರತೀಯ ಮಜ್ದೂರ್ ಸಂಘ (ಬಿಎಂಎಸ್)ದ ಆಟೋ ಘಟಕ, ಕೊಡಗು ಜಿಲ್ಲಾ ಜಯಕರ್ನಾಟಕ ಸಂಘಟನೆ, ವೀರಾಜಪೇಟೆ ಜಾ.ವೇದಿಕೆ, ಅಖಿಲ ಕೊಡವ ಸಮಾಜ, ಜಿಲ್ಲಾ ಬೆಳೆಗಾರರ ಒಕ್ಕೂಟ, ಬಿಎಂಎಸ್ ಸಂಘಟನೆಯ ಕಟ್ಟಡ ಕಾರ್ಮಿಕರ ಸಂಘ, ಸ್ವಾಗತ ಯುವಕ ಸಂಘ, ಜನ ಸೇವಾ ಸಂಘ, ಸ್ವಾಮಿ ವಿವೇಕಾನಂದ ಜನ ಸೇವಾ ಸಂಘ, ಕುಶಾಲನಗರ ಕೊಡವ ಸಮಾಜ ಸೇರಿದಂತೆ ಹಲವು ಸಂಘಟನೆಗಳು ಬೆಂಬಲ ನೀಡಿರುವುದರಿಂದ ಬಂದ್ ಯಶಸ್ವಿಗೊಂಡಿದೆ. [ಡಿವೈಎಸ್ಪಿ ಗಣಪತಿ ಯಾರು? ಏನು? ಎತ್ತ?]
ಬಂದ್ ಸಂದರ್ಭ ಯಾವುದೇ ಅಹಿತಕರ ಘಟನೆ ನಡೆಯದಂತೆ ಬಿಗಿ ಪೊಲೀಸ್ ಬಂದೋಬಸ್ತ್ ಮಾಡಲಾಗಿದೆ. ಎಲ್ಲೆಡೆ ಖಾಕಿ ಕಾವಲು ಹಾಕಲಾಗಿದೆ. 1200 ಪೊಲೀಸ್ ಸಿಬ್ಬಂದಿಗಳು, 150 ಪೊಲೀಸ್ ಅಧಿಕಾರಿಗಳು, 25 ಕೆ.ಎಸ್.ಆರ್.ಪಿ ಹಾಗೂ 3 ಗಸ್ತು ವಾಹನಗಳನ್ನು ನಿಯೋಜಿಸಲಾಗಿದೆ. 100ರಿಂದ 150 ವಾಹನಗಳು ತಪಾಸಣೆ ನಡೆಸಲಿವೆ. ಅಗತ್ಯವಿರುವೆಡೆ ವೃತ್ತಿಪರ ಛಾಯಾಗ್ರಾಹಕರು ಮತ್ತು ವಿಡಿಯೋ ಗ್ರಾಫರನ್ನು ನಿಯೋಜಿಸಲಾಗಿದೆ.
ಜಿಲ್ಲೆಯ ಕೆಲವೆಡೆ ಸ್ಥಳೀಯ ವಾಹಿನಿಗಳ ಪ್ರಸಾರಕ್ಕೆ ತಡೆಯೊಡ್ಡಲಾಗಿದ್ದರೆ, ಮತ್ತೆ ಕೆಲವೆಡೆ ವಿದ್ಯುತ್ ಕಡಿತಗೊಳಿಸಲಾಗಿದೆ. ಇಡೀ ಜಿಲ್ಲೆಯ ಜನ ಜಾತಿ ಮತ ಮರೆತು ಬಂದ್ಗೆ ಬೆಂಬಲ ನೀಡಿರುವುದರಿಂದ ಈಗಾಗಲೇ ಬಂದ್ ಯಶಸ್ವಿಗೊಂಡಿದೆ. [ನ್ಯಾಯಾಂಗ ತನಿಖೆ ಮೇಲೆ ನಂಬಿಕೆ ಇಲ್ಲ: ಗಣಪತಿ ಪತ್ನಿ ಪಾವನಾ]

















Click it and Unblock the Notifications