ಚನ್ನಪಟ್ಟಣದಿಂದ ಡಿಸಿಎಂ ಡಿ.ಕೆ.ಶಿವಕುಮಾರ್ ಸ್ಪರ್ಧೆ: ಕೆ ಎನ್ ರಾಜಣ್ಣ ಹೇಳಿದ್ದೇನು?
ಹಾಸನ, ಸೆಪ್ಟೆಂಬರ್ 05: ಚನ್ನಪಟ್ಟಣ ವಿಧಾನಸಭಾ ಕ್ಷೇತ್ರ ಉಪಚುನಾವಣೆ ಕಾವು ಜೋರಾಗಿದೆ. ಚನ್ನಪಟ್ಟಣ ಉಪಚುನಾವಣೆಯಲ್ಲಿ ಗೆಲುವು ಸಾಧಿಸುವುದು ಮೈತ್ರಿ ನಾಯಕರಿಗೆ ಅಸ್ತಿತ್ವದ ಪ್ರಶ್ನೆಯಾದ್ರೆ, ಆಡಳಿತರೂಢ ಕಾಂಗ್ರೆಸ್ಗೆ ಪ್ರತಿಷ್ಠೆಯ ಪ್ರಶ್ನೆಯಾಗಿದೆ.
ಚನ್ನಪಟ್ಟಣ ಗೆಲ್ಲುವ ನಿಟ್ಟಿನಲ್ಲಿ ಕಾಂಗ್ರೆಸ್ ನಿಂದ ಉಪಮುಖ್ಯಮಂತ್ರಿ ಹಾಗೂ ಕೆಪಿಸಿಸಿ ಅಧ್ಯಕ್ಷರಾದ ಡಿ ಕೆ ಶಿವಕುಮಾರ್ ಅವರು ಸ್ಪರ್ಧೆ ಮಾಡಲಿದ್ದಾರೆ ಎನ್ನುವ ಚರ್ಚೆ ರಾಜಕೀಯ ವಲಯದಲ್ಲಿ ಕೇಳಿ ಬರುತ್ತಿದ್ದು, ಈ ಬಗ್ಗೆ ಸಚಿವ ಕೆ ಎನ್ ರಾಜಣ್ಣ ಪ್ರತಿಕ್ರಿಯಿಸಿದ್ದಾರೆ.

ಚನ್ನಪಟ್ಟಣ ಕ್ಷೇತ್ರದಿಂದ ಕಾಂಗ್ರೆಸ್ ಹೈಕಮಾಂಡ್ ಯಾರಿಗೆ ನಿಲ್ಲುಸ್ತಾರೆ ಅವರು ನಿಲ್ತಾರೆ. ಬಿ ಫಾರಂ ಕೋಡೊರು ಹೈಕಮಾಂಡ್ನವರು. ನಾನೇ ಅಂದರೆ ಕಾಂಗ್ರೆಸ್ ಅಭ್ಯರ್ಥಿ ಅಂತ. ಶಿವಕುಮಾರ್ ಅಪೇಕ್ಷೆ ವ್ಯಕ್ತಪಡಿಸಿದರೇ, ಶಿವಕುಮಾರ್ಗೆ ಅವಕಾಶ ಕೊಡಬಹುದು. ಇನ್ನೊಬ್ಬರು ಅಪೇಕ್ಷೆ ವ್ಯಕ್ತಪಡಿಸಿದರೆ ಇನ್ನೊಬ್ಬರಿಗೆ ಕೊಡಬಹುದು. ಡಿ.ಕೆ.ಶಿವಕುಮಾರ್ ಕೆಪಿಸಿಸಿ ಅಧ್ಯಕ್ಷರು, ಅವರ ಜಿಲ್ಲೆಗೆ ಸೇರಿರುವ ಚನ್ನಪಟ್ಟಣ ಕ್ಷೇತ್ರ ಎಂದು ಹೇಳಿದರು.
ಚನ್ನಪಟ್ಟಣ ಚುನಾವಣೆಯನ್ನು ಕಾಂಗ್ರೆಸ್ ಹೈಕಮಾಂಡ್ ತೀವ್ರವಾಗಿ ತೆಗೆದುಕೊಳ್ಳುತ್ತದೆ. ಆ ಚುನಾವಣೆ ಗೆಲ್ಲಲು ಎಲ್ಲಾ ಮುಖಂಡರು ಪ್ರಯತ್ನ ಮಾಡ್ತೇವೆ, ಯಾರೇ ನಿಂತರು ಎಲ್ಲರೂ ಅಭ್ಯರ್ಥಿಗಳು ತಿಳ್ಕಂಡು ಕೆಲಸ ಮಾಡುತ್ತೇವೆ ಯಾರು ನಿಲ್ತಾರೆ ಅದು ಒಂದು ನಿಮಿತ್ತ ಅಷ್ಟೇ, ಚನ್ನಪಟ್ಟಣ ಉಪಚುನಾವಣೆ ಕಾಂಗ್ರೆಸ್ ಪಕ್ಷದ ಮಾನ, ಮರ್ಯಾದೆ ನಮ್ಮ ಗೌರವದ ಪ್ರಶ್ನೆ ಅದು ಎಂದು ಕೆ ಎನ್ ರಾಜಣ್ಣ ತಿಳಿಸಿದ್ದಾರೆ.
ಕೆಪಿಸಿಸಿ ಅಧ್ಯಕ್ಷರ ಬದಲಾವಣೆ ವಿಚಾರವಾಗಿ ಮಾಧ್ಯಮಗಳ ಪ್ರಶ್ನೆಗೆ ಉತ್ತರಿಸಿ, ಸದ್ಯದಲ್ಲಿ ಆಗುತ್ತೆ ಅಂತ ನಾನೇನು ಅನ್ಕಂಡಿಲ್ಲ. ಯಾವತ್ತಿದ್ದರೂ ಒಂದು ದಿನ ಬದಲಾವಣೆ ಆಗಬೇಕು, ಯಾವತ್ತೋ ಒಂದು ದಿನ ಬದಲಾವಣೆ ಆಗುತ್ತದೆ. ಈಗ ಸದ್ಯದಲ್ಲಿ ಬದಲಾವಣೆ ಇಲ್ಲ ಅಂತ ಅನ್ಕಂಡಿದಿನಿ ಎಂದು ರಾಜಣ್ಣ ಹೇಳಿದರು.
ಮುಡಾ ಹಗರಣದಲ್ಲಿ ಅಧಿಕಾರಿ ಅಮಾನತು ವಿಚಾರವಾಗಿ ಮಾತನಾಡಿ, ತಪ್ಪು ಮಾಡಿದ್ದಾನೆ, ತಪ್ಪು ಮಾಡಿದ್ದಕ್ಕೆ ಶಿಕ್ಷೆ ಆಗುತ್ತದೆ. ಮುಖ್ಯಮಂತ್ರಿ ಅಧಿಕಾರಿ ಮೇಲೆ ಪ್ರಭಾವ ಬೀರಿ ಸೈಟ್ ತಗೊಂಡಿದ್ರೆ ಏಕೆ ಸಸ್ಪೆಂಡ್ ಮಾಡೋರು. ಅವರ ಪರವಾಗಿ ಇದ್ದವನನ್ನು ಅಮಾನತು ಮಾಡ್ತಾರಾ ಎಂದು ಪ್ರಶ್ನಿಸಿದ ಅವರು, ಪ್ರಕರಣ ಕೋರ್ಟ್ ಮುಂದೆ ಇದೆ. ಮುಡಾದಲ್ಲಿ ಸಿದ್ದರಾಮಯ್ಯ ಅವರ ಪಾತ್ರ ಯಾವ ಹಂತದಲ್ಲೂ ಇಲ್ಲ. ಸೈಟ್ ಹಂಚಿಕೆ ಆಗುವಾಗ ಇವರು ಅಧಿಕಾರದಲ್ಲಿ ಇಲ್ಲ, ವಿರೋಧ ಪಕ್ಷದಲ್ಲಿ ಇದ್ದರು. ಬಿಜೆಪಿ ಪಾರ್ಟಿಯ ಅಧ್ಯಕ್ಷರು, ಶಾಸಕರು, ಜೆಡಿಎಸ್, ಕಾಂಗ್ರೆಸ್ ಶಾಸಕರು ಇರುವ ಸಭೆಯಲ್ಲಿ ಸೈಟ್ ಕೊಟ್ಟಿದ್ದಾರೆ, ಇದರಲ್ಲಿ ಸಿದ್ದರಾಮಯ್ಯ ಅವರದ್ದು ಏನಿದೆ ಎಂದರು.
ರಾಜಕೀಯ ದುರುದ್ದೇಶದಿಂದ ಗೌರ್ನರ್ ಮೇಲೆ ಪ್ರಭಾವ ಬೀರಿ ಈ ರೀತಿ ಪರಿಸ್ಥಿತಿ ಸೃಷ್ಟಿಯಾಗಿದೆ.ಇದರಲ್ಲಿ ಸಿದ್ದರಾಮಯ್ಯ ಅವರದ್ದು ಯಾವುದೇ ಪಾತ್ರ ಇಲ್ಲದಿರುವುದರಿಂದ ನ್ಯಾಯಾಲಯದಲ್ಲಿ ನ್ಯಾಯ ಸಿಗುತ್ತೆ ಎಂದು ನಂಬಿದ್ದೇವೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಪರವಾಗಿ ಸಚಿವ ಕೆ ಎನ್ ರಾಜಣ್ಣ ಬ್ಯಾಟಿಂಗ್ ಬಿಸಿದ್ದಾರೆ.
ಸಿಎಂ ಆಗುತ್ತೇನೆ ಎಂದು ಹಿರಿಯ ಆರ್.ವಿ.ದೇಶಪಾಂಡೆ ಹೇಳಿಕೆ ವಿಚಾರವಾಗಿ ಮಾತನಾಡಿ, ಸಿಎಂ ಕುರ್ಚಿ ಖಾಲಿ ಇದೆಯಾ, ಖಾಲಿ ಇದ್ದರೆ ಕೇಳಬೇಕು. ಸಿಎಂ ಕುರ್ಚಿ ಒಂದೇ ಇರೋದು, ಕುರ್ಚಿ ಭರ್ತಿಯಾಗಿದೆ, ಬಹಳಷ್ಟು ಕುರ್ಚಿಗಳಿದ್ದರೆ ಕೇಳಬಹುದು, ಸಿಎಂ ಕುರ್ಚಿ ಒಂದೇ ಇರುವುದು. ಸಿಎಂ ಕುರ್ಚಿ ಖಾಲಿ ಆದ ಮೇಲೆ ಕೇಳಲಿ, ದೇಶಪಾಂಡೆ ಅವರೊಬ್ಬರೆ ಅಲ್ಲಾ ಇರೋದು. ದೇಶಪಾಂಡೆ ಅವರ ತರ ಒಂದು ಪಟ್ಟಿನೇ ಇದೆ, ಅವರ ಹೇಳಿಕೆಯನ್ನು ಗಮನಿಸಿ, ಕ್ಯಾಬಿನೆಟ್ ಮಿನಿಸ್ಟರ್ ಆಗಿದ್ದೆ ಈಗ ಅದರ ಬಗ್ಗೆ ಆಸಕ್ತಿ ಇಲ್ಲ. ಸಿದ್ದರಾಮಯ್ಯ ಒಪ್ಪಿದ್ರೆ ಮುಖ್ಯಮಂತ್ರಿ ಆಗ್ತೀನಿ ಅಂದಿದ್ದಾರೆ. ಸಿದ್ದರಾಮಯ್ಯ ಒಪ್ಪಿದ್ರೆ ಮುಖ್ಯಮಂತ್ರಿ ಆಗ್ತಾರಾ? ಹೈಕಮಾಂಡ್ ಒಪ್ಪಿದ್ರೆ ಮುಖ್ಯಮಂತ್ರಿ ಆಗುವುದು ಎಂದರು.
ದೇಶಪಾಂಡೆ ಅವರ ಹೇಳಿಕೆಯನ್ನು ತೀವ್ರವಾಗಿ ಪರಿಗಣಿಸಿ, ಚರ್ಚೆ ಮಾಡುವ ಅಗತ್ಯತೆ ಇಲ್ಲ. ಈ ರಾಜ್ಯದಲ್ಲಿ ಸಿದ್ದರಾಮಯ್ಯ ಅವರು ಹಿಂದುಳಿದ ವರ್ಗದ ಪ್ರಭಾವಿ ಮುಖಂಡ, ದೇವರಾಜ ಅರಸು, ಬಂಗಾರಪ್ಪ ನಂತರ ಅಹಿಂದ ವರ್ಗದ ಒಬ್ಬ ಪಾಪ್ಯುಲರ್ ಲೀಡರ್ ಸಿದ್ದರಾಮಯ್ಯ. ಒಂದೇ ಒಂದು ಕಪ್ಪು ಚುಕ್ಕೆ ಇಲ್ಲದೆ ನಲವತ್ತು ವರ್ಷ ರಾಜಕಾರಣ ಮಾಡಿದ್ದಾರೆ. ಏನಾದರೂ ಮಾಡಿ ಅವರ ಹೆಸರಿಗೆ ಮಸಿ ಬಳಿದು, ಅವರ ಪಾಪ್ಯುಲಾರಿಟಿ ಕಡಿಮೆ ಮಾಡಬೇಕು ಎಂದುಕೊಂಡಿದ್ದಾರೆ.
ಮೀರ್ ಸಾಧಿಕ್, ಮಲ್ಲಪ್ಪಶೆಟ್ಟಿ ಅಂತಹವರು ನಮ್ಮಲ್ಲೇ ಇದ್ದಾರೆ ಎಂಬ ಸಿಎಂ ಸಿದ್ದರಾಮಯ್ಯ ಹೇಳಿಕೆ ವಿಚಾರವಾಗಿ ಮಾತನಾಡಿ,ಟಿಪ್ಪುಸುಲ್ತಾನ್ ಬ್ರಿಟಿಷರ ವಿರುದ್ಧ ಹೋರಾಡುತ್ತಿದ್ದ, ಅವನ ಸಾವಿಗೆ ಯಾರು ಕಾರಣ ಮೀರ್ಸಾಧಿಕ್. ಕಿತ್ತೂರುರಾಣಿ ಚೆನ್ನಮ್ಮ ದೇಶದ ಸ್ವಾತಂತ್ರ್ಯಕ್ಕಾಗಿ ಬ್ರಿಟಿಷರ ವಿರುದ್ಧ ಹೋರಾಟ ಮಾಡ್ತಿದ್ರು, ಅವರ ಬ್ರಿಟಿಷರ ವಿರುದ್ಧ ಸೋಲಲು, ಸೆರೆ ಸಿಕ್ಕಲು ಕಾರಣ ಮಲ್ಲಪ್ಪಶೆಟ್ಟಿ. ಹಾಗೇ ನಮ್ಮ ದೇಶದ ಇತಿಹಾಸ ಇದ್ದೇ ಇರುತ್ತದೆ. ಒಂದೊಂದು ಕಾಲಘಟ್ಟದಲ್ಲಿ ಒಂದೊಂದು ಆಗುತ್ತದೆ, ಸಂಗೊಳ್ಳಿರಾಯಣ್ಣನ ಕಲ್ಪನೆ ಇಟ್ಟುಕೊಂಡು ಹೇಳಿದ್ದಾರೆ. ಈ ಸರ್ಕಾರದ ಬಗ್ಗೆ ಅವರೇನು ಹೇಳಿಲ್ಲ, ಈ ರಾಜಕೀಯ ಸನ್ನಿವೇಶಕ್ಕೆ ಅದನ್ನು ಹೋಲಿಕೆ ಮಾಡಲು ಹೋಗಬೇಡಿ ಎಂದು ತಿಳಿಸಿದರು.












Click it and Unblock the Notifications