ಆಸ್ಪತ್ರೆ, ಟೆಕ್ ಪಾರ್ಕ್ಗಳಲ್ಲಿಯೂ ಆರಂಭವಾಗಲಿದೆ 'ನಂದಿನಿ' ಔಟ್ಲೆಟ್
ಬೆಂಗಳೂರು, ಡಿಸೆಂಬರ್ 02: ಕೆಎಂಎಫ್ ನವ ದೆಹಲಿಯಲ್ಲಿ 'ನಂದಿನಿ' ಉತ್ಪನ್ನಗಳ ಮಾರಾಟದಲ್ಲಿ ಮೆಚ್ಚುಗೆಯನ್ನು ಪಡೆದುಕೊಂಡಿದೆ. ಕರ್ನಾಟಕದಲ್ಲಿ ತನ್ನ ಮಾರುಕಟ್ಟೆಯನ್ನು ಇನ್ನಷ್ಟು ವಿಸ್ತರಣೆ ಮಾಡಲು ಹೊಸ ಯೋಜನೆಯನ್ನು ರೂಪಿಸುತ್ತಿದೆ. ಇದಕ್ಕಾಗಿ ಟೆಕ್ ಪಾರ್ಕ್ ಮತ್ತು ಆಸ್ಪತ್ರೆಗಳ ಜೊತೆ ಒಪ್ಪಂದವನ್ನು ಮಾಡಿಕೊಳ್ಳಲಾಗುತ್ತದೆ.
ಕೆಎಂಎಫ್ನ ವ್ಯವಸ್ಥಾಪಕ ನಿರ್ದೇಶಕ ಎಂ. ಕೆ. ಜಗದೀಶ್ ಈ ಕುರಿತು ಮಾಹಿತಿ ನೀಡಿದ್ದಾರೆ. "ಭಾರತದ 13 ನಗರಗಳಲ್ಲಿ 40 ಶಾಖೆಗಳನ್ನು ಹೊಂದಿರುವ ಕ್ಲೌಡ್ 9 ಆಸ್ಪತ್ರೆಯ ಜೊತೆ ನಾವು ಶೀಘ್ರದಲ್ಲೇ ಒಪ್ಪಂದಕ್ಕೆ ಸಹಿ ಹಾಕಲಿದ್ದೇವೆ" ಎಂದು ಹೇಳಿದ್ದಾರೆ.

"ಆಸ್ಪತ್ರೆಯ ಔಟ್ಲೆಟ್ನಲ್ಲಿ ನಾವು ಸಿಹಿತಿಂಡಿಗಳು, ಗುಡ್ಲೈನ್ ಟೋನ್ಡ್ ಮಿಲ್ಕ್, ಬೆಣ್ಣೆ, ಕುಕ್ಕೀಸ್, ಚಾಕಲೇಟ್, ಐಸ್ಕ್ರೀಂ, ಹಾಲಿನ ಪುಡಿ ಸೇರಿದಂತೆ ಆಸ್ಪತ್ರೆಗೆ ಅಗತ್ಯವಿರುವ ಉತ್ಪನ್ನಗಳನ್ನು ಮಾರಾಟ ಮಾಡಲಿದ್ದೇವೆ" ಎಂದು ತಿಳಿಸಿದ್ದಾರೆ.
ಹೊಸ ಹೊಸ ಒಪ್ಪಂದಗಳು: ಹೊಸ ಹೊಸ ಒಪ್ಪಂದಗಳ ಮೂಲಕ ತಮ್ಮ ಮಾರುಕಟ್ಟೆಯನ್ನು ವಿಸ್ತರಣೆ ಮಾಡಲು ಕೆಎಂಎಫ್ ಸದಾ ಸಿದ್ಧವಿದೆ. ಇದಕ್ಕಾಗಿಯೇ ಆಸ್ಪತ್ರೆ, ಟೆಕ್ ಪಾರ್ಕ್ಗಳ ಜೊತೆ ಒಪ್ಪಂದವನ್ನು ಮಾಡಿಕೊಳ್ಳುತ್ತಿದ್ದೇವೆ. ಇದರಿಂದಾಗಿ ಉತ್ಪನ್ನಗಳ ಮಾರಾಟಕ್ಕೆ ಸಹಾಯಕವಾಗಲಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.
ಅಂತರಾಷ್ಟ್ರೀಯ ಟೆಕ್ಪಾರ್ಕ್, ಮಾನ್ಯತಾ ಟೆಕ್ ಪಾರ್ಕ್ನಲ್ಲಿ ಈಗಾಗಲೇ ಕೆಎಂಎಫ್ನ ಎರಡು ಔಟ್ಲೆಟ್ಗಳಿವೆ. ಇದೇ ಮಾದರಿಯಲ್ಲಿ ಬೇರೆ ಟೆಕ್ ಪಾರ್ಕ್ಗಳಲ್ಲಿ ಔಟ್ಲೆಟ್ ತೆರೆಯಲು ನಾವು ಬಯಸಿದ್ದೇವೆ. ನಮ್ಮ ಉತ್ಪನ್ನಗಳ ಗುಣಮಟ್ಟದ ಬಗ್ಗೆ ಎಲ್ಲರಿಗೂ ತಿಳಿದಿದೆ. ಆದ್ದರಿಂದ ಒಪ್ಪಿಗೆ ಸಿಗುವ ನಿರೀಕ್ಷೆ ಇದೆ.
ಹೆಲ್ತ್ ಕಾರ್ಟ್ ಜೊತೆ ಒಪ್ಪಂದ ಮಾಡಿಕೊಂಡು ಪ್ರೊಟಿನ್ ಯುಕ್ತ ಉತ್ಪನ್ನಗಳನ್ನು ಸಹ ಮಾರಾಟ ಮಾಡಲು ಕೆಎಂಎಫ್ ಮುಂದಾಗಿದೆ. ಈಗಾಗಲೇ ದೆಹಲಿ ಮಾರುಕಟ್ಟೆಯಲ್ಲಿ ಉತ್ಪನ್ನಗಳಿಗೆ ಉತ್ತಮ ಪ್ರತಿಕ್ರಿಯೆ ಸಿಕ್ಕಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
'ನಂದಿನಿ' ಈಗಾಗಲೇ ಜಾಗತಿಕ ಬ್ರಾಂಡ್ ಆಗಿದೆ. ದುಬೈನಲ್ಲಿಯೂ ನಂದಿನಿ ಔಟ್ಲೆಟ್ ಇದೆ. ಇಲ್ಲಿ ಐಸ್ಕ್ರೀಂಗಳಿಗೆ ಭಾರೀ ಬೇಡಿಕೆ ಇದೆ. ಸೌದಿ ಅರೇಬಿಯಾ ಮತ್ತು ಕತಾರ್ನಲ್ಲಿಯೂ ಔಟ್ಲೆಟ್ ತೆರೆಯಲು ಈಗ ಕೆಎಂಎಫ್ ಚಿಂತನೆ ನಡೆಸುತ್ತಿದೆ.
ಕೆಎಂಎಫ್ ಬೆಂಗಳೂರು ನಗರದಲ್ಲಿ 'ನಂದಿನಿ' ಬ್ರಾಂಡ್ ಇಡ್ಲಿ ಮತ್ತು ದೋಸೆ ಹಿಟ್ಟನ್ನು ಮಾರಾಟ ಮಾಡಲಿದೆ. 900 ಗ್ರಾಂ ಮತ್ತು 450 ಗ್ರಾಂ ಪ್ಯಾಕ್ಗಳು ಕೆಲವೇ ದಿನಗಳಲ್ಲಿ ಮಾರುಕಟ್ಟೆಗೆ ಬರಲಿವೆ. ಖಾಸಗಿ ಅವರಿಗೆ ಪೈಪೋಟಿ ನೀಡಲು 5 ರೂ. ಕಡಿಮೆ ದರದಲ್ಲಿ ಇದನ್ನು ಮಾರುಕಟ್ಟೆಗೆ ಪರಿಚಯಿಸಲಾಗುತ್ತಿದೆ.
ಬೆಂಗಳೂರು ನಗರದಲ್ಲಿ ನಂದಿನಿ ಉತ್ಪನ್ನಗಳ ಸರಬರಾಜು ಮಾಡಲು ಕೆಎಂಎಫ್ ಹೊಸ ಹೊಸ ಯೋಜನೆ ತಯಾರಿಸುತ್ತಿದೆ. ಸದ್ಯ ನಗರವನ್ನು 48 ವಿಭಾಗ ಮಾಡಿಕೊಂಡು ವಿಭಾಗವಾರು ಉತ್ಪನ್ನಗಳನ್ನು ಹಂಚಿಕೆ ಮಾಡುತ್ತಿದೆ. ಇಡ್ಲಿ ಮತ್ತು ದೋಸೆ ಹಿಟ್ಟು ಮಾರಾಟಕ್ಕೆ ಜಯನಗರದಲ್ಲಿ ಪ್ರತ್ಯೇಕ ಘಟಕವನ್ನು ಸ್ಥಾಪನೆ ಮಾಡಲಾಗಿದೆ.
ನವೆಂಬರ್ 27ರಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಇಡ್ಲಿ, ದೋಸೆ ಹಿಟ್ಟು ಮಾರಾಟಕ್ಕೆ ಚಾಲನೆ ನೀಡಬೇಕಿತ್ತು. ಆದರೆ ಈ ಕಾರ್ಯಕ್ರಮವನ್ನು ಮುಂದೂಡಿಕೆ ಮಾಡಲಾಗಿದೆ. ಈಗಾಗಲೇ ಪ್ರಾಯೋಗಿಕವಾಗಿ ಹಿಟ್ಟನ್ನು ಪರೀಕ್ಷಿಸಲಾಗಿದ್ದು, ಇದು ಗ್ರಾಹಕರ ನೆಚ್ಚಿನ ಬ್ರಾಂಡ್ ಆಗಲಿದೆ ಎಂದು ಅಧಿಕಾರಿಗಳು ವಿಶ್ವಾಸವನ್ನು ವ್ಯಕ್ತಪಡಿಸಿದ್ದಾರೆ.












Click it and Unblock the Notifications