ಹಾಲಿನ ಬೆಲೆ ಏರಿಕೆ ಬಳಿಕ ಕ್ಷೀರ ಭಾಗ್ಯ ಹಾಲಿನ ಪುಡಿ ಬೆಲೆ ಏರಿಸಲು ಕೆಎಂಎಫ್ ಚಿಂತನೆ
ಬೆಂಗಳೂರು, ಜುಲೈ 25: ಮಕ್ಕಳಲ್ಲಿ ಅಪೌಷ್ಟಿಕತೆ ದೂರ ಮಾಡುವ ಉದ್ದೇಶದಿಂದ ಇದೇ ಸಿದ್ದರಾಮಯ್ಯ ಸರ್ಕಾರ ಆರಂಭಿಸಿದ್ದ ಕ್ಷೀರ ಭಾಗ್ಯ ಯೋಜನೆಯಡಿ ಹಾಲು ಪೂರೈಸುವುದರಿಂದ ರಾಜ್ಯ ಸರ್ಕಾರಕ್ಕೆ ಹೆಚ್ಚಿನ ಆರ್ಥಿಕ ಹೊರೆಯಾಗುವ ಸಾಧ್ಯತೆ ಇದೆ.
ಹೀಗಾಗಿ ಕರ್ನಾಟಕ ಹಾಲು ಮಹಾಮಂಡಳ (ಕೆಎಂಎಫ್) ಶಾಲೆಗಳಿಗೆ ಸರಬರಾಜು ಮಾಡುವ ಹಾಲಿನ ಪುಡಿಯ ದರವನ್ನು ಹೆಚ್ಚಿಸುವಂತೆ ಒತ್ತಾಯಿಸುತ್ತಿದೆ. ಇತ್ತೀಚೆಗಷ್ಟೇ ಹಾಲಿನ ದರವನ್ನು ಲೀಟರ್ಗೆ 3 ರೂಪಾಯಿಗಳಷ್ಟು ಹೆಚ್ಚಿಸಿದ ನಂತರ KMF ಈಗ ಹಾಲಿನ ಪುಡಿಯ ಬೆಲೆಯಲ್ಲಿ ಹೆಚ್ಚಳದ ಮೇಲೆ ಕಣ್ಣಿಟ್ಟಿದೆ. ಈ ಕುರಿತು ಇತ್ತೀಚೆಗೆ ನಡೆದ ಕೆಎಂಎಫ್ ಸಭೆಯಲ್ಲಿ ಚರ್ಚಿಸಲಾಗಿದ್ದು, ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲು ನಿರ್ಧರಿಸಲಾಗಿದೆ.

ಪ್ರತಿ ಕೆಜಿ ಹಾಲಿನ ಪುಡಿಗೆ ಈಗಿರುವ 300 ರೂಪಾಯಿ ಪ್ಲಸ್ ಜಿಎಸ್ಟಿ ಸೇರಿ 350 ರೂಪಾಯಿ ಆಗುತ್ತದೆ. ಈಗ ಜಿಎಸ್ಟಿಗೆ ಬೆಲೆ ಏರಿಕೆ ಕೋರಿ ಕೆಎಂಎಫ್ ಸಲ್ಲಿಸಿದ್ದ ಪ್ರಸ್ತಾವನೆಯನ್ನು ಹಣಕಾಸು ಇಲಾಖೆ ತಿರಸ್ಕರಿಸಿದೆ. ಆದಾಗ್ಯೂ, ಫೆಡರೇಶನ್ ಸರ್ಕಾರಕ್ಕೆ ಇನ್ನೂ ಒಂದು ಪ್ರಸ್ತಾವನೆಯನ್ನು ಸಲ್ಲಿಸಲು ಸಿದ್ಧವಾಗಿದೆ.
ಮೂಲಗಳ ಪ್ರಕಾರ ಹಾಲಿನ ಪುಡಿಯ ದರವನ್ನು ಕೆಜಿಗೆ ಈಗಿರುವ 300 ರೂ.ನಿಂದ 375 ರೂ.ಗೆ ಏರಿಸಲು ಚರ್ಚಿಸಲಾಗಿದೆ. ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯಿಂದ ಲಭ್ಯವಿರುವ ಅಂಕಿಅಂಶಗಳ ಪ್ರಕಾರ, ಹಾಲಿನ ಪುಡಿಯ ಬೆಲೆಯನ್ನು ಮಾರ್ಚ್ 2023ರಲ್ಲಿ ಕೆಜಿಗೆ 275 ರಿಂದ 300 ರೂ.ಗೆ ಹೆಚ್ಚಿಸಲಾಗಿದೆ.
ಕ್ಷೀರ ಭಾಗ್ಯ ಯೋಜನೆ ಜಾರಿಗೊಳಿಸಲು ಇಲಾಖೆ ವಾರ್ಷಿಕ ಸುಮಾರು 700 ಕೋಟಿ ರೂಪಾಯಿ ವೆಚ್ಚ ಮಾಡುತ್ತದೆ. ಈಗ ಮತ್ತೆ ಬೆಲೆ ಏರಿಕೆಯಾದರೆ, ನಮ್ಮ ವೆಚ್ಚವೂ ಹೆಚ್ಚಾಗುತ್ತದೆ ಮತ್ತು ಆರು ತಿಂಗಳ ಅವಧಿಯಲ್ಲಿ ಬೆಲೆಯನ್ನು ಹೆಚ್ಚಿಸುವುದು ಕಾರ್ಯಸಾಧ್ಯವಲ್ಲ ಎಂದು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯ ಅಧಿಕಾರಿಯೊಬ್ಬರು ಅಭಿಪ್ರಾಯಪಟ್ಟಿದ್ದಾರೆ.
ಒಂದು ಕೆಜಿ ಹಾಲಿನ ಪುಡಿಯಿಂದ 11 ಲೀಟರ್ ಹಾಲು ತಯಾರಿಸಬಹುದು. ಪ್ರತಿ ಮಗುವಿಗೆ 18 ಗ್ರಾಂ ಪುಡಿ ಮತ್ತು 10 ಗ್ರಾಂ ಸಕ್ಕರೆ ಬಳಸಿ ತಯಾರಿಸಿದ 150 ಮಿಲಿ ಹಾಲು ನೀಡಲಾಗುತ್ತದೆ. ಸರ್ಕಾರಿ ಮತ್ತು ಅನುದಾನಿತ ಶಾಲೆಗಳಲ್ಲಿ 1 ರಿಂದ 10ನೇ ತರಗತಿಯ ವಿದ್ಯಾರ್ಥಿಗಳು ಕ್ಷೀರ ಭಾಗ್ಯ ಯೋಜನೆಯಡಿ ಹಾಲು ಪಡೆಯುತ್ತಾರೆ. ವಾರದಲ್ಲಿ ಐದು ದಿನ ಮಕ್ಕಳಿಗೆ ಹಾಲು ನೀಡಲಾಗುತ್ತದೆ.
ಕ್ಷೀರ ಭಾಗ್ಯ ಯೋಜನೆಯಡಿ ಹಾಲು ಪೂರೈಸಲು ಇಲಾಖೆಗೆ ಪ್ರತಿ ವರ್ಷ 250 ಮೆಟ್ರಿಕ್ ಟನ್ ಹಾಲಿನ ಪುಡಿ ಬೇಕಾಗುತ್ತದೆ. ಈ ವರ್ಷದ ಮಾರ್ಚ್ನಲ್ಲಿ ಬೆಲೆ ಏರಿಕೆಯಾಗುವ ಮೊದಲು, ಕೆಎಂಎಫ್ ಶಾಲೆಗಳಿಗೆ ಹಾಲಿನ ಪುಡಿ ಪೂರೈಕೆಯನ್ನು ಎರಡು ತಿಂಗಳಿನಿಂದ ನಿಲ್ಲಿಸಿತ್ತು. ಮುಖ್ಯ ಕಾರ್ಯದರ್ಶಿ ಮಧ್ಯಪ್ರವೇಶಿಸಿದ ನಂತರ ಪೂರೈಕೆ ಪುನರಾರಂಭವಾಯಿತು.
ಬೆಲೆ ಸಮಸ್ಯೆಯಿಂದಾಗಿ ಪೂರೈಕೆಗೆ ಅಡ್ಡಿಪಡಿಸದಂತೆ ನಾವು ಕೆಎಂಎಫ್ಗೆ ಸ್ಪಷ್ಟವಾಗಿ ಸೂಚಿಸಿದ್ದೇವೆ. ಒಂದು ವೇಳೆ ಪೂರೈಕೆ ನಿಲ್ಲಿಸಿದರೆ ಅವರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ಕೆಎಂಎಫ್ನ ಅಧಿಕಾರಿಗಳಿಗೆ ಎಚ್ಚರಿಕೆ ನೀಡಲಾಗಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಈ ಬಗ್ಗೆ ಪ್ರಧಾನ ಕಾರ್ಯದರ್ಶಿ (ಶಾಲಾ ಶಿಕ್ಷಣ ಮತ್ತು ಸಾಕ್ಷರತೆ) ರಿತೇಶ್ ಕುಮಾರ್ ಸಿಂಗ್, "ಅವರು ಪ್ರಸ್ತಾವನೆಯನ್ನು ಸಲ್ಲಿಸಿದರೆ, ನಾನು ಅದನ್ನು ಹಣಕಾಸು ಇಲಾಖೆಗೆ ರವಾನಿಸುತ್ತೇನೆ" ಎಂದು ಹೇಳಿದರು.












Click it and Unblock the Notifications