ಗ್ರಾಹಕರಿಗೆ ಬಂಪರ್ ಕೊಡುಗೆ ನೀಡಿದ ಕೆಎಂಎಫ್
ಬೆಂಗಳೂರು, ಜೂನ್ 29; ಕರ್ನಾಟಕ ಹಾಲು ಮಹಾಮಂಡಳಿ ನಿಯಮಿತ ಗ್ರಾಹಕರಿಗೆ ಸಿಹಿಸುದ್ದಿ ನೀಡಿದೆ. ಕೋವಿಡ್ ಕಾಲದಲ್ಲಿ ತುಪ್ಪ, ಬೆಣ್ಣೆ ಮತ್ತು ಹಾಲಿನ ಪುಡಿಗಳ ದರವನ್ನು ಕಡಿತಗೊಳಿಸಿ ಆದೇಶ ಹೊರಡಿಸಿದೆ.
ಮಂಗಳವಾರ ಕೆಎಂಎಫ್ ವ್ಯವಸ್ಥಾಪಕ ನಿರ್ದೇಶಕರು ಈ ಕುರಿತು ಆದೇಶ ಹೊರಡಿಸಿದ್ದಾರೆ. ಕೋವಿಡ್ 2ನೇ ಅಲೆಯ ಸಂದರ್ಭದಲ್ಲಿ ಗ್ರಾಹಕರ ಹಿತವನ್ನು ಗಮನದಲ್ಲಿಟ್ಟುಕೊಂಡು ದರವನ್ನು ಕಡಿತಗೊಳಿಸಲಾಗಿದೆ ಎಂದು ತಿಳಿಸಿದ್ದಾರೆ.
1 ಕೆಜಿ ನಂದಿನಿ ತುಪ್ಪದ ದರ 470 ರೂ. ಇತ್ತು. ಇದನ್ನು 450 ರೂ.ಗಳಿಗೆ ಇಳಿಕೆ ಮಾಡಲಾಗಿದೆ. ಒಂದು ಕೆಜಿ ಬೆಣ್ಣೆಯ ದರ 440 ರೂ. ಇತ್ತು. ಅದನ್ನು 420 ರೂ.ಗಳಿಗೆ ಇಳಿಸಲಾಗಿದೆ.

ನಂದಿನಿ ಕೆನೆರಹಿತ ಹಾಲಿನ ಪುಡಿಯ ದರವನ್ನು 300 ರೂ.ನಿಂದ 270 ರೂ.ಗಳಿಗೆ ಇಳಿಕೆ ಮಾಡಲಾಗಿದೆ. ಗ್ರಾಹಕರು ಇದರ ಸದುಪಯೋಗ ಪಡೆದುಕೊಂಡು ರೈತರಿಗೆ ನೆರವಾಗಬೇಕು ಎಂದು ಮನವಿ ಮಾಡಲಾಗಿದೆ.
ಕೋವಿಡ್ ಸಮಯದಲ್ಲಿ ಕೆಎಂಎಫ್ ದರ ಕಡಿತ ಮಾಡುತ್ತಿರುವುದು ಇದೇ ಮೊದಲಲ್ಲ. ಕೋವಿಡ್ ಮೊದಲನೇ ಅಲೆ ಸಂದರ್ಭದಲ್ಲಿಯೂ ಕೆಎಂಎಫ್ ದರ ಕಡಿತ ಮಾಡಿ ಗ್ರಾಹಕರಿಗೆ ಕೊಡುಗೆಯನ್ನು ನೀಡಿತ್ತು.
ಕೋವಿಡ್ ಲಾಕ್ಡೌನ್ ಸಂದರ್ಭದಲ್ಲಿ ರಾಜ್ಯದಲ್ಲಿ ಹಾಲಿಗೆ ಬೇಡಿಕೆ ಕಡಿಮೆಯಾಗಿತ್ತು. ಆದರೆ ಉತ್ಪಾದನೆ ಹೆಚ್ಚಾಗಿದ್ದರಿಂದ ರೈತರಿಂದ ಖರೀದಿ ಮಾಡುವ ಹಾಲಿನ ದರವನ್ನು ಕಡಿತಗೊಳಿಸಲಾಗಿತ್ತು.












Click it and Unblock the Notifications