ವಿದ್ಯುತ್ ದರ ಹೆಚ್ಚಳಕ್ಕೆ ಸರ್ಕಾರಕ್ಕೆ ಮನವಿ ಮಾಡಿದ ಕೆಇಆರ್ಸಿ
ಬೆಂಗಳೂರು, ಜನವರಿ 10 : ಕರ್ನಾಟಕ ವಿದ್ಯುತ್ ನಿಯಂತ್ರಣ ಆಯೋಗ ವಿದ್ಯುತ್ ದರ ಹೆಚ್ಚಳ ಮಾಡಲು ಅನುಮತಿ ನೀಡಬೇಕು ಎಂದು ಸರ್ಕಾರಕ್ಕೆ ಮನವಿ ಮಾಡಿದೆ. 2019ರ ಮಾರ್ಚ್ನಲ್ಲಿ ವಿದ್ಯುತ್ ದರವನ್ನು ಹೆಚ್ಚಳ ಮಾಡಲಾಗಿತ್ತು.
ಎಲ್ಲಾ ವಿದ್ಯುತ್ ಸರಬರಾಜು ಕಂಪನಿಗಳ ಪ್ರಸ್ತಾವನೆಯನ್ನು ಪರಿಗಣಿಸಿ ಕೆಇಆರ್ಸಿ ಸರ್ಕಾರಕ್ಕೆ ಮನವಿ ಸಲ್ಲಿಸಿದೆ. ಇಂಧನ ಖಾತೆ ಮುಖ್ಯಮಂತ್ರಿ ಬಿ. ಎಸ್. ಯಡಿಯೂರಪ್ಪ ಅವರ ಕೈಯಲ್ಲಿಯೇ ಇದೆ. ಇದಕ್ಕೆ ಒಪ್ಪಿಗೆ ಸಿಗಲಿದೆಯೇ? ಕಾದು ನೋಡಬೇಕು.
ಕೆಇಆರ್ಸಿ ಇಂಧನ ವೆಚ್ಚ ಹೊಂದಾಣಿಕೆ ಶುಲ್ಕವನ್ನು ಅಲ್ಪ ಪ್ರಮಾಣದಲ್ಲಿ ಕಡಿಮೆ ಮಾಡುವುದಾಗಿ ಘೋಷಣೆ ಮಾಡಿತ್ತು. ಮಾರ್ಚ್ 2020ರಿಂದ ಜಾರಿಗೆ ಬರುವಂತೆ ಇಂಧನ ವೆಚ್ಚ ಹೊಂದಾಣಿಕೆ ಶುಲ್ಕ ಶೇ 60ರಷ್ಟು ಕಡಿಮೆಯಾಗಲಿದೆ.
ಈಗಾಗಲೇ ಅಗತ್ಯ ವಸ್ತುಗಳ ಬೆಲೆಗಳು ಹೆಚ್ಚಾಗಿ ಜನರ ಜೇಬಿಗೆ ಕತ್ತರಿ ಬಿದ್ದಿದೆ. ಬೆಂಗಳೂರು ಜಲಮಂಡಳಿ ಸಹ ನೀರಿನ ದರ ಏರಿಕೆಗಾಗಿ ಮನವಿ ಸಲ್ಲಿಸಿದೆ. ದರ ಹೆಚ್ಚಳಕ್ಕೆ ಸರ್ಕಾರ ಅನುಮಿತಿ ನೀಡಿದರೆ ಜನರ ವಿರೋಧ ಕಟ್ಟಿಕೊಳ್ಳಬೇಕಾಗುತ್ತದೆ ಎಂಬ ಆತಂಕವೂ ಇದೆ.

ವಿದ್ಯುತ್ ದರ ಹೆಚ್ಚಳ
ಮೊದಲು ಮೆಸ್ಕಾಂ, ಬಳಿಕ ಬೆಸ್ಕಾಂ ವಿದ್ಯುತ್ ದರ ಹೆಚ್ಚಳ ಮಾಡಲು ಅನುಮತಿ ನೀಡಬೇಕು ಎಂದು ಕೋರಿದ್ದವು. ವಿದ್ಯುತ್ ಸರಬರಾಜು ಕಂಪನಿಗಳ ಬೇಡಿಕೆಯಂತೆ ಕೆಇಆರ್ಸಿ ಸರ್ಕಾರಕ್ಕೆ ಈ ಕುರಿತು ಪ್ರಸ್ತಾವನೆ ಸಲ್ಲಿಸಿದೆ. ಪ್ರತಿ ಯೂನಿಟ್ಗೆ 30 ರಿಂದ 50 ಪೈಸೆ ಹೆಚ್ಚಳ ಮಾಡಲು ಮನವಿ ಮಾಡಲಾಗಿದೆ.

33 ಪೈಸೆ ಹೆಚ್ಚಳವಾಗಿತ್ತು
ವಿವಿಧ ವಿದ್ಯುತ್ ಸರಬರಾಜು ಕಂಪನಿಗಳ ಬೇಡಿಕೆಯಂತೆ 2019ರ ಫೆಬ್ರವರಿಯಲ್ಲಿ ಪ್ರತಿ ಯೂನಿಟ್ಗೆ 33 ಪೈಸೆ ವಿದ್ಯುತ್ ದರವನ್ನು ಹೆಚ್ಚಳ ಮಾಡಲಾಗಿತ್ತು. ಈ ಬಾರಿ ಉತ್ತಮ ಮಳೆಯಾದ ಕಾರಣ ಜಲವಿದ್ಯುತ್ ಉತ್ಪಾದನೆ ಹೆಚ್ಚಿದೆ. ಆದರೆ, ಕಲ್ಲಿದ್ದಲು ಪೂರೈಕೆಯಲ್ಲಿ ವ್ಯತ್ಯಯವಾಗುತ್ತಿದ್ದು, ಉಷ್ಣ ವಿದ್ಯುತ್ ಪೂರೈಕೆಗೆ ವೆಚ್ಚ ಅಧಿಕವಾಗುತ್ತಿದೆ.

ಸಾರ್ವಜನಿಕರ ಅಹವಾಲು ಸ್ವೀಕಾರ
ರಾಜ್ಯದ ಎಲ್ಲಾ ವಲಯಗಳಲ್ಲಿ ಸಾರ್ವಜನಿಕರಿಂದ ಅಹವಾಲು ಸ್ವೀಕಾರ ಮಾಡುವ ಕಾರ್ಯ ನಡೆಯುತ್ತಿದೆ. ದರ ಹೆಚ್ಚಳದ ಬಗ್ಗೆ ತೀರ್ಮಾನ ತೆಗೆದುಕೊಳ್ಳುವ ಮುನ್ನ ಸರ್ಕಾರ ಜನರ ಅಹವಾಲನ್ನು ಆಲಿಸಲಿದೆ. ಇಂಧನ ಖಾತೆ ಮುಖ್ಯಮಂತ್ರಿ ಬಿ. ಎಸ್. ಯಡಿಯೂರಪ್ಪ ಕೈಯಲ್ಲಿ ಇದ್ದು, ಅವರೇ ಅಂತಿಮ ತೀರ್ಮಾನ ಕೈಗೊಳ್ಳಬೇಕಿದೆ.

ದರ ಇಳಿಕೆ ಮಾಡಿದ್ದ ಕೆಇಆರ್ಸಿ
ಹೊಸ ವರ್ಷದಲ್ಲಿ ಕೆಇಆರ್ಸಿ ಇಂಧನ ವೆಚ್ಚ ಹೊಂದಾಣಿಕೆ ಶುಲ್ಕವನ್ನು ಕಡಿಮೆ ಮಾಡಿದೆ. ಇದು ಮಾರ್ಚ್ 2020ರಿಂದ ಜಾರಿಗೆ ಬರಲಿದೆ. ಈ ಆದೇಶದ ಅನ್ವಯ ಬೆಸ್ಕಾಂ ಯೂನಿಟ್ಗೆ 12, ಚೆಸ್ಕಾಂ 9, ಹೆಸ್ಕಾಂ 5, ಮೆಸ್ಕಾಂ ಮತ್ತು ಜೆಸ್ಕಾಂ 7 ಪೈಸೆ ಶುಲ್ಕವನ್ನು ಗ್ರಾಹಕರಿಂದ ಪಡೆಯಬಹುದು.












Click it and Unblock the Notifications