ಸಂಸದರ ಕೋಟಾದಡಿ ಕೇಂದ್ರೀಯ ವಿದ್ಯಾಲಯ ಶಾಲೆಗೆ ಪ್ರವೇಶ ನೀಡುವ ಸಂಪ್ರದಾಯ ಬಂದ್?
ಬೆಂಗಳೂರು, ಏ. 15: ಕೇಂದ್ರೀಯ ವಿದ್ಯಾಲಯದಲ್ಲಿ ಓದಲು ಬಯಸುವ ವಿದ್ಯಾರ್ಥಿಗಳಿಗೆ ಸಂಸದರ ಕೋಟಾದಡಿ ಪ್ರವೇಶ ನೀಡಲಾಗುತ್ತಿತ್ತು. ಇದರ ಜತೆಗೆ ಇನ್ನಿತರ ನಿಬಂಧನೆ ಅಡಿಯಲ್ಲೂ ದಾಖಲಾತಿ ನೀಡಲಾಗುತ್ತಿತ್ತು. ಪ್ರಸಕ್ತ ಸಾಲಿನ 2022-23 ನೇ ಸಾಲಿನಲ್ಲಿ ಸಂಸದರ ಕೋಟಾ ಸೇರಿದಂತೆ ವಿಶೇಷ ನಿಬಂಧನೆ ಅಡಿ ನೀಡುತ್ತಿದ್ದ ಪ್ರವೇಶವನ್ನು ರದ್ದುಗೊಳಿಸುವ ನಿಟ್ಟಿನಲ್ಲಿ ಗಂಭೀರ ಚಿಂತನೆ ನಡೆದಿದೆ. ಸಂಸದರ ಕೋಟಾದಡಿ ಕೇಂದ್ರೀಯ ವಿದ್ಯಾಲಯಗಳಿಗೆ ಪ್ರವೇಶ ನೀಡುವ ಪ್ರಕ್ರಿಯೆಗೆ ತಾತ್ಕಾಲಿಕ ಬ್ರೇಕ್ ಬಿದ್ದಿದೆ.
ಕೇಂದ್ರೀಯ ವಿದ್ಯಲಯಗಳಿಗೆ ಸಂಸದರ ಕೋಟಾ ಸೇರಿದಂತೆ ವಿಶೇಷ ನಿಬಂಧನೆ ಅಡಿಯಲ್ಲಿ ನೀಡುತ್ತಿದ್ದ ಪ್ರವೇಶಾತಿಯನ್ನು ಸದ್ಯಕ್ಕೆ ತಡೆ ಹಿಡಿಯಲಾಗಿದೆ. ಜತೆಗೆ ಸಂಸದರ ಕೋಟಾದಡಿ ನೀಟುವ ಸೀಟುಗಳನ್ನು ರದ್ದುಗೊಳಿಸಬೇಕೋ ಅಥವಾ ಮುಂದುವರೆಸಬೇಕೋ ಎಂಬುದರ ಬಗ್ಗೆ ಗಂಭಿರ ಚಿಂತನೆ ನಡೆದಿದೆ.
ಸಂಸದರ ಕೋಟಾದಡಿ ಕೇಂದ್ರೀಯ ವಿದ್ಯಾಲಯಗಳಿಗೆ ನೀಡುವ ಪ್ರವೇಶವನ್ನು ಮುಂದುವರೆಸುವ ಬಗ್ಗೆ ಸಂಸದರ ಜತೆ ಚರ್ಚೆ ನಡೆಸಲಾಗುವುದು ಕೇಂದ್ರ ಕೇಂದ್ರ ಸರ್ಕಾರ ಸ್ಪಷ್ಟಪಡಿಸಿತ್ತು. ಹೀಗಾಗಿ ಪ್ರಸಕ್ತ ಸಾಲಿನಲ್ಲಿ ಸಂಸದರ ಕೋಟಾದಡಿ ಯಾವುದೇ ದಾಖಲಾತಿ ನೀಡುತ್ತಿಲ್ಲ.
ಕೇಂದ್ರೀಯ ವಿದ್ಯಾಲಯ ಎಂಬುದು ಸ್ವತಂತ್ರ್ ಸಂಸ್ಥೆ. ದೇಶದಾದ್ಯಂತ ಈ ಸಂಸ್ಥೆಯ ನೂರಾರು ಶಾಲೆಗಳಿವೆ. ಅವೆಲ್ಲವೂ ಕೇಂದ್ರ ಶಿಕ್ಷಣ ಇಲಾಖೆ ಅಡಿ ಬರುತ್ತವೆ. ಪ್ರಸಕ್ತ ಸಾಲಿನಲ್ಲಿ ಸದ್ಯದ ಮಟ್ಟಿಗೆ ಸಂಸದರ ಕೋಟಾದಡಿ ಪ್ರವೇಶ ನೀಡದಂತೆ ಕೇಂದ್ರೀಯ ವಿದ್ಯಾಲಯಗಳ ಪ್ರಾಂಶುಪಾಲರಿಗೆ ಸುತ್ತೋಲೆ ಹೊರಡಿಸಲಾಗಿದೆ. ಮುಂದಿನ ಆದೇಶದವರೆಗೂ ವಿಶೇಷ ನಿಬಂಧನೆಗಳ ಅಡಿ ಪ್ರವೇಶ ಮಾಡುವಂತಿಲ್ಲ. ಈ ಬಗ್ಗೆ ಕೇಂದ್ರೀಯ ವಿದ್ಯಾಲಯ ಸಂಘಟನೆ ಪ್ರಧಾನ ಕಚೇರಿಯಲ್ಲಿ ನಿರ್ಧರಿಸಲಾಗಿದೆ ಎಂದು ಸುತ್ತೋಲೆಯಲ್ಲಿ ತಿಳಿಸಲಾಗಿದೆ.
ವಿಶೇಷ ನಿಬಂಧನೆ ಅಡಿ ಕೆವಿ ಸೀಟು ಹಂಚಿಕೆ ಪಟ್ಟಿ ದೊಡ್ಡದಾಗಿದೆ. ಹೀಗಾಗಿ ಇಂತಹ ತೀರ್ಮಾನ ಕೈಗೊಳ್ಳಲಾಗಿದೆ. ಕೇಂದ್ರೀಯ ವಿದ್ಯಾಲಯಗಳಲ್ಲಿ 2021-22 ನೇ ಸಾಲಿನಲ್ಲಿ ಒಟ್ಟು 21 ವಿಶೇಷ ನಿಬಂಧನೆಗಳ ಅಡಿಯಲ್ಲಿ 1,75,261 ವಿದ್ಯಾರ್ಥಿಗಳಿಗೆ ಪ್ರವೇಶ ನೀಡಲಾಗಿದೆ. ಅದರಲ್ಲೂ ಸಂಸದರ ಕೋಟಾದಡಿ 7,301 ಸೀಟು ನೀಡಲಾಗಿದೆ. ಈ ಪಟ್ಟಿ ದೊಡ್ಡದಾಗಿ ಬೆಳೆಯುತ್ತಿರುವ ಹಿನ್ನೆಲೆಯಲ್ಲಿ ಇಂತಹ ತೀರ್ಮಾನ ಕೈಗೊಳ್ಳಲಾಗಿದೆ ಎಂದು ಇಂಡಿಯನ್ ಎಕ್ಸ್ಪ್ರೆಸ್ ವರದಿ ಮಾಡಿದೆ.
ಕೇಂದ್ರೀಯ ವಿದ್ಯಾಲಯಗಳ ಪ್ರವೇಶ ಸಂಬಂಧ ಕೇಂದ್ರ ಶಿಕ್ಷಣ ಇಲಾಖೆ ಲೋಕಸಭೆಗೆ ನೀಡಿದ ವರದಿ ಪ್ರಕಾರ, ಕೇಂದ್ರೀಯ ವಿವಿಗಳಲ್ಲಿ ವಿಶೇಷ ನಿಬಂಧನೆಗಳ ಅಡಿ 1,75,261 ವಿದ್ಯಾರ್ಥಿಗಳಿಗೆ ಪ್ರವೇಶ ನೀಡಲಾಗಿದೆ. ಅದರಲ್ಲಿ ಸಂಸದರ ಕೋಟಾದಡಿ ಏಳು ಸಾವಿರ ಸೀಟು ನೀಡಲಾಗಿದೆ. ಸಂಸದರ ಕೋಟಾದಡಿ ಪ್ರತಿ ಸಂಸದ ಹತ್ತು ವಿದ್ಯಾರ್ಥಿಗಳ ಹೆಸರನ್ನು ಶಿಫಾರಸು ಮಾಡಬಹುದು. ಇದನ್ನು ಪರಿಗಣಿಸಿ ಕೇಂದ್ರೀಯ ವಿದ್ಯಾಲಯದಲ್ಲಿ ಪ್ರವೇಶ ನೀಡಲಾಗುತ್ತದೆ. ವಿದ್ಯಾರ್ಥಿಯ ಪಾಲಕರು ಸಂಸದನ ಕ್ಷೇತ್ರದಲ್ಲಿ ವಾಸಿಸರಬೇಕು ಎಂಬ ಮಾನದಂಡ ವಿಧಿಸಲಾಗಿತ್ತು. ಇದೀಗ ಸಂಸದರ ಕೋಟಾ ಸೀಟುಗಳು ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಇದನ್ನು ರದ್ದು ಪಡಿಸುವ ಚಿಂತನೆ ನಡೆದಿದೆ. ಹೀಗಾಗಿ ತಾತ್ಕಾಲಿಕವಾಗಿ ಎಂಪಿ ಕೋಟಾ ಸೀಟುಗಳ ಪ್ರವೇಶಕ್ಕೆ ಬ್ರೇಕ್ ಬಿದ್ದಿದೆ.