ಕೆಮ್ಮಣ್ಣಗುಂಡಿ, ನಂದಿ ಗಿರಿಧಾಮ ಪ್ರವಾಸೋದ್ಯಮ ಇಲಾಖೆಗೆ
ಬೆಂಗಳೂರು, ಅಕ್ಟೋಬರ್ 11: ಚಿಕ್ಕಮಗಳೂರಿನ ಕೆಮ್ಮಣ್ಣಗುಂಡಿ ಮತ್ತು ಚಿಕ್ಕಬಳ್ಳಾಪುರದ ನಂದಿ ಗಿರಿಧಾಮಗಳು ಪ್ರವಾಸೋದ್ಯಮ ಇಲಾಖೆ ವ್ಯಾಪ್ತಿಗೆ ಬರಲಿವೆ. ಮುಖ್ಯಮಂತ್ರಿಗಳ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಇದಕ್ಕೆ ಒಪ್ಪಿಗೆ ನೀಡಲಾಗಿದೆ.
ಕೆಮ್ಮಣ್ಣಗುಂಡಿ ಮತ್ತು ನಂದಿ ಗಿರಿಧಾಮಗಳ ನಿರ್ವಹಣೆಯನ್ನು ಪ್ರಸ್ತುತ ತೋಟಗಾರಿಕಾ ಇಲಾಖೆ ನೋಡಿಕೊಳ್ಳುತ್ತಿದೆ. ಗುರುವಾರ ಬಿ. ಎಸ್. ಯಡಿಯೂರಪ್ಪ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಪ್ರವಾಸೋದ್ಯಮ ಇಲಾಖೆ ವ್ಯಾಪ್ತಿಗೆ ಒಳಪಡಿಸಲು ತೀರ್ಮಾನಿಸಲಾಗಿದೆ.
ರಾಜ್ಯದ ಈ ಎರಡೂ ಪ್ರಮುಖ ಪ್ರವಾಸಿತಾಣಗಳ ನಿರ್ವಹಣೆ, ಅತಿಥಿ ಗೃಹ, ಪ್ರವೇಶ ಶುಲ್ಕ ಸೇರಿದಂತೆ ಎಲ್ಲವೂ ತೋಟಗಾರಿಕಾ ಇಲಾಖೆಯಿಂದ ಪ್ರವಾಸೋದ್ಯಮ ಇಲಾಖೆ ವ್ಯಾಪ್ತಿಗೆ ಸೇರಲಿವೆ. ಆದರೆ, ಪರಿಸರವಾದಿಗಳು ಇದಕ್ಕೆ ವಿರೋಧ ವ್ಯಕ್ತಪಡಿಸಿದ್ದಾರೆ.
ಮೈಸೂರಿನ ಮಹಾರಾಜರು 1914ರಲ್ಲಿ ನಂದಿ ಗಿರಿಧಾಮವನ್ನು ಮತ್ತು 1932ರಲ್ಲಿ ಕೆಮ್ಮಣ್ಣಗುಂಡಿಯನ್ನು ತೋಟಗಾರಿಕಾ ಇಲಾಖೆ ವ್ಯಾಪ್ತಿಗೆ ನೀಡಿದ್ದರು. ಅಂದಿನಿಂದಲೂ ಪ್ರವಾಸಿ ತಾಣಗಳ ನಿರ್ವಹಣೆ, ಪ್ರವೇಶ ಶುಲ್ಕ ಮುಂತಾದ ಉಸ್ತುವಾರಿಯನ್ನು ಇಲಾಖೆಯೇ ನೋಡಿಕೊಳ್ಳುತ್ತಿದೆ.

ಪ್ರವಾಸೋದ್ಯಮ ಸಚಿವರಿಂದ ಬೇಡಿಕೆ
ಮುಖ್ಯಮಂತ್ರಿ ಯಡಿಯೂರಪ್ಪ ಅಧ್ಯಕ್ಷತೆಯಲ್ಲಿ ನಡೆದ ಪ್ರವಾಸೋದ್ಯಮ ಇಲಾಖೆ ಅಭಿವೃದ್ಧಿ ಸಂಬಂಧಿಸಿದ ಸಭೆಯಲ್ಲಿ ಪ್ರವಾಸೋದ್ಯಮ ಸಚಿವ ಸಿ. ಟಿ. ರವಿ ಅವರು ಕೆಮ್ಮಣ್ಣಗುಂಡಿ ಮತ್ತು ನಂದಿ ಗಿರಿಧಾಮವನ್ನು ಇಲಾಖೆ ವ್ಯಾಪ್ತಿಗೆ ನೀಡಬೇಕು ಎಂದು ಮನವಿ ಮಾಡಿದರು. ಸರ್ಕಾರದ ಮುಖ್ಯ ಕಾರ್ಯದರ್ಶಿ ಟಿ. ಎಂ. ವಿಜಯಭಾಸ್ಕರ್ ಸೇರಿದಂತೆ ಹಿರಿಯ ಅಧಿಕಾರಿಗಳು ಸಭೆಯಲ್ಲಿದ್ದರು.

ಆದಾಯ ಏರಿಕೆಯಾಗಿದೆ
ಕೆಮ್ಮಣ್ಣಗುಂಡಿ ಮತ್ತು ನಂದಿ ಗಿರಿಧಾಮವನ್ನು ತೋಟಗಾರಿಕಾ ಇಲಾಖೆ ಉತ್ತಮವಾಗಿ ನಿರ್ವಹಣೆ ಮಾಡಿದೆ. ಲಕ್ಷಗಳಲ್ಲಿ ಇದ್ದ ಆದಾಯ ಈಗ ಕೋಟಿಗೆ ಏರಿಕೆಯಾಗಿದೆ. ಕೆಮ್ಮಣ್ಣಗುಂಡಿ ಚಿಕ್ಕಮಗಳೂರಿನ ಪ್ರಮುಖ ಪ್ರವಾಸಿ ತಾಣ. ನಂದಿ ಗಿರಿಧಾಮಕ್ಕೆ ವಾರಂತ್ಯದಲ್ಲಿ ಸಾವಿರಾರು ಜನರು ಭೇಟಿ ನೀಡುತ್ತಾರೆ. ಈಗ ಪ್ರವಾಸೋದ್ಯಮ ಇಲಾಖೆ ಎರಡೂ ಪ್ರವಾಸಿತಾಣಗಳನ್ನು ತನ್ನ ವ್ಯಾಪ್ತಿಗೆ ತೆಗೆದುಕೊಳ್ಳಲು ಮುಂದಾಗಿದೆ.

ವಾಣಿಜ್ಯೀಕರಣ ಬೇಡ
ಪರಿಸರ ತಜ್ಞ ಯಲ್ಲಪ್ಪ ರೆಡ್ಡಿ ಸರ್ಕಾರದ ತೀರ್ಮಾನಕ್ಕೆ ವಿರೋಧ ವ್ಯಕ್ತಪಡಿಸಿದ್ದಾರೆ. "ನಂದಿ ಗಿರಿಧಾಮವನ್ನು ಪ್ರವಾಸೋದ್ಯಮ ಇಲಾಖೆ ವ್ಯಾಪ್ತಿಗೆ ಸೇರಿಸಿ ವಾಣಿಜ್ಯೀಕರಣಗೊಳಿಸುವುದು ಬೇಡ" ಎಂದು ಸರ್ಕಾರವನ್ನು ಒತ್ತಾಯಿಸಿದ್ದಾರೆ.
Recommended Video

ಅನೇಕ ಅಭಿವೃದ್ಧಿ ಕಾರ್ಯಗಳು
ಚಿಕ್ಕಬಳ್ಳಾಪುರದ ನಂದಿ ಗಿರಿಧಾಮವನ್ನು ತೋಟಗಾರಿಕಾ ಇಲಾಖೆ ಉತ್ತಮವಾಗಿ ಅಭಿವೃದ್ಧಿಪಡಿಸಿದೆ. ಚೆಕ್ ಡ್ಯಾಂ, ಇಂಗು ಗುಂಡಿಗಳ ನಿರ್ಮಾಣ, ಮಳೆ ನೀರು ಸಂಗ್ರಹಕ್ಕೆ ಒತ್ತು ನೀಡಲಾಗಿದೆ. ಆದರೆ, ಸರ್ಕಾರ ಈಗ ಪ್ರವಾಸೋದ್ಯಮ ಇಲಾಖೆಗೆ ಇದನ್ನು ಹಸ್ತಾಂತರ ಮಾಡಲು ಮುಂದಾಗಿದೆ.












Click it and Unblock the Notifications